Advertisement

Kaup ಪೇಟೆ ಕೊಳಚೆಗೆ ಕೃಷಿ ಭೂಮಿಗಳೇ ಬಲಿ!; 80ಕ್ಕೂ ಅಧಿಕ ಮನೆಗಳಿಗೆ ನಿತ್ಯ ಯಾತನೆ

12:56 PM Oct 25, 2024 | Team Udayavani |

ಕಾಪು: ಕಾಪು ಪೇಟೆ ಮತ್ತು ಹೆದ್ದಾರಿಯ ಇಕ್ಕೆಲಗಳಲ್ಲಿನ ಬಹುತೇಕ ವಾಣಿಜ್ಯ ಸಂಕೀರ್ಣ, ವಸತಿ ಸಮುತ್ಛಯ ಹಾಗೂ ಹೊಟೇಲುಗಳಿಂದ ನಿರಂತರವಾಗಿ ಹರಿದು ಬರುತ್ತಿರುವ ತ್ಯಾಜ್ಯ ಮತ್ತು ಕೊಳಚೆ ನೀರು ಹೋಗಿ ಸೇರುತ್ತಿರುವುದು ಪೇಟೆಗಿಂತ ಅನತಿ ದೂರದಲ್ಲಿರುವ ಬೀಡು ಬದಿಗೆ ಮತ್ತು ಇತರ ಕೆಲವು ಪ್ರದೇಶಗಳಿಗೆ. ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ಅದು ಬೀಡುಬದಿ ಪ್ರದೇಶದ 50ಕ್ಕೂ ಅಧಿಕ ಎಕರೆ ಪ್ರದೇಶದ ಸಮೃದ್ಧ ಕೃಷಿ ಭೂಮಿಯನ್ನು ಬಂಜರಾಗಿಸಿದೆ. ಜತೆಗೆ ಬೀಡು ಬದಿಯ ನಿವಾಸಿಗಳು ದಿನನಿತ್ಯ ಪಡಬಾರದ ಕಷ್ಟವನ್ನು ಎದುರಿಸುವಂತಾಗಿದೆ.

Advertisement

ಕಾಪು ಪುರಸಭೆ ವ್ಯಾಪ್ತಿಯ ಕಾಪು, ಉಳಿಯಾರಗೋಳಿ, ಮಲ್ಲಾರು ಕಂದಾಯ ಗ್ರಾಮಗಳಲ್ಲಿನ ಕೊಳಚೆ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಹಲವು ದಶಕಗಳಿಂದಲೂ ಈ ಸಮಸ್ಯೆ ಜೀವಂತವಾಗಿಯೇ ಇದೆ. ಮಾಜಿ ಸಚಿವರಾದ ವಸಂತ ವಿ. ಸಾಲ್ಯಾನ್‌, ವಿನಯ್‌ ಕುಮಾರ್‌ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರಿಂದ ಹಿಡಿದು ಹಾಲಿ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರವರೆಗೂ ಇಲ್ಲಿನ ಸಮಸ್ಯೆ ಕಾಡುತ್ತಿದೆ. ಜನ ತಮ್ಮ ಅಹವಾಲು ಮಂಡಿಸುತ್ತಿದ್ದಾರೆ. ಆದರೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.

ಕಾಪು ಪುರಸಭೆ ವ್ಯಾಪ್ತಿಯ ಬೀಡುಬದಿ ವಾರ್ಡ್‌, ಕಾಪು ಪೇಟೆ ವಾರ್ಡ್‌, ಭಾರತ್‌ ನಗರ ವಾರ್ಡ್‌, ಕಲ್ಯ ವಾರ್ಡ್‌, ತೃಪ್ತಿ ಹೊಟೇಲ್‌ ಹಿಂಭಾಗ, ಜನಾರ್ದನ ದೇವಸ್ಥಾನ ಬಳಿ, ವಿದ್ಯಾನಿಕೇತನ ಶಾಲೆ ಬಳಿ, ಕೊಪ್ಪಲಂಗಡಿ, ಮಲ್ಲಾರು, ಮೂಳೂರು ಪರಿಸರದಲ್ಲಿ ಕೊಳಚೆ ನೀರಿನ ಸಮಸ್ಯೆಯಿದೆ. ಎಲ್ಲೆಡೆಯಿಂದ ಹರಿದು ಬರುವ ಕೊಳಚೆ ನೀರಿನ ಗಬ್ಬು ವಾಸನೆ ಜನರ ಬದುಕನ್ನು ಹೈರಾಣಾಗಿಸಿದೆ.

ಕೃಷಿ ಭೂಮಿಯಲ್ಲಿ ತ್ಯಾಜ್ಯ ಸಂಗ್ರಹ
ಕಾಪು ಗರಡಿ ರಸ್ತೆ ಪಕ್ಕದ ಧೂಮಾವತಿ ದೈವಸ್ಥಾನದಿಂದ ಪೊಲಿಪು ರಸ್ತೆ ಪಕ್ಕದ ಅನ್ನಪೂಣೇಶ್ವರಿ ದೇವಸ್ಥಾನದವರೆಗಿನ ಕಾಪು ಬೀಡುಬದಿ ಸುಮಾರು 150 ಎಕರೆ ಭೂಪ್ರದೇಶವಿದೆ. ಇವೆಲ್ಲಾ ಬಹುತೇಕ ಕೃಷಿ ಭೂಮಿಗಳು. ಇಲ್ಲಿ ಸುಮಾರು 70-80 ಮನೆಗಳಿವೆ. ಆದರೆ ಇಲ್ಲಿ ವಾಸಿಸುತ್ತಿರುವ ನಿವಾಸಿಗಳು ಮಾತ್ರ ನೆಮ್ಮದಿಯಿಲ್ಲದೇ ದಿನ ಕಳೆಯುತ್ತಿದ್ದಾರೆ. ಬೀಡು ಬದಿಗೆ ಹರಿದು ಬಂದ ನೀರು ಇಲ್ಲಿನ ಕೃಷಿ ಗದ್ದೆ ಮತ್ತು ಕೊಳದಲ್ಲಿ ಸಂಗ್ರಹವಾಗುತ್ತಿದ್ದು ಇದರಿಂದಾಗಿ 50 ಎಕರೆಯಷ್ಟು ಕೃಷಿ ಭೂಮಿ ಕೃಷಿ ಕೆಲಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಹಡಿಲು ಬಿದ್ದಿದೆ.

