Advertisement

Kaup ಕೊಳಚೆ ಮುಕ್ತಿಗೆ ಸರ್ವರ ಸಹಕಾರ

04:09 PM Oct 28, 2024 | Team Udayavani |

ಕಾಪು: ನವ ತಾಲೂಕು ಕಾಪು ಪಟ್ಟಣದಲ್ಲಿ ಕೊಳಚೆ ವಿಲೇವಾರಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಎಸ್‌.ಟಿ.ಪಿ. ಮತ್ತು ಯುಜಿಡಿ ವ್ಯವಸ್ಥೆಯನ್ನು ಶೀಘ್ರ ಜೋಡಿಸುವ ಅಗತ್ಯವಿದೆ.

Advertisement

ಪುರಸಭೆ ಈಗಾಗಲೇ ನಾಲ್ಕು ಜಾಗಗಳನ್ನು ಗುರುತಿಸಿದ್ದರೂ, ಸ್ಥಳೀಯರ ವಿರೋಧ ಸಹಿತವಾಗಿ ನಾನಾ ಕಾರಣಗಳಿಂದಾಗಿ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಪ್ರತಿ ಬಾರಿ ಒಂದು ಜಾಗ ಪರಿಶೀಲನೆ ನಡೆಸಿ ನಿರ್ಣಾಯಕ ಹಂತಕ್ಕೆ ಬಂದು ಎಸ್‌.ಟಿ.ಪಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಸಾರ್ವಜನಿಕರಿಂದ ವಿರೋಧ ಬರುತ್ತದೆ. ಅದು ಅಲ್ಲಿಗೆ ಕೊನೆಯಾಗುತ್ತದೆ. ಹೀಗೆಯೇ ಸಾಗಿದರೆ ಮತ್ತೆಲ್ಲಿ ನಿರ್ಮಾಣ ಮಾಡುವುದು? ಎಂಬ ಗೊಂದಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಮೂಡುತ್ತಿದೆ.

ಈಗಿನ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಜನರಿಗೆ ತೊಂದರೆಯಾಗದಂತೆ, ದುರ್ವಾಸನೆ ಬೀರದಂತೆ ಎಸ್‌.ಟಿ.ಪಿ ಮತ್ತು ಯುಜಿಡಿ ನಿರ್ಮಾಣ ಸಾಧ್ಯವಿದೆ. ಇದನ್ನು ಅರಿತುಕೊಂಡು ಎಸ್‌.ಟಿ.ಪಿ ನಿರ್ಮಾಣಕ್ಕೆ ಜನರು ಅನುವು ಮಾಡಿಕೊಡಬೇಕು.

ಕಾಪು ಅಭಿವೃದ್ಧಿ ಆಗಬೇಕೆಂದರೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲೇಬೇಕಿದೆ. ಈ ಕುರಿತು ಶಾಸಕರು, ಜನಪ್ರತಿನಿಧಿಗಳು, ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ಜತೆಗೆ ಜಿಲ್ಲಾಡಳಿತ, ತಾಲೂಕು ಆಡಳಿತವೂ ಗಮನ ಹರಿಸುವ ಮತ್ತು ಸಹಕರಿಸುವ ಅಗತ್ಯತೆಯಿದೆ.

