Advertisement

ಒಗ್ಗಟ್ಟಿದ್ದರೆ ಮೋದಿ-ಶಾ ಏನೂ ಮಾಡಲಾರರು

05:28 PM Aug 16, 2017 | Team Udayavani |

ಕಲಬುರಗಿ: ಮುಂಬರುವ 2018ರ ಚುನಾವಣೆಯನ್ನು ಸಂಪೂರ್ಣ ವಿಶ್ವಾಸದಿಂದ ಮತ್ತು ಒಗ್ಗಟ್ಟಿನಿಂದ ಎದುರಿಸಿದಾಗ ಯಾವ ಮೋದಿ ಮತ್ತು ಅಮಿತ್‌ ಶಾ ನಮಗೇನು ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ
ಹೇಳಿದರು. ಮಂಗಳವಾರ ಇಲ್ಲಿನ ಹಿಂದಿ ಪ್ರಚಾರ ಸಭೆ ಎದುರು ನೂತನವಾಗಿ ನಿರ್ಮಿಸಲಾಗಿರುವ ಗಾಂಧಿ ಭವನ (ಕಾಂಗ್ರೆಸ್‌ ಕಚೇರಿ) ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಒಗ್ಗಟ್ಟಿನ ಕೊರತೆಯಿಂದ ಕಳೆದ ಬಾರಿ ದಕ್ಷಿಣ ಮತಕ್ಷೇತ್ರವನ್ನು ಕೈಚೆಲ್ಲಿದೆವು. ಈ ಬಾರಿ ಹಾಗೆ ಆಗಬಾರದು. ನಮ್ಮೊಳಗಿನ ಒಗ್ಗಟ್ಟನ್ನು ನಾವು ಬಿಟ್ಟು ಕೊಡುವುದರಿಂದ ನಾವೇ ಎದುರಾಳಿ ಪಕ್ಷದವರಿಗೆ ಅವಕಾಶ ಮಾಡಿಕೊಡಬಾರದು ಎಂದು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ತಿಳಿ ಹೇಳಿದರು. ಬೇರೆ ಕಡೆ ನಡೆದಂತೆ ಕರ್ನಾಟಕದಲ್ಲಿ ಬಿಜೆಪಿ ಆಟನಡೆಯುವುದಿಲ್ಲ. ಅದನ್ನು ಎಲ್ಲರೂ ಮನಸ್ಸಿನಲ್ಲಿ ಇಟ್ಟುಕೊಂಡು ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಆಗಲೇ ಜನರು ನಿಮ್ಮೊಂದಿಗೆ ಬರಲು ಸಾಧ್ಯ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರ ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿ ಹೇಳಿ. ಅದೇ ವೇಳೆ ಮೂರುವರೆ ವರ್ಷಗಳಲ್ಲಿ ಕೇಂದ್ರ ಸರಕಾರ ಮಾಡಿರುವ ಮತ್ತು ಮೋದಿ ಮಾತು ಕೊಟ್ಟು ಮೋಸ ಮಾಡಿರುವುದನ್ನು ಜನರಿಗೆ ಮನವರಿಕೆ ಮಾಡಿಕೊಡಿ. ಇದರಿಂದ ಗೆಲವು ನಮಗೆ ಇನ್ನಷ್ಟು ಸುಲಭವಾಗಲಿದೆ ಎಂದರು. ನಮ್ಮೊಳಗಿನ ಕಿತ್ತಾಟಗಳು, ಕೊಂಕು ನಡೆಗಳು ಪಕ್ಷಕ್ಕೆ ಹಾನಿ ಮಾಡುತ್ತವೆ. ಪಕ್ಷದಲ್ಲಿರುವವರು ಹಾಗೂ ದೂರ ದೃಷ್ಟಿಯಿಂದ ಭವಿಷ್ಯವನ್ನು ನಮ್ಮದಾಗಿಸಿಕೊಳ್ಳುವವರು ತಾಳ್ಮೆಯಿಂದ ಕೆಲಸ ಮಾಡಬೇಕು. ಅಧಿಕಾರ ತಾನಾಗಿಯೇ ಸಿಕ್ಕುತ್ತದೆ. ಮಾಜಿ ಸಚಿವ ಖಮರುಲ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಾಗ ನಡೆದುಕೊಂಡಿರುವ ರೀತಿಯಿಂದಾಗಿ ಪಕ್ಷಕ್ಕೆ ಮುಜುಗುರ ಮತ್ತು ಹಾನಿಯಾಗಿದೆ. ಇಂತಹ ಘಟನೆಗಳು ಬಂದಾಗ ಮುಖಂಡರು, ಹಿರಿಯ ಕಾರ್ಯಕರ್ತರು ಸುಮ್ಮನೆ ಇದ್ದು ಎಲ್ಲವನ್ನು ನಿಭಾಯಿಸಬೇಕು ಎಂದರು. 