Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ಕರಾವಳಿ ಸಂಸ್ಕೃತಿಯ ಸೊಗಡು !

09:20 AM Apr 17, 2018 | Karthik A |

ಮಹಾನಗರ: ದೇಶ- ವಿದೇಶದಿಂದ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸುವ ಯಾತ್ರಿಕರಿಗೆ ಹಾಗೂ ಪ್ರವಾಸಿಗರಿಗೆ ಕರಾವಳಿ ಜಿಲ್ಲೆಯ ಸಂಸ್ಕೃತಿ- ಪ್ರಾದೇಶಿಕ ಸೊಗಡನ್ನು ಭಿತ್ತರಪಡಿಸುವ ಉದ್ದೇಶದಿಂದ ಚಿತ್ರಪಟಗಳ ಅನಾವರಣಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತೆರೆದುಕೊಳ್ಳಲಿದೆ. ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ಯಕ್ಷಗಾನ, ಭೂತಾರಾಧನೆ, ಕಂಬಳ ಹಾಗೂ ಜನಪ್ರಿಯ ತಿನಿಸುಗಳಾದ ನೀರ್‌ದೋಸೆ, ಪುಂಡಿಗಸಿ ಸಹಿತ ನಾನಾ ಚಿತ್ರ ಪ್ರಕಾರಗಳು ವಿಮಾನ ನಿಲ್ದಾಣದ ಗೋಡೆಗಳಲ್ಲಿ ಸಾಕಾರಗೊಳ್ಳಲಿವೆ.

Advertisement

ನಿಗದಿತ 12 ಸ್ಥಳಗಳ ಗೋಡೆಗಳಲ್ಲಿ ಚಿತ್ರಪಟಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಗೋಡೆಯಲ್ಲಿ ಚಿತ್ರ ಬರೆಯುವ ಮೂಲಕ ಕರಾವಳಿಯ ಸಂಸ್ಕೃತಿ- ಸಂಸ್ಕಾರವನ್ನು ಪ್ರತಿಬಿಂಬಿಸುವ ಕೆಲಸ ಒಂದೆಡೆಯಾದರೆ, ಚಿತ್ರಗಳನ್ನು ನೇತು ಹಾಕುವ ಅಥವಾ ಚಿತ್ರ ಸ್ತಂಭಗಳನ್ನು ನಿರ್ಮಿಸುವ ಮೂಲಕ ವಿಭಿನ್ನ ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಸಿಂಗರಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಮಂಗಳೂರು, ಕೇರಳ, ಬೆಂಗಳೂರು, ಹೊಸದಿಲ್ಲಿ ಸಹಿತ ಹಲವು ಭಾಗದ ಚಿತ್ರ ಕಲಾವಿದರು, ಪರಿಣತರು ಈ ಸಂಬಂಧ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಸಂಪರ್ಕಿಸಿದ್ದು, ಈ ಕುರಿತಂತೆ ಪರಾಮರ್ಶೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಟೆಂಡರ್‌ ಮೂಲಕ ಕಲಾಕಾರರನ್ನು ಆಯ್ಕೆ ಮಾಡಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಿದೆ.

ಸಂಸ್ಕೃತಿ ಪೂರಕ
ವಿಮಾನ ನಿಲ್ದಾಣಗಳಲ್ಲಿನ ಗೋಡೆಗಳು ಹೇಗಿರಬೇಕು ಎಂಬ ನೆಲೆಯಲ್ಲಿ ಪ್ರಾಧಿಕಾರದ ಸೂಕ್ತ ನಿಯಮಗಳಿವೆ. ಅದರಂತೆ ಆಯಾಯಾ ಪರಿಸರಕ್ಕೆ ತಕ್ಕ ಹಾಗೆ ಗೋಡೆಗಳನ್ನು ಸಂಸ್ಕೃತಿ ಪೂರಕವಾಗಿ ಬದಲಾಯಿಸಲು ಅನುಮತಿ ಪಡೆದು, ಈ ಕೆಲಸಕ್ಕೆ ಮುಂದಾಗಿದೆ. ಪ್ರಾದೇಶಿಕ ಸೊಬಗನ್ನು ಆಯಾಯ ವಿಮಾನ ನಿಲ್ದಾಣದ ಮೂಲಕ ಸಾರಿದರೆ, ನಿಲ್ದಾಣವು ಇನ್ನಷ್ಟು ಆಕರ್ಷಕವಾಗಿ ಕಾಣಬಲ್ಲದು. ಜತೆಗೆ ಬೇರೆ ರಾಜ್ಯ ಅಥವಾ  ದೇಶಗಳಿಂದ ಆಗಮಿಸುವವರಿಗೆ ಇಲ್ಲಿನ ಪ್ರಾದೇಶಿಕತೆ ಹಾಗೂ ಸಂಸ್ಕೃತಿಯನ್ನು ಚಿತ್ರಪಟಗಳ ಮೂಲಕವೇ ಅರ್ಥ ಮಾಡಿಕೊಳ್ಳಬಹುದು.

