Advertisement

ತ್ಯಾಜ್ಯ ನಿರ್ವಹಣೆಗೆ ಸಂಘ-ಸಂಸ್ಥೆಗಳಿಗೆ ಮೊರೆ

04:09 PM Feb 21, 2022 | Team Udayavani |

ಹುಬ್ಬಳ್ಳಿ: ಮಹಾನಗರದ ಒಣ ತ್ಯಾಜ್ಯ ನಿರ್ವಹಣೆಗೆ ರೂಪಿಸಿದ್ದ ಯೋಜನೆ ಅಂತಿಮ ರೂಪಕ್ಕೆ ಬಂದಿದ್ದು, ಯಂತ್ರಗಳ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಂಡು ಪ್ರಾಯೋಗಿಕ ಕಾರ್ಯ ಕೂಡ ಯಶಸ್ವಿಯಾಗಿ ಮುಗಿದಿದೆ. ಘಟಕಗಳ ಪರಿಣಾಮಕಾರಿ ನಿರ್ವಹಣೆಗೆ ಮಹಾನಗರ ಪಾಲಿಕೆ ಆಸಕ್ತ ಸಂಘ-ಸಂಸ್ಥೆ, ಎನ್‌ಜಿಒಗಳ ಮೊರೆ ಹೋಗಿಗಿದ್ದು, ಆಸಕ್ತರಿಂದ ನಿರ್ವಹಣಾ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

Advertisement

ಮಹಾನಗರದ ಘನ ತ್ಯಾಜ್ಯ ನಿರ್ವಹಣೆಗಾಗಿ ಮಾದರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಗೆ ಮುಂದಡಿ ಇಡಲಾಗಿದೆ. ಇದೀಗ ಒಣ ತ್ಯಾಜ್ಯದ ನಿರ್ವಹಣೆ ಕಾರ್ಯಾರಂಭವಾಗಲಿದೆ. ಮಹಾನಗರ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ತಲಾ 5 ಟನ್‌ ಒಣ ತ್ಯಾಜ್ಯ ಪ್ರತ್ಯೇಕಿಸುವ 4 ಹಾಗೂ 1 ಘಟಕ 15 ಟನ್‌ ಸಾಮರ್ಥ್ಯದ ಘಟಕಗಳನ್ನು ಈಗಾಗಲೇ ನಿರ್ಮಿಸಿ ಅಗತ್ಯ ಯಂತ್ರಗಳನ್ನು ಅಳವಡಿಸಿ ಪ್ರಾಯೋಗಿಕ ಕಾರ್ಯ ನಡೆಯುತ್ತಿದೆ. ಇವುಗಳ ನಿರ್ವಹಣೆಗೆ ಆಸಕ್ತ ಎನ್‌ಜಿಒ, ಕಂಪನಿಗಳ ಮೂಲಕ ಪ್ರಸ್ತಾವನೆ ಆಹ್ವಾನಿಸಲಾಗಿದೆ. ಯಾವ ಮಾದರಿಯಲ್ಲಿ ನಿರ್ವಹಣೆ ಗುತ್ತಿಗೆ ಕೊಡಬೇಕು ಎಂಬುದನ್ನು ನಿರ್ಧರಿಸಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಧಾರವಾಡದ ಕಸಮಡ್ಡಿಯಲ್ಲಿ ಇರುವ ಸಿಬ್ಬಂದಿ ಬಳಸಿ ನಿತ್ಯ ಒಣ ತ್ಯಾಜ್ಯದ ಮೂಲಕ ಒಂದಿಷ್ಟು ಆದಾಯ ಪಡೆಯುವ ಕೆಲಸ ನಡೆಯುತ್ತಿದೆ.

ಹು-ಧಾ ನಗರದಲ್ಲಿ ನಿತ್ಯ ದೊರೆಯುವ ಸುಮಾರು 220 ಟನ್‌ ಒಣ ತ್ಯಾಜ್ಯ ನಿರ್ವಹಣೆ ಮಾಡುವ ಗುರಿ ಪಾಲಿಕೆ ಮುಂದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ 40 ಟನ್‌ ಸಾಮರ್ಥ್ಯದ ಘಟಕಗಳನ್ನು ಹೊಂದಿದೆ. ಬೆಂಗೇರಿ, ಇಂದಿರಾ ನಗರ, ನಂದಿನಿ ಲೇಔಟ್‌, ಉಣಕಲ್ಲ, ಧಾರವಾಡ ಕಸಮಡ್ಡಿಯಲ್ಲಿ ಘಟಕಗಳಿಂದ ಪ್ರಾಯೋಗಿಕ ಕಾರ್ಯ ಪೂರ್ಣಗೊಳಿಸಲಾಗಿದೆ.

