Advertisement

ಕಸ್ತೂರ್ಬಾ ಸಂಪರ್ಕದ ಸೇವೆಗೆ ಮನ್ನಣೆ

11:51 PM Oct 08, 2022 | Team Udayavani |

ಸ್ವಾತಂತ್ರ್ಯ ಪೂರ್ವ ಮತ್ತು ಅನಂತರದ ಹಲವು ದಶಕಗಳಲ್ಲಿ ಸ್ತ್ರೀ ಶಿಕ್ಷಣ, ಸ್ತ್ರೀ ಆರೋಗ್ಯ, ಸಾಮಾಜಿಕ ಸಮಸ್ಯೆಗಳು ಕಾಡುತ್ತಿದ್ದರೆ ಈಗ ಹಿರಿಯ ನಾಗರಿಕರ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ಈ ಕಥಾನಕದಲ್ಲಿ ಬರುವ ಸೇವಾ ಚಟುವಟಿಕೆಗಳನ್ನು ನೋಡಬಹುದು. ಸ್ವಾತಂತ್ರ್ಯ ಪೂರ್ವ ಮತ್ತು ಅನಂತರದ ಹಲವು ದಶಕ ಮಹಿಳೆಯರಿಗೆ ಹೆರಿಗೆ, ಆರೋಗ್ಯ, ಹೊಲಿಗೆ ಇತ್ಯಾದಿ ತರಬೇತಿಗಳನ್ನು ನೀಡಬೇಕಾಯಿತು,ಈಗ ಇವುಗಳ ಅಗತ್ಯವಿಲ್ಲ. ಈಗಿನ ಅಗತ್ಯವೆನಿಸಿದ ವೃದ್ಧಾಶ್ರಮವನ್ನು ನಡೆಸಲಾಗುತ್ತಿದೆ.

Advertisement

ಕಳೆದ ವಾರದ ಇದೇ ಅಂಕಣದಲ್ಲಿ ತೀರ್ಥಹಳ್ಳಿ ತಾಲೂಕಿನ ಬಸವಾನಿಯ ಅಂಡೆಕುಳಿ ಮಂಜಯ್ಯನವರು ತಮ್ಮ ಸರ್ವಸ್ವವನ್ನು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ, ದಲಿತರ ಅಭಿವೃದ್ಧಿಗೋಸ್ಕರ ತ್ಯಾಗ ಮಾಡಿದ್ದನ್ನು ಉಲ್ಲೇಖೀಸಲಾಗಿತ್ತು. ಕಾಕತಾಳೀಯವೋ ಎಂಬಂತೆ ಅದೇ ದಿನ ಅದೇ ಊರಿನ ಇನ್ನೊಂದು ಕುಟುಂಬದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ರೂಪುಗೊಂಡ ರಚನಾತ್ಮಕ ಚಟುವಟಿಕೆಗೆ ರಾಜ್ಯ ಸರಕಾರ ಪ್ರಶಸ್ತಿ ನೀಡಿ ಪುರಸ್ಕರಿಸಿತು. ರಾಮಶರ್ಮರ ಪತ್ನಿ ಸಾವಿತ್ರಮ್ಮ ಕಸ್ತೂರ್ಬಾ ಗಾಂಧಿಯವರ ಪ್ರೇರಣೆಯಿಂದ ಆರಂಭಿಸಿದ ಸಾಮಾಜಿಕ ಸೇವಾ ಚಟುವಟಿಕೆಗಳು ಈಗಲೂ ಮುನ್ನಡೆಯುತ್ತಿರುವುದು ವಿಶೇಷ.