50 ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಕಚೇರಿ ಒದಗಿಸಿದ್ದ ಖೂಬಾ ಅವರ ಸೇವೆಯನ್ನು ಸ್ಮರಿಸಿದ ಅವರು, 371ನೇ (ಜೆ) ಕಲಂ ಜಾರಿ ಮಾಡುವಾಗ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಹಲವಾರು ಜನರ ಮೇಲೆ ಒತ್ತಡ ಹೇರಿ ಮನವಿ ಮಾಡಿ ಕಲಂ ಜಾರಿಗೆ ತರಬೇಕಾಯಿತು. ಅಲ್ಲದೆ, ಈ ಭಾಗದ ಹಲವಾರು ಹೋರಾಟಗಾರರು ತಮ್ಮ ಶಕ್ತಿಯನ್ನು ಇದಕ್ಕಾಗಿ ವ್ಯಯ ಮಾಡಿದ್ದಾರೆ ಎಂದರು. ಮಾಜಿ ಸಚಿವ ಹಾಗೂ ಎಐಸಿಸಿ ಕಾರ್ಯದರ್ಶಿ ಖಮರುಲ್‌ ಇಸ್ಲಾಂ ಮಾತನಾಡಿ, ಇವತ್ತು ಗಾಂಧಿ ಭವನದ ರೂಪದಲ್ಲಿ ಪಕ್ಷದ ಕಚೇರಿ ಸಿದ್ಧವಾಗಿದೆ. ಇದಕ್ಕಾಗಿ ತಾವು ಹಲವು ಕೊಡುಗೆಗಳನ್ನು ನೀಡಿದ್ದೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ
ಮಾತನಾಡಿ, ನಮ್ಮ ಹಲವಾರು ಚಟುವಟಿಕೆಗೆ ಇನ್ನು ಮುಂದೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ. ಇದಕ್ಕೂ ಮುನ್ನಾ ಖೂಬಾ
ಅವರ ಸಹಕಾರದಿಂದ ನಾವು ಕಚೇರಿ ನಡೆಸಿದ್ದೆವು. ಈಗ ನಮ್ಮದೆ ಕಚೇರಿ ಆಗಿದೆ. ಕಾರ್ಯಕರ್ತರು, ಮುಖಂಡರು ಇದನ್ನು ಸರಿಯಾಗಿ ಬಳಕೆ ಮಾಡಬೇಕು ಎಂದು ಹೇಳಿದರು. ಕೆಪಿಸಿಸಿ ಜಿಲ್ಲಾಧ್ಯಕ್ಷ ಭಾಗಣ್ಣಗೌಡ ಸಂಕನೂರು ಮಾತನಾಡಿ ಸ್ವಾಗತಿಸಿದರು. ಮಾಜಿ ವಿಧಾನ ಪರಿಷತ್‌ ಸದಸ್ಯ ಅಲ್ಲಂಪ್ರಭು ಪಾಟೀಲ ನಿರೂಪಿಸಿದರು. ಎಂಎಲ್‌ಸಿಗಳಾದ ಶರಣಪ್ಪ ಮಟ್ಟೂರ, ಇಕ್ಬಾಲ್‌ ಅಹ್ಮದ ಸರಡಗಿ, ಶಾಸಕ ಜಿ.ರಾಮಕೃಷ್ಣ, ಮೇಯರ್‌ ಶರಣಕುಮಾರ ಮೋದಿ, ಕುಡಾ ಅಧ್ಯಕ್ಷ ಮೊಹ್ಮದ ಅಗಸರ್‌ ಚುಲಬುಲ್‌, ಆಲಂ ಖಾನ್‌,
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಬಸವರಾಜ ಭೀಮಳ್ಳಿ, ನೀಲಕಂಠರಾವ ಮೂಲಗೆ, ಕೆಪಿಸಿಸಿ ಕಾರ್ಯದರ್ಶಿ ಕೃಷ್ಣಾಜಿ
ಕುಲಕರ್ಣಿ, ತಿಪ್ಪಣ್ಣಪ್ಪ ಕಮಕನೂರು, ವಿಜಯಕುಮಾರ ಹದಗಲ್‌, ಚಂದ್ರಿಕಾ ಪರಮೇಶ್ವರ, ಸಿ.ಎ.ಪಾಟೀಲ, ದೇವೇಂದ್ರಪ್ಪ ಮರತೂರ, ಮದರ್‌ ಖಾನ್‌, ಈರಣ್ಣ ಝಳಕಿ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next