Advertisement

5 ವರ್ಷದಲ್ಲಿ ಬೀಳಗಿ ರಾಜ್ಯದಲ್ಲೇ ನಂ.1: ಮುರುಗೇಶ ನಿರಾಣಿ

10:13 AM May 06, 2023 | Team Udayavani |

ಬಾಗಲಕೋಟೆ: ಮೊದಲ ಬಾರಿಗೆ ಚುನಾವಣೆಯಲ್ಲಿನ ಉತ್ಸಾಹ ಮತ್ತೊಮ್ಮೆ ಮರುಕಳಿಸಿದೆ. ಕಾರ್ಯಕರ್ತರ ಉತ್ಸಾಹ, ಜನಸ್ಪಂದನೆ ನೋಡಿದರೆ ಹೃದಯ ತುಂಬಿ ಬರುತ್ತದೆ. ಮನೆ ಮಗನಾಗಿ ಬೆಳೆಸಿದ ನನ್ನ ಮತಕ್ಷೇತ್ರದ ಜನತೆಯ ಅಭಿಮಾನ ದೊಡ್ಡದು ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

Advertisement

ಬೀಳಗಿ ಕ್ಷೇತ್ರದ ಹಳೆ ಕೊರ್ತಿ, ಹಳೇ ಗೋವಿನದಿನ್ನಿ, ಹಳೆ ಟಕ್ಕಳಕಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ನಾನು 2004ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಜನರೆಲ್ಲ ಅಭೂತಪೂರ್ವ ಬೆಂಬಲ ನೀಡಿ ಬೆನ್ನಿಗೆ ನಿಂತಿದ್ದರು. ಅದೇ ರೀತಿ ಈ ಬಾರಿ ಮತ್ತೂಮ್ಮೆ ಮರುಕಳಿಸಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ನನ್ನ ಮನೆ ಬಾಗಿಲಿಗೆ ಬಂದ ಪ್ರತಿಯೊಬ್ಬರಿಗೂ ನನ್ನ ಕೈಲಾದ ಸಹಾಯ ಮಾಡಿ, ಎಲ್ಲ ಕೆಲಸ ಮಾಡಿಕೊಟ್ಟಿದ್ದೇನೆ. ಯಾವುದೇ ಗ್ರಾಮಗಳಿಗೂ ತಾರತಮ್ಯ ಮಾಡದೇ ಅಭಿವೃದ್ದಿ ಅನುದಾನ ಹಂಚಿಕೆ ಮಾಡಿದ್ದೇನೆ. ಪಾರದರ್ಶಕ ಹಾಗೂ ಪ್ರಜಾಸಮ್ಮತ ಆಡಳಿತ ನನ್ನ ಗುರಿಯಾಗಿತ್ತು. ಅದರಂತೆ ನಡೆದುಕೊಂಡಿದ್ದೇನೆ. ನನ್ನ ಗೆಲುವಿಗಾಗಿ ಕಾರ್ಯಕರ್ತರು ಉರಿ ಬಿಸಿಲು ಲೆಕ್ಕಿಸದೇ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಹನುಮ ಬಲವಿದೆ. ಭಜರಂಗಿಯ ಆಶೀರ್ವಾದ ಈ ಬಾರಿ ನನ್ನನ್ನು ಗೆಲ್ಲಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ಸಿಗರು ನಮ್ಮ ಭಜರಂಗಿಗಳನ್ನು ಕೆಣಕಿ ತಮ್ಮ ಅವನತಿಯನ್ನು ತಾವೇ ತಂದುಕೊಂಡಿದ್ದಾರೆ. ಕೇಸರಿಯನ್ನು ಎದುರು ಹಾಕಿಕೊಂಡವರು ಇತಿಹಾಸದಲ್ಲಿ ಅಳಿದು ಹೋಗಿದ್ದಾರೆ. ಕಾಂಗ್ರೆಸ್‌ ಮತ್ತೊಮ್ಮೆ ಈ ತಪ್ಪು ಮಾಡುತ್ತಿದೆ. ಈ ಬಾರಿ ಜನ ಸಹಿಸುವುದಿಲ್ಲ. ಮೇ 13ರಂದು ಕಾಂಗ್ರೆಸ್‌ ಕರ್ನಾಟಕದಲ್ಲಿ ಆ ಅಳಿದು ಹೋದವರ ಪಟ್ಟಿಗೆ ಸೇರುತ್ತದೆ. ಕರ್ನಾಟಕದಲ್ಲಿ ಹನುಮಬಲದ ರಾಮರಾಜ್ಯ ಬಿಜೆಪಿ ನೇತೃತ್ವದಲ್ಲಿ ನಿರ್ಮಾಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೀಳಗಿಯ ಕಾಂಗ್ರೆಸ್‌ ಪಾಳಯ ಖಾಲಿಯಾಗುತ್ತಿ ರುವುದನ್ನು ಕಂಡು ಜೆ. ಟಿ. ಪಾಟೀಲ ಹತಾಶರಾಗಿದ್ದಾರೆ. ಅಭಿವೃದ್ಧಿ ಸಹಿಸದ ಮನಸ್ಥಿತಿಯನ್ನು ಜನರು ಒಪ್ಪಲು ಸಿದ್ಧವಿಲ್ಲ. ಹೀಗಾಗಿ ಜನ ಕಾಂಗ್ರೆಸ್‌ ಅಭ್ಯರ್ಥಿ ಬಗೆಗಿನ ನಂಬಿಕೆ ಕಳೆದುಕೊಂಡಿದ್ದಾರೆ. ಪ್ರಜ್ಞಾವಂತ ಬೀಳಗಿ ಜನತೆ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ. ನಾನು ಮಾಡಿದ
ಅಭಿವೃದ್ದಿ ಕಾರ್ಯಗಳನ್ನು ಜನ ಒಪ್ಪಿದ್ದಾರೆ. ವಿರೋಧ ಪಕ್ಷದವರ ಸರ್ಟಿಕೇಟ್‌ ನನಗೆ ಅವಶ್ಯವಿಲ್ಲ ಎಂದರು.