ರಾಮಶರ್ಮರು (1913-2000) ವೇದಾಧ್ಯಯನ ಸಂಪನ್ನರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದರು. 1942ರಲ್ಲಿ ಚಲೇಜಾವ್‌ ಚಳವಳಿ ನಡೆದಾಗ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂಗತ ಹೋರಾಟವನ್ನು ಸಂಘಟಿಸಿದ್ದರು. ವಾಗ್ಮಿ ಶರ್ಮರು ಭಾಷಣ ಆರಂಭಿಸಿದೊಡನೆ ಪೊಲೀಸರು ಸೆರೆಮನೆಗೆ ದೂಡುತ್ತಿದ್ದರು. ಹೊರಬಂದ ಬಳಿಕ ಇನ್ನೊಂದು ಚಳವಳಿ ನಡೆಸುತ್ತಿದ್ದರು. 1945ರಲ್ಲಿ ಮಲೆನಾಡಿನ ಗೇಣಿದಾರರ ಬಲವರ್ಧನೆಗೆ ಮಲೆನಾಡು ಗೇಣಿದಾರರ ಸಂಘ ಸ್ಥಾಪಿಸಿ ಅವರ ಹಿತರಕ್ಷಣೆ ಕೆಲಸ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸರಕಾರ, ಸಮಾಜದಲ್ಲಿ ಪ್ರಭಾವ ಬೀರುವವರಾಗಿದ್ದರೂ ಈಗಿನಂತೆ ಸರಕಾರದಲ್ಲಿ ಹುದ್ದೆಗಳನ್ನು ಅಲಂಕರಿಸಲು ಮುಂದಾಗಲಿಲ್ಲ.

ಶರ್ಮರ ಪತ್ನಿ ಸಾವಿತ್ರಮ್ಮ (1920-2007) ಪತಿಯ ಎಲ್ಲ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದರು. ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜಾತಿಮತಭೇದವಿಲ್ಲದೆ ಊಟೋಪಚಾರಗಳನ್ನು ನಡೆಸುತ್ತಿದ್ದವರು ಸಾವಿತ್ರಮ್ಮ. ಪತಿಗೆ ಗಾಂಧೀಜಿ ಪ್ರಭಾವ ಉಂಟಾಗಿ ಮಲೆನಾಡು ಗಾಂಧಿ ಎಂಬ ಅಭಿದಾನ ಪಡೆದಿದ್ದರೆ, ಪತ್ನಿಗೆ ಕಸ್ತೂರ್ಬಾ ಗಾಂಧಿಯವರ ಪ್ರಭಾವ ಉಂಟಾಗಿತ್ತು. 1943ರಲ್ಲಿ ಪತ್ರಿಕೆಗಳಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಕಾರ್ಯಕರ್ತೆಯಾಗಲು ತರಬೇತಿ ಕೊಡುವ ಪ್ರಕಟನೆ ಬಂದಾಗ ಸಾವಿತ್ರಮ್ಮನಿಗೆ ಪತಿ ಬೆಂಬಲ ನೀಡಿದರು. ಆ ಕಾಲದಲ್ಲಿ ಮಹಿಳೆಯರು ಮನೆಯಿಂದ ಹೊರಬಂದು ಇಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವುದು ಸುಲಭದ ಮಾತಾಗಿರಲಿಲ್ಲ ಎನ್ನುವುದನ್ನು ಗಮನಿಸಬೇಕು.

ಮೈಸೂರು ಬಳಿಯ ಪಡುವರಹಳ್ಳಿಯಲ್ಲಿ ಯಶೋದರಾ ದಾಸಪ್ಪನವರ ನೇತೃತ್ವದಲ್ಲಿ 2 ವರ್ಷಗಳ ತರಬೇತಿಯಲ್ಲಿ ಆಯುರ್ವೇದ, ಹೊಲಿಗೆ, ಶಿಶುರಕ್ಷಣೆ, ಸಾಮಾನ್ಯ ವ್ಯವಹಾರ ಜ್ಞಾನ, ಸಮಾಜಸೇವೆ ಇನ್ನಿತರ ವಿಷಯಗಳನ್ನು ಕಲಿತು ಊರಿಗೆ ಬಂದರು. ತರಬೇತಿ ಪಡೆದು ಹಳ್ಳಿಗೆ ಹಿಂದಿರುಗುವಾಗ ಯಶೋದರಾ ದಾಸಪ್ಪನವರು ಮದ್ರಾಸ್‌ಗೆ ತೆರಳಿ ಗಾಂಧೀಜಿಯವರನ್ನು ಭೇಟಿ ಮಾಡಿದರು. ಆಗ ಸಾವಿತ್ರಮ್ಮನವರನ್ನೂ ಕರೆದುಕೊಂಡು ಹೋದರು. ಗಾಂಧೀಜಿಯವರು ಹಳ್ಳಿಗಳಲ್ಲಿ ಸಮಾಜಸೇವೆಯನ್ನು ಯಾರು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಕೈ ಎತ್ತಿದರು ಸಾವಿತ್ರಮ್ಮ. ಊರಿಗೆ ಬಂದವರೇ ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಪಿಕೆಟಿಂಗ್‌ ನಡೆಸಿ ಜೈಲುವಾಸ ಅನುಭವಿಸಿದರು.  ಮೈಸೂರಿನಲ್ಲಿ ಪಡೆದ ತರಬೇತಿಯ ಪರಿಣಾಮ ಹಳ್ಳಿಯಲ್ಲಿ ಸಮಾಜ ಸೇವೆ ನಡೆಸಲು ಪಣ ತೊಟ್ಟು ಊರಿನಲ್ಲಿ ಸಣ್ಣ ಸಣ್ಣ ಕಾಯಿಲೆಗಳಿಗೆ ತಾವೇ ಚಿಕಿತ್ಸೆ ನೀಡಲು ಆರಂಭಿಸಿದರು.

