Advertisement

ಸೊಳ್ಳೆ ಕಡಿದರೂ ಉ.ಪ್ರ.ಸಚಿವರು ಅಹರ್ನಿಶಿ ದುಡಿಯುತ್ತಿದ್ದಾರೆ: ಸಚಿವೆ

03:45 PM May 04, 2018 | Team Udayavani |

ಲಕ್ನೋ : ”ಸೊಳ್ಳೆಗಳಿಂದ ಕಡಿಸಿಕೊಂಡರೂ ಉತ್ತರ ಪ್ರದೇಶದ ಸಚಿವರು ಹಗಲು ರಾತ್ರಿ ಎನ್ನದೇ ಸರಕಾರದ ಯೋಜನೆಗಳನ್ನು ಅನುಷ್ಠಾನಿಸಿ ಜನರಿಗೆ ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ” ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಚಿವೆ ಅನುಪಮಾ ಜೈಸ್ವಾಲ್‌ ಅವರು ವ್ಯಂಗ್ಯದ ಟೀಕೆಗಳಿಗೆ ಗುರಿಯಾಗಿದ್ದಾರೆ. ತಮ್ಮ ಸರಕಾರದ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸಚಿವೆಯ ಈ ಮಾತುಗಳನ್ನು ವಿರೋಧ ಪಕ್ಷಗಳು ಗೇಲಿ ಮಾಡಿವೆ.

Advertisement

ಉತ್ತರ ಪ್ರದೇಶದ ಸಚಿವರು ಸರಕಾರದ ಜನ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಹಗಲಿರುಳೂ ಶ್ರಮಿಸುತ್ತಿದ್ದಾರೆಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವೆ ಅನುಪಮಾ ಅವರು, “ಸಮಾಜದ ಎಲ್ಲ ವರ್ಗಗಳ ಅಭ್ಯುದಯಕ್ಕಾಗಿಯೇ ಸರಕಾರ ವಿವಿಧ ಬಗೆಯ ಯೋಜನೆಗಳನ್ನು ರೂಪಿಸಿದೆ. ಅಂತೆಯೇ ಯುವಕರು ಅಡ್ಡದಾರಿ ಹಿಡಿಯದೇ ಇರಲು ಸರಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವುದು ಬಹಳ ಮುಖ್ಯ. ಆ ಕೆಲಸವನ್ನು ರಾಜ್ಯದ ಸಚಿವರು ಅತ್ಯಾಸಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಯಾವುದೇ ಬಗೆಯ ನಿರ್ಲಕ್ಷ್ಯ ತೋರುತ್ತಿಲ್ಲ; ಸೊಳ್ಳೆಗಳಿಂದ ಕಡಿಸಿಕೊಂಡರೂ ಸಚಿವರೆಲ್ಲರೂ ಅಹರ್ನಿಶಿಯಾಗಿ ಜನರ ಒಳಿತಿಗಾಗಿ ದುಡಿಯುತ್ತಿದ್ದಾರೆ’ ಎಂದು ಹೇಳಿದರು. 

“ಯಾವುದೇ ಸಚಿವರು ತಮ್ಮ ಕಾರ್ಯಭಾರ ಜಾಸ್ತಿಯಾಯಿತೆಂದು ಗೊಣಗುತ್ತಿಲ್ಲ; ದೂರುತ್ತಿಲ್ಲ. ಎರಡು ಚೌಪಾಲ್‌ಗ‌ಳಲ್ಲಿ ದುಡಿಯುವ ಹೊಣೆ ಹೊತ್ತ ಸಚಿವರು ನಾಲ್ಕು ಚೌಪಾಲ್‌ಗ‌ಳನ್ನು ತಮಗೆ ಕೊಟ್ಟರೂ ಸರಿಯೇ; ತಾವು ದುಡಿಯುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ಸರಕಾರಕ್ಕೆ ಆನೆ ಬಲ ಬಂದಂತಾಗಿದೆ’ ಎಂದು ಸಚಿವೆ ಅನುಪಮಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next