ಮುಖಂಡರಾದ ಶಿವಾನಂದ ನಿಂಗನೂರ, ಈರಣ್ಣ ಗಿಡ್ಡಪ್ಪಗೋಳ, ಶ್ರೀಧರ ಕಲ್ಲೂರ, ಪ್ರಮೀಳಾ ಘೋರ್ಪಡೆ, ದಾಕ್ಷಾ ಯಣಿ ಜಂಬಗಿ, ರಾಮಣ್ಣ ಢವಳೇಶ್ವರ, ಹೂಳಪ್ಪ ಪೂಜೇರಿ, ರುದ್ರಪ್ಪ ಮನಗೂಳಿ, ಚನ್ನಪ್ಪ ಮನಗೂಳಿ, ಗಿಡ್ಡಪ್ಪಗೌಡ ಪಾಟೀಲ, ಸಿದ್ದಲಿಂಗಪ್ಪ ನಾಯ್ಕರ, ಸಿದ್ದಲಿಂಗಪ್ಪ ಮಮದಾಪುರ ಉಪಸ್ಥಿತರಿದ್ದರು.

Advertisement

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ: ಮುರುಗೇಶ ನಿರಾಣಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕೊರ್ತಿ ಗ್ರಾಮದ ವಿಠಲ ಮನಗೂಳಿ, ಯಲ್ಲಪ್ಪ ದಳವಾಯಿ, ಶ್ರೀಶೈಲ ತಳವಾರ ಹಾಗೂ ಹದರಿಹಾಳ ಗ್ರಾಮದ ದೇವೆಂದ್ರಪ್ಪ ಬಡಿಗೇರ ಕುಟುಂಬಸ್ಥರು ಹಾಗೂ ಅವರ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು

ಕಾಂಗ್ರೆಸ್ಸಿಗರು ನಮ್ಮ ಭಜರಂಗಿಗಳನ್ನು ಕೆಣಕಿ ತಮ್ಮ ಅವನತಿಯನ್ನು ತಾವೇ ತಂದುಕೊಂಡಿದ್ದಾರೆ. ಕೇಸರಿಯನ್ನು
ಎದುರು ಹಾಕಿಕೊಂಡವರು ಇತಿಹಾಸದಲ್ಲಿ ಅಳಿದು ಹೋಗಿದ್ದಾರೆ. ಕಾಂಗ್ರೆಸ್‌ ಮತ್ತೂಮ್ಮೆ ಈ ತಪ್ಪು ಮಾಡುತ್ತಿದೆ. ಈ ಬಾರಿ ಜನ ಸಹಿಸುವುದಿಲ್ಲ. ಹೀಗಾಗಿ ಮೇ.13 ರಂದು ಕಾಂಗ್ರೆಸ್‌ ಕರ್ನಾಟಕದಲ್ಲಿ ಆ ಅಳಿದು ಹೋದವರ ಪಟ್ಟಿಗೆ ಸೇರುತ್ತದೆ. ಕರ್ನಾಟಕದಲ್ಲಿ ಹನುಮಬಲದ ರಾಮರಾಜ್ಯ ಬಿಜೆಪಿ ನೇತೃತ್ವದಲ್ಲಿ ನಿರ್ಮಾಣವಾಗುತ್ತದೆ.
-ಮುರುಗೇಶ ನಿರಾಣಿ,
ಬೀಳಗಿಯ ಬಿಜೆಪಿ ಅಭ್ಯರ್ಥಿ

ವಿಶೇಷ ಪೂಜೆ-ಕಲಾದಗಿಯಲ್ಲಿ ಮುಖಂಡರ ಮತಯಾಚನೆ
ಕಲಾದಗಿ:
ಬೀಳಗಿ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಗೆಲುವಿಗಾಗಿ ಮತಕ್ಷೇತ್ರದ ಹಾಗೂ ಜಿಲ್ಲೆಯ ಹಿರಿಯ ರೆಡ್ಡಿ ಸಮುದಾಯದ ನಾಯಕರು ತುಳಸಿಗೇರಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ  ವಿಶೇಷ ಪೂಜೆ ಸಲ್ಲಿಸಿ ಮತಕ್ಷೇತ್ರದಾದ್ಯಂತ ಸಂಚರಿಸಿ ಮತಯಾಚನೆ ಮಾಡಿದರು.

ಶುಕ್ರವಾರ ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರವಿ ದೇಸಾಯಿ, ಕೃಷ್ಣಪ್ಪ ಬಿಲ್ಲಕೇರಿ,
ಆರ್‌.ಆರ್‌.ಪಾಟೀಲ, ಪ್ರಶಾಂತ ಹುಣಸಿಕಟ್ಟಿ, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಹಾಗೂ ವಿಧಾನ ಪರಿಷತ್‌ ಶಾಸಕ ಪಿ.ಎಚ್‌. ಪೂಜಾರಿ ವಿಶೇಷ ಪೂಜೆ ಸಲ್ಲಿಸಿ ಡಾ| ಮುರುಗೇಶ ನಿರಾಣಿ ಅವರ ಗೆಲುವಿಗೆ ಪ್ರಾರ್ಥಿಸಿದರು. ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳಿಗೆ ಜನರು ಮಾರು ಹೋಗಿದ್ದಾರೆ. ಬೀಳಗಿ ಮತ ಕ್ಷೇತ್ರದ ಹಾಲಿ ಶಾಸಕ, ಸಚಿವ ಡಾ| ಮುರುಗೇಶ ನಿರಾಣಿ
ಅವರ ಕ್ಷೇತ್ರದಲ್ಲಿ ಮಾಡಿದಂತಹ ಕಾರ್ಯಗಳನ್ನು ಮೆಚ್ಚಿ ಮತ್ತೂಮ್ಮೆ ಬಿಜೆಪಿಗೆ ಮತ ನೀಡಲು ಕ್ಷೇತ್ರದ ಜನ ಉತ್ಸುಕರಾಗಿದ್ದಾರೆ. ನಂತರ ಕಲಾದಗಿ, ಅನವಾಲ ಜಿಪಂ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೂತೆರಳಿ ನಿರಾಣಿ ಪರ ಮತಯಾಚನೆ ಮಾಡಿದರು.

