Advertisement

ಮೀಸಲಾತಿ ಹೋರಾಟ ಹಿಂಸಾಚಾರ: ಎಚ್ಚರಿಕೆ ಅಗತ್ಯ

06:00 AM Jul 26, 2018 | Team Udayavani |

ಮಹಾರಾಷ್ಟ್ರದಲ್ಲಿ ಮರಾಠರ ಮೀಸಲಾತಿ ಹೋರಾಟ ಮತ್ತೂಮ್ಮೆ ಕುದಿಯತೊಡಗಿದೆ. ಪ್ರತಿಭಟನೆಕಾರರು ಪೊಲೀಸರೊಂದಿಗೆ ನೇರ ಹೋರಾಟಕ್ಕಿಳಿದಿದ್ದು, ವ್ಯಾಪಕವಾಗಿ ಹಿಂಸಾಚಾರ ನಡೆಯುತ್ತಿದೆ. ಓರ್ವ ವ್ಯಕ್ತಿ ಈಗಾಗಲೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಹಲವು ಮಂದಿ ಈ ಪ್ರಯತ್ನ ಮಾಡಿದ್ದಾರೆ. ಬುಧವಾರದ ಮುಂಬಯಿ ಬಂದ್‌ ಕೂಡಾ ತೀರಾ ಹಿಂಸಾಚಾರಕ್ಕೆ ತಿರುಗಿದ ಬಳಿಕ ಕರೆ ಕೊಟ್ಟವರೇ ಅರ್ಧದಲ್ಲಿ ಬಂದ್‌ ಹಿಂದೆಗೆದುಕೊಂಡರು. ಇದು ಮರಾಠ ಸಮುದಾಯದವರು ಮೀಸಲಾತಿಗಾಗಿ ನಡೆಸುತ್ತಿರುವ 2ನೇ ಸುತ್ತಿನ ತೀವ್ರತರದ ಹೋರಾಟ.   

Advertisement

 ಮೊದಲ ಹೋರಾಟ ಬಹುತೇಕ ಶಾಂತಿಯುತವಾಗಿತ್ತು. ಜನರು ಸ್ವಪ್ರೇರಣೆಯಿಂದ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದರು. ಘೋಷಣೆ, ಧಿಕ್ಕಾರಗಳಿಲ್ಲದೆ ಮೌನವಾಗಿ ನಡೆಯುತ್ತಿದ್ದ ಪ್ರತಿಭಟನೆ ಈ ಕಾರಣಕ್ಕೂ ಗಮನಸೆಳೆದಿತ್ತು. ಆದರೆ ಈಗಿನ ಹೋರಾಟದಲ್ಲಿ ಪ್ರತಿಭಟನೆಕಾರರು ಆರಂಭದಿಂದಲೇ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಬದಲಾದ ಹೋರಾಟದ ಶೈಲಿಯ ಹಿಂದಿನ ಕಾರಣವೇನು  ಎನ್ನುವುದು ಸದ್ಯಕ್ಕಂತೂ ನಿಗೂಢ. ಆದರೆ ಮೀಸಲಾತಿ ಹೋರಾಟ ಹಿಂಸಾರೂಪ ಪಡೆದುಕೊಳ್ಳಲು ಕಾರಣ ಏನು ಎನ್ನುವುದನ್ನು ಪತ್ತೆಹಚ್ಚಬೇಕು. ಪ್ರಜಾತಂತ್ರದಲ್ಲಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟವೂ ಒಂದು ಸಾಧನ. ಆದರೆ ಈ ಹೋರಾಟದಿಂದ ಶಾಂತಿಭಂಗವಾಗಬಾರದು. 

ಸರಕಾರಿ ನೌಕರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ. 16 ಮೀಸಲಾತಿ ನೀಡುವ ಆಶ್ವಾಸನೆಯನ್ನು ಸರಕಾರ ನೀಡಿದ್ದರೂ ಮರಾಠರು ತೃಪ್ತರಾಗಿಲ್ಲ. ಮೀಸಲಾತಿಗೆ ಶೇ. 50ರ ಮಿತಿಯಿರುವುದರಿಂದ ಈ ಕೊಡುಗೆಯನ್ನು ನ್ಯಾಯಾಲಯ ರದ್ದುಪಡಿಸಬಹುದೆಂದು ಭಾವಿಸಿರುವ ಮರಾಠರು ಈಗ ತಮ್ಮನ್ನು ಒಬಿಸಿ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. 

