Advertisement

ಚಿಂತನೆ: ಭೂಸುಧಾರಣೆ ಅಧ್ಯಾದೇಶ 2020

10:22 AM Aug 08, 2020 | mahesh |

ಸೆಕ್ಷನ್‌ 79ಬಿಯನ್ನು ತೆಗೆದುಹಾಕಿದ ಕಾರಣ ಕಂಪೆನಿ, ಟ್ರಸ್ಟ್‌ ಇತ್ಯಾದಿಯಾಗಿ ಸಾಂಸ್ಥಿಕವಾಗಿಯೂ ಕೃಷಿ ಭೂಮಿಯನ್ನು ಖರೀದಿಸಬಹುದು ಮತ್ತು ಹೊಂದಬಹುದು. ಈ ಮೊದಲು ಹಾಗೆ ಒಂದು ವೇಳೆ ಹೊಂದಿದ್ದರೆ ಅದನ್ನು ನಿರ್ಭಯವಾಗಿ ಉಳಿಸಿಕೊಳ್ಳಬಹುದು.

Advertisement

13-07-2020ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟವಾದ ಭೂಸುಧಾ ರಣೆಯ ಅಧ್ಯಾದೇಶವು 1974ರ ದೇವರಾಜ ಅರಸು ಸರಕಾರವು ಮಾಡಿದ್ದ ಆಗಿನ ಮಹತ್ತರ ಬದಲಾವಣೆಯ ಕಾನೂನಿನ ಒಂದು ಅಂಶವನ್ನು ತೆಗೆಯುವ ಹೆಜ್ಜೆ. ಇದು ಅಷ್ಟೇ ಮಹತ್ತರವಾಗಿದೆ ಎನ್ನಬಹುದು.

ಕಾನೂನಿನ ಚರಿತ್ರೆ
ಮಾರ್ಚ್‌ 1972ರಲ್ಲಿ ಸ್ಪಷ್ಟ ಬಹುಮತದೊಂದಿಗೆ ದೇವರಾಜ ಅರಸರು ಮೈಸೂರಿನ ಮುಖ್ಯಮಂತ್ರಿ ಯಾದರು. ಅವರ ಕಾಲದಲ್ಲಿ ಬಹಳಷ್ಟು ವ್ಯಾಪಕ ವಾದ ಬದಲಾವಣೆಗಳು ಆದವು. ಕಾನೂನುಗಳು ಸಹಾ ಆಗಿದ್ದವು. ಮೈಸೂರನ್ನು ಕರ್ನಾಟಕ ಮಾಡಿದ್ದು ಅವರ ಕಾಲದಲ್ಲಿ. 1965ರಿಂದ ಭೂಸು ಧಾರಣೆಯ ಕಾನೂನು ಜಾರಿಯಲ್ಲಿತ್ತು. ಇದು ಉಳುವವನ ಪರವಾಗಿ ಪ್ರಬಲವಾಗಿರಲಿಲ್ಲ ಎಂಬುದು ಆಗಿನ ಕೂಗು. ಅರಸರು ಇದಕ್ಕೆ ಸ್ಪಂದಿಸಿ, ಉಳುವವನನ್ನು ಹೊಲದೊಡೆಯನಾಗಿಸಿದ ಪ್ರಬಲವಾದ ಕಾನೂ ನನ್ನು ಜಾರಿಗೊಳಿಸಿದ ಕೀರ್ತಿಯನ್ನು ಪಡೆದುದು ಈಗ ಚರಿತ್ರೆ. ದಿಟ್ಟ ಯುವ ಮಂತ್ರಿಯಾಗಿದ್ದ ಸುಬ್ಬಯ್ಯಶೆಟ್ಟರು ಇದರ ಸಾರಥಿಯಾಗಿದ್ದರು. ಆ ಕಾನೂನಿನ ಒಂದು ಅಂಶವಾಗಿ ಬಂತು ಸೆಕ್ಷನ್‌ 79ಎ ಮತ್ತು 79ಬಿ. ಇದರಂತೆ, ಕೃಷಿಕನಲ್ಲ ದವನು ಮತ್ತು ಕೃಷಿಯೇತರ ಉತ್ಪತ್ತಿಯನ್ನು ಹೊಂದಿ ಆದಾಯ ತೆರಿಗೆಯ ಆಗಿನ ಮಿತಿಗಿಂತ ಜಾಸ್ತಿ ತೆರಿಗೆ ಪಾವತಿ ಸುವವನು ಕೃಷಿ ಭೂಮಿಯನ್ನು ಖರೀದಿಸಬಾರದು. ಕಂಪೆನಿ, ಟ್ರಸ್ಟ್‌, ವಗೈರೆ ಕಾನೂನಾತ್ಮಕ ವ್ಯಕ್ತಿಯೂ ಕೃಷಿ ಭೂಮಿ ಯನ್ನು ಹೊಂದಿರಬಾರದು. ಕೃಷಿಯೇತರ ಉತ್ಪತ್ತಿ ಯನ್ನು ಹೊಂದಿದವನು ವಾರೀಸು ಹಕ್ಕಿನಲ್ಲಿಯೂ ಕೃಷಿ ಭೂಮಿಯನ್ನು ಹೊಂದ ಬಾರದು ಎಂಬುದು ಈ ಕಠಿಣ ಕಾನೂನಿನ ಒಂದು ಭಾಗ. ಜಮೀನಿಗೆ ಪರಿಹಾರ ನೀಡದೆ ಸರಕಾರವು ಇಂತಹ ಜಮೀನನ್ನು ಪಡೆಯಬಾರದು ಎಂಬ ಉಪ ಷರತ್ತು ಇದ್ದ ಕಾರಣ ಇದನ್ನು ಜಾರಿಗೊಳಿಸುತ್ತಿರಲಿಲ್ಲ. ಆದರೆ, ಕೃಷಿ ಯೇತರ ಉತ್ಪತ್ತಿಯನ್ನು ಹೊಂದಿದವನು ಖರೀದಿಸಿದರೆ, ಅದಕ್ಕೆ ಪರಿಹಾರ ನೀಡದೆ ಭೂಮಿಯನ್ನು ಸರಕಾರಕ್ಕೆ ಮುಟ್ಟುrಗೋಲು ಹಾಕಬಹುದು.

