Advertisement

Lack of Rain:  ಪ್ರತಿ ತಿಂಗಳು ಒಂದು ಜಿಲ್ಲೆಯ ರೈತರೊಂದಿಗೆ ಸಂವಾದ: ಚಲುವರಾಯಸ್ವಾಮಿ

11:50 PM Aug 25, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಳೆಯ ತೀವ್ರ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದು, ಅಂತಹ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಸಂವಾದ ನಡೆಸುವುದಾಗಿ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

Advertisement

ಜತೆಗೆ 15 ದಿನಗಳಿಗೊಮ್ಮೆ ನಡೆಯುವ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅಹವಾಲು ಆಲಿಸಲಾಗುವುದು ಎಂದೂ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರತಿ ತಿಂಗಳು ಒಂದು ಜಿಲ್ಲೆಗೆ ಭೇಟಿ ನೀಡಿ, ರೈತರು, ರೈತ ಉತ್ಪಾದಕ ಸಂಸ್ಥೆಗಳ ಪದಾಧಿಕಾರಿಗಳು, ರೈತ ಸಂಘಟನೆ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸ ಲಾಗುವುದು. ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಯತ್ನಿಸಲಾಗುವುದು. ಆ. 29ರಂದು ಚಿತ್ರದುರ್ಗಕ್ಕೆ ಭೇಟಿ ನೀಡಲಾಗುವುದು. ಅಲ್ಲದೆ ಕೃಷಿ ಇಲಾಖೆ ಕಾರ್ಯದರ್ಶಿಗಳಿಂದ ವಾರಕ್ಕೊಮ್ಮೆ ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಯಲಿದೆ. ಅಲ್ಲಿಯೂ 15 ದಿನಗಳಿ ಗೊಮ್ಮೆ ನಾನು ಭಾಗವಹಿಸಲಿದ್ದೇನೆ ಎಂದು ಹೇಳಿದರು.

ಯಾವುದು ಎಷ್ಟು ಕೊರತೆ?
ರಾಜ್ಯದಲ್ಲಿ ಈ ಬಾರಿಯ ಮುಂಗಾರಿನಲ್ಲಿ 4 ಲಕ್ಷ ಹೆಕ್ಟೇರ್‌ ಭತ್ತದ ಬಿತ್ತನೆಯಲ್ಲಿ ಕೊರತೆ ಉಂಟಾಗಿದೆ. ಅದೇ ರೀತಿ ರಾಗಿಯಲ್ಲಿ 3.5 ಲಕ್ಷ ಹೆಕ್ಟೇರ್‌ (ಸೆಪ್ಟಂಬರ್‌ವರೆಗೆ ಬಿತ್ತನೆಗೆ ಅವಕಾಶ ಇದೆ), ತೊಗರಿ 2.5 ಲಕ್ಷ ಹೆಕ್ಟೇರ್‌, ಹತ್ತಿ 1.43 ಲಕ್ಷ ಹೆಕ್ಟೇರ್‌, ಶೇಂಗಾ 93 ಸಾವಿರ ಹೆಕ್ಟೇರ್‌, ಸೂರ್ಯಕಾಂತಿ 71 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕೊರತೆ ಇದೆ ಎಂದರು.

16 ಲಕ್ಷ ರೈತರ ನೋಂದಣಿ
ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟಾರೆ 16 ಲಕ್ಷ ರೈತರು ಪ್ರಧಾನಮಂತ್ರಿ ಫ‌ಸಲ್‌ಭಿಮಾ ಯೋಜನೆ ಅಡಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಕಾವೇರಿ ಹೋರಾಟ: ಯಶಸ್ಸಿನತ್ತ ಹೆಜ್ಜೆ
ಬೆಂಗಳೂರು:  ಕಾವೇರಿ ವಿವಾದದ ವಿಚಾರದಲ್ಲಿ ಕರ್ನಾಟಕವು ಕಾನೂನು ಹೋರಾಟದಲ್ಲಿ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಈ ವಿಷಯದಲ್ಲಿ ಸದ್ಯಕ್ಕೆ ಇಷ್ಟು ಮಾತ್ರ ಹೇಳಬಹುದು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.  ಕಾವೇರಿ ವಿವಾದದಲ್ಲಿ ನಮ್ಮ ಸರಕಾರವನ್ನು ಟೀಕಿಸುತ್ತಿರುವವರು ನಮಗಿಂತ ಬುದ್ಧಿವಂತರಾಗಿದ್ದಾರೆ. ಅವರಿಗೆ ಆಗ ಅಧಿಕಾರವೂ ಇತ್ತು. ಯಾಕೆ ಈ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ ಎಂದೂ ತೀಕ್ಷ್ಣವಾಗಿ ಕೇಳಿದರು.