ನಿರಾಣಿಯವರ ದೂರದೃಷ್ಟಿ ವಿಚಾರಗಳಿಂದ ಲಾಭ
ಬಾಗಲಕೋಟೆ: ಮುರುಗೇಶ ನಿರಾಣಿ ಅವರ ದೂರದೃಷ್ಟಿಯ ವಿಚಾರಗಳು ನಮ್ಮ ಬೀಳಗಿ ಮತಕ್ಷೇತ್ರಕ್ಕೆ
ದೊಡ್ಡ ಲಾಭ ತಂದಿವೆ. ಅವರದ್ದು ಅಭಿವೃದ್ಧಿಯ ಅಜೆಂಡಾ ಎಂದು ವಿಧಾನಪರಿಷತ್‌ ಸದಸ್ಯ ಪಿ.ಎಚ್‌.
ಪೂಜಾರ ಹೇಳಿದರು.

ತಾಲೂಕಿನ ತುಳಸಿಗೇರಿಯಲ್ಲಿ ರೆಡ್ಡಿ ಸಮುದಾಯದ ಎಲ್ಲ ಪ್ರಮುಖರು ಮುರುಗೇಶ ನಿರಾಣಿ ಗೆಲುವಿಗೆ ಪ್ರಾರ್ಥಿಸಿ ಮಾರುತೇಶ್ವರನಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಬಳಿಗೆ ಬರುವ ಎಲ್ಲರ ಸಮಸ್ಯೆಗಳಿಗೂ ಪರಿಹಾರಗಳಿವೆ. ಅಭಿವೃದ್ದಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡುವುದಿಲ್ಲ. ಹೀಗಾಗಿ ಈ ಬಾರಿ ಪ್ರತಿಯೊಬ್ಬರು ಮುರುಗೇಶ ನಿರಾಣಿಯವರಿಗೆ ತುಂಬು ಮನಸ್ಸಿನಿಂದ ಹಾರೈಸಿ ಮತ ಚಲಾಯಿಸುತ್ತಾರೆ. ದಾಖಲೆಯ ಗೆಲುವು ಅವರದ್ದಾಗಲಿದೆ ಎಂದು ತಿಳಿಸಿದರು.

ಬೀಳಗಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಎಲ್ಲ ಸಮುದಾಯಗಳಿಂದ ಭೇಷರತ್‌ ಬೆಂಬಲ ಸೂಚಿಸಿದ್ದಾರೆ. ರೆಡ್ಡಿ ಸಮುದಾಯದ ಹಿರಿಯರು ಒಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಿರಾಣಿ ದಾಖಲೆಯ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದರು. ಎಂಆರ್‌.ಎನ್‌. ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಆರ್‌. ಆರ್‌. ನಾಯಿಕ, ಲಕ್ಷ್ಮಣ ದೊಡಮನಿ, ಸತೀಶ ವಲ್ಲಿಗೌಡರ, ಸಂತೋಷ ವಲ್ಲಿಗೌಡರ, ತಿಮ್ಮಣ್ಣ ಅಮಲಝರಿ, ಜಿ.ಎನ್‌. ನಾಯಿಕ, ಹಣಮಂತ ಲಂಕೆನ್ನವರ, ಗೋವಿಂದಪ್ಪ ಲಂಕೆನ್ನವರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next