ಹೀಗೆ ಕಾನೂನು ಯಾಕೆ ಆಗಿತ್ತು?
ಕೇಂದ್ರ ಸರಕಾರವು ರಾಜ್ಯಗಳನ್ನು ಕೋರಿ ಕೊಂಡಂತೆ ರಾಜ್ಯಗಳಲ್ಲಿ ಆದಾಯ ತೆರಿಗೆಯ ಸೋರುವಿಕೆಯನ್ನು ತಡೆಗಟ್ಟಲು ಸಮರ್ಪಕ ವಾದ ಕಾನೂನು ಮಾಡಬೇಕೆಂಬು ದಾಗಿತ್ತು. ಕರ್ನಾಟಕ ಹೊರತು ಪಡಿಸಿ ಇತರ ರಾಜ್ಯಗಳು ಸ್ಪಂದಿಸಿರಲಿಲ್ಲ. ತಾನು ಈ ನಿಟ್ಟಿನಲ್ಲಿ ಪ್ರಬಲ ಕಾನೂನನ್ನು ಮಾಡುವೆನು ಎಂಬುದು ದೇವರಾಜ ಅರಸರ ಇಂಗಿತ. ಹಾಗೆ ಹುಟ್ಟಿತ್ತು ಈ ಕಾನೂನು. ಆದರೆ, ಪ್ಲಾಂಟೇಶನ್‌ಗಳನ್ನು ಕೃಷಿ ಭೂಮಿ ಎಂಬ ಪದದಿಂದ ಹೊರಗಿಟ್ಟರು. ಆದ ಕಾರಣ ಪ್ಲಾಂಟೇ ಶನ್‌ಗಳೂ ಕೃಷಿ ಮಾಡುವುದೇ ಆಗಿದ್ದರೂ ಅದನ್ನು ಯಾರೂ ಖರೀದಿಸಲೂಬಹುದು ಮತ್ತು ಹೊಂದಲೂಬಹು ದಾಗಿತ್ತು. ಇಲ್ಲಿದೆ ವಿಪರ್ಯಾಸ. ಆದಾಯ ತೆರಿಗೆಯನ್ನು ಹೊಂದಿದವರು ಕೃಷಿ ಭೂಮಿಯನ್ನು ಖರೀದಿಸಬಾರದು, ಆದರೆ ಪ್ಲಾಂಟೇಶನ್ನು ಖರೀದಿಸಬಹುದು. ಹಾಗಾದರೆ ಅಲ್ಲಿ ಆದಾಯ ತೆರಿಗೆಯ ಸೋರುವಿಕೆ ಆಗುವು ದಿಲ್ಲವೆ? ಸಮಾನತೆಯ ಮೂಲ ಭೂತ ಹಕ್ಕಿಗೆ ವಿರೋಧವಲ್ಲವೆ ಈ ಕಾನೂನು? ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಂವಿಧಾನದ 9ನೆ ಪರಿಚ್ಛೇದದಲ್ಲಿ ಒಂದು ಕಾನೂನು ಅಡಕವಾದರೆ ಅದು ಪ್ರಶ್ನಾತೀತ. ಮೂಲಭೂತ ಹಕ್ಕಿನ ವಿರೋಧಿ ಎಂಬುದಾಗಿ ಅದನ್ನು ನ್ಯಾಯಾಲ ಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. 1974ರ ಕಾನೂನು 9ನೇ ಪರಿಚ್ಛೇದದಲ್ಲಿ ಸೇರಿತ್ತು. ಹೀಗಾಗಿ ಈ ಕಾನೂನು ಕರ್ನಾಟಕ ದಲ್ಲಿ ಉಳಿಯಿತು.

