Advertisement

ಕೊಲ್ಲಮೊಗ್ರು: ಸೇತುವೆ ಅಭಿವೃದ್ಧಿ ಪ್ರಸ್ತಾವನೆಗಿಲ್ಲ ಮನ್ನಣೆ

10:15 PM Oct 01, 2020 | mahesh |

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ಮೈಲ ಎಂಬಲ್ಲಿಯ ಕಿರು ಸೇತುವೆಯ ಸ್ಲ್ಯಾಬ್‌ಗ ಹಾನಿ ಉಂಟಾಗಿದ್ದು, ಸಂಪರ್ಕ ಕಡಿತ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Advertisement

ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನಿಂದ ಕಟ್ಟ ಗೋವಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮೈಲದಲ್ಲಿ ಕಿರು ಸೇತುವೆಯ ಒಂದು ಬದಿಯ ಕಾಂಕ್ರೀಟ್‌ ಸ್ಲ್ಯಾಬ್‌ ಮುರಿದಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತ ಭೀತಿಯಲ್ಲಿದೆ. ಭಯ ದಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಿರು ಸೇತುವೆ
ಮೈಲದ ತೋಡಿಗೆ ಕಿರುಸೇತುವೆ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಇದೀಗ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಜೋರು ಮಳೆ ಬಂದಲ್ಲಿ ಮುಳುಗಡೆಯಾಗಿ, ಸಂಪರ್ಕ ಕಡಿತಗೊಳ್ಳುತ್ತದೆ. ಪ್ರತೀ ವರ್ಷ ಸಾರ್ವಜನಿಕರೇ ದುರಸ್ತಿ ಮಾಡುತ್ತಾರೆಂದು ಸ್ಥಳೀಯರು ತಿಳಿಸುತ್ತಾರೆ. ಕಳೆದ ವರ್ಷ ಈ ಸೇತುವೆಯ ಒಂದು ಬದಿ ಕುಸಿದಿದ್ದು, ಊರವರೇ ಚರಳು ತುಂಬಿಸಿ ಸರಿಪಡಿಸಿದ್ದರು. ಈ ಮಳೆಗಾಲದಲ್ಲಿ ಪುನಃ ಸಮಸ್ಯೆ ಎದುರಾಗಿದ್ದು ಸೇತುವೆ ಬಹುತೇಕ ಹಾನಿಯಾಗಿದೆ.

ಹಲವು ವರ್ಷಗಳಿಂದ ಈ ಸೇತುವೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಂಬಂಧ ಪಟ್ಟವರಿಗೆ ಸ್ಥಳೀಯರು ಮನವಿ ನೀಡುತ್ತಾ ಬರುತ್ತಿದ್ದರೂ, ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಅನುದಾನ ನೀಡಲಾಗುವುದು ಎಂಬ ಉತ್ತರ ನೀಡುತ್ತಾರೆಯೇ ವಿನಃ ಕಾರ್ಯಗತ ಮಾಡಿಲ್ಲ ಎಂದು ಆರೋಪ ಕೇಳಿ ಬಂದಿದೆ. ಪ್ರಸ್ತುತ ಇರುವ ಕಿರು ಸೇತುವೆಯ ಬದಲಿಗೆ ಎತ್ತರ ಹೆಚ್ಚಳ ಮಾಡಿ ಹೊಸ ಸೇತುವೆ ನಿರ್ಮಾಣ ಮಾಡಿದಲ್ಲಿ ಮಳೆಗಾಲದಲ್ಲಿ ಮುಳುಗಡೆ ಭೀತಿಯಿಂದ ತಪ್ಪಿಸಿ ಕೊಳ್ಳಬಹುದು ಎನ್ನುತ್ತಾರೆ ಸ್ಥಳೀಯರು.

ಸೂಚನೆ ನೀಡಲಾಗಿದೆ
ಮೈಲ ಕಿರುಸೇತುವೆ ಹಾನಿಯ ಬಗ್ಗೆ ಮಾಹಿತಿ ಬಂದಿದೆ. ಈ ಸೇತುವೆ ಅಭಿವೃದ್ಧಿಗೆ ಈ ಹಿಂದೆಯೂ ಪಂಚಾಯತ್‌ ರಾಜ್‌ ಇಂಜಿನಿಯರ್‌ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇತ್ತೀಚೆಗೆ ಆಡಳಿತಾಧಿಕಾರಿಗಳ ಸೂಚನೆಯಂತೆ ಇನ್ನೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ರವಿಚಂದ್ರ, ಪಿಡಿಒ ಕೊಲ್ಲಮೊಗ್ರು ಗ್ರಾ.ಪಂ.

Advertisement

ಪ್ರಸ್ತಾವನೆ ಸಲ್ಲಿಕೆ
ಮೈಲ ಕಿರುಸೇತುವೆಯ ಹಾನಿಯನ್ನು ಮಳೆಹಾನಿ ದುರಸ್ತಿ ಯೋಜನೆಯಲ್ಲಿ ದುರಸ್ತಿ ಪಡಿಸಲು ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಜನಾರ್ದನ, ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next