Advertisement

30ರಿಂದ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯ ಸಮ್ಮೇಳನ

05:38 PM Apr 12, 2022 | Team Udayavani |

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಕ್ಯಾಂಪಸ್‌ನ ಡಾ|ಎ.ಪಿ.ಜೆ. ಅಬ್ದುಲ ಕಲಾಂ ಸಭಾಂಗಣದಲ್ಲಿ ಏ.30 ಹಾಗೂ ಮೇ 1ರಂದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೋ| ಶ್ರೀನಿವಾಸ ಬಳ್ಳಿ, ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ(ಉತ್ತರ ಪ್ರಾಂತ) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏ.30ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು.

ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಭಾಗವಹಿಸುವರು ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌) ಸಹ ಸರಕಾರ್ಯವಾಹ ಮನಮೋಹನ ವೈದ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಭಾರತೀಯ ಶಿಕ್ಷಣ ಮಂಡಳ ರಾಷ್ಟ್ರೀಯ ಅಧ್ಯಕ್ಷ ಪ್ರೋ| ಸಚ್ಚಿದಾನಂದ ಜೋಶಿ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಪಚೌರಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್‌ ಕಾನಿಟ್ಕರ್‌, ಸಹ ಸಂಘಟನಾ ಕಾರ್ಯದರ್ಶಿ ಶಂಕರಾ ನಂದ ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.

ಮೇ 1ರಂದು ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ| ತಿಮ್ಮೇಗೌಡ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೋ| ಗೋಪಾಲಕೃಷ್ಣ ಜೋಶಿ ಭಾಗವಹಿಸಲಿದ್ದಾರೆ. ಭಾರತೀಯ ಶಿಕ್ಷಣ ಮಂಡಲ ಸಂಘಟನೆಯ ಕಾರ್ಯ ದೃಷ್ಟಿಯಿಂದ ಕೈಗೊಂಡಿರುವ ಈ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ 45 ರಾಜ್ಯಗಳಿಂದ ಸುಮಾರು 400ಕ್ಕಿಂತ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ 30ಕ್ಕೂ ಹೆಚ್ಚು ಕುಲಪತಿಗಳು, ಕುಲಸಚಿವರು, ನಿವೃತ್ತ ಕುಲಪತಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಯ ಸಂಚಾಲಕರು, ಪ್ರಾಧ್ಯಾಪಕರು ಸೇರಿದಂತೆ ಅನೇಕರು ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.

Advertisement

100ಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರು ಗೋಷ್ಠಿಗಳಲ್ಲಿ ಭಾಗವಹಿಸುವರು ಎಂದರು. ಭಾರತೀಯ ಶಿಕ್ಷಣ ಮಂಡಲದ ಕಾರ್ಯಚಟುವಟಿಕೆಗಳ ವಾರ್ಷಿಕ ವರದಿ ಬಗ್ಗೆ ವಿಶ್ಲೇಷಣೆ ಮಾಡಲಾಗುವುದು. ದೇಶದ ಪ್ರತಿಯೊಂದು ಪ್ರದೇಶಗಳಲ್ಲಿ ಎನ್‌ ಇಪಿ ಅನುಷ್ಠಾನ ಕುರಿತು ನಡೆದಿರುವ ಪ್ರಯತ್ನ, ಪ್ರಯೋಗಗಳ ವರದಿ ಪಡೆಯಲಾಗುವುದು. ಎನ್‌ಇಪಿ ಹಾಗೂ ರಾಷ್ಟ್ರೀಯ ಶಿಕ್ಷಣ ಕುರಿತು ಲೇಖನಗಳುಳ್ಳ ಸ್ಮರಣ ಸಂಚಿಕೆ ಸಮಷ್ಠಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ವಿಟಿಯು ಕುಲಪತಿ ಪ್ರೋ| ಕರಿಸಿದ್ದಪ್ಪ ಮಾತನಾಡಿ, ಎನ್‌ಇಪಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಜತ ಮಹೋತ್ಸವ ಆಚರಿಸುತ್ತಿರುವ ವಿಟಿಯುನಲ್ಲಿ ಈ ರಾಷ್ಟ್ರೀಯ ಸಮ್ಮೇಳನ ನಡೆಸಲಾಗುತ್ತಿದೆ. ಎನ್‌ಇಪಿ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳು ಹಾಗೂ ಅವುಗಳನ್ನು ಬಗೆಹರಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.

ಅವಶ್ಯವಿರುವ ಅಧ್ಯಾಪಕರ ತರಬೇತಿ ಕುರಿತು ಯೋಜನೆ ಸಮ್ಮೇಳನದಲ್ಲಿ ಸಿದ್ಧಪಡಿಸಲಾಗುವುದು. ಸೃಜನಾತ್ಮಕ ಕಲಿಕೆ, ಬಹುಶಿಸ್ತೀಯ ಕಲಿಕೆ ಮತ್ತು ವಿದ್ಯಾರ್ಥಿ ಸ್ನೇಹಿ ಮಾರ್ಗದರ್ಶಕನ ಪಾತ್ರವನ್ನು ಶಿಕ್ಷಕರು ಸರಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಯತ್ನಿಸಲಾಗುವುದು ಎಂದರು.

ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ(ಉತ್ತರ) ಅಧ್ಯಕ್ಷ ಡಾ| ಸತೀಶ ಜಿಗಜಿನ್ನಿ, ಕಾರ್ಯದರ್ಶಿ ಡಾ|ಗಿರೀಶ ತೆಗ್ಗಿನಮಠ, ವಿಟಿಯು ಕುಲಸಚಿವ ಪ್ರೋ| ಎ.ಎಸ್‌.ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next