Advertisement

ಪತಿವ್ರತೆ ಎಂದು ಸಾಬೀತು ಮಾಡಲು ಮಿ ಟೂ ವೇದಿಕೆ

11:20 AM Oct 31, 2018 | |

“ಕನ್ನಡ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ತಮ್ಮ ಮದುವೆಯ ವಿಚಾರವನ್ನೇ ಗುಟ್ಟಾಗಿ ಇಟ್ಟವರು ಈಗ ಮನೆಯಲ್ಲಿ ಗಂಡ, ಅತ್ತೆ-ಮಾವನ ಎದುರು ತಾನು ಸತಿ ಸಾವಿತ್ರ ಅಂತ ತೋರಿಸಿಕೊಳ್ಳಲು “ಮಿ ಟೂ’ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನೊಬ್ಬರ ಮೇಲೆ ಆರೋಪ ಮಾಡಿ ತಾವು ಪತಿವ್ರತೆ ಅಂತ ಬಿಂಬಿಸಿಕೊಳ್ಳಲು ಹೊರಟಿದ್ದಾರೆ.

Advertisement

ಅಂದು ತಬ್ಬಿಕೊಳ್ಳುವ ವೇಳೆಯಲ್ಲೇ ಪ್ರತಿಭಟಿಸುವುದು ಬಿಟ್ಟು, ತಮ್ಮ ವ್ಯವಹಾರಗಳನ್ನು ಮುಗಿಸಿದ ನಂತರ ಈಗ ಮಾತನಾಡುವುದು ಎಷ್ಟು ಸರಿ? ಇದು “ಮಿ ಟೂ’ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ತಾನು ಪ್ರಚಾರ ತೆಗೆದುಕೊಂಡು, ಬೇರೆಯವರ ಹೆಸರಿಗೆ ಮಸಿಬಳಿಯುವ ಕೆಲಸ ಅಲ್ಲದೆ ಮತ್ತೇ..’ ಹೀಗೆ ಮಾತಿನಲ್ಲಿ ಕುಟುಕಿದವರು “ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್‌.

ಕಳೆದ ಕೆಲ ದಿನಗಳಿಂದ “ಮಿ ಟೂ’ ಕುರಿತು ಆರೋಪಗಳನ್ನು ಮಾಡುತ್ತಿರುವ ಸಂಗೀತಾ ಭಟ್‌, ಮತ್ತು ಶ್ರುತಿ ಹರಿಹರನ್‌ ಅವರ ಹೆಸರುಗಳನ್ನು ಪ್ರಸ್ತಾಪಿಸದೆ, ಪರೋಕ್ಷವಾಗಿ ಮಾತಿನಲ್ಲೇ ಚಾಟಿ ಬೀಸಿದ ಗುರು ಪ್ರಸಾದ್‌, “ಮನೆಯವರ ಮುಂದೆ ತಾನು ಪತಿವ್ರತೆ ಎಂದು ಸಾಬೀತುಪಡಿಸುವುದಕ್ಕಾಗಿ, ಯಾವಾಗಲೋ ನಡೆದಿದೆ ಎನ್ನಲಾದ ಘಟನೆಯನ್ನು “ಮಿ ಟೂ’ ಹೆಸರಿನಲ್ಲಿ ಎಳೆದುತಂದು ಪ್ರಚಾರ ಪಡೆಯುವುದು ಎಷ್ಟರ ಮಟ್ಟಿಗೆ ಸರಿ?

ಅವಕಾಶ ಸಿಕ್ಕಾಗ ಅವರೊಂದಿಗೆ ಕೆಲಸ ಮಾಡುವುದು ಖಾಲಿ ಕುಳಿತಾಗ ಅವರ ಬಗ್ಗೆಯೇ ಮಾತನಾಡುವುದು ಕಲಾವಿದರ ವೃತ್ತಿಗೆ ಮಾಡುವ ಅಪಮಾನ. ನಿಜಕ್ಕೂ ಸಿನಿಮಾದಲ್ಲಿ ನಿಮಗೆ ತೊಂದರೆ ಆಗಿದ್ದರೆ, ಅಂದೇ ಪ್ರತಿಭಟಿಸಿ ಹೊರಬರಬೇಕಿತ್ತು. ಒಬ್ಬ ಕಳ್ಳ ನಿಮ್ಮ ಬ್ಯಾಗನ್ನು ಕದ್ದುಕೊಂಡು ಓಡಿ ಹೋದರೆ, ನೀವೇನು ಮಾಡುತ್ತೀರಿ? ತಕ್ಷಣಕ್ಕೆ ಹೋಗಿ ಕಂಪ್ಲೆಂಟ್‌ ಕೊಟ್ಟರೆ, ನಿಮ್ಮ ದೂರಿಗೊಂದು ಅರ್ಥ ಇರುತ್ತದೆ.