Advertisement

ಬರ ಮರೆತ ಸರಕಾರ ವರ್ಗಾವಣೆ  ದಂಧೆಯಲ್ಲಿ ಬ್ಯುಸಿ: ಬೊಮ್ಮಾಯಿ
ಹುಬ್ಬಳ್ಳಿ: ರಾಜ್ಯದಲ್ಲಿ  ಬರ ಎದುರಾಗಿದ್ದು, ಬೆಳೆ ಸಮೀಕ್ಷೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದರೆ ರಾಜ್ಯ ಸರಕಾರ ಮಾತ್ರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಸ್ವಹಿತಾಸಕ್ತಿಗಾಗಿ ಓಡಾಡುತ್ತಿದ್ದಾರೆ ಹೊರತು ರಾಜ್ಯದ ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಮುಂಗಾರು ಕೈಕೊಟ್ಟಿದೆ. ಜುಲೈ ತಿಂಗಳ ಬಳಿಕ ಪುನಃ ಮಳೆ ಕಡಿಮೆಯಾಗಿದೆ. ಮೂರು ತಿಂಗಳು ಕಳೆದರೂ ಬರ ಘೋಷಣೆ ಮಾಡಿಲ್ಲ. ಬೆಳೆ ನಾಶ, ಕುಡಿಯುವ ನೀರಿನ ಬಗ್ಗೆಯೂ ಯೋಚಿಸಿಲ್ಲ. ಕೂಡಲೇ ಬರಗಾಲ ಘೋಷಿಸಬೇಕು  ಎಂದು ಆಗ್ರಹಿಸಿದರು.

ಆ. 28:ಸಿರಿಧಾನ್ಯ ಮೇಳ
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಪ್ರಯುಕ್ತ ಕೃಷಿ ಇಲಾಖೆ ಆ.28ರಂದು ಮಂಡ್ಯದಲ್ಲಿ  ಸಿರಿ ಧಾನ್ಯ ಮೇಳ, ವಸ್ತುಪ್ರದರ್ಶನ,  “ಬೆಲ್ಲದ ಪರಿಷೆ’ ಹಾಗೂ ಆಹಾರ ಮೇಳವನ್ನು ಹಮ್ಮಿಕೊಂಡಿದೆ.  ಬೆಳಗ್ಗೆ 7 ಗಂಟೆಗೆ ಸಿರಿಧಾನ್ಯಗಳ ಜಾಗೃತಿಗಾಗಿ  “ಸಿರಿಧಾನ್ಯಗಳ ನಡಿಗೆ’ ಏರ್ಪಡಿಸಲಾಗಿದ್ದು, ಅಧಿಕಾರಿಗಳು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು  ಭಾಗವಹಿಸ ಲಿದ್ದಾರೆ. 10.30ಕ್ಕೆ ಕೃಷಿ ಸಚಿವರು  ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಬರ ನಿಯಮ ಸಡಿಲಿಕೆಗೆ ಬೊಮ್ಮಾಯಿ ಯತ್ನಿಸಲಿ: ಪಾಟೀಲ್‌
ವಿಜಯಪುರ: ರಾಜ್ಯದ ಬರ ಪರಿಸ್ಥಿತಿ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಮಾಡುವುದನ್ನು ಬಿಡಬೇಕು. ಅಲ್ಲದೆ ರಾಜ್ಯದ ಜನರ ಹಿತದೃಷ್ಟಿಯಿಂದ ಬರ ಘೋಷಣೆಗೆ ಅಡ್ಡಿಯಾಗಿರುವ ಎನ್‌ಡಿಆರ್‌ಎಫ್‌ ನಿಯಮಗಳ ಸಡಿಲಿಕೆಗಾಗಿ ಪ್ರಧಾನಿ ಮೋದಿ ಸಹಿತ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿ ಸಮಸ್ಯೆ ಎದುರಾಗಿದೆ. ಬರ ಪೀಡಿತ ಜಿಲ್ಲೆಗಳ ಘೋಷಣೆಗೆ ಕೇಂದ್ರ ಸರಕಾರದ ನಿಯಮಗಳು ಅಡ್ಡಿಯಾಗಿವೆ. ಹೀಗಾಗಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸಲು ಬೊಮ್ಮಾಯಿ ಮುಂದಾಗಬೇಕು. ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಲಿ ಎಂದರು.

