Advertisement

ನಾನು ಏನಾದರೂ ತಪ್ಪು ಮಾಡಿದ್ದರೆ ದೇವರು ನೋಡಿಕೊಳ್ಳುತ್ತಾನೆ: ಸಚಿವೆ ಜೊಲ್ಲೆ

01:19 PM Aug 16, 2021 | Team Udayavani |

ಅಥಣಿ: ನಾನು ಯಾವುದೇ ತಪ್ಪು ಮಾಡಿಲ್ಲ. ಮಹಿಳೆ ಒಬ್ಬಳು ಒಳ್ಳೆ ಕೆಲಸ ಮಾಡುವಾಗ ಆರೋಪಗಳು ಕೇಳಿ ಬರುವುದು ಸಹಜ. ನಾನು ಇರುವ ಖಾತೆಯಲ್ಲಿ ಸಂತ್ರಪ್ತಳಾಗಿ ಕಾರ್ಯ ನಿರ್ವಹಿಸುವೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಅವರು ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಒಬ್ಬ ಮಹಿಳೆಯಾಗಿ ನನ್ನ ಕುಟುಂಬವನ್ನ ಹೇಗೆ ನಿರ್ವಹಿಸುತ್ತೇನೊ ಹಾಗೆಯೆ ರಾಜ್ಯದ ಮತ್ತು ರಾಷ್ಟ್ರೀಯ ಮುಖಂಡರು ನನಗೆ ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಜೊತೆಗೆ ರಾಜ್ಯದಲ್ಲಿ ಜನಸೇವೆ ಮಾಡುತ್ತಿದ್ದೇನೆ. ಕರ್ನಾಟಕದ ಜನರು ನನ್ನ ಕುಟುಂಬ ಎಂದು ಭಾವಿಸಿ ಸಮಾಜ ಸೇವೆ ಮಾಡುತ್ತಿದ್ದೇನೆ. ಒಳ್ಳೆಯ ಕೆಲಸವನ್ನು ಮಾಡುವಾಗ ಅನೇಕ ಜನ ಅದಕ್ಕೆ ಹೆಸರು ಇಡುವವರೂ ಇರುತ್ತಾರೆ. ಅಂತಹ ಜನ ಅದನ್ನು ಮಾಡುತ್ತಿರುವಾಗ ನಾನು ಅದರ ಕಡೆಗೆ ಗಮನ ಕೊಟ್ಟಿಲ್ಲ.

ನಾನು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ.ನನಗೆ ಅಂತಹ ಪರಿಸ್ಥಿತಿಯೂ ಬಂದಿಲ್ಲ. ನಾನು ಸಮಾಜ ಸೇವೆಗೆ ಬಂದಿರುವುದೇ ನಮ್ಮ ಮನೆಯಲ್ಲಿ ಕೂಡ ವಿಶೇಷ ಮಗು ಇರುವುದರಿಂದ. ಅಂತಹ ತಾಯಂದಿರ ಕಷ್ಟ ನನಗೂ ಗೊತ್ತಿದೆ. ಮಂತ್ರಿಗಿರಿಯಿಂದ ಇಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೂಡ ಆರೋಪ ಆಗಿರಬಹುದು. ನಾನು ಯಾರನ್ನೂ ಕೂಡ ಸಾಕ್ಷಿ, ಆಧಾರ ಇಲ್ಲದೆ ದೂಷಿಸುವದಿಲ್ಲ. ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ ಎಂದರು.

ನಾನು ಏನಾದರೂ ತಪ್ಪು ಮಾಡಿದ್ದರೆ ದೇವರು ದೊಡ್ಡವನಿದ್ದಾನೆ. ಅವನು ನೋಡಿಕೊಳ್ಳುತ್ತಾನೆ. ಆ ದೇವರ ದಯೆಯಿಂದ, ನನ್ನ ಜನರ ಆಶೀರ್ವಾದ ಮತ್ತು ಪ್ರಾಮಾಣಿಕ ಕೆಲಸ ಮಾಡಿರುವುದರಿಂದ, ಬಡವರ ಕಣ್ಣು ಒರೆಸಿರುವದರಿಂದ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಅವರನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next