Advertisement

ಐಎಎಸ್‌ಗೆ ಸೇರಬೇಕಾದವನೀಗ ಲೆಫ್ಟಿನೆಂಟ್‌ ಕರ್ನಲ್‌

01:00 AM Feb 24, 2019 | Harsha Rao |

ಬೈಂದೂರು: ಕಾಲೇಜು ದಿನಗಳಿಂದಲೇ ಪ್ರತಿಭಾವಂತ ಹುಡುಗ ಈತ. ನಾಗರಿಕ ಸೇವೆಯ ಉನ್ನತ ಹುದ್ದೆಗಳಿಗೆ ಪರೀಕ್ಷೆ ಬರೆಯುವುದರಲ್ಲಿ ವಿಶೇಷ ಆಸಕ್ತಿಯಿತ್ತು. ದೇಶಸೇವೆ ಧಮನಿಗಳಲ್ಲಿ ಹರಿಯುತ್ತಿತ್ತು. ದೊಡ್ಡ ಅಧಿಕಾರಿಯಾಗಬೇಕು ಎಂದು ಕನಸು. ಅವರೀಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿ ದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

1976ರ ಅ. 5ರಂದು ಜನಿಸಿದ ಶಿರೂರಿನ ರಂಜಿತ್‌ ಕುಮಾರ್‌ ಮೇಲ್ಪಂಕ್ತಿಯ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ಭಂಡಾರ್ಕಾರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಬಳಿಕ ಮಂಗಳೂರು ವಿವಿಯಲ್ಲಿ ಎಂಎಸ್‌ಸಿ ಓದುತ್ತಿರುವಾಗ ಸೈನ್ಯಕ್ಕೆ ನೇರ ನೇಮಕಾತಿಯಲ್ಲಿ ಆಯ್ಕೆಯಾದರು. ಡೆಹ್ರಾಡೂನ್‌ನ ಭೂಸೇನೆಯ ಏರ್‌ ಡಿಫೆನ್ಸ್‌ ವಿಭಾಗದಲ್ಲಿ ತರಬೇತಿ ಪಡೆದು  ಕಾಶ್ಮೀರದಲ್ಲಿ ಮೊದಲ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಬಳಿಕ ಒಡಿಶಾ, ರಾಜಸ್ಥಾನ, ಭುವನೇಶ್ವರ, ಪುಣೆ, ಅಜೆ¾àರ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಕ್ಷ ಸೇವೆಗಾಗಿ ಲೆಫ್ಟಿನೆಂಟ್‌, ಕ್ಯಾಪ್ಟನ್‌, ಮೇಜರ್‌ ಆಗಿ ಪದೋನ್ನತಿಗೊಂಡು ಪ್ರಸ್ತುತ ಲೆಫ್ಟಿrನೆಂಟ್‌ ಕರ್ನಲ್‌ ಆಗಿದ್ದಾರೆ. ತನ್ನ ಯೂನಿಟ್‌ನ 1,500 ಸೈನಿಕರನ್ನು ಮುನ್ನಡೆಸುವ ಹೊಣೆ ರಂಜಿತ್‌ ಅವರದು. ಪತ್ನಿ ಶೈನಿ ವೈದ್ಯರು, ಪುತ್ರಿಯರಾದ ದಿಯಾ ಮತ್ತು ವಿಭಾ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.