Advertisement

ಬಾವಿಗಳ ನೀರು ಕೂಡ ಕಲುಷಿತ
ಬೀಡು ಬದಿಯ ಬಹುತೇಕ ನಿವಾಸಿಗಳು ತೆರೆದ ಬಾವಿಯ ನೀರನ್ನೇ ಬಳಸುತ್ತಿದ್ದು ತೆರೆದ ಬಾವಿಯ ನೀರು ಕೂಡ ಸಂಪೂರ್ಣ ಕಲುಷಿತಗೊಂಡಿದೆ. ಹಲವು ಬಾವಿಗಳ ನೀರು ಕಲುಷಿತಗೊಂಡಿದ್ದು ಇಲ್ಲಿನ ನೀರು ಕುಡಿಯಲು ಯೋಗ್ಯವಲ್ಲದ ನೀರು ಎನ್ನುವುದನ್ನು ಇಲಾಖಾ ಪರಿಶೀಲನೆಯೇ ತಿಳಿಸಿದೆ. ಕಾಪು ಪೇಟೆ ಮತ್ತು ಕೆಲವು ಪ್ರದೇಶಗಳಲ್ಲಿ ಸಂಜೆಯ ಬಳಿಕ ಮೂಗು ಮುಚ್ಚಿಕೊಂಡೇ ಅಡ್ಡಾಡಬೇಕಾಗಿದೆ. ಯಾಕೆಂದರೆ ಸಂಜೆಯ ಹೊತ್ತು ಅಂಗಡಿ, ವಾಣಿಜ್ಯ ಸಂಕೀರ್ಣ, ವಸತಿ ಸಮುತ್ಛಯಗಳು, ಹೋಟೆಲ್‌ಗ‌ಳ ತ್ಯಾಜ್ಯಗಳನ್ನು ತೋಡಿಗೆ ಬಿಡಲಾಗುತ್ತದೆ. ಆಗ ಅಂಗಡಿ ವ್ಯಾಪಾರಿಗಳು ಕೂಡ ಸಂಕಷ್ಟ ಅನುಭವಿಸುತ್ತಾರೆ.

ಜನರ ಮನವಿಗೆ ಬೆಲೆಯೇ ಇಲ್ಲ
ಈ ಭಾಗದ ಜನರು ತಮ್ಮನ್ನು ಕಾಡುತ್ತಿರುವ ತಾಜ್ಯ, ಕೊಳಚೆ ಮತ್ತು ಮಲಿನ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕಾಪು, ಉಳಿಯಾರಗೋಳಿ, ಮಲ್ಲಾರು ಗ್ರಾಮ ಪಂಚಾಯತ್‌ಗಳಿಗೆ ಮನವಿ ನೀಡುತ್ತಾ ನೀಡುತ್ತಾ ಸೋತು ಹೋಗಿದ್ದಾರೆ. ಪುರಸಭೆಯಾದ ಬಳಿಕವೂ ಜನರು ನೀಡುತ್ತಾ ಬಂದಿರುವ ಮನವಿಯ ಸಂಖ್ಯೆಗಳಿಗೆ ಕೊರತೆಯಿಲ್ಲ. ಆದರೂ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುತ್ತಾರೆ ಬ್ರಹ್ಮಾನಂದ ಭಟ್‌ ಮತ್ತು ಪರಮಾನಂದ ಭಟ್‌ ಸಹೋದರರು.

ಕಾಡುತ್ತಿವೆ ಹಲವು ಕಾಯಿಲೆಗಳು
ಕೊಳಚೆ ನೀರಿನ ಘಾಟಿಗೆ ಅಸ್ತಮಾದಂತಹ ಖಾಯಿಲೆಗಳು ಜನರನ್ನು ಕಾಡುತ್ತಿವೆ. ಮಲೇರಿಯಾ, ಫೆ„ಲೇರಿಯಾ ಮತ್ತು ಹಳದಿ ಜ್ವರ, ಮೈ ತುರಿಕೆ ಹೀಗೆ ನೀರಿಗೆ ಸಂಬಂಧಿಸಿದ ಮತ್ತು ಸೊಳ್ಳೆಯಿಂದ ಹರಡುವ ರೋಗಗಳು ಜನರನ್ನು ಕಾಡುತ್ತಿವೆ. ಮಳೆ ನೀರು ಹರಿದು ಬರುವ ಚರಂಡಿಯಲ್ಲಿ ದುರ್ನಾತದೊಂದಿಗೆ ಹರಿದು ಬರುವ ಮಲಿನ ನೀರಿನ ಜತೆಗೆ ಮಲಿನ ವಸ್ತುಗಳು, ತ್ಯಾಜ್ಯ ವಸ್ತುಗಳು ಕೂಡಾ ಸೇರಿ ಕಾಪುವಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಉಂಟು ಮಾಡುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next