Advertisement

Mangaluru ಮಧ್ಯಾಹ್ನ ಬಂದು ಮನೆ ನೋಡಿ ರಾತ್ರಿ ನುಗ್ಗಿ ಚಿನ್ನಾಭರಣಗಳನ್ನು ದೋಚಿದರು !

10:39 AM Jul 10, 2024 | Team Udayavani |

ಮಂಗಳೂರು : ಕೋಟೆ ಕಣಿಯಲ್ಲಿ ನಡೆದಿರುವ ಘಟನೆ ಗಮನಿಸಿದರೆ ಇದು ಪೂರ್ವಯೋಜಿತ ಕೃತ್ಯದಂತೆ ತೋರುತ್ತಿದೆ.

Advertisement

ವಿಕ್ಟರ್‌ ದಂಪತಿಗಳು, ತಾವಿಬ್ಬರೇ ಮನೆಯಲ್ಲಿದ್ದರೂ ನೆರೆಮನೆಯವರ ಜತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಈ ಮಧ್ಯೆಯೂ ಸೋಮವಾರ ಮಧ್ಯಾಹ್ನ ವೇಳೆ ಓರ್ವ ಅಪರಿಚಿತ ವ್ಯಕ್ತಿ ಅವರ ಮನೆ ಬಳಿ ಬಂದು “ಎಕ್ಸ್‌ಕ್ಯೂಸ್‌ ಮಿ’ ಎಂದಿದ್ದ. ಆದರೆ ಅದಕ್ಕೆ ಇವರು ಏನನ್ನೂ ಪ್ರತಿಕ್ರಿಯಿಸಿರಲಿಲ್ಲ.

ಮನೆಯಲ್ಲಿ ಬೇರೆ ಯಾರಾದರೂ ಇರಬಹುದೇ ಎಂಬುದನ್ನು ಗಮನಿಸಲು ಅಪರಿಚಿತ ಪ್ರಯತ್ನಿಸಿದಂತೆ ತೋರುತ್ತಿದೆ. ಹಾಗಾಗಿ ಮನೆಯವರ ಚಲನವಲನ ಗಮನಿಸಿಯೇ ಈ ಕೃತ್ಯ ನಡೆಸಿರಬಹುದು ಎನ್ನಲಾಗಿದೆ.

ಹಾಗೆಂದು ವಿಕ್ಟರ್‌ ಅವರ ಮನೆ ಒಂಟಿಯಾಗಿಲ್ಲ. ಉರ್ವ ಪೊಲೀಸ್‌ ಠಾಣೆಯಿಂದ ಸುಮಾರು 2ಕಿ.ಮೀ ವ್ಯಾಪ್ತಿಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿದೆ. ಮನೆಯ ಒಂದು ಬದಿಯಲ್ಲಿ ಸಣ್ಣರಸ್ತೆ, ಅದರ ಪಕ್ಕದಲ್ಲಿ, ಹಿಂಭಾಗದಲ್ಲೂ ಮನೆಗಳಿವೆ. ಆದರೂ ದರೋಡೆಕೋರರು ಈ ಕೃತ್ಯ ಎಸಗಿರುವುದು ಆತಂಕ ತಂದಿದೆ.

