Advertisement

Kudachi ಪುರಸಭೆ: ಕಾಂಗ್ರೆಸ್ ಗೆ ಅಧ್ಯಕ್ಷ, ಬಿಜೆಪಿಗೆ ಒಲಿದ ಉಪಾಧ್ಯಕ್ಷ ಸ್ಥಾನ

07:36 PM Aug 26, 2024 | Team Udayavani |

ರಾಯಭಾಗ: ತಾಲೂಕಿನ‌ ಕುಡಚಿ(Kudachi) ಪುರಸಭೆಗೆ ಎರಡನೇ ಅವಧಿಗಾಗಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿದೆ. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೆ ಒಲಿದರೆ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ.

Advertisement

23 ಸದಸ್ಯರ ಪುರಸಭೆಯಲ್ಲಿ ಕಾಂಗ್ರೆಸ್ 14ಸ್ಥಾನ, ಬಿಜೆಪಿ 8 ಮತ್ತು 1 ಸ್ವಾತಂತ್ರ್ಯ ಅಭ್ಯರ್ಥಿಗಳಿದ್ದು, ಎರಡನೆ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ‌ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮೀಸಲಾತಿ ಬಂದಿತ್ತು. ಅಧ್ಯಕ್ಷ ಉಪಾಧ್ಯಕ್ಷರ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಆದ ಹಿನ್ನೆಲೆಯಲ್ಲಿ ನಿಕಟಪೂರ್ವ ಉಪಾಧ್ಯಕ್ಷ ಕಾಂಗ್ರೆಸನ ಹಮಿದೋದೀನ ಸೈದೋದಿನ ರೋಹಿಲೆಯವರನ್ನು ಅಧ್ಯಕ್ಷರನ್ನಾಗಿ ಹಾಗೂ ಬಿಜೆಪಿಯ ಶಿವಪ್ಪ ಧರ್ಮಣ್ಣ ಗಸ್ತಿಯವರನ್ನು ಉಪಾಧ್ಯಕ್ಷರಾಗಿ ಚುನಾವಣ ಅಧಿಕಾರಿ ಸುರೇಶ್ ಮುಂಜೆ ಘೋಷಣೆ ಮಾಡುತ್ತಿದ್ದಂತೆ ಕಾರ್ಯಕರ್ತರು ಅಭಿಮಾನಿಗಳಲ್ಲಿ ಸಡಗರ ಸಂಭ್ರಮ ಮನೆ ಮಾಡಿತು.

ಕಾಂಗ್ರೆಸ್ ಪಕ್ಷದಲ್ಲಿ ಪೂರ್ಣ ಬಹುಮತ ಇದ್ದರೂ ಪರಿಶಿಷ್ಟ ಪಂಗಡದ ಅಭ್ಯರ್ಥಿ ಕೊರತೆಯಾಗಿದ್ದರಿಂದ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಕೈಸೇರಿತು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಮೀದಿನ ರೋಹಿಲೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಸಕಲ ವಾದ್ಯಗಳೊಂದಿಗೆ ಮಾಸಾಹೇಬಾ ದರ್ಗಾಕ್ಕೆ ತೆರಳಿ ದರ್ಶನ ಪಡೆದು ಶಾಸಕರು ಕಾರ್ಯಕರ್ತರು ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶಿವಪ್ಪ ಗಸ್ತಿ ಸರಳವಾಗಿ ತೆರಳಿ ನಾಮಪತ್ರ ಸಲ್ಲಿಸಿದರು.

Advertisement

ಅಧ್ಯಕ್ಷ ಉಪಾಧ್ಯಕ್ಷರ ಘೋಷಣೆ ನಂತರ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಗುಲಾಲ ಎರಚಿ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದರು. ಕೆಲ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದರು. ಮೆರವಣಿಗೆ ಉದ್ದಕ್ಕೂ ಶಾಸಕ ಮಹೇಂದ್ರ ತಮ್ಮಣ್ಣವರ ನೂತನ ಅಧ್ಯಕ್ಷರೊಂದಿಗೆ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.

ಶಾಸಕ ಮಹೇಂದ್ರ ತಮ್ಮನವರು ಮಾತನಾಡಿ ಇಲ್ಲಿ ಯಾವುದೇ ಪಕ್ಷ ಇದ್ದರೂ ಕೂಡ ನಾವೆಲ್ಲರೂ ಕೂಡಿ ಒಟ್ಟಾಗಿ ಸೇರಿ ಕುಡಚಿ ಪಟ್ಟಣವನ್ನು ಅಭಿವೃದ್ಧಿ ಮಾಡೋಣ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಂಸದರು ಕಾಂಗ್ರೆಸ್ ಪಕ್ಷದವರು ಇದ್ದಾರೆ. ಹೀಗಾಗಿ ಇಲ್ಲಿ ನಾವು ಯಾವುದೇ ಪಕ್ಷಪಾತ ಮಾಡದೆ ನಾವೆಲ್ಲರೂ ಒಟ್ಟಿಗೆ ಸೇರಿ ಪಟ್ಟಣವನ್ನು ಅಭಿವೃದ್ಧಿ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಚುನಾವಣೆ ಅಧಿಕಾರಿ ತಹಶೀಲ್ದಾರ್ ಸುರೇಶ್ ಮುಂಜೆ, ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ, ಎರಡು ಪಕ್ಷದ ಪುರಸಭೆ ಸದಸ್ಯರು, ಕಾರ್ಯಕರ್ತರು ಅಭಿಮಾನಿಗಳು ಭಾಗಿಯಾಗಿದ್ದರು. ಪಿಎಸ್ಐ ಪ್ರೀತಮ ನಾಯಿಕ, ಎಎಸ್ಐ ಸಾಳುಂಕೆ, ಸಿಬ್ಬಂದಿಗಳಾದ ಪ್ರಕಾಶ್ ಖವಟಗೊಪ್ಪ ಇತರರು ಸೂಕ್ತ ಬಂದೋಬಸ್ತ್ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next