ಈಗಿನ ಬದಲಾವಣೆ
1974ರಿಂದ ಈ ಕಾನೂನಿನಡಿಯಲ್ಲಿ ಅದೆಷ್ಟೋ ಪ್ರಕರಣಗಳು ಆಗಿವೆ. ಆರ್‌ಟಿಸಿಯ ಬದಲಾ ವಣೆಯ ಸಂದರ್ಭದಲ್ಲಿ ಅಡಚಣೆ ಆಗುತ್ತಿತ್ತು. ವೈಷಮ್ಯದ ದೂರರ್ಜಿಗಳಿಂದಾಗಿ ತುಂಬಾ ಪ್ರಕರಣ ಗಳು ಆಗಿವೆ. ಆದಾಯ ತೆರಿಗೆಯ ಸೋರುವಿಕೆಯು ಪ್ಲಾಂಟೇಶನ್‌ಗಳ ಖರೀದಿಯಲ್ಲಿ ಆಗಿರಬಹುದು. ಆದರೆ ಕೃಷಿ ಭೂಮಿಗೆ ಮಾತ್ರ ಅಡಚಣೆ ಇತ್ತು. ಅದೆಷ್ಟೊ ಮಂದಿ ಉದ್ಯೋಗಿಗಳು ಕೃಷಿ ಭೂಮಿ ಯನ್ನು ಹೊಂದಲು ಆಸಕ್ತಿಯುಳ್ಳವರು ಹಿಂಜರಿಯು ವಂತಾಗಿತ್ತು. ಕಷ್ಟಕಾಲದಲ್ಲೂ ತನ್ನ ಜಮೀನನ್ನು ಬೇಕಾದಂತೆ ಉತ್ತಮ ಬೆಲೆಗೆ ಮಾರಲು ಕೃಷಿಕನಿಗೂ ಅಡಚಣೆ.

