Advertisement

Navaratri 2023: ಕಾಲಕಾಲಕ್ಕೆ ಬದಲಾಗುವ ವೈಭವದ ಸೊಗಸು

11:25 AM Oct 14, 2023 | Team Udayavani |

ಗಣೇಶನ ಚೌತಿಯು ಮುಗಿಯುತ್ತಿದ್ದಂತೆ ಎಲ್ಲರೂ ಕಾಯುವುದು ದೇವಿಯನ್ನು ಅಲಂಕರಿಸಿ, ಆರಾಧಿಸಲು. ನವರಾತ್ರಿಯಂದು ಒಂಬತ್ತು ದಿನಗಳು ದೇವಿಯನ್ನು ಆಕೆಯ ವಿವಿಧ ರೂಪದಲ್ಲಿ ಪೂಜಿಸಲಾಗುತ್ತದೆ. ಪುಟ್ಟಪುಟ್ಟ ಪಟ್ಟದ ಗೊಂಬೆಗಳನ್ನು ಅಲಂಕರಿಸಿ ಅವುಗಳನ್ನು ಜೋಡಿಸಿ, ನವರಾತ್ರಿಯ ಪ್ರತೀ ದಿನ ಆರತಿ ಬೆಳಗಿ, ಬಾಗಿನ ನೀಡುವುದೇ ಸಂಭ್ರಮ. ದಸರಾ, ನವರಾತ್ರಿಯ ಆಚರಣೆಯ ರೀತಿಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಆದರೆ ಅದರಲ್ಲಿನ ಸಂಭ್ರಮ, ಖುಷಿಯೂ ಇನ್ನಷ್ಟೂ ಹೆಚ್ಚೇ ಆಗಿದೆ.

Advertisement

ಎಲ್ಲ ಹಬ್ಬಗಳನ್ನು ಸಡಗರದಿಂದ ಆಚರಿಸುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ. ಹಬ್ಬಗಳ ವಿಶೇಷತೆ ಆಧ್ಯಾತ್ಮ ಜೀವನ ಭೌತಿಕ ಜೀವನಗಳ ಮಿಲನ. ದೇವರನ್ನು ಆಹ್ವಾನಿಸಿ ಪೂಜೆ ಸಲ್ಲಿಸುವುದು ಮೋಕ್ಷದ ಗುರಿ. ಹಾಗೆಯೇ ಹಬ್ಬಗಳು ಸಂತೋಷದ ವಾತಾವರಣ ತರುತ್ತದೆ. ಹೊಸ ಬಟ್ಟೆ ತೊಡುವುದರಿಂದ, ಬಗೆ ಬಗೆಯ ಖಾದ್ಯ ಪದಾರ್ಥಗಳು ಸವಿಯುವ ಅವಕಾದಿಂದ, ಕಲೆಗಳ ಪ್ರದರ್ಶನದಿಂದ ಅಂದರೆ ಅತಿಶಯೋಕ್ತಿ ಅಲ್ಲ. ಹೀಗೆಯೆ ಒಂಬತ್ತು ರಾತ್ರಿಗಳು ಹಾಗೂ ಹತ್ತನೇ ದಿನ ವಿಜಯ ದಶಮಿಯಿಂದ ಹಬ್ಬದ ಸಂಭ್ರಮವನ್ನು ಅಧಿಕ ಕಾಲ ಉಳಿಸುವುದೇ ನವರಾತ್ರಿ ಅಥವಾ ದಸರಾದ ವಿಶೇಷತೆ. ಈ ಒಂಬತ್ತು ದಿನಗಳಲ್ಲಿ ದೇವಿ ದುರ್ಗೆ ಅನೇಕ ರೂಪಗಳಲ್ಲಿ ಧರೆಗಿಳಿದು ಭಕ್ತರ ಹರಸುತ್ತಾಳೆ.

ಮೊದಲ ದಿನ: ಶೈಲ ಪುತ್ರಿ. ಶೈಲಾ ಅಂದರೆ ಬೆಟ್ಟ ಹಿಮಾಲಯ ಪರ್ವತದ ರಾಜನಾದ ಹೇಮವನ್‌ನ ಪುತ್ರಿ. ಬಿಳಿಯ ಸೀರೆ ಉಟ್ಟು ಅಲಂಕೃತಳಾಗಿರುತ್ತಾಳೆ. ಮೊದಲನೆಯ ದಿನ ಕಳಸ ಸ್ಥಾಪನೆ ಮೂಲಕ ದೇವಿಯನ್ನು ಆರಾಧಿಸುತ್ತಾರೆ. ದೇವಿಯ ಈ ರೂಪ ಜಲ ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ.

