Advertisement

Kichcha sudeep: ಹಣಕಾಸಿನ ವಿವಾದ; ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದ ಕಿಚ್ಚ

05:31 PM Jul 10, 2023 | Team Udayavani |

ಬೆಂಗಳೂರು: ನಟ ಕಿಚ್ಚ ಸುದೀಪ್‌ ಹಾಗೂ ನಿರ್ಮಾಪಕ ಎಂಎನ್‌ ಕುಮಾರ್‌ ನಡುವಿನ ಹಣಕಾಸಿನ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ನಿರ್ಮಾಪಕರ ಆರೋಪದ ವಿರುದ್ಧ ಜಾಕ್‌ ಮಂಜು ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

Advertisement

ಕಿಚ್ಚ 9 ಕೋಟಿ ಹಣವನ್ನು ಪಡೆದು ಸಿನಿಮಾ ಮಾಡದೇ ವಂಚಿಸಿದ್ದಾರೆ ಎಂದು ನಿರ್ಮಾಪಕ ಎಂಎನ್ ಕುಮಾರ್‌ ಆರೋಪ ಮಾಡಿ ದೂರು ನೀಡಿದ್ದರು. ಈ ಆರೋಪ ಚರ್ಚೆಯಲ್ಲಿದ್ದು, ಇದೀಗ ಈ ಕುರಿತು ಕಿಚ್ಚ ಸುದೀಪ್‌ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:

ಎಲ್ಲರಿಗೂ ನಮಸ್ಕಾರ, ಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದೆ. ಅಂತಹ ಮಹಾನ್ ಸಾಧಕರೆದುರು ನಾನು ತುಂಬಾ ಕಿರಿಯವ, ಈ ಕಳೆದ 27 ವರ್ಷಗಳಲ್ಲಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕ, ಇತ್ಯಾದಿ ಇತ್ಯಾದಿ ಆಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ 27 ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆಯ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ ಸ್ಪಂದಿಸಬೇಕಾದುದು, ನಿಮ್ಮ ಕರ್ತವ್ಯ ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ವೀಕ್ಷಿಸುವುದು ಮಾತ್ರ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆ ಇಂದ ಮನವಿ ಮಾಡುತ್ತೇನೆ, ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ, ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.

Advertisement

ಅಲ್ಲದೆ, ಈಗಾಗಲೇ ಒಂದು ಪತ್ರದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ – ಎಂಎನ್‌ ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ. ಇದೆಲ್ಲವನ್ನೂ ತಮಗೆ ವಿವರಿಸಿದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ, ನನ್ನ ವಿರುದ್ಧ ಸುಳ್ಳು ನಿರಾಧಾರ ಆರೋಪಗಳ ಪತ್ರಿಕಾಗೋಷ್ಠಿ, ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿ ಕೊಂಡಿತು. ಸಂಧಾನವೆಂದರೇನು? ಆ ನಿರ್ಮಾಪಕರು, ಅವರೆಲ್ಲಾ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು, ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ದವಾಗುವುದು.

27 ವರ್ಷಗಳ ಕಾಲ ನಾನು ಎಂದಾದರೂ ಒಂದು ಒಂದು ಕಪ್ಪು ಚುಕ್ಕೆ  ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ 45 ಸಿನೆಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈ ವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟತನಕಲ್ಲ.

ಯಾಕೆ ನಿಮ್ಮ ಬಳಿ ಆಗ ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ. ನಾನವರಿಗೆ ಋಣಿ ಆಗಿದ್ದೇನೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆ ಇಂದಲೇ, ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾನೇ ಪಾಠ ಕಲಿತ್ತಿದ್ದೇನೆ.

ಈಗಲೂ, ಈ ವಿಷಯದಲ್ಲಿ ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದು ಚಿತ್ರರಂಗದ ಮುಂದಿನ ಭವಿತವ್ಯಕ, ಕೆಟ್ಟ ಉದಾಹರಣೆಗಳು ದಕ್ಕ ಬಾರದು ಎಂದು ಸಂಪೂರ್ಣ ಸಂಭಾವನೆ ಪಡೆದು ಸಿನಿಮಾ ಮಾಡಲಿಲ್ಲವೆಂಬ ದುಷ್ಟ, ಸುಳ್ಳು, ಉದಾಹರಣೆಗೆ ನಾನು ಸಿಲುಕಬಾರದು. ಈ ಕಾರಣಕ್ಕೆ, ಬೇರೆಲ್ಲದ ವಿಷಯದಲ್ಲಿ ಅತ್ಯಂತ ಮಾನವೀಯವಾಗಿ, ಪ್ರೀತಿಯಿಂದ ವರ್ತಿಸುವ ನಾನು ಕಠಿಣವಾಗಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ನಿಲುವಿಗೆ ಬದ್ದನಾಗಿದ್ದೇನೆ.

