Advertisement

ಬಂಟ್ವಾಳ: ನಿಷೇಧಾಜ್ಞೆ ನಡುವೆಯೂ ಬೃಹತ್‌ ಪ್ರತಿಭಟನೆ

03:50 AM Jul 08, 2017 | Team Udayavani |

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಉದಯ ಲಾಂಡ್ರಿಯ ಶರತ್‌ ಅವರ ಮೇಲೆ ಮಾರಣಾಂತಿಕ ಹಲ್ಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಹಿಂದೂಗಳ ಮೇಲಿನ ನಿರಂತರ ದೌರ್ಜನ್ಯವನ್ನು ಖಂಡಿಸಿ ನಿಷೇಧಾಜ್ಞೆಯ ನಡುವೆಯೂ ಹಿಂದೂ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡ್‌ನ‌ಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಪಾಲ್ಗೊಂಡಿದ್ದರು. ಈ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಕುಮ್ಮಕ್ಕಿನಿಂದಲೇ ಅಹಿತಕರ ಘಟನೆಗಳು ಮರುಕಳಿಸುತ್ತಿವೆ. ಸಿದ್ದರಾಮಯ್ಯ ಅವರದು ಕೊಲೆಗಡುಕ ಸರಕಾರವಾಗಿದ್ದು, ಓಟಿನ ರಾಜಕೀಯ ಮಾಡುತ್ತ ಮುಸ್ಲಿಂ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಿ ಎಂದರು.

Advertisement

ಜಿಲ್ಲೆಯಲ್ಲಿ ಕಳೆದ 47 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಜಿಲ್ಲೆಗೆ ಮುಖ್ಯಮಂತ್ರಿ ಬಂದಾಕ್ಷಣ ನಿಷೇಧಾಜ್ಞೆಯನ್ನು ತೆಗೆಯಲಾಗುತ್ತಿದ್ದು, ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ಮಾಡುವ ಬಿಜೆಪಿಯವರನ್ನು ಮಾತ್ರ ಬಂಧಿಸಲಾಗುತ್ತಿದೆ. ಮುಖ್ಯಮಂತ್ರಿಯವರಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲವೆ? ಅವರು ಹೇಗೆ ಸಮಾವೇಶ ನಡೆಸುತ್ತಾರೆ ಎಂದು ಪ್ರಶ್ನಿಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಹಿಂದೂಗಳ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ರಕ್ಷಣೆ ಸಿಗದೇ ಇದ್ದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ಎದುರಿಸಬೇಕಾದೀತು. ಜಿಲ್ಲೆಯಲ್ಲಿ  ಸಮಾಜಘಾತಕ ಮತ್ತು ಭೀತಿಕಾರಕ ಶಕ್ತಿಗಳಿಗೆ ಸರಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದರು.

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ ಇದ್ದರೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಯಾರೂ ಕೂಡ ಗುಂಪುಗುಂಪಾಗಿ ಕಾಣಿಸಿಕೊಳ್ಳಬಾರದು, ಸಭೆ ಸಮಾರಂಭಗಳನ್ನು ನಡೆಸಬಾರದು ಎಂಬ ಪೊಲೀಸ್‌ ಇಲಾಖೆಯ ಸೂಚನೆಯ ನಡುವೆಯೂ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು. ಮುಂಜಾನೆಯಿಂದಲೇ ಕಾರ್ಯಕರ್ತರು ಆಯಕಟ್ಟಿನ ಸ್ಥಳಗಳಲ್ಲಿ ಜಮಾಯಿಸಿದ್ದು 10.30ರ ಸುಮಾರಿಗೆ ಬಸ್‌ ನಿಲ್ದಾಣಕ್ಕೆ ಆಗಮಿಸಿದರು. ಪ್ರತಿಭಟನಕಾರರು ರಾಜ್ಯ ಸರಕಾರದ ವಿರುದ್ಧ ಮತ್ತು ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್‌ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿದರು. ಘೋಷಣೆಗಳ ಮೂಲಕ ಅಹಿತಕರ ಘಟನೆ ಳಿಗೆ ಅವಕಾಶ ಮಾಡದಿರಿ ಎಂಬ ನೇತಾರರ ಮನವಿಯ ಮೇರೆಗೆ ಕಾರ್ಯಕರ್ತರು ನೆಲದಲ್ಲಿ ಕುಳಿತುಕೊಂಡು ಶಾಂತವಾಗಿ ನಾಯಕರ ಭಾಷಣವನ್ನು ಆಲಿಸಿದರು.