ಕಳ್ಳನನ್ನು ಹಿಡಿಯಲೂ ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಎರಡು ವರ್ಷಗಳಾದ ಮೇಲೆ ನನ್ನ ಬ್ಯಾಗ್‌ ಕದ್ದುಕೊಂಡು ಹೋಗಿದ್ದಾರೆ ಎಂದು ಕೂಗಿಕೊಂಡರೆ ಅದರಿಂದ ಏನು ಪ್ರಯೋಜನ? ಕೆಲವರು ಮಾಡುತ್ತಿರುವುದು ಕೂಡಾ ಇದೇ ಥರದ ಅರ್ಥಹೀನ ಆರೋಪ. ಸದ್ಯ ಟ್ರೆಂಡಿಂಗ್‌ನಲ್ಲಿರುವ “ಮಿ ಟೂ’ ಎಂಬ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. 

Advertisement

ಸಂಗೀತಾ ಭಟ್‌ ಆರೋಪಕ್ಕೂ ನನಗೂ ಸಂಬಂಧವಿಲ್ಲ: ಇನ್ನು ನಟಿ ಸಂಗೀತಾ ಭಟ್‌ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗುರುಪ್ರಸಾದ್‌, “ಆಕೆ ನೇರವಾಗಿ ನನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹೀಗಾಗಿ ಆಕೆಯ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ.

ಎರಡನೇ ಸಲ ಚಿತ್ರದ ಶೂಟಿಂಗ್‌ನಲ್ಲಿ ಬೆನ್ನನ್ನು ತೋರಿಸುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ನನ್ನ ಹೆಂಡತಿ, ಮಕ್ಕಳು ಎಲ್ಲರೂ ಸೆಟ್‌ನಲ್ಲಿ ಇದ್ದರು. ಆಕೆಗೆ ಯಾವುದೇ ಮುಜುಗರವಾಗದ ರೀತಿಯಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಿದ್ದೇನೆ. ಹಾಗೇನಾದರೂ ಇದ್ದರೆ ಮುಂದೆ ಬಂದು ಹೇಳಲಿ, ನಾನು ಅದನ್ನು ಸಾಬೀತುಪಡಿಸುತ್ತೇನೆ. ಸತ್ಯ ಯಾವುದು ಅಂತ ಜಗತ್ತಿಗೆ ಗೊತ್ತಾಗುತ್ತದೆ’ ಎಂದು ಗುರುಪ್ರಸಾದ್‌ ಸವಾಲೆಸೆದರು. 

“ಮಿ ಟೂ’ ಬಗ್ಗೆ ಸಿನಿಮಾ ಮಾಡ್ತಾರಂತೆ ಗುರುಪ್ರಸಾದ್‌: ಸದ್ಯ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನೆ ಮೂಡಿಸುತ್ತಿರುವ “ಮಿ ಟೂ’ ಕುರಿತು ಹೊಸ ಚಿತ್ರ ಮಾಡುವುದಾಗಿ ಗುರುಪ್ರಸಾದ್‌ ಘೋಷಿಸಿದ್ದಾರೆ. “ಮೂರು-ನಾಲ್ಕು ತಿಂಗಳಿನಿಂದ ಈ ಚರ್ಚೆಗಳನ್ನು ಗಮನಿಸುತ್ತ ಬಂದಿದ್ದೇನೆ.

ಇದನ್ನು ಸಿನಿಮಾ ಮಾಡಲು ಒಂದು ಎಳೆ ಸಿಕ್ಕಿದೆ. ಅದನ್ನೆ ಇಟ್ಟುಕೊಂಡು ಖಂಡಿತ ಇದನ್ನು ಚಿತ್ರ ಮಾಡಿ ಜನರ ಮುಂದೆ ತರುತ್ತೇನೆ. “ಮಿ ಟೂ’ ಹೆಸರಿನಲ್ಲಿ ಏನೇನು ನಡೆಯುತ್ತಿದೆ, ಏನೇನು ಮಾಡುತ್ತಾರೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡುತ್ತೇನೆ’ ಎಂದಿದ್ದಾರೆ ಗುರು ಪ್ರಸಾದ್‌. ಅಂದಹಾಗೆ, ಈ ಚಿತ್ರದಲ್ಲಿ ಗುರುಪ್ರಸಾದ್‌ ಅವರೆ ನಾಯಕನಟನಾಗಿ ನಟಿಸಲಿದ್ದಾರಂತೆ! 

* ತಬ್ಬಿಕೊಳ್ಳುವಾಗಲೇ ಪ್ರತಿಭಟಿಸಬೇಕಿತ್ತು.
* ಅವಕಾಶವಿಲ್ಲದೇ ಖಾಲಿ ಕುಳಿತಾಗ ಆರೋಪ ಮಾಡೋದು ಕಲಾವಿದ ವೃತ್ತಿಗೆ ಅಪಮಾನ.
* ಮಿ ಟೂ ಬಗ್ಗೆ ಸಿನಿಮಾ ಮಾಡಿ ನಟಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next