Advertisement

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

08:41 PM Aug 05, 2021 | Team Udayavani |

ಹಳ್ಳಿಗಳೇ ನಮ್ಮ ದೇಶದ ಜೀವಾಳ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ರಾಜ್ಯ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಗಳ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗ, ಜನ ಪ್ರತಿನಿಧಿಗಳ ಗಮನ ಸೆಳೆಯಲು “ಉದಯವಾಣಿ ಸುದಿನ’ವು “ಒಂದು ಊರು-ಹಲವು ದೂರು’ ಎಂಬ ಹೊಸ ಸರಣಿಯನ್ನು ಆರಂಭಿಸಿದೆ. ಕೊಡ್ಮಾಣ್‌ ಗ್ರಾಮವನ್ನು ಕಾಡುವ  ಪ್ರಮುಖ ಸಮಸ್ಯೆಗಳಲ್ಲಿ ರಸ್ತೆಯ ಸಮಸ್ಯೆಯೂ ಒಂದು. ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಂದಿನ ಈ ಸರಣಿಯಲ್ಲಿದೆ.

Advertisement

ಬಂಟ್ವಾಳ: ರಸ್ತೆಯೇ ಈ ಗ್ರಾಮೀಣ ಭಾಗದ ಮೂಲ ಸಮಸ್ಯೆಯಾಗಿದ್ದು, ಹದಗೆಟ್ಟ ರಸ್ತೆಗಳಲ್ಲೇ ಸಂಚರಿಸಬೇಕಾದ ಸ್ಥಿತಿ ಇಲ್ಲಿನ ಜನರದ್ದಾಗಿದೆ. ಇದು ಮೇರಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕೊಡ್ಮಾಣ್‌ ಗ್ರಾಮದ ಪರಿಸ್ಥಿತಿಯಾಗಿದೆ. ಗ್ರಾಮದಲ್ಲಿ ಕೊಂಚ ಮಟ್ಟಿನ ನೀರಿನ ಸಮಸ್ಯೆ ಇದ್ದರೂ, ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಕೊಡ್ಮಾಣ್‌ಪ್ರದೇಶವು ತೀರಾ ಹಳ್ಳಿ ಪ್ರದೇಶವಾಗಿದ್ದು, ಕೃಷಿ ಈ ಭಾಗದ ಮಂದಿಯ ಪ್ರಮುಖ ಕಸುಬಾಗಿದೆ. ಉಳಿದಂತೆ ಹೇಳಿಕೊಳ್ಳುವ ವಾಣಿಜ್ಯ ಚಟುವಟಿಕೆಗಳು ಇಲ್ಲಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಿವೆ. ಹೆಚ್ಚಿನ ಆದಾಯಗಳು ಗ್ರಾಮಕ್ಕೆ ಇಲ್ಲದೇ ಇರುವುದರಿಂದ ಸರಕಾರಿ ಮಟ್ಟದಿಂದ ಅನು ದಾನ ಬಂದರಷ್ಟೇ ಅಭಿವೃದ್ಧಿ ಎನ್ನುವ ಸ್ಥಿತಿ.

ಕೊಡ್ಮಾಣ್‌ಗ್ರಾಮದ ಗ್ರಾ.ಪಂ.ವ್ಯಾಪ್ತಿಯು ಬಂಟ್ವಾಳ ತಾಲೂಕಿಗೆ ಸೇರಿದ್ದರೂ, ಈ ಪ್ರದೇಶವು ಮಂಗಳೂರು ವಿಧಾನಸಭೆ ಕ್ಷೇತ್ರಕ್ಕೆ ಸೇರುತ್ತದೆ. ಹಿಂದೆ ಇದು ವಿಟ್ಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಆ ಕ್ಷೇತ್ರ ವಿಲೀನಗೊಂಡ ಬಳಿಕ ಇಲ್ಲಿನ ಮೂರು ಗ್ರಾ.ಪಂ.ಗಳು ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬಂದಿವೆ. ಸಾಮಾನ್ಯವಾಗಿ ಉದ್ದಿಮೆಗಳು, ವಾಣಿಜ್ಯ ಚಟುವಟಿಕೆಗಳು ಇದ್ದಾಗ ಅವುಗಳ ತೆರಿಗೆ, ಇತರ ನೆರವಿನಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.

ಆದರೆ ಕೊಡ್ಮಾಣ್‌ಗ್ರಾಮದಲ್ಲಿ ಅಂತಹ ಉದ್ದಿಮೆಗಳು ಇಲ್ಲದೇ ಇರುವುದರಿಂದ ಎಲ್ಲ ಮೂಲ ಸೌಕರ್ಯಕ್ಕೂ ಸರಕಾರವನ್ನೇ ಕಾಯಬೇಕಾದ ಸ್ಥಿತಿ ಇದೆ. ಸರಕಾರಿ ವ್ಯವಸ್ಥೆಯ ಪ್ರಕಾರ ಪುದು ಪ್ರಾಥಮಿಕ ಆರೋಗ್ಯ ಕೇಂದ್ರವು ಈ ಗ್ರಾಮಕ್ಕೆ ಸಂಬಂಧಪಟ್ಟಿದೆ.ಆದರೆ ಗ್ರಾಮದ ಒಂದಷ್ಟು ಮಂದಿ ತಮ್ಮ ಆರೋಗ್ಯ ಸಂಬಂಧಿ ವಿಚಾರಗಳಿಗೆ ಬೆಂಜನಪದವು ಆರೋಗ್ಯ ಕೇಂದ್ರವನ್ನೂ ಆಶ್ರಯಿಸುತ್ತಾರೆ. ತಮ್ಮದೇ ಗ್ರಾ.ಪಂ. ಮೇರಮಜಲಿನಲ್ಲಿ ಆರೋಗ್ಯ ಕೇಂದ್ರಬೇಕು ಎಂಬ ಬೇಡಿಕೆಯೂ ಇದೆ.

