Advertisement

ಮಂಗಳೂರು-ಮಣಿಪಾಲ: ನಾನ್‌ ಎಸಿ ಬಸ್‌ ಕಾರ್ಯಾಚರಣೆಗೆ ಚಿಂತನೆ

02:41 AM Jun 29, 2020 | Sriram |

ವಿಶೇಷ ವರದಿ-ಮಂಗಳೂರು: ಕಳೆದ ಐದು ವರ್ಷಗಳ ಹಿಂದೆ ಮಂಗಳೂರಿನಿಂದ ಮಣಿಪಾಲಕ್ಕೆ ಕೆಎಸ್ಸಾರ್ಟಿಸಿ ಪರಿಚಯಿಸಿದ್ದ ಹವಾನಿಯಂತ್ರಿತ ವೋಲ್ವೋ ಬಸ್‌ ಸೇವೆ ಅಂದುಕೊಂಡಂತೆ ಲಾಭದಲ್ಲಿ ನಡೆದಿಲ್ಲ; ದಿನವೊಂದಕ್ಕೆ ಸುಮಾರು 1.50 ಲಕ್ಷ ರೂ. ನಷ್ಟದಲ್ಲೇ ಕಾರ್ಯಾಚರಿಸುತ್ತಿತ್ತು. ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಬಸ್‌ಗಳು ನಾನ್‌ ಎಸಿಯಾಗಿ ಕಾರ್ಯಾಚರಣೆ ನಡೆಸಲು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಚಿಂತನೆ ನಡೆಸುತ್ತಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಮಂಗಳೂರಿನಿಂದ ಮಣಿಪಾಲ ನಡುವಣ ಯಾವುದೇ ಎಸಿ ಬಸ್‌ ಸಂಚರಿಸಲಿಲ್ಲ. ಪ್ರತೀ ಬಸ್‌ ನಿಗದಿತ ಕಿ.ಮೀ.ಗಿಂತ ಹೆಚ್ಚು ಸಂಚರಿಸಿರುವ ಹಿನ್ನೆಲೆಯಲ್ಲಿ ಆಗಾಗ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿತ್ತು. ಈ ಎಲ್ಲ ವಿಚಾರವನ್ನು ಕೆಎಸ್ಸಾರ್ಟಿಸಿ ಇದೀಗ ಗಂಭೀರವಾಗಿ ಪರಿಗಣಿಸಿದೆ.

ಎಸಿ ಬಸ್‌ಗಳಲ್ಲಿ ಒಂದು ಲೀಟರ್‌ ಡೀಸೆಲ್‌ಗೆ 2.5ರಿಂದ 2.8 ಕಿ.ಮೀ. ಮೈಲೇಜ್‌ ಸಿಗುತ್ತದೆ. ದಾರಿಯಲ್ಲಿ ಎರಡು ಟೋಲ್‌ಗೇಟ್‌ಗಳಿದ್ದು, ಟೋಲ್‌ನಲ್ಲಿ ಯಾವುದೇ ರಿಯಾಯಿತಿ ಇಲ್ಲ. ವೋಲ್ವೋ ಸಂಚಾರಕ್ಕೆ ಪ್ರತೀ ಕಿ.ಮೀ. 60 ರೂ. ಖರ್ಚು ತಗಲುತ್ತಿದ್ದು, ಸದ್ಯ (ಕೊರೊನಾಕ್ಕೂ ಮುನ್ನ) ಕೇವಲ 30 ರೂ. ಮಾತ್ರ ಆದಾಯ ಬರುತ್ತಿದೆ. ಮಂಗಳೂರಿನಿಂದ ಮಣಿಪಾಲಕ್ಕೆ ದಿನವೊಂದಕ್ಕೆ ಒಟ್ಟು ಬಸ್‌ಗಳು 6,500 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, 1.50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.

ಫ‌ಲ ನೀಡದ ರಿಯಾಯಿತಿ
ಪ್ರಯಾಣಿಕರನ್ನು ಸೆಳೆಯಲು ಕೆಎಸ್ಸಾರ್ಟಿಸಿಯು ದೈನಂದಿನ ಪಾಸ್‌ ವ್ಯವಸ್ಥೆಯನ್ನು ಆರಂಭದಲ್ಲಿ ಜಾರಿಗೆ ತಂದಿತ್ತು. ಆದರೆ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿತ್ತು. 2017ನೇ ಸೆ. 2ರಿಂದ ಮತ್ತೆ ಇದೇ ವ್ಯವಸ್ಥೆ ಜಾರಿಗೆ ತಂದು ದಿನದ ಪಾಸ್‌ಗೆ 150 ರೂ. ನಿಗದಿಗೊಳಿಸಿತ್ತು. ಪಾಸ್‌ ಪಡೆಯದೆ ಪ್ರಯಾಣಿಸಿದರೆ ಎರಡೂ ಕಡೆ ಸಂಚಾರಕ್ಕೆ 180 ರೂ. ತಗಲುತ್ತದೆ. ಪಾಸ್‌ ಖರೀದಿಸಿದರೆ 30 ರೂ. ಉಳಿತಾಯವಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ವೋಲ್ವೋ ಬಸ್‌ ನೆಚ್ಚಬಹುದು ಎಂಬ ಯೋಚನೆ ನಿಗಮದ್ದಾಗಿತ್ತು. ಆದರೆ ಈ ಯೋಜನೆ ಅಂದುಕೊಂಡಷ್ಟು ಪರಿಣಾಮಕಾರಿಯಾಗಲಿಲ್ಲ.

ಮಂಗಳೂರು-ಮಣಿಪಾಲ ನಡುವಿನ ಕೆಎಸ್ಸಾರ್ಟಿಸಿ ಎಸಿ ಬಸ್‌ಗಳು ನಿಗದಿಗಿಂತ ಹೆಚ್ಚು ಕಿ.ಮೀ. ಸಂಚರಿಸಿವೆ. ನಷ್ಟ ಸರಿದೂಗಿಸಲು ನಾನ್‌ ಎಸಿ ಬಸ್‌ಗಳನ್ನು ಬಿಡುವ ಚಿಂತನೆ ನಡೆಸಲಾಗುತ್ತಿದೆ.
– ರಾಮಮೂರ್ತಿ,
ಚೀಫ್‌ ಮೆಕ್ಯಾನಿಕಲ್‌ ಎಂಜಿನಿಯರ್‌ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ

Advertisement

ಮಂಗಳೂರಿನಿಂದ ಮಣಿಪಾಲಕ್ಕೆ ನಾನ್‌ ಎಸಿ ಬಸ್‌ ಪರಿಚಯಿಸುವ ಬಗ್ಗೆ ಕೇಂದ್ರ ಕಚೇರಿ ಮಟ್ಟದಲ್ಲಿ ಈ ಹಿಂದೆ ಚರ್ಚೆ ನಡೆದಿತ್ತು. ಲಾಭ-ನಷ್ಟದ ಮಾಹಿತಿ ಯನ್ನು ನೀಡಲಾಗಿದೆ. ಮುಂದಿನ ನಿರ್ಧಾರವನ್ನು ಕೇಂದ್ರ ಕಚೇರಿ ತೆಗೆದುಕೊಳ್ಳುತ್ತದೆ.
– ಅರುಣ್‌ ಕುಮಾರ್‌,
ವಿಭಾಗ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next