ಸೇನಾಸಕ್ತಿ ರಕ್ತಗತ
ರಂಜಿತ್‌ ಅವರ ತಂದೆ ಜಾನ್‌ ಸಿ. ಥೋಮಸ್‌ ಅವರು ಯಡ್ತರೆ ಗ್ರಾಮದ ಮಧ್ದೋಡಿಯವರು. 1970ರಲ್ಲಿ ಸೈನ್ಯಕ್ಕೆ ಸೇರ್ಪಡೆಯಾದ ಜಾನ್‌, ಕೋರ್‌ ಆಫ್‌ ಸಿಗ್ನಲ್‌ ವಿಭಾಗದಲ್ಲಿ  ಸೇವೆ ಸಲ್ಲಿಸಿದ್ದರು. 1971ರ ಇಂಡೋ-ಪಾಕ್‌ ಸಮರ, ಅಮೃತಸರದ ಸ್ವರ್ಣಮಂದಿರದಲ್ಲಿ ಅವಿತಿದ್ದ ಸಿಕ್ಖ್ ಉಗ್ರರನ್ನು ದಮನಿಸುವ ಆಪರೇಷನ್‌ ಬ್ಲೂಸ್ಟಾರ್‌ನಲ್ಲಿ ಭಾಗಿಯಾಗಿದ್ದರು. ಹೀಗೆ ರಂಜಿತ್‌ ಅವರ ಕನಸಿಗೆ ತಂದೆಯೇ ಪ್ರೇರಣೆ. ತಾಯಿ ಲೀಲಾ ಗೃಹಿಣಿ.

ಹುಟ್ಟೂರ ಪ್ರೀತಿ, ಕೃಷಿ ಆಸಕ್ತಿ
ರಂಜಿತ್‌ ಕುಮಾರ್‌ ಓರ್ವ ಅಪ್ಪಟ ಗ್ರಾಮೀಣ ಪ್ರತಿಭೆ. ಶಿರೂರು ಸಮೀಪದ ಜೋಗೂರು ಎನ್ನುವ ಕುಗ್ರಾಮದಲ್ಲಿ ಬೆಳೆದವರು. ಕಾಲೇಜು ದಿನಗಳಿಂದಲೇ ಅತ್ಯಂತ ಪ್ರತಿಭಾವಂತ. ಎನ್‌ಸಿಸಿಯಲ್ಲಿದ್ದು ಹಲವು ಬಹುಮಾನ ಪಡೆದಿದ್ದರು. ಮೇಲ್ಪಂಕ್ತಿಯ ಸ.ಪ್ರಾ. ಶಾಲೆ ಮತ್ತು 5 ಕಿ.ಮೀ. ದೂರದ ಹೈಸ್ಕೂಲಿಗೆ ಹೋಗುತ್ತಿದ್ದುದು ಕಾಲ್ನಡಿಗೆಯಲ್ಲೇ. ಬಾಲ್ಯದಿಂದಲೂ ಓದು ಹಾಗೂ ಕೃಷಿ ಅವರ ವಿಶೇಷ ಆಸಕ್ತಿ. ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಹೊಂದಿರುವ ರಂಜಿತ್‌, ಈಗಲೂ ರಜೆಯಲ್ಲಿ ಊರಿಗೆ ಬಂದಾಗ ತೋಟದೊಳಗೆ ಸುತ್ತಾಡುತ್ತಾರೆ, ಕೃಷಿ ಕೆಲಸಗಳಲ್ಲಿ ಕೈಜೋಡಿಸುತ್ತಾರೆ. 

“ಸೇನಾಸೇವೆ ನನಗೆ ರಕ್ತಗತವಾಗಿ ಬಂದಿದೆ. ಉನ್ನತ ಪದವಿ ಅಲಂಕರಿಸಬೇಕು ಎಂದು ಕಾಲೇಜು ದಿನಗಳಲ್ಲೇ ಕನಸು ಕಂಡಿದ್ದೆ. ಸೇನೆಯಲ್ಲಿ ದೇಶ ಸೇವೆಯ ಸಂತೃಪ್ತಿಯ ಜತೆಗೆ ಉತ್ತಮ ಅವಕಾಶಗಳಿವೆ. ಆದರೆ ಅನ್ಯ ರಾಜ್ಯಗಳು, ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕರಾವಳಿಯವರು ಸೇನೆಗೆ ಸೇರುವುದು ಕಡಿಮೆ. ಇದು ಹೆಚ್ಚಬೇಕು’ ಎನ್ನುತ್ತಾರೆ ರಂಜಿತ್‌. 