ದರೋಡೆಕೋರರು ಅತ್ಯಾಧುನಿಕ ಯಂತ್ರ ಬಳಸಿ ಕಿಟಕಿಯ ಸರಳುಗಳನ್ನು ಶಬ್ದವಾಗದಂತೆ ತುಂಡರಿಸಿ, ಮನೆಯೊಳಗೆ ಪ್ರವೇಶಿಸಿದ್ದರು. ಹಾಗಾಗಿ ಇದು ದಂಪತಿಗೆ ಗೊತ್ತೇ ಇರಲಿಲ್ಲ. ದರೋಡೆಕೋರರು ಬೆಡ್‌ರೂಮ್‌ಗೆ ಬಂದಾಗ ಗಮನಕ್ಕೆ ಬಂದಿತ್ತು. ಕೂಡಲೇ ದಂಪತಿ ಬೊಬ್ಬೆ ಹೊಡೆದರು. ಆಗ ದರೋಡೆಕೋರರು ಅವರ ಕೈಯಲ್ಲಿದ್ದ ರಾಡ್‌ನಿಂದ ಹೊಡೆದು, ಕೊಲ್ಲುವುದಾಗಿ ಬೆದರಿಸಿದ್ದರು. ನೆರೆಮನೆಯವರಿಗೆ ಫೋನ್‌ ಮಾಡಲು ಯತ್ನಿಸಿದಾಗ ಮೊಬೈಲ್‌ ಕಸಿದು ನೆಲಕ್ಕೆ ಎಸೆದು ಹಾನಿಗೊಳಿಸಿದ್ದರು.

Advertisement

ವಿಕ್ಟರ್‌ ಮೆಂಡೋನ್ಸ ಅವರ ಮೊಣಕಾಲಿಗೆ ಬಲವಾಗಿ ಹಲವಾರು ಬಾರಿ ಹೊಡೆದಿದ್ದರು. ಪೆಟ್ರೇಶಿಯ ಅವರ ಕೈ, ಎದೆ, ಬೆನ್ನಿಗೆ ಸೂð ಡ್ರೈವರ್‌ನಿಂದ ತಿವಿದಿದ್ದರು. ಎರಡು ಕಪಾಟುಗಳಿಗೆ ಬೀಗ ಹಾಕಿರಲಿಲ್ಲ. ಇನ್ನೊಂದು ಕಪಾಟಿನ ಬೀಗವನ್ನೂ ಕೇಳಿದ್ದರು. ಸಿಗದಿದ್ದಾಗ ಸೂð ಡ್ರೈವರ್‌ನಿಂದಲೇ ಕಪಾಟು ತೆರೆದು ಚಿನ್ನಾಭರಣ ದೋಚಿದ್ದರು.

ಕಾರಿನ ಕೀ ತೆಗೆದುಕೊಂಡರು
ಕಾರಿನ ಕೀ ಎಲ್ಲಿದೆ ಎಂದು ಕೇಳಿದ ದರೋಡೆಕೋರರು ಅಲ್ಲಿಯೇ ಡೈನಿಂಗ್‌ ಟೇಬಲ್‌ ಬಳಿಯಿದ್ದ ಡ್ರಾವರ್‌ ತೆಗೆದು ಕೀ ನೊಂದಿಗೆ ಹೊರಬಂದರು. ಓರ್ವ ದರೋಡೆಕೋರ ಮುಖ್ಯ ದ್ವಾರದಿಂದ ಮನೆಯ ಹೊರಗೆ ಹೋಗಿ ಕಾರನ್ನು ಸ್ಟಾರ್ಟ್‌ ಮಾಡಿ ರಸ್ತೆಗೆ ಕೊಂಡೊಯ್ದು ನಿಲ್ಲಿಸಿದ್ದ. ಅನಂತರ ಮನೆಯೊಳಗಿದ್ದ ಇತರ ಮೂವರರೂ ಕಾರಿನೊಳಗೆ ಕುಳಿತು ಪರಾರಿಯಾಗಿದ್ದರು.

ಸ್ಥಳಕ್ಕೆ ಡಿಸಿಪಿ ದಿನೇಶ್‌ ಕುಮಾರ್‌, ಸ್ಥಳೀಯ ಕಾರ್ಪೊರೇಟರ್‌ ಶಶಿಧರ ಹೆಗ್ಡೆ, ವಂ| ಮೈಕೆಲ್‌ ಸಾಂತುಮಯೊರ್‌ ಮೊದಲಾದವರು ಭೇಟಿ ನೀಡಿದ್ದಾರೆ.