ಎರಡನೆ ದಿನ: ಮಹಾಲಕ್ಷ್ಮೀ ಅವತಾರ. ಈ ದಿನ ನಾನಾ ವಿಧದ ಪುಷ್ಪಗಳೊಂದಿಗೆ ಪೂಜಿಸಿ ಕಮಲಗಳಿಂದ ಅಲಂಕರಿಸಿ, ದೇವಿಗೆ ಇಷ್ಟವಾದ ಹೋಳಿಗೆ ಪಾಯಸ ನೈವೇದ್ಯ ಮಾಡಿ ಬ್ರಹ್ಮಚಾರಿಣಿ ಅನ್ನುವ ಹೆಸರಿನಿಂದ ಪೂಜಿಸುತ್ತಾರೆ. ಈ ಹೆಸರ ಅರ್ಥ ಸದಾ ತಪಸ್ವಿನಿ, ಶಕ್ತಿಯ ಪ್ರತಿರೂಪ ಎಲ್ಲರಿಗೂ ಸುಖ ಸಂಪತ್ತು ನೀಡುವ ದೇವತೆ.

ಮೂರನೇ ದಿನ: ದೇವಿ ಚಂದ್ರಘಂಟ ಅನ್ನುವ ಹೆಸರಿನಿಂದ ಹರಸುತ್ತಾಳೆ. ದೇವಿಯ ಹಣೆಯಲ್ಲಿ ಅರ್ಧ ಚಂದ್ರಾಕಾರದ ಗುರುತು ಇರುತ್ತದೆ. ಅತ್ಯಂತ ಸುಂದರಿ, ಕೆಂಪು ವಸ್ತ್ರ ಉಟ್ಟು ಸಿಂಹ ವಾಹಿನಿ, ಧೈರ್ಯ ಮತ್ತು ಸ್ಥೈರ್ಯ ನೀಡಿ ಭಕ್ತ ವೃಂದವನ್ನು ಹರಸುತ್ತಾಳೆ.

Advertisement

ನಾಲ್ಕನೇ ದಿನ: ದೇವಿ ಹೆಸರು ಕೂಷ್ಮಂಡ. ಹಳದಿ ವಸ್ತ್ರ ಉಟ್ಟು ಧರೆಗಿಳಿಯುತ್ತಾಳೆ. ಕೂಷ ಅಂದರೆ ಬೆಚ್ಚನೆಯ ಬೆಳಕು. ಅಂಡ ಅಂದರೆ ಬ್ರಹ್ಮಾಂಡ. ಇದನ್ನು ಎಲ್ಲಾ ಕಡೆ ಹರಡಿ, ಆಯುಧಗಳ ಸಮೇತ ಕಾಣಿಸಿಕೊಳ್ಳುತ್ತಾಳೆ.

ಐದನೇ ದಿನ: ದೇವಿಯ ನಾಮಧೇಯ ಸ್ಕಂದ ಮಾತಾ. ಹಸುರು ವಸ್ತ್ರ ಧರಿಸಿ ಪ್ರಕೃತಿಯನ್ನು ಹೋಲುತ್ತ ಕಂಗೊಳಿಸುತ್ತಾಳೆ. ಇಟಲಿಯಲ್ಲಿ ಕೂಡ ಹಸುರು ಬಣ್ಣ ಭರವಸೆಯನ್ನು ಸೂಚಿಸುತ್ತದೆ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ದೇವಿ ಬರುತ್ತಾಳೆ.

ಆರನೇ ದಿನ: ಕಾತ್ಯಾಯಿನಿ. ಬೂದುಬಣ್ಣದ ವಸ್ತ್ರಧಾರಿ ಸೌಮ್ಯದಿಂದ ವಿಶ್ವ ಶಾಂತಿಗಾಗಿ ದರ್ಶನ ನೀಡುತ್ತಾಳಂತೆ.