Advertisement

 ರಸ್ತೆ ಅಭಿವೃದ್ಧಿಯ ಸವಾಲು:

ಗ್ರಾಮದ ಮೇರಮಜಲು ಕ್ರಾಸ್‌ ಕೊಡ್ಮಾಣ್‌ಮದಕ ರಸ್ತೆಯು ಸುಮಾರು 3 ಕಿ.ಮೀ. ಉದ್ದವಿದ್ದು, ಸಂಚಾರಕ್ಕೆ ತೀರಾ ದುಸ್ತರವಾಗಿದೆ. ಈ ರಸ್ತೆಯ ಕೊಂಚ ಭಾಗಕ್ಕೆ ಕಾಂಕ್ರೀಟ್‌ ಕಾಮಗಾರಿ ನಡೆದಿದ್ದರೂ, ಬಹುತೇಕ ಭಾಗ ಸಂಚಾರಿಸಲಾರದ ಪರಿಸ್ಥಿತಿಗೆ ತಲುಪಿದೆ. ಕೊಟ್ಟಿಂಜ-ಅಮ್ಮೆಮಾರ್‌ ರಸ್ತೆ, ಪೂಪಾಡಿಕಲ್ಲು-ಮೇರಮಜಲು ರಸ್ತೆಗಳು ಕೂಡ ಹದಗೆಟ್ಟಿವೆ.

ಜತೆಗೆ ಬಾರೆಕ್ಕಾಡು ರಸ್ತೆಯೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅದರ ಅಭಿವೃದ್ಧಿಯ ಕೂಗು ಕೂಡ ಇದೆ. ಇದು ಗ್ರಾಮದ ಪ್ರಮುಖ ರಸ್ತೆಗಳ ಕಥೆಯಾದರೆ ಇನ್ನು ಹಲವು ರಸ್ತೆಗಳು ಇದೇ ರೀತಿ ಅಭಿವೃದ್ಧಿಗಾಗಿ ಕಾಯುತ್ತಿವೆ. ಒಂದಷ್ಟು ರಸ್ತೆಗಳು ಸಣ್ಣ ಅನುದಾನದ ಮೂಲಕ ಅಭಿವೃದ್ಧಿಗೊಂಡಿದ್ದರೂ, ಇನ್ನೂ ಸಾಕಷ್ಟು ಪ್ರದೇಶದ ರಸ್ತೆಗಳು ಅಭಿವೃದ್ಧಿಗೆ ಬಾಕಿ ಇವೆ.

ಕೊಡ್ಮಾಣ್‌ ಗ್ರಾಮದ ಮಧ್ಯೆ ರೈಲ್ವೇ ಟ್ರ್ಯಾಕ್‌ ಹಾದು ಹೋಗಿದ್ದು, ಅದು ಗ್ರಾಮವನ್ನು ಎರಡು ಪಾಲು ಮಾಡಿವೆ. ಒಂದು ಭಾಗದ ಮಂದಿ ಇನ್ನೊಂದು ಭಾಗಕ್ಕೆ ಸಂಚರಿಸ ಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇದೆ. ಶಾಲೆ, ಗ್ರಾ.ಪಂ. ಸೇರಿ ಇನ್ನಿತರ ಭಾಗಕ್ಕೆ ರೈಲ್ವೇ ಹಳಿ ದಾಟಿ ಬರಬೇಕಿದೆ.

ಶಾಲೆಗೆ ಬೇಕು ಕಟ್ಟಡ :

ಕೊಡ್ಮಾಣ್‌ ಪ್ರದೇಶದಲ್ಲಿ ಒಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಮುಖ್ಯವಾಗಿ ಇಲ್ಲಿನ ಪ್ರೌಢಶಾಲೆಯು ಸತತವಾಗಿ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಪಡೆದುಕೊಂಡಿದೆ. ಫಲಿತಾಂಶ ಉತ್ತಮವಾಗಿದ್ದರೂ, ಶಾಲೆಯ ಕಟ್ಟಡದ ಕೊರತೆ ಇನ್ನೂ ನೀಗಿಲ್ಲ. ಇರುವ ಕಟ್ಟಡಗಳು ಸುಸಜ್ಜಿತವಾಗಿದ್ದರೂ, ಶಾಲೆಯ ಕಚೇರಿ ಕೊಠಡಿಯ ಬೇಡಿಕೆ ಇನ್ನೂ ಹಾಗೇ ಉಳಿದುಕೊಂಡಿದೆ. ಜತೆಗೆ ಗುಣಮಟ್ಟದ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ.

 

ಕಿರಣ್‌ ಸರಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next