ಮಹಾರಾಷ್ಟ್ರದಲ್ಲಿ ಮರಾಠರಂತೆ ಗುಜರಾತಿನಲ್ಲಿ ಪಾಟಿದಾರರು, ಇನ್ನೂ ಕೆಲವು ರಾಜ್ಯಗಳಲ್ಲಿ ಜಾಟ್‌ ಸಮುದಾಯದವರು ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಚುನಾವಣೆ ಸನ್ನಿಹಿತವಾಗುವಾಗಲೆಲ್ಲ ಈ ಹೋರಾಟ ತೀವ್ರಗೊಳ್ಳುತ್ತದೆ. ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಪ್ರಬಲರಾಗಿರುವವರಿಗೆ ಮೀಸಲಾತಿಯ ಅಗತ್ಯವಿಲ್ಲ ಎಂಬುದಾಗಿ ನ್ಯಾಯಾಲಯಗಳು ಹೇಳಿರುವ ಹೊರತಾಗಿಯೂ ಇಂತಹ ಹೋರಾಟಗಳು ನಿಂತಿಲ್ಲ. ಹಿಂದಿನ ಯುಪಿಎ ಸರಕಾರ ಒಂಭತ್ತು ರಾಜ್ಯಗಳಲ್ಲಿ ಜಾಟ್‌ ಸಮುದಾಯದವರಿಗೆ ನೀಡಿದ ಮೀಸಲಾತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಆಧುನಿಕ ಜಗತ್ತಿನಲ್ಲಿ ಕೃಷಿ ಅನಾಕರ್ಷಕವಾಗಿದ್ದು, ಕೃಷಿ ತಂದುಕೊಡುವ ಅದಾಯಕ್ಕಿಂತ ಸರಕಾರ ನೌಕರಿ ಕೊಡುವ ಸೌಲಭ್ಯಗಳೇ ಆಕರ್ಷಣೀವಾಗಿ ಕಾಣಿಸುತ್ತಿದೆ. ಹೀಗಾಗಿ ಪ್ರಬಲ ಸಮುದಾಯದ ಯುವ ಜನರು ಮೀಸಲಾತಿ ಹೋರಾಟ ಕ್ಕೆ ಇಳಿದಿದ್ದಾರೆ ಎಂಬ ವಾದ ಚರ್ಚಾರ್ಹ. ಮೀಸಲಾತಿ ಹೋರಾಟ ಉದ್ಯೋಗ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳಿಗೆ ಸೀಮಿತವಾಗಿ ಉಳಿದಿಲ್ಲ ಎನ್ನುವುದು ಈಗ ಢಾಳಾಗಿ ಗೋಚರಿಸುತ್ತಿದೆ. ಹಿಂದೆ ಹಿಂದುಳಿದವರನ್ನು ಅಭಿವೃದ್ಧಿಪಡಿಸುವ ಸಾಧನವಾಗಿದ್ದ ಮೀಸಲಾತಿ ಈಗ ರಾಜಕೀಯ ಅಸ್ತ್ರವಾಗಿ ಬದಲಾಗಿದೆ. ಸದ್ಯಕ್ಕೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟಗಳು ಇದನ್ನು ಪುಷ್ಟೀಕರಿಸುತ್ತಿವೆ. ಯಾವಾಗಲೂ ಸಮುದಾಯ ನಿರ್ದೇಶಿತ ಹೋರಾಟಗಳು ಹಿಂಸೆಯಿಂದ ಕೂಡಿರುವುದಿಲ್ಲ. ಆದರೆ ರಾಜಕೀಯ ಲಾಭದ ಉದ್ದೇಶ ಹೊಂದಿರುವ ಹೋರಾಟಗಳು ನೈಜ ಹೋರಾಟಗಾರರ ದಿಕ್ಕುತಪ್ಪಿಸಬಹುದು.ಅವಾಸ್ತವ  ಮೀಸಲಾತಿಯ ಬೇಡಿಕೆಗಳನ್ನು ಈಡೇರಿಸುತ್ತಾ ಹೋದರೆ ಉಳಿದೆಡೆಗಳಲ್ಲೂ ಇಂಥ ಹೋರಾಟಗಳು ತಲೆಯೆತ್ತಬಹುದು. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವುದರಿಂದ ರಾಜಕೀಯ ಸ್ವರೂಪವನ್ನೂ ಪಡೆದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಯದಂತೆ ಎಚ್ಚರವಹಿಸಬೇಕಾದದ್ದು ಹೋರಾಟಗಾರರ ಮತ್ತು ಸರಕಾರದ ಕರ್ತವ್ಯ.

Advertisement

Udayavani is now on Telegram. Click here to join our channel and stay updated with the latest news.

Next