Advertisement

ಹನುಮಂತ ದೇವಸ್ಥಾನಕ್ಕಿದೆ ವಿಶೇಷ ಇತಿಹಾಸ 

04:30 PM Nov 08, 2018 | |

ಲಕ್ಷ್ಮೇಶ್ವರ: ಪಟ್ಟಣದ ಕೇಂದ್ರ ಭಾಗದ ಮುಖ್ಯ ಬಜಾರ್‌ದಲ್ಲಿ ದಕ್ಷಿಣಾಭಿಮುಖವಾಗಿ ಇರುವ ಹನುಮಂತ ದೇವರ ದೇವಸ್ಥಾನಕ್ಕೆ ವಿಶೇಷವಾದ ಇತಿಹಾಸವಿದೆ. ಪುಲಿಗೆರೆ(ಲಕ್ಷ್ಮೇಶ್ವರ)ಯ ಇತಿಹಾಸದಲ್ಲಿ ಈ ಹಾವಳಿ ಹನುಮಂತ ದೇವರ ದೇವಸ್ಥಾನಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಅತ್ಯಂತ ಜಾಗೃತ ದೇವಸ್ಥಾನವಾಗಿದೆ. ಹಲವಾರು ವರ್ಷಗಳ ಹಿಂದೆ ಪಟ್ಟಣದಲ್ಲಿ ಪ್ಲೇಗ್‌, ಕಾಲರಾ, ಮಲೇರಿಯಾಗಳು ಕಾಡುತ್ತಿರುವ ಕಾಲದಲ್ಲಿ ನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದವಂತೆ. ಈ ಸಂದರ್ಭದಲ್ಲಿ ಊರಿನ ಜನರು ಹನಮಂತ ದೇವರನ್ನು ಪ್ರಾರ್ಥಿಸಿ ರೋಗಗಳ ಹಾವಳಿ ತಡೆಗಟ್ಟಿ ಕಾಪಾಡುವಂತೆ ಬೇಡಿಕೊಂಡಾಗ ಜನರನ್ನು ರೋಗದಿಂದ ರಕ್ಷಣೆ ಮಾಡಿದ ಐತಿಹ್ಯ ಹಾವಳಿ ಹನಮಂತ ದೇವರಿಗಿದೆ. ಅಲ್ಲದೆ ಅಂದಿನ ದಿನಗಳಲ್ಲಿ ಕಳ್ಳಕಾಕರ ಹಾವಳಿಯು ಹೆಚ್ಚಾಗಿದ್ದ ಸಂದರ್ಭದಲ್ಲಿ ಭಕ್ತರ ಮೊರೆ ಆಲಿಸಿ ಅದನ್ನು ನಿಯಂತ್ರಿಸಲು ಸ್ವತಃ ಹನಮಂತ ದೇವರೇ ಕಳ್ಳರ ಹಾವಳಿ ತಡೆಗಟ್ಟಲು ರಾತ್ರಿಯ ವೇಳೆ ಪಹರೆ ಮಾಡಿ ದುಷ್ಟರನ್ನು ಶಿಕ್ಷಿಸುತ್ತಿದ್ದನಂತೆ. ಒಟ್ಟಿನಲ್ಲಿ ಭಕ್ತರಿಗೆ ಬರುವ ಕಷ್ಟ, ತೊಂದರೆಗಳನ್ನು ನಿವಾರಿಸಿ ಪರಿಹರಿಸಲು ನೆಲೆನಿಂತ ಹನಮಪ್ಪನ ಮಹಿಮೆ ಅಪಾರ.

Advertisement

ಭಕ್ತರ ಕನಸಿನಲ್ಲಿ ಬಂದ ಹನಮಂತ ಪಟ್ಟಣದಲ್ಲಿ ಇದೇ ಪ್ರದೇಶದಲ್ಲಿ ದೇವಸ್ಥಾನ ಸ್ಥಾಪಿಸುವಂತೆ ಆಜ್ಞಾಪಿಸಿದ್ದರಿಂದ ನಿರ್ಮಿಸಿದ ದೇವಸ್ಥಾನದಲ್ಲಿ ಬಂದು ನೆಲೆಗೊಂಡನೆಂದು ಪ್ರತೀತಿ ಇದೆ. ಅಂದಿನ ದಿನಗಳಲ್ಲಿ ಇಲ್ಲಿನ ಕುಂಬಾರ ಮತ್ತು ಹತ್ತಿಕಾಳ ಮನೆತನದವರಿಂದ ಪೂಜೆ ಪುನಸ್ಕಾರಗಳು ವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಿದ ಭಕ್ತ ಮಂಡಳಿ 2012ರಲ್ಲಿ 1.5 ಕೋಟಿ ರೂ.ಗಳ ವೆಚ್ಚದಲ್ಲಿ ವಿಶೇಷವಾದ ಕಲ್ಲಿನಿಂದ ಸುಂದರವಾದ ದೇವಸ್ಥಾನ ಪುನರ್‌ ನಿರ್ಮಾಣ ಮಾಡಲಾಗಿದೆ. ದಿ| ವೇ| ರುದ್ರಯ್ಯನವರು ಪುರಾಣಿಕಮಠ ಇವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸೇವಾ ಕಾರ್ಯದಿಂದ ದೇವಸ್ಥಾನ ಹೊಸ ಸ್ವರೂಪ ಹೊಂದಿದ್ದು, ನಿತ್ಯ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಮತ್ತು ಶನಿವಾರ ವಿಶೇಷ ಅಲಂಕಾರಿಕ ಪೂಜೆ ನೆರವೇರಿ ಪಟ್ಟಣದ ಎಲ್ಲ ವರ್ಗದ ಜನರು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next