Advertisement

ಮೈ ಸವರಿಹೋದ ಮೃತ್ಯು
ರಂಜಿತ್‌ ಅವರು 2003ರಿಂದ 2005ರ ವರೆಗೆ ರಾಷ್ಟ್ರೀಯ ರೈಫ‌ಲ್ಸ್‌ ನಲ್ಲಿದ್ದು, ಕಾಶ್ಮೀರದಲ್ಲಿ  ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ  ಭಾಗವಹಿಸಿದ್ದರು. 2001ರಲ್ಲಿ  ಗಡಿ ನಿಯಂತ್ರಣ ರೇಖೆಯ ಇಕ್ಕೆಲಗಳಲ್ಲಿ  ಎರಡೂ ದೇಶಗಳ ಪಡೆಗಳು ಜಮಾಯಿಸಿದಾಗ ನಡೆದ “ಆಪರೇಷನ್‌ ಪರಾಕ್ರಮ್‌’ನಲ್ಲೂ  ಭಾಗಿಯಾಗಿದ್ದರು. ಕಾಶ್ಮೀರದ ಬಾರಾಮುಲ್ಲಾ  ಸೆಕ್ಟರ್‌ನಲ್ಲಿ ಉಗ್ರರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಶತ್ರುಗಳ ಗುಂಡು ರಂಜಿತ್‌ ಅವರನ್ನು ಸವರಿಕೊಂಡು ಹೋಗಿತ್ತು. ಆ ಸಂದರ್ಭದಲ್ಲಿ ಅವರ ಜತೆ ಇದ್ದ ಇನ್ನಿಬ್ಬರು ಯೋಧರು ಹುತಾತ್ಮರಾಗಿದ್ದರು. 

ಮನೆಮಂದಿಯೊಂದಿಗೆ ಕ್ರಿಸ್ಮಸ್‌
ಸೈನಿಕರಿಗೆ ಹಬ್ಬಗಳನ್ನು ಕುಟುಂಬದ ಜತೆ ಆಚ ರಿಸುವ ಅವಕಾಶ ಸಿಗುವುದು ಕಡಿಮೆ. ರಂಜಿತ್‌ಗೆ
ಈ ಬಾರಿ ಅಂತಹ ಭಾಗ್ಯ ಸಿಕ್ಕಿತ್ತು. ಹಲವು ವರ್ಷಗಳ ಬಳಿಕ ಈ ವರ್ಷದ ಕ್ರಿಸ್ಮಸ್‌ ಹಬ್ಬವನ್ನು ಕುಟುಂಬದವರ ಜತೆ ಆಚರಿಸಿದ್ದಾರೆ. “ಮಗ ಪದೋನ್ನತಿ ಹೊಂದಿರುವ ಕಾರಣ ಈಗೀಗ ರಜೆ ಕಡಿಮೆ. ಜವಾಬ್ದಾರಿಯುತ ಹುದ್ದೆಯಾಗಿರುವ ಕಾರಣ ತುರ್ತು ಕರೆಗಳಿಗೆ ಓಗೊಡಬೇಕಾಗುತ್ತದೆ. ಬಂದು ಒಂದೆರಡು ದಿನಗಳಲ್ಲಿ ವಾಪಸಾದುದೂ ಇದೆ. ಮಗ ಇದ್ದ  ಕಾರಣ ಈ ವರ್ಷದ ಕ್ರಿಸ್ಮಸ್‌ ವಿಶೇಷವಾಗಿತ್ತು’- ಹೆಮ್ಮೆಯ ಪುತ್ರನ ಬಗ್ಗೆ 
ಜಾನ್‌ ಸಿ. ಥೋಮಸ್‌ ಹೇಳುವುದು ಹೀಗೆ.

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next