ಜೈಲ್‌ ಭರೋಗೂ ಸಿದ್ಧ
ಇದೇ ಸಂದರ್ಭ ಅಡಿಷನಲ್‌ ಎಸ್‌ಪಿ ವಿಷ್ಣುವರ್ಧನ್‌ ಅವರು ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕ ಸುನಿಲ್‌ ಕುಮಾರ್‌ ಅವರಲ್ಲಿ ನಿಷೇಧಾಜ್ಞೆ ಇರುವುದರಿಂದ ಸ್ಥಳದಿಂದ ಪ್ರತಿಭಟನಕಾರರನ್ನು ತೆರಳಲು ಸೂಚಿಸುವಂತೆ ಮನವಿ ಮಾಡಿದರು. ಆದರೆ ಸಂಸದರು, ‘ನಾವು ಜೈಲ್‌ ಭರೋಗೂ ಸಿದ್ಧ’ ಎಂದು ತಿಳಿಸಿದರು. ಮೈಕ್‌ ಮೂಲಕ ಮತ್ತೂಮ್ಮೆ ಎಚ್ಚರಿಕೆ ಸಂದೇಶ ನೀಡಿದ ಐಜಿಪಿ ಹರಿಶೇಖರನ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ಪ್ರತಿಭಟನಕಾರರನ್ನು ಬಂಧಿಸುವಂತೆ ಪೊಲೀಸ್‌ ಸಿಬಂದಿಗೆ ಸೂಚಿಸಿದರು. ಇದಕ್ಕೂ ಮುನ್ನ ಸಂದರ್ಭ ಎದುರಾದರೆ ಲಾಠೀಚಾರ್ಜ್‌ ನಡೆಸುವಂತೆಯೂ ಕ್ಷಿಪ್ರ ಕಾರ್ಯಾಚರಣೆ ಪಡೆಗೆ ಮೌಖೀಕ ಸೂಚನೆಯನ್ನು ನೀಡಲಾಗಿತ್ತು.

ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿ ಗುತ್ತು, ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಶಾಸಕರಾದ ಸುಳ್ಯದ ಎಸ್‌. ಅಂಗಾರ, ಕಾರ್ಕಳದ ವಿ. ಸುನಿಲ್‌ ಕುಮಾರ್‌, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಕೆ. ಮೋನಪ್ಪ ಭಂಡಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರು ಪಾಲ್ಗೊಂಡಿದ್ದರು.
ವಶಕ್ಕೆ ಪಡೆದ ಕಾರ್ಯಕರ್ತರನ್ನು ಸುಮಾರು 20ಕ್ಕೂ ಅಧಿಕ ಸರಕಾರಿ ಬಸ್‌ಗಳ‌ಲ್ಲಿ ಪುತ್ತೂರು ನಗರ, ಗ್ರಾಮಾಂತರ, ಬೆಳ್ತಂಗಡಿ ಸ್ಟೇಶನ್‌ಗೆ ಕರೆದುಕೊಂಡು ಹೋಗಿ ಬಂಧನ ನಡೆಸಿ ಜಾಮೀನಿನಲ್ಲಿ ಬಿಡುಗಡೆ ಮಾಡಿದರು. ಕೆಲವರನ್ನು ಅರ್ಧ ದಾರಿಯಲ್ಲಿಯೇ ಬಿಡುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಬಂಧನ ನಡೆದಿಲ್ಲ ಎಂದು ಅಂಕಿ – ಅಂಶ ದಾಖಲೆಯಲ್ಲಿ ತೋರಿಸುವ ಯತ್ನವೂ ಪೊಲೀಸರಿಂದ ನಡೆಯಿತು.