ಅಂಚಟಗೇರಿ- ಧಾರವಾಡದ ಕಸಮಡ್ಡಿಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆಗೆ ನಿರ್ಮಿಸಿದ್ದ ಕಾಂಪೋಸ್ಟ್‌ ಪ್ರೊಸೆಸಿಂಗ್‌ ಘಟಕಗಳು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿವೆ. ಹುಬ್ಬಳ್ಳಿಯಲ್ಲಿ ಆರಂಭವಾಗಲಿರುವ ಎನ್‌ಟಿಪಿಸಿ ಘಟಕಕ್ಕೆ ನಿತ್ಯ 200 ಟನ್‌ ಒಣ ತ್ಯಾಜ್ಯ ನೀಡಬೇಕು. ಇಲ್ಲಿಗೆ ನೀಡುವ ಒಣ ತ್ಯಾಜ್ಯ ಪರ್ಯಾಯ ಇಂಧನವಾಗಿ ತಯಾರಾಗಲಿದೆ. ಎನ್‌ಟಿಪಿಸಿ ಘಟಕ ಆರಂಭವಾಗುವುದರೊಳಗೆ ಈಗಿರುವ 5 ಘಟಕಗಳು ಹಾಗೂ ಕೇಂದ್ರ ಸರಕಾರಕ್ಕೆ ನೀಡಿರುವ 20 ಟನ್‌ ಸಾಮರ್ಥ್ಯದ 3 ಘಟಕಗಳು ಮಂಜೂರಾದರೆ ನಿತ್ಯ 100 ಟನ್‌ ಒಣ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯ ದೊರೆಯುತ್ತಿದೆ.

ಉತ್ತಮ ಆದಾಯ: ಇಂದಿರಾ ನಗರದಲ್ಲಿ ಈಗಾಗಲೇ ಹಸಿರು ದಳ ಎನ್ನುವ ಸಂಸ್ಥೆ ಮೂಲಕ ಒಣ ತ್ಯಾಜ್ಯ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಆದರೆ ಇದೀಗ ಬರುತ್ತಿರುವ ಯಂತ್ರಗಳ ಅಳವಡಿಕೆಯಿಂದ ಮಾನವ ಸಂಪನ್ಮೂಲ ಬಳಕೆ ಸಾಕಷ್ಟು ತಗ್ಗಲಿದೆ. ಹಸಿ ತ್ಯಾಜ್ಯ, ಒಣ ತ್ಯಾಜ್ಯ ಎರಡನ್ನೂ ಒಂದೇ ಘಟಕದಲ್ಲಿ ನಿರ್ಮಿಸಿರುವುದರಿಂದ ಸಾಗಾಣಿಕೆ ಹಾಗೂ ಇತರೆ ವೆಚ್ಚಗಳು ಇರಲ್ಲ. ಸದ್ಯದ ಅಂದಾಜು ಪ್ರಕಾರ ಒಂದು ಘಟಕದಲ್ಲಿ 5-6 ಸಿಬ್ಬಂದಿ ಸಾಕಾಗಬಹುದು ಎಂದು
ನಿರೀಕ್ಷಿಸಲಾಗಿದೆ.