ಏಳನೆಯ ದಿನ: ಸರಸ್ವತಿ ಆರಾಧನೆ. ವೀಣಾಪಾಣಿ ದೇವಿ ಎಲ್ಲರಿಗೂ ವಿದ್ಯಾ ಬುದ್ಧಿ ಕರುಣಿಸು, ನೀನು ವೇದಮಾತಾ ಎಂದು ಪುಸ್ತಕಗಳನ್ನು ಪೂಜಿಸಿ ದೇವಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡುತ್ತಾರೆ.

ಎಂಟನೆಯ ದಿನ: ದೇವಿ ದುರ್ಗಾ ಮಾತಾ. ಶ್ರೇಷ್ಠವಾದ ದಿನದಂದು ಭಕ್ತರು ದುರ್ಗಾಪೂಜೆ ಮಾಡುತ್ತಾರೆ. ಆಧ್ಯಾತ್ಮಿಕ ಶಕ್ತಿ ನೀಡೆಂದು ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಾರೆ.

ಒಂಬತ್ತನೇ ದಿನ: ಇದನ್ನು ಸಿದ್ಧಿರಾತ್ರಿ ಅಂತಲೂ ಕರೆಯುತ್ತಾರೆ. ದುರ್ಗೆ ಸಿದ್ಧಿಧಾತ್ರಿ ಹೆಸರಿನಿಂದ ಭಕ್ತರನ್ನು ಹರಸುತ್ತಾಳೆ.

ದಕ್ಷಿಣ ಭಾರತದಲ್ಲಿ ಈ ದಿನ ಎಲ್ಲ ಆಯುಧಗಳಿಗೂ ವಾಹನಗಳಿಗೂ, ಯಂತ್ರಗಳಿಗೂ ಪೂಜೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಎಲ್ಲ ವಾಹನಗಳಿಗೂ ಹೂವಿನ ಹಾರ ಧರಿಸಿ ಚಲಿಸುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಹತ್ತನೆಯ ದಿನ ವಿಶೇಷ. ತಾಯಿ ಚಾಮುಂಡಿ ಮಹಿಷಾಸುರನನ್ನು ಮರ್ಧಿಸಿ ಮಹಿಷಪುರ ಅಂದರೆ ಇಂದಿನ ಮೈಸೂರಿಗೆ ಶಾಂತಿ ತಂದ ದಿನ. ಇಂದಿಗೂ ಮೈಸೂರು ದಸರಾ ತುಂಬಾ ಪ್ರಸಿದ್ಧಿ. ಅರಮನೆ ಲಕ್ಷದೀಪಗಳಿಂದ ಬೆಳಗುತ್ತದೆ. ಅರಮನೆಯಲ್ಲಿ ಅಂದಿನ ಸಂಪ್ರದಾಯ ಇಂದಿಗೂ ಮುಂದುವರಿದು ನಡೆಯುತ್ತದೆ. ಚಾಮುಂಡಿ ಬೆಟ್ಟದಿಂದ ತಾಯಿ ಚಾಮುಂಡಿ ಎಲ್ಲರನ್ನು ಹರಸುತ್ತಾಳೆ.

ದಸರಾ ಅಂದು ಇಂದು
ಕಾಲಾಯ ತಸ್ಮೈ ನಮಃ ಅನ್ನುವಂತೆ ಕಾಲ ಬದಲಾದಂತೆ ಸಂಪ್ರದಾಯ ಒಂದೇ ಆದರೂ ಅದು ಆಧುನಿಕ ಮಾದರಿಗೆ ಅಳವಡಿಸಲ್ಪಡುತ್ತದೆ. ಅಂದಿನ ಅಂದರೆ 6 ದಶಕಗಳ ಕೆಳಗೆ ನವರಾತ್ರಿ ಸರಳವಾಗಿ ನೆರವೇರುತ್ತಿತ್ತು. ನವರಾತ್ರಿಯ ವಿವರ ಜನ ಸಾಮಾನ್ಯರಿಗೆ ತಿಳಿಯುತ್ತಿರಲಿಲ್ಲ. ಗೊಂಬೆ ಇಡುವುದೇ ಒಂದು ಆಕರ್ಷಣೆ. ವಾರಗಳ ಮುಂಚೆ ಪಟ್ಟದ ಗೊಂಬೆಗಳಿಗೆ ಅಮ್ಮ ವಸ್ತ್ರಗಳನ್ನು ತೊಡಿಸುತ್ತಿದ್ದರು. ಹೆಣ್ಣು ಗೊಂಬೆಗೆ ಅಂದರೆ ರಾಣಿಗೆ ಬಣ್ಣ, ಬಣ್ಣದ ಕ್ರೇಪ್‌ ಪೇಪರ್‌ನಲ್ಲಿ ಸೀರೆ ಉಡಿಸಿ, ಗಂಡು ಗೊಂಬೆಗೆ ಅಂದರೆ ರಾಜನಿಗೆ ಷರಾಯಿ ಜುಬ್ಬ ಕಾಗದಗಳಿಂದಲೇ ತಯಾರಿಸಿ ಉಡಿಸುತ್ತಿದ್ದರು.