ವಿಮಾನ ನಿಲ್ದಾಣದ ಟರ್ಮಿನಲ್‌ ಬಿಲ್ಡಿಂಗ್‌ನ ವಿಸ್ತರಣೆ ಯೋಜನೆಯನ್ನು 132 ಕೋಟಿ ರೂ. ವೆಚ್ಚದಲ್ಲಿ  ಕೈಗೆತ್ತಿಕೊಳ್ಳಲಾಗಿದ್ದು, ಈ ಕಟ್ಟಡವು ಹೊಸ ಅರೈವಲ್‌ ಹಾಲ್‌ ಒಳಗೊಂಡಿರುತ್ತದೆ. ಕಾಮಗಾರಿಗೆ ಟೆಂಡರ್‌ ವಹಿಸಿಕೊಡಲಾಗಿದ್ದು, ಶೀಘ್ರವೇ ಕೆಲಸ ಆರಂಭವಾಗಲಿದೆ. ಎರಡು ವರ್ಷಗಳಲ್ಲಿ  ಪೂರ್ಣಗೊಳ್ಳಲಿದೆ. ಅಲ್ಲಿಯೂ ಕರಾವಳಿಯ ಕಲಾಲೋಕದ ಅನಾವರಣಗೊಳಿಸುವ ಉದ್ದೇಶವಿದೆ. ಪ್ರಸ್ತುತ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವ ಸಂರ್ದರ್ಭದಲ್ಲಿ  ಪ್ರಯಾಣಿಕರಿಗೆ ಮಲ್ಲಿಗೆ ಹೂವಿನ ಸುವಾಸನೆಯಿಂದ ಸ್ವಾಗತಿಸಲಾಗುತ್ತಿದೆ. ಟರ್ಮಿನಲ್‌ ಕಟ್ಟಡದ ಒಳಗೆ ಅಲ್ಲಲ್ಲಿ ಸ್ವಯಂಚಾಲಿತ ಯಂತ್ರಗಳನ್ನು ಸ್ಥಾಪಿಸಿ ಮಲ್ಲಿಗೆಯ ಪರಿಮಳ ಬೀರುವಂತೆ ಈ ವ್ಯವಸ್ಥೆ  ಮಾಡಲಾಗಿದೆ. 

ಸಂಸ್ಕೃತಿಯ ಸೊಗಡಿನ ಅನಾವರಣ
ಮಂಗಳೂರು ವಿಮಾನ ನಿಲ್ದಾಣದ ಒಳ – ಹೊರಗಿನ ಗೋಡೆಗಳಲ್ಲಿ ಇಲ್ಲಿನ ಪ್ರಾದೇಶಿಕ ಸೊಗಡು, ಸಂಸ್ಕೃತಿಯನ್ನು ಸಾರುವ ಚಿತ್ರಪಟಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಮಂಗಳೂರಿನ ಸಂಸ್ಕೃತಿಯ ಸೊಬಗನ್ನು ವಿಮಾನ ನಿಲ್ದಾಣದಲ್ಲೇ ಅವಲೋಕಿಸಬಹುದು.
– ವಿ.ವಿ. ರಾವ್‌, ನಿರ್ದೇಶಕರು, ಮಂಗಳೂರು ವಿಮಾನ ನಿಲ್ದಾಣ

Advertisement

ದ.ಭಾರತದಲ್ಲಿ ತ್ವರಿತ ಬೆಳವಣಿಗೆ
ಮಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲಿಯೇ ತ್ವರಿತ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ನಿಲ್ದಾಣವೆಂದು ಪರಿಗಣಿತವಾಗಿದೆ. 2017- 18ನೇ ಸಾಲಿನ ಎಪ್ರಿಲ್‌ ತನಕ ಈ ವಿಮಾನ ನಿಲ್ದಾಣದ ಮೂಲಕ 23.5 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಈ ವರ್ಷ 30 ಲಕ್ಷ  ಪ್ರಯಾಣಿಕರು ಪ್ರಯಾಣಿಸುವ ಗುರಿ ಹೊಂದಲಾಗಿದೆ. ಪ್ರತಿ ದಿನ ದೇಶ, ವಿದೇಶಿ ಹಾಗೂ ವಾಣಿಜ್ಯ ವಿಮಾನಗಳು ಸಹಿತ ಒಟ್ಟು ವಿಮಾನಗಳ ಹಾರಾಟ 30ರಿಂದ 40ಕ್ಕೇರಿದೆ. ಸರಕು ನಿರ್ವಹಣೆಯಲ್ಲಿ ಶೇ. 30ರಷ್ಟು ಹೆಚ್ಚಳವಾಗಿದೆ. ದೇಶದಲ್ಲೇ ನಂಬರ್‌ ಒನ್‌ ಸ್ವತ್ಛ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಲಭಿಸಿದೆ. ಕೇಂದ್ರ ಸರಕಾರ ಫೆಬ್ರವರಿಯಲ್ಲಿ ನಡೆಸಿದ ಸ್ವತ್ಛತಾ ಸಮೀಕ್ಷೆಯಲ್ಲಿ 15 ಲಕ್ಷ ದಿಂದ 50 ಲಕ್ಷವರೆಗಿನ ಪ್ರಯಾಣಿರ ನಿರ್ವಹಣೆಯ ವಿಭಾಗದಲ್ಲಿ  ಮೊದಲ ಸ್ಥಾನ ಲಭಿಸಿದೆ.

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next