Advertisement

ತಮ್ಮೂರಿನಲ್ಲಿ ಬಡ ಹೆಣ್ಣು ಮಕ್ಕಳಿಗೆ ಹೆರಿಗೆ ಸಮಯದಲ್ಲಿ ಮನೆಯಿಂದಲೇ ದವಸಧಾನ್ಯಗಳನ್ನು ಕೊಟ್ಟು ಸಲಹುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುತ್ತಿದ್ದರು. ಬಸವಾನಿಯ ಒಂದೂವರೆ ಕಿ.ಮೀ. ದೂರದ ಹೊಳೆಕೊಪ್ಪದಲ್ಲಿ (ತುಂಗಾ ನದಿ ತೀರ) ಹೆರಿಗೆ ಕೇಂದ್ರವನ್ನು ತೆರೆದರು. ಇದಕ್ಕೆ ಕಸ್ತೂರ್ಬಾ ಮಾತೃಮಂದಿರ ಎಂದು ಹೆಸರು ಇಟ್ಟರು. ಆಗ ಇಂತಹ ಕೇಂದ್ರಗಳನ್ನು ಶಿಬಿರ ಎಂದು ಕರೆಯುತ್ತಿದ್ದರು. 1958ರಿಂದೀಚೆ ಸಂಸ್ಥೆಗೆ ಭೇಟಿ ನೀಡಿದ ಸಂದರ್ಶಕರ ದಾಖಲೆ ದೊರಕುತ್ತಿದೆ. ವಿವಿಧೆಡೆ ಆಸ್ಪತ್ರೆಗಳು ಆರಂಭವಾದ ಬಳಿಕ ನರ್ಸಿಂಗ್‌, ಟೈಲರಿಂಗ್‌ ತರಬೇತಿಯನ್ನು ಉಚಿತವಾಗಿ ನೀಡಿ ಅವರು ವಿವಿಧೆಡೆಗಳಲ್ಲಿ ನೆಮ್ಮದಿ ಜೀವನ ಕಂಡುಕೊಳ್ಳಲು ಕಾರಣರಾದರು. 1984ರಲ್ಲಿ, 2000, 2004-05ರಲ್ಲಿ ಕಟ್ಟಡ ವಿಸ್ತರಣೆಯಾಯಿತು.