113 ತಾಲೂಕುಗಳಲ್ಲಿ ಮಳೆ ಕೊರತೆ
ಬೆಂಗಳೂರು: ರಾಜ್ಯದ 113 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿದ್ದು, ಈ ಪೈಕಿ 38 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.  ಎಲ್ಲ 113 ತಾಲೂಕುಗಳಲ್ಲಿ ಕೃಷಿ, ಕಂದಾಯ ಸೇರಿ ವಿವಿಧ ಇಲಾಖೆಗಳ ಸಿಬಂದಿ ಈಗ ಹಲವು ತಂಡಗಳಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ನಡೆಸುತ್ತಿವೆ. ಮಾಸಾಂತ್ಯಕ್ಕೆ ಆ ತಂಡಗಳು ಸರಕಾರಕ್ಕೆ ವರದಿ ನೀಡಲಿವೆ. ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳ ಪಟ್ಟಿಯನ್ನು ಕೆಎಸ್‌ಎನ್‌ಡಿಎಂಸಿ ಬಿಡುಗಡೆ ಮಾಡಿದೆ. ಅದರ ವಿವರ ಹೀಗಿದೆ:

ತೀವ್ರ ಮಳೆ ಕೊರತೆ ತಾಲೂಕುಗಳು
– ಬಾಗಲಕೋಟೆಯಲ್ಲಿ  7: ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ, ಇಳಕಲ್‌, ರಬಕವಿ-ಬನಹಟ್ಟಿ.

– ಬಳ್ಳಾರಿಯಲ್ಲಿ  2: ಸಿರಗುಪ್ಪ, ಬಳ್ಳಾರಿ

– ಬೆಳಗಾವಿಯಲ್ಲಿ  4: ಅಥಣಿ, ಬೈಲಹೊಂಗಲ, ಸವದತ್ತಿ, ಯರಗಟ್ಟಿ

– ಬೆಂಗಳೂರು ನಗರದಲ್ಲಿ 1: ಆನೇಕಲ್‌

– ಚಿಕ್ಕಬಳ್ಳಾಪುರದಲ್ಲಿ 4: ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ

– ಚಿತ್ರದುರ್ಗದಲ್ಲಿ 1: ಚಿತ್ರದುರ್ಗ

– ದಾವಣಗೆರೆಯಲ್ಲಿ 1: ಹೊನ್ನಾಳಿ

– ಗದಗಯಲ್ಲಿ 2: ನರಗುಂದ, ರೋಣ

– ಕೊಪ್ಪಳದಲ್ಲಿ 2: ಗಂಗಾವತಿ, ಕನಕಗಿರಿ

– ಮಂಡ್ಯದಲ್ಲಿ 2: ಮದ್ದೂರು, ಮಳವಳ್ಳಿ

– ರಾಯಚೂರಿನಲ್ಲಿ 2: ಲಿಂಗಸಗೂರು, ಮಾನ್ವಿ

– ರಾಮನಗರದಲ್ಲಿ 3: ಕನಕಪುರ, ರಾಮನಗರ, ಹಾರೋಹಳ್ಳಿ

– ಶಿವಮೊಗ್ಗದಲ್ಲಿ 1: ಸಾಗರ

– ತುಮಕೂರಿನಲ್ಲಿ 2:  ಚಿಕ್ಕನಾಯಕನಹಳ್ಳಿ, ಮಧುಗಿರಿ

– ಉತ್ತರ ಕನ್ನಡದಲ್ಲಿ 1: ಶಿರಸಿ

– ವಿಜಯಪುರದಲ್ಲಿ 2: ಬಬಲೇಶ್ವರ, ನಿಡಗುಂದಿ

ಯಾದಗಿರಿಯಲ್ಲಿ  1: ಹುಣಸಗಿ

ಮಳೆ ಕೊರತೆ ತಾಲೂಕುಗಳು

– ಬಾಗಲಕೋಟೆಯಲ್ಲಿ 2: ಬಾದಾಮಿ, ಗುಳೇದಗುಡ್ಡ

– ಬೆಳಗಾವಿಯಲ್ಲಿ 7: ಚಿಕ್ಕೋಡಿ, ಗೋಕಾಕ್‌, ಹುಕ್ಕೇರಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಮುದಗಲಿ

– ಬೆಂಗಳೂರು ಗ್ರಾಮಾಂತರದಲ್ಲಿ 2:  ದೇವನಹಳ್ಳಿ, ದೊಡ್ಡಬಳ್ಳಾಪುರ

– ಬೆಂಗಳೂರು ನಗರದಲ್ಲಿ 2: ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ

– ಬೀದರ್‌ನಲ್ಲಿ 2: ಭಾಲ್ಕಿ, ಹುಲಸೂರು

– ಚಿಕ್ಕಬಳ್ಳಾಪುರದಲ್ಲಿ  1: ಚಿಕ್ಕಬಳ್ಳಾಪುರ

– ಚಿಕ್ಕಮಗಳೂರಿನಲ್ಲಿ 3: ಕಡೂರು, ಶೃಂಗೇರಿ, ಅಜ್ಜಂಪುರ

– ಚಿತ್ರದುರ್ಗದಲ್ಲಿ 3: ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು

– ದಕ್ಷಿಣ ಕನ್ನಡದಲ್ಲಿ 1: ಮಂಗಳೂರು

– ದಾವಣಗೆರೆಯಲ್ಲಿ 2: ಹರಿಹರ, ಜಗಳೂರು

– ಧಾರವಾಡದಲ್ಲಿ 4: ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಹುಬ್ಬಳ್ಳಿ ನಗರ

– ಗದಗದಲ್ಲಿ  3: ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ

ಹಾಸನದಲ್ಲಿ 3: ಅರಕಲಗೂಡು, ಹೊಳೆನರಸೀಪುರ, ಸಕಲೇಶಪುರ

– ಹಾವೇರಿಯಲ್ಲಿ  3: ಹಿರೇಕೆರೂರು, ಸವಣೂರು, ರಟ್ಟಿಹಳ್ಳಿ

-ಕಲಬುರಗಿಯಲ್ಲಿ  6: ಅಫ‌jಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಕಾಳಗಿ, ಶಾಬಾದ

-ಕೊಡಗಿನಲ್ಲಿ 3: ಮಡಿಕೇರಿ, ವಿರಾಜಪೇಟೆ, ಕುಶಾಲನಗರ

– ಕೋಲಾರದಲ್ಲಿ 4:  ಬಂಗಾರಪೇಟೆ, ಕೋಲಾರ, ಮಾಲೂರು, ಕೆಜಿಎಫ್

– ಕೊಪ್ಪಳದಲ್ಲಿ 3: ಕುಷ್ಟಗಿ, ಯಲಬುರ್ಗ, ಕುಕನೂರು

– ಮೈಸೂರಿನಲ್ಲಿ 2: ಹೆಗ್ಗಡದೇವನಕೋಟೆ, ಟಿ. ನರಸೀಪುರ,

– ರಾಯಚೂರಿನಲ್ಲಿ 1: ಸಿರಿವಾರ

– ಶಿವಮೊಗ್ಗದಲ್ಲಿ 6: ಭದ್ರಾವತಿ, ಹೊಸನಗರ, ಶಿವಮೊಗ್ಗ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ

– ತುಮಕೂರಿನಲ್ಲಿ 4: ಗುಬ್ಬಿ, ಕೊರಟಗೆರೆ, ಪಾವಗಡ, ಶಿರಾ

– ಉತ್ತರ ಕನ್ನಡದಲ್ಲಿ 2: ಹಳಿಯಾಳ, ಯಲ್ಲಾಪುರ

– ವಿಜಯನಗರದಲ್ಲಿ 2: ಹರಪನಹಳ್ಳಿ, ಕೊಟ್ಟೂರು

– ವಿಜಯಪುರದಲ್ಲಿ 3: ಮುದ್ದೇಬಿಹಾಳ, ಚಡಚಣ, ದೇವರ ಹಿಪ್ಪರಗಿ

– ಯಾದಗಿರಿಯಲ್ಲಿ 1: ಯಾದಗಿರಿ

 

 

Advertisement

Udayavani is now on Telegram. Click here to join our channel and stay updated with the latest news.

Next