Advertisement

ಆದಾಯ ತೆರಿಗೆ ಮಿತಿಯು ಬದಲಾದಂತೆ ಸರಕಾರವು ಈ ಮಿತಿ ಯನ್ನೂ ಬದಲಾಯಿಸಿದರೂ ಮೂಲಭೂತವಾದ ಅಡೆತಡೆ ಹಾಗೆಯೇ ಉಳಿಯಿತು. 1970ರಲ್ಲಿ ನೆರೆಯ ಕೇರಳ ರಾಜ್ಯದ ಆಗಿನ ಪುರೋಗಾಮಿ ಸರಕಾರವೂ ಒಡೆತನ ನೀಡಿದ ಮಾಜಿ ಗೇಣಿ ದಾರನ ಭೂಮಿಗೂ ಈ ಪಾಟಿ ಕಾನೂನು ಮಾಡಲಿಲ್ಲ. ಈಗ ಸೆಕ್ಷನ್‌ 79ಎ ಮತ್ತು 79ಬಿಯನ್ನು ಸಮೂಲ ತೆಗೆದುಹಾಕಲಾಗಿದೆ. ಅಧ್ಯಾದೇಶದ 12ನೆ ಸೆಕ್ಷನ್‌ನಲ್ಲಿ ಸ್ಪಷ್ಟವಾಗಿ ಬರೆದಂತೆ ಈಗಿನ ಕಾನೂನು ದಿನಾಂಕ 01-03-1974ರಿಂದಲೇ ಜಾರಿಯಾ ಗುವುದು. 13ನೇ ಸೆಕ್ಷನ್‌ನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ ತಿಳಿಸುವಂತೆ ಈ ಸೆಕ್ಷನ್‌ 79ಎ ಮತ್ತು 79ಬಿಗಳ ಆಡಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳೂ ತಾನಾಗಿಯೇ ರದ್ದಾಗುತ್ತವೆ. ಈ ಮೊದಲು ತೀರ್ಪಾಗಿ ಅಂತಿಮವಾಗಿದ್ದರೆ ಅವುಗಳು ಮಾತ್ರ ಈ ಕಾನೂನಿಂದ ಹೊರತಾಗಿವೆ. ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಯನ್ನು 14-07-2020ರ ಸುತ್ತೋಲೆ ಯಂತೆ ಸರಕಾರವು ಸೂಚಿಸಿದೆ. ಸೆಕ್ಷನ್‌ 79ಬಿಯನ್ನು ತೆಗೆದುಹಾಕಿದ ಕಾರಣ ಕಂಪೆನಿ, ಟ್ರಸ್ಟ್‌ ಇತ್ಯಾದಿಯಾಗಿ ಸಾಂಸ್ಥಿಕವಾಗಿ ಕೃಷಿ ಭೂಮಿಯನ್ನು ಖರೀದಿಸ ಬಹುದು ಮತ್ತು ಹೊಂದಬಹುದು. ಈ ಮೊದಲು ಹಾಗೆ ಒಂದು ವೇಳೆ ಹೊಂದಿದ್ದರೆ ಅದನ್ನು ನಿರ್ಭಯವಾಗಿ ಉಳಿಸಿಕೊಳ್ಳಬಹುದು.