ಕಾರುಬಿಟ್ಟು ತೆರಳಿದ್ದರು !
ಮೂಲ್ಕಿ: ದರೋಡೆಕೋರರು ತಾವು ಪರಾರಿಯಾಗಿದ್ದ ಕಾರನ್ನು ಮುಂಜಾವ 5 ಗಂಟೆಯ ಸುಮಾರಿಗೆ ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗೂಡಂಗಡಿಯೊಂದರ ಬಳಿ ಸರ್ವಿಸ್‌ ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು. ಕಾರಿನ ಕೀ ಗೂಡಂಗಡಿಯ ಕಸದ ಬಕೆಟ್‌ನಲ್ಲಿ ಪತ್ತೆಯಾಗಿತ್ತು. ಮೂಲ್ಕಿ ಪೊಲೀಸರು ಬಪ್ಪನಾಡು ಬಳಿ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರಿಂದ ದರೋಡೆ ಕೋರರು ವಾಹನವನ್ನು ಸರ್ವೀಸ್‌ ರಸ್ತೆ ಬಳಿ ತಿರುಗಿಸಿದ್ದರೆನ್ನಲಾಗಿದೆ.

ಉದಯವಾಣಿ ವರದಿ ಗಮನಿಸಿದ್ದರು!
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಚಡ್ಡಿ ಗ್ಯಾಂಗ್‌ನಿಂದ ಕಳ್ಳತನ, ದರೋಡೆ ನಡೆಯುತ್ತಿರುವ ಬಗ್ಗೆ ಉದಯವಾಣಿ ಸೋಮ ವಾರ ಪ್ರಕಟಿಸಿದ್ದ ವರದಿಯನ್ನು ಗಮನಿಸಿದ್ದೆವು. ಈ ಬಗ್ಗೆ ರಾತ್ರಿ ಮಲಗುವ ಮೊದಲೂ ಚರ್ಚಿಸಿದ್ದೆವು. ಮನೆ ಭದ್ರ ವಾಗಿದ್ದು, ಸಿಸಿ ಕೆಮರಾಗಳು ಹಾಗೂ ಪೊಲೀಸರ ಗಸ್ತಿದೆ ಎಂದುಕೊಂಡು ಮಲಗಿದ್ದೆವು. ಹೀಗೆ ಆದೀತು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಜನರು ಜಾಗ್ರತರಾಗಿರ ಬೇಕು ಎನ್ನುತ್ತಾರೆ ವಿನ್ಸೆಂಟ್‌ ಮತ್ತು ಪೆಟ್ರೀಶಿಯ ದಂಪತಿ.

ಕನಸು ಎಂದುಕೊಂಡಿದ್ದೆ
ದರೋಡೆಕೋರರು ಬೆಡ್‌ರೂಮ್‌ಗೆ ಬರುವವರೆಗೂ ಗೊತ್ತಾಗಿರಲಿಲ್ಲ. ಗಾಢ ನಿದ್ದೆಯಲ್ಲಿದ್ದೆ. ಕಣ್ಣೆದುರು ನಾಲ್ವರು ನಿಂತಿದ್ದರು. ನಾನು ಅದು ಕನಸು ಅಂದುಕೊಂಡಿದ್ದೆ. ಬಳಿಕ ಬೊಬ್ಬೆ ಹೊಡೆದೆ. ಆಗ ದರೋಡೆಕೋರರು ರಾಡ್‌ ತೋರಿಸಿ “ಸೈಲೆಂಟ್‌’ ಎಂದರು. ಹಣ-ಬಂಗಾರ ಕೊಡಿ ಎಂದರು. ಬಳಿಕ ಹೊಡೆದರು. ನನ್ನನ್ನು ಅಲ್ಲಿಂದ ಏಳುವುದಕ್ಕೂ ಬಿಡಲಿಲ್ಲ.
– ವಿಕ್ಟರ್‌ ಮೆಂಡೋನ್ಸ,
ಹಲ್ಲೆಗೊಳಗಾದ ಮನೆಯ ಯಜಮಾನ

Advertisement

Udayavani is now on Telegram. Click here to join our channel and stay updated with the latest news.

Next