ಮಣಿ ಸರಗಳೇ ಆಭರಣಗಳು. ದೇವರ ಪ್ರತಿಮೆಗಳು, ಪ್ಲಾಸ್ಟಿಕ್‌ ಆಟ ಸಾಮಾನುಗಳು, ಚೆನ್ನಪಟ್ಟಣದ ಮರದ ಗೊಂಬೆ ಇಷ್ಟೇ ಗೊಂಬೆಗಳನ್ನು ಇಡುತ್ತಿದ್ದರು. ಮುಖ್ಯವಾಗಿ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಅಂದರೆ ಪುಟ್ಟ ಚಕ್ಕುಲಿ, ಕೋಡುಬಳೆ, ಉಂಡೆ ಕೊಡುತ್ತಿದ್ದರು. ಇಷ್ಟೇ ವೈಭವ. ಮಹಾರಾಜರು ಅಂಬಾರಿಯಲ್ಲಿ ಆನೆಯ ಮೇಲೆ ಬನ್ನಿ ಮಂಟಪಕ್ಕೆ ಹೋಗುತ್ತಿದ್ದರು. ಅದನ್ನು ನೋಡುವುದೇ ದೊಡ್ಡ ಆಕರ್ಷಣೆ .

ದಸರಾ ವಸ್ತು ಪ್ರದರ್ಶನದಲ್ಲಿ ಮುಗಿಯುತ್ತಿತ್ತು ದಸರಾ. ಆದರೆ ಈಗ ಬೆಳೆಯುತ್ತಿರುವ ಭಾರತದಲ್ಲಿ ಎಷ್ಟು ಬದಲಾವಣೆ ! ಗೊಂಬೆ ಇಡುವುದೇ ಒಂದು ದೊಡ್ಡ ಕಲೆ. ಹತ್ತು ದಿನಗಳು ಬೇರೆ ಬೇರೆ ಬಣ್ಣಗಳ ಸೀರೆಗಳು! ಬಿಳಿ, ಕೆಂಪು, ನೀಲಿ, ಹಳದಿ, ಹಸುರು, ಗಿಣಿ ಹಸುರು, ಬೂದು, ಗುಲಾಬಿ ಶ್ರೇಷ್ಠ ಬಣ್ಣಗಳು! ಕಳೆದ ವರುಷ ಭಾರತಕ್ಕೆ ಹೋದಾಗ ಆದ ಅನುಭವ ಅಚ್ಚಳಿಯದ ನೆನಪು. ನವರಾತ್ರಿ ಬರುತ್ತಲಿತ್ತು, ನನ್ನ ನಾದಿನಿ ಮಗಳು ಕಲ್ಪ, “ಅತ್ತೆ ಸಿದ್ಧರಾಗಿ ಹೋಗೋಣ ನಿಮಗೆ ʼsurprise’ ಅಂದಾಗ ಆ “surprise” ಸೀರೆ ಅಂಗಡಿ ಅಂದುಕೊಂಡು ಹೊರಟೆ. ನಮ್ಮ ಆಟೋ “ಶ್ರೀ ಲಕ್ಷ್ಮೀ ಬ್ಯಾಂಗಲ್‌ ಆ್ಯಂಡ್‌ ಡಾಲ್‌ ಸ್ಟೋರ್ಸ್‌’ ಫ‌ಲಕದ ಎದುರು ನಿಂತಿತು.