ಬೇರೆ ಬದಲಾವಣೆಗಳು
ಕೃಷಿ ಭೂಮಿಯ ಹಿಡುವಳಿಯ ಮಿತಿಯು ಹತ್ತು ಯುನಿಟ್‌ಗಳಿಗೆ ಸೀಮಿತವಾಗಿತ್ತು. ಐದು ಮಂದಿಯನ್ನು ಮೀರಿದ ಕುಟುಂಬಕ್ಕೆ ತಲಾ ಎರಡು ಯುನಿಟ್‌ಗಳನ್ನು ಹೆಚ್ಚುವರಿ ನೀಡಲಾಗಿತ್ತು. ಅಂತೂ ಒಟ್ಟಾಗಿ 20 ಯುನಿಟ್‌ಗಳನ್ನು ಮೀರದಂತೆ ಮಿತಿ ಇತ್ತು. ಈಗಿನ ತಿದ್ದುಪಡಿಯಂತೆ ಮಿತಿ ಯನ್ನು 20ಕ್ಕೆ ಏರಿಸಲಾಗಿದೆ. ಹತ್ತರಿಂದ ಹೆಚ್ಚು ಸದಸ್ಯ ರಿರುವ ಕುಟುಂಬಕ್ಕೆ ತಲಾ ನಾಲ್ಕು ಯುನಿಟ್‌ ಹೆಚ್ಚುವರಿ ನೀಡಲಾಗಿದೆ. ಒಟ್ಟಾರೆ ಮಿತಿಯು 40 ಯುನಿಟ್‌ ಆಗಿದೆ. ಈಗಾಗಲೇ ಆಸ್ತಿಯ ಮಿತಿಯ ತೀರ್ಮಾನ ಗಳು ಆಗಿದ್ದವರಿಗೆ ಇದರಿಂದ ಪ್ರಯೋಜನವಾಗಲಾ ರದು. ಆದರೆ ಹತ್ತು ಯುನಿಟ್‌ ಮಿತಿ ಮೀರುವವರಿಗೆ ಇನ್ನು ಮುಂದೆ ಖರೀದಿಸಲು ಇದು ಅನುಕೂಲವಾಗಲಿದೆ.

ಈವರೆಗೆ 80ನೇ ಸೆಕ್ಷನ್‌ ಪ್ರಕಾರ ಕೃಷಿ ಭೂಮಿಯನ್ನು ಕೃಷಿಕರಲ್ಲದವರು ಖರೀದಿಸ ಬಾರದು. ಇನ್ನು ಮುಂದೆ ಕೃಷಿ ಭೂಮಿಯನ್ನು ಖರೀದಿಸಬಹುದು. ಆದರೆ ನೀರಾವರಿ ಅನುಕೂಲತೆ ಉಳ್ಳ ಎ ತರಗತಿಯ ಜಮೀನನ್ನು ಕೃಷಿಗಾಗಿಯೇ ಖರೀದಿಸಬೇಕು. ಉಳಿದ ತರಗತಿಯ ಜಮೀನುಗಳಿಗೆ ಈ ನಿಯಮ ಇಲ್ಲ. 81ನೆ ಸೆಕ್ಷನ್‌ನ ತಿದ್ದುಪಡಿಯಂತೆ ಕೃಷಿ ಭೂಮಿ ಯನ್ನು ಸಾಮಾನ್ಯ ವ್ಯಕ್ತಿಗೆ ಅಡವು ಮಾಡುವಂತಿಲ್ಲ. ಬ್ಯಾಂಕ್‌ ವಗೈರೆ ಹಣಕಾಸು ಸಂಸ್ಥೆಗಳಿಗೆ ಮಾತ್ರ ಕೃಷಿ ಸಾಲಕ್ಕಾಗಿ ಅಡವು ಮಾಡಬಹುದು. ಅಂದರೆ ಕೃಷಿಕನ ಜಮೀನನ್ನು ಖಾಸಗಿ ಬಡ್ಡಿ ವ್ಯವಹಾರ ದವರಿಗೆ ಅಡವು ಮಾಡಲು ಅಸಾಧ್ಯ.

ಕೊನೆ ಮಾತು
ಅಧ್ಯಾದೇಶವು ಮುಂದೆ ಶಾಸನವಾಗಬೇಕು. ಬದಲಾದ ಕಾನೂನಿನಿಂದಾಗಿ ಕರ್ನಾಟಕದಲ್ಲಿ ಮುಂದೆ ಕೃಷಿ ಭೂಮಿಗೆ ಬೆಲೆ ಏರುವುದೇ ಅಥವಾ ಕೃಷಿಕನು ಭೂದಾಹಿಗಳಿಂದ ಶೋಷಣೆ ಗೊಳ ಗಾಗುವನೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಅಂತೂ ಕೃಷಿ ಜಮೀನಿನ ಹೊಂದುವಿಕೆಗೆ ಅಡೆತಡೆ ಇದ್ದುದು ದೂರವಾಯಿತು.

ಯಂ.ವಿ.ಶಂಕರ ಭಟ್‌ ನ್ಯಾಯವಾದಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next