ಸಾವಿತ್ರಮ್ಮನವರಿಗೆ ವಯಸ್ಸಾದ ಕಾರಣ 1995ರಲ್ಲಿ ಕಸ್ತೂರ್ಬಾ ಆಶ್ರಮ ಟ್ರಸ್ಟ್‌ ನೋಂದಣಿ ಮಾಡಿದರು. ಸಾವಿತ್ರಮ್ಮನವರ ನಿಧನಾನಂತರ 2007ರಲ್ಲಿ ಸಾವಿತ್ರಮ್ಮ ರಾಮ ಶರ್ಮ ಸೇವಾ ಟ್ರಸ್ಟ್‌ ಎಂದು ನೋಂದಣಿ ಮಾಡಿಸಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಾಮಾಜಿಕ ಅಗತ್ಯಗಳು ಬದಲಾದಂತೆ ಸೇವಾ ಚಟುವಟಿಕೆಗಳನ್ನೂ ಬದಲಾಯಿಸಿಕೊಳ್ಳಲಾಯಿತು. ಈಗ ವೃದ್ಧಾಶ್ರಮವನ್ನು ನಡೆಸಲಾಗುತ್ತಿದೆ. ಶಿವಮೊಗ್ಗದ ಮಾನಸ ಆಸ್ಪತ್ರೆಯ ಡಾ|ಅಶೋಕ್‌ ಪೈಯವರು, ಆಸ್ಪತ್ರೆಯಲ್ಲಿ ಚಿಕಿತ್ಸಾ ಅನಂತರದಲ್ಲಿ ಬದಲಾವಣೆಗಾಗಿ ರೋಗಿಗಳನ್ನು ಈ ಆಶ್ರಮದಲ್ಲಿ ಕೆಲವು ದಿನ ಇರಿಸಿದ್ದು ಇದೆ. ಸಾಂಸಾರಿಕವಾಗಿ ನೊಂದು ಬಂದ ಮಹಿಳೆಯರು ಇಲ್ಲಿ ಕೆಲವು ದಿನವಿದ್ದು ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಮನೆಗೆ ಹಿಂದಿರುಗುವುದೂ ಇದೆ. ಸಾವಿತ್ರಮ್ಮನವರು ಇರುವವರೆಗೆ ಟ್ರಸ್ಟ್‌ ಅಧ್ಯಕ್ಷರಾಗಿದ್ದರು. ಅವರಿಗೆ ಆರಂಭದಿಂದಲೂ ಕಾರ್ಯದರ್ಶಿಯಾಗಿ, ಈಗ ಟ್ರಸ್ಟಿಯಾಗಿ ಬೆನ್ನೆಲುಬಾಗಿ ನಿಂತವರು ಅಂಡೆಕುಳಿ ಮಂಜಯ್ಯನವರ ಮೊಮ್ಮಗ ಹರಿಪ್ರಸಾದರ ಪತ್ನಿ ಶಿವಮೊಗ್ಗದಲ್ಲಿರುವ ತಾರಾಪ್ರಸಾದ್‌. ಪ್ರಸ್ತುತ ಟ್ರಸ್ಟ್‌ ಅಧ್ಯಕ್ಷರಾಗಿ ಶಂಕರನಾರಾಯಣ ಐತಾಳ್‌ ಕಾರ್ಯನಿರ್ವಹಿಸುತ್ತಿದ್ದಾರೆ.

“ಸಾವಿತ್ರಮ್ಮನವರು ಕಸ್ತೂರ್ಬಾ ಗಾಂಧಿಯವರಿಂದ ಪ್ರೇರಿತರಾಗಿ ಅವರ ಹೆಸರಿನಲ್ಲಿ ಟ್ರಸ್ಟ್‌ ನಡೆಸಿದ್ದರೆ, ನಾವು ಕಸ್ತೂರ್ಬಾ ಗಾಂಧಿಯವರನ್ನು ನೋಡಿಲ್ಲ. ನಮಗೆ ಪ್ರೇರಣೆ ಸಾವಿತ್ರಮ್ಮನವರಾದ ಕಾರಣ ಸಾವಿತ್ರಮ್ಮನವರ ಹೆಸರಿನಲ್ಲಿ ಟ್ರಸ್ಟ್‌ ಹೆಸರನ್ನು ಬದಲಾಯಿಸಿದೆವು. ಸಾವಿತ್ರಮ್ಮನವರು ಇರುವವರೆಗೆ ಅವರೇ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ನಾವು ಮಹಿಳೆಯರ ವೃದ್ಧಾಶ್ರಮವನ್ನು  ನಡೆಸುತ್ತಿದ್ದೇವೆ. ಸಂಸ್ಥೆಯನ್ನು ಸರಕಾರದ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಪುರುಷರಿಗೂ ವೃದ್ಧಾಶ್ರಮದ ಸೌಲಭ್ಯ ಕೊಡಬೇಕೆಂಬ ಹಂಬಲವಿದೆ’ ಎನ್ನುತ್ತಾರೆ ಕಾರ್ಯದರ್ಶಿಯಾಗಿರುವ ರಾಘವೇಂದ್ರ ಬಸವಾನಿ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next