ಒಳಗೆ ಹೋಗುತ್ತಿದ್ದಂತೆ ಕಂಡ ದೃಶ್ಯ ವರ್ಣಿಸಲಸಾಧ್ಯ. ಗೊಂಬೆಗಳ ಲೋಕ ! Miniature world ! ಸೂಕ್ಷ್ಮಾಕಾರ ಪ್ರಪಂಚ ! ಎಲ್ಲೆಲ್ಲಿ ನೋಡಿದರೂ….ಅಲ್ಲಲ್ಲಿ ಗೊಂಬೆಗಳು! ಐಗಿರಿ ನಂದಿನಿ ಎಂಬ ದೇವಿ ಗೀತೆಯ ಹಿನ್ನೆಲೆ ಸಂಗೀತ ! ಕೊಳ್ಳಲು ಜನ ನೂಕು ನುಗ್ಗಲು ನವರಾತ್ರಿಗಾಗಿ ! ವಿವಿಧ ದೇವರ ವಿಗ್ರಹಗಳು, ನೂರಾರು ಬೊಂಬೆ ಜತೆಗಳು, ದಿನನಿತ್ಯ ನೋಡುವ ದೃಶ್ಯಗಳು, ಒಂದು ಜಾತ್ರೆಯ ದೃಶ್ಯ ಅಲ್ಲಿ ಪಾನಿಪುರಿ ಅಂಗಡಿ, ತರಕಾರಿ ಅಂಗಡಿ, ಸಂಗೀತ ವಾದ್ಯಗಳು ಗಾಯಕ, ದೇವಸ್ಥಾನ, ಪೂಜಾರಿ, ಮತ್ತೂಂದು ಕಡೆ ಮದುವೆ ಮನೆ, ವರ – ವಧು, ಬಾಳೆ ಎಲೆ ಊಟ, ಇನ್ನೊಂದು ಕಡೆ ಕ್ರಿಕೆಟ್‌, ಮುದ್ದಾದ ಗೊಂಬೆಗಳು. ಯಾವ ಹೂವು ಯಾರ ಮುಡಿಗೋ ಅನ್ನುವಂತೆ ಯಾವ ಗೊಂಬೆ ಜತೆಗಳು ಯಾರ ಮನೆ ಗೊಂಬೆಗಳನ್ನು ಸೇರುತ್ತದೋ! ದೇವನೇ ಬಲ್ಲ !

ಇನ್ನೊಂದು ಕಡೆ ಪುಟ್ಟ ಮೈಸೂರು ಅರಮನೆ ದೀಪಗಳಿಂದ ಬೆಳಗುತ್ತಿತ್ತು. ದಸರಾ ಮೆರವಣಿಗೆ ಆನೆಗಳು, ಕುದುರೆಗಳು, ಸೈನಿಕರು ಮು¨ªಾದ ಗೊಂಬೆಗಳಿಂದ ಪ್ರದರ್ಶಿಸಲ್ಪಟ್ಟಿತು . ಇಷ್ಟೆಲ್ಲ ಎಲ್ಲರ ಮನೆ ಗೊಂಬೆಗಳನ್ನು ಅಲಂಕರಿಸುವುದಕ್ಕೆ. ಹೌದು ಅಂದಿನ ಕಾಲದ ನವರಾತ್ರಿಯಲ್ಲಿ ಗೊಂಬೆ ಬೇಕೇ, ಗೊಂಬೆ ಅಂತ ಕೂಗುತ್ತ ಬರುತ್ತಿದ್ದ ಮಾರಾಟಗಿತ್ತಿ ಇಂದಿಲ್ಲ. ಬೃಹತ್‌ ಭಾರತ, ಎಲ್ಲ ಬೃಹತ್‌. ಇನ್ನೂ ಹೆಚ್ಚು ಹೆಚ್ಚು ಬೃಹತ್‌ ಆಗಿ ಬೆಳೆಯಲಿ . ತಾಯಿ ಚಾಮುಂಡಿಗೆ ಕೋಟಿ ಪ್ರಣಾಮಗಳು. ಉದಯವಾಣಿ ಓದುಗರಿಗೆ ಶುಭ ದಸರಾ.

*ಜಯಮೂರ್ತಿ, ಇಟಲಿ

 

Advertisement

Udayavani is now on Telegram. Click here to join our channel and stay updated with the latest news.

Next