Advertisement

ವಾಹನ ಸಂಚಾರಕ್ಕೆ ತಡೆ
ಪ್ರತಿಭಟನೆಯ ಕಾವೇರುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಲುಗಡೆ ಮಾಡಿದ ಪೊಲೀಸರು ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳುಹಿಸಿದರು. ಸುಮಾರು 2 ತಾಸು ಕಾಲ ಹೆದ್ದಾರಿಯಲ್ಲಿ ವಾಹನ ನಿಲುಗಡೆ ಆಗಿತ್ತು. ಬಿ.ಸಿ. ರೋಡಿನಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಬಂಧಿತ ಪ್ರಮುಖರು
ಸಂಸದರಾದ ನಳಿನ್‌ ಕುಮಾರ್‌, ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಕಲ್ಲಡ್ಕ ಪ್ರಭಾಕರ ಭಟ್‌, ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಸಂಜಯ ಪ್ರಭು, ಪ್ರ. ಕಾರ್ಯದರ್ಶಿ ಬೃಜೇಶ್‌ ಚೌಟ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ರವಿಚಂದ್ರ, ಮಂಗಳೂರು ನಗರ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್‌, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯ ವಸಂತ ಪೂಜಾರಿ ಮತ್ತಿತರರು ಬಂಧನಕ್ಕೊಳಗಾದರು.

ಜಿಲ್ಲೆಯಲ್ಲಿ ಹಿಂದೂ ಸಮಾಜದ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ಮತಾಂಧ ಶಕ್ತಿಗಳು ನಿರಂತರ ದಾಳಿ ನಡೆಸುತ್ತಿವೆ. ಕಾನೂನಿನ ಮೇಲಿನ ಗೌರವದಿಂದ ನಾವು ಈ ಹಿಂದೆ ನಡೆಸಬೇಕಿದ್ದ ಪ್ರತಿಭಟನೆ ಮುಂದೂಡಿದ್ದೇವೆ. ಆದರೆ ಇದೀಗ ಹಿಂದೂ ಸಮಾಜದ  ತಾಳ್ಮೆಯ ಕಟ್ಟೆ ಒಡೆದಿದೆ. ಈ ನೋವು ತೋರ್ಪಡಿಸಲು ಪ್ರತಿಭಟನೆ ಅನಿವಾರ್ಯವಾಗಿದೆ.  ರಾಜ್ಯದಲ್ಲಿ ಗೋಹತ್ಯೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಸರಕಾರವೇ  ಪುಷ್ಟಿ ನೀಡುತ್ತಿದ್ದು, ಇದರ ವಿರುದ್ಧ ಹೋರಾಟ ನಿರಂತರವಾಗಿ ಮುನ್ನಡೆಯಬೇಕು.
– ಡಾ| ಪ್ರಭಾಕರ ಭಟ್‌

ಸುಮಾರು 20 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿಭಟನಕಾರರನ್ನು ಇಲ್ಲಿಂದ ತೆರವು ಮಾಡಿದ್ದೇವೆ. ನೂರಾರು ಮಂದಿಯನ್ನು ಬಂಧಿಸಿ ದ್ದೇವೆ. ಸಿಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಮಾದರಿ ವಿಶೇಷ ತರಬೇತು ಹೊಂದಿದ ಪೊಲೀಸರ ಸಹಿತ 1 ಸಹಸ್ರ ಪೊಲೀಸರನ್ನು ಶಾಂತಿ ಸುವ್ಯವಸ್ಥೆಗೆ ತೊಡಗಿಸಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದೇವೆ.
– ಹರಿಶೇಖರನ್‌, ಪಶ್ಚಿಮ ವಲಯ ಐಜಿಪಿ

ಸುಮಾರು ಎರಡು ಸಾವಿರ ಸಂಖ್ಯೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿದ್ದ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರಲ್ಲಿ ಸಾಕಷ್ಟು ವಾಹನ ಇಲ್ಲದ ಕಾರಣಕ್ಕೆ ಬಂಧನವಾಗಿಲ್ಲ. ಬಂಧಿಸಿ ಬಸ್ಸಿನಲ್ಲಿ ಕೊಂಡುಹೋದ ಹಲವರನ್ನು ಅರ್ಧದಲ್ಲಿ ಇಳಿಸಿ ಹೋಗಿರುವ ಘಟನೆ ನಡೆದಿದೆ.
– ಬಿ. ದೇವದಾಸ ಶೆಟ್ಟಿ , ಕ್ಷೇತ್ರ ಬಿಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next