ಒಂದು ಮಾತು ನಿಮ್ಮ ಪತ್ರಿಕಾ ಸೋಷಿಯಲ್ಲಿ ಹೊರಬಂತು. ಅದು ನನಗೆ ತೀವ್ರ ನೋವು, ದುಃಖ ಉಂಟು ಮಾಡಿತು. ಶ್ರೀಯುತ ಸುರೇಶ್ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವಷ್ಟು ಸಲಿಗೆ ಉಳ್ಳವರು ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕಂಬ ಸೀಮಿತವಾದ ಕಾರಣಕ್ಕೆ, ಕುಮಾರ್‌ ಅವರು ಮೂರ್ ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು, ನನಗಲ್ಲ ಇಡೀ ಸಮಾಜಕ್ಕೆ ಕೊಟ್ಟ ಅಪಾಯಕಾರಿ ಸಂದೇಶ ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿ ಈ ಕೆಟ್ಟ ಬೆಳವಣಿಗೆ ಆರಂಭವಾಯಿತು?

ದೈಹಿಕವಾಗಿ, ಮಾನಸಿಕವಾಗಿ ಕುಮಾರ್ ಗಾಗಲಿ ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕ ನನಗೆ ತೀವ್ರ ನೋವು ತಂದಿದೆ. ನಾನು ಬದುಕಿನುದ್ದಕ್ಕೂ ‌ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞೆ, ಆಗಲಾರೆ ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ ಸುರೇಶ್‌ ಅವರನ್ನು ಭಾಗಿ ಮಾಡಿದೆ. ಅವರಿಗೂ ನೋಟೀಸ್‌ ಕಳುಹಿಸಿದೆ ವಿನಃ ಯಾವ ಕೋಪ ತಾಪ ಆಕ್ರೋಶದಿಂದಲ್ಲ ಎಂದಿದ್ದಾರೆ.

ಯಾರನ್ನೇ ಆಗಲಿ ಜೀವನ ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರೆತು ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ.

ಎಲ್ಲ ನಿರ್ಮಾಪಕರ ಬಗ್ಗೆ, ಗೌರವವಿಲ್ಲದ, ನಂಬಿಕೆ ಇಲ್ಲದೆ, ಇಷ್ಟರವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನಂಗೂ ಕಣ್ಣೀರಿದೆ. ದುಃಖ ದುಮ್ಮಾನಗಳಿವೆ. ನಮ್ಮಲಿ ಯಾರಿಗೇ ತೊಂದರೆಯಾದರೂ, ಮಂಡಳಿಯೇ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೊಣೆಗಾರ ಎನ್ನಲಾದೀತ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ?

ಇನ್ನು, ರಾಜರಾಜೇಶ್ವರಿ ನಗರದ ಮನೆಯ ವಿಷಯದಲ್ಲಿ ಒಂದು ಸ್ಪಷ್ಟನೆ ತಮಗೆ ವಯಕ್ತಿಕವಾಗಿ ನೀಡುತ್ತೇನೆ ನಾನು ತುಂಬಾ ಆಸ್ತಿವಂತ ಅಲ್ಲದೆ ಇರಬಹುದು. ಆದರೆ ಸಂಪಾದಿಸಿದ ಆಸ್ತಿಯಲ್ಲಿ ನನ್ನ ಬೆವರಿದೆ, ಶ್ರಮವಿದೆ. 95% ಅಷ್ಟು ಬ್ಯಾಂಕ್ ಲೋನ್ ಪಡೆದು ಆ ಮನೆ ಖರೀದಿಸಿದ್ದೇನೆ. ಈ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ ಎಂಬ ನೈತಿಕ ಶಕ್ತಿಯ ಮೇರೆಗೆ, ಈ ಕಠಿಣ ನಿಲುವು ಹೊಂದಿದ್ದೇನೆ.

ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ. ಯಾರೇ ನಿಮ್ಮಲ್ಲಿ ದೂರಿಟ್ಟರೂ, ಯಾವುದೇ ಕಲಾವಿದರಿರ ಬಹುದು, ತಂತ್ರಜ್ಞಗಿರ ಬಹುದು, ಯಾವುದೇ ವಿಭಾಗದವರಾಗಿರ ಬಹುದು, ಆ ದೂರಿನ ಕುರಿತಾದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮುಂದುವರೆಯಿರಿ ಮತ್ತು ಈ ಕೆಟ್ಟ, ಪರಂಪರೆಗೆ ನಾಂದಿ ಹೇಳುವುದಕ್ಕೆ, ನಾವು ಯಾರು ಹೊಣೆಗಾರರಾಗುವುದು ಬೇಡ.

ದಯಮಾಡಿ ತಾವು ಸಂದಿಗೆ ತೆಗೆ ಒಳಗಾಗದೆ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದ್ದೇನೆ. ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೊಡಿ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಾನೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next