Advertisement

ಹೊಸ ಘಟಕಗಳಲ್ಲಿ ಕನ್ವೇನರ್‌ ಬೆಲ್ಟ್ ಅಳವಡಿಸುವುದರಿಂದ ಪ್ಲಾಸ್ಟಿಕ್‌ ಬಾಟಲ್‌, ಕಟ್ಟಿಗೆ, ಚಪ್ಪಲ್‌, ಕಾಗದ, ಪ್ಲಾಸ್ಟಿಕ್‌ ವಸ್ತುಗಳು, ರಟ್ಟು ಸೇರಿದಂತೆ ಸುಮಾರು 14 ವಸ್ತುಗಳನ್ನು ಬೇರ್ಪಡಿಸಬಹುದಾಗಿದೆ. ಉಳಿದಂತೆ ಮ್ಯಾಗ್ನೇಟ್‌ ಸಪರೇಟರ್‌ ಯಂತ್ರ ಲೋಹದ ವಸ್ತುಗಳನ್ನು ಬೇರ್ಪಡಿಸುತ್ತದೆ. ಅಂತಿಮವಾಗಿ ಬೇಲಿಂಗ್‌ ಯಂತ್ರದ ಮೂಲಕ ಆರ್‌ಡಿಎಫ್‌(ಪರ್ಯಾಯ ಇಂಧನ) ಸಿದ್ಧಪಡಿಸಬಹುದಾಗಿದೆ. ಮೈಸೂರಿನಲ್ಲಿ ಪಾಲಿಕೆ ಹೊರತುಪಡಿಸಿ ಖಾಸಗಿಯವರು ಕೂಡ ಮೂರು ಘಟಕಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಪಾಲಿಕೆಗೆ ಸವಾಲಿನ ಕಾರ್ಯ: ಒಣ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಿಲ್ಲದ ಕಾರಣ ಸದ್ಯಕ್ಕೆ ಮೌಲ್ಯಯುತ ತ್ಯಾಜ್ಯವನ್ನು ಕೆಲ ಆಟೋ ಟಿಪ್ಪರ್‌ ಕಾರ್ಮಿಕರು ಗುಜರಿ ಅಂಗಡಿಗಳಿಗೆ ಹಾಕುತ್ತಿದ್ದಾರೆ. ಇದು ಮುಂದುವರಿದರೆ ಒಣ ತ್ಯಾಜ್ಯ ಘಟಕಗಳಿಗೆ ಮೌಲ್ಯಯುತ ವಸ್ತುಗಳು ಘಟಕಕ್ಕೆ ಬಾರದಿದ್ದರೆ ನಿರ್ವಹಣೆ ಕಷ್ಟವಾಗಲಿದೆ. ಇನ್ನು ಒಣ ಹಾಗೂ ಹಸಿ ತ್ಯಾಜ್ಯ ವಿಂಗಡನೆ ಪ್ರಾಥಮಿಕ ಹಂತದಲ್ಲಿ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಶೇ.100 ಯಶಸ್ವಿಯಾಗಿ ನಿರ್ವಹಿಸುವುದು ಪಾಲಿಕೆಗೆ ಸವಾಲಿ ಕಾರ್ಯವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಘಟಕಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದರೂ ಮುಂದುವರಿಸಲು ಕಾರ್ಮಿಕರ ಸಮಸ್ಯೆಯಿದೆ. ಹೀಗಾಗಿ ಆದಷ್ಟು ಶೀಘ್ರ ಈ ಘಟಕಗಳ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕಂಪನಿ, ಸಂಸ್ಥೆಗಳಿಗೆ ವಹಿಸಬೇಕೆನ್ನುವುದು ಪಾಲಿಕೆ ಚಿಂತನೆಯಾಗಿದೆ. ಪಾಲಿಕೆ ಲಾಭ ಹಂಚಿಕೆ ಆಧಾರದ ಮೇಲೆ ಆಸಕ್ತ ಸಂಸ್ಥೆಗಳಿಗೆ ನೀಡಬೇಕೆಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಮೂರು ಘಟಕಗಳಿಗೆ ಪ್ರಸ್ತಾವನೆ: ಒಣ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 60 ಟನ್‌ ಸಾಮರ್ಥ್ಯದ 3 ಘಟಕಗಳಿಗೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರದ ಯೋಜನೆಯೊಂದರ ಮೂಲಕ ಇದನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಒಂದು ವೇಳೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದರೆ 100 ಟನ್‌ ಸಾಮರ್ಥ್ಯದ ಘಟಕಗಳನ್ನು ಹೊಂದಿದಂತಾಗುತ್ತದೆ. ಇದರೊಂದಿಗೆ ಅಂಚಟಗೇರಿ ಕಾಂಪೋಸ್ಟ್‌ ಪ್ರೊಸೆಸಿಂಗ್‌ ಘಟಕದಲ್ಲಿ ಬೇಲಿಂಗ್‌ ಯಂತ್ರ ಅಳವಡಿಸಿದರೆ ಒಣ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯ ಹೆಚ್ಚಲಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಒಣ ತ್ಯಾಜ್ಯ ನಿರ್ವಹಣಾ ಘಟಕಗಳ ಕಾರ್ಯಾರಂಭಕ್ಕೆ ಆದ್ಯತೆ ನೀಡಲಾಗಿದ್ದು, ಆಸಕ್ತ ಸಂಘ-ಸಂಸ್ಥೆ, ಎನ್‌ಜಿಒಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ. ಆದಷ್ಟು ಶೀಘ್ರ ಈ ಪ್ರಕ್ರಿಯೆ ಮುಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ನಾಲ್ಕು ಘಟಕಗಳ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಸಂತೋಷ ಯರಂಗಳಿ, ಕಾರ್ಯ ನಿರ್ವಾಹಕ
ಅಭಿಯಂತ, ಘನತ್ಯಾಜ್ಯ ನಿರ್ವಹಣೆ ವಿಭಾಗ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next