Advertisement

ಸಭೆ ನಡೆಸಿ, ಸಮಸ್ಯೆ ಪರಿಹಾರ
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಅತೀ ಶೀಘ್ರವಾಗಿ ಜೋಡಣೆಯಾಗಬೇಕಿದೆ. ಎಸ್‌.ಟಿ.ಪಿ. ಘಟಕ ಮತ್ತು ಯುಜಿಡಿ ಇಲ್ಲದೇ ಕಾಪುವಿನ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡ ಸರಣಿ ಎಲ್ಲರ ಗಮನ ಸೆಳೆದಿದೆ. ನಮಗೂ ಏನು ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದೆ. ಕೊಳಚೆ ನೀರು ಶುದ್ಧೀಕರಣ ಘಟಕದ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಪುರಸಭೆ ಗೊತ್ತು ಪಡಿಸಬೇಕಿದೆ. ಈ ಕುರಿತಾಗಿ ಪುರಸಭೆ ಅಧ್ಯಕ್ಷ / ಉಪಾಧ್ಯಕ್ಷರು, ಸದಸ್ಯರು ಮತ್ತು ಮುಖ್ಯಾಧಿಕಾರಿಯನ್ನು ಸೇರಿಸಿಕೊಂಡು ವಿಶೇಷ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೆ ಸಾರ್ವಜನಿರ ಸಹಭಾಗಿತ್ವದ ಅಗತ್ಯವಿದ್ದು ಪುರಸಭೆಯ ಯೋಜನೆ ಬಗ್ಗೆ ಕಾಪು ಪಟ್ಟಣದ ಜನರೊಂದಿಗೂ ಸಮಾಲೋಚಿಸಲಾಗುವುದು.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಶೀಘ್ರವಾಗಿ ಎಸ್‌.ಟಿ.ಪಿ. ಅಗತ್ಯ
ನವ ತಾಲೂಕು ಕಾಪು ಪಟ್ಟಣದಲ್ಲಿ ಕೊಳಚೆ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಆಗಬೇಕಿದೆ. ಅದಕ್ಕಾಗಿ ಶೀಘ್ರವಾಗಿ ಎಸ್‌. ಟಿ.ಪಿ. ಆಗಬೇಕಾದ ಆವಶ್ಯಕತೆಯಿದೆ. ಕೊಳಚೆ ನೀರು ಶುದ್ದೀಕರಣ ಘಟಕ ನಿರ್ಮಾಣಕ್ಕೆ ಈಗಾಗಲೇ ಸೂಕ್ತ ಸ್ಥಳದ ಹುಡುಕಾಟ ಆರಂಭವಾಗಿದೆ. ಪುರಸಭೆಯಿಂದ ಈ ಹಿಂದೆಯೇ ಸೂಕ್ತ ಸರಕಾರಿ ಜಾಗವನ್ನು ಒದಗಿಸುವಂತೆ ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ. ಆಕ್ಷೇಪರಹಿತ, ಸರಕಾರಿ ಸ್ಥಳದ ಬಗ್ಗೆ ಪುರಸಭೆಯಿಂದ ಬೇಡಿಕೆ ಬಂದರೆ ಖಂಡಿತ ಅಂತಹ ಸ್ಥಳವನ್ನು ನೀಡಲು ನಮ್ಮ ಅಭ್ಯಂತರವೇನಿಲ್ಲ. ಹಿಂದಿನ ತಹಶಿಲ್ದಾರ್‌ಗಳು ಕೂಡಾ ಕೆಲವು ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರಾದರೂ ನಿರ್ಣಾಯಕ ಹಂತ ತಲುಪಲಿಲ್ಲ. ಪುರಸಭೆ ಅಧಿಕಾರಿಗಳು ಆಕ್ಷೇಪರಹಿತ ಸೂಕ್ತ ಸ್ಥಳ ಗುರುತಿಸಿ ಬೇಡಿಕೆ ನೀಡಿದಲ್ಲಿ , ಪರಿಶೀಲನೆ ಮಾಡಿ ಭೂಮಿ ಮಂಜೂರು ಮಾಡಲು ಕ್ರಮವಹಿಸಲಾಗುವುದು. ಈ ಕುರಿತು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ. ಜಿಲ್ಲಾಧಿಕಾರಿಯವರು ಶೀಘ್ರವಾಗಿ ಎಸ್‌.ಟಿ.ಪಿ ನಿರ್ಮಾಣಕ್ಕೆ ಸೂಕ್ತ ನಿರ್ದೇಶನ ನೀಡಿದ್ದಾರೆ.
-ಡಾ| ಪ್ರತಿಭಾ ಆರ್‌., ತಹಶೀಲ್ದಾರ್‌, ಕಾಪು.

ಅಭಿವೃದ್ಧಿ ಸಮಿತಿ ಸಹಕಾರ
ಕಾಪು ಪೇಟೆಗೆ ಶೀಘ್ರ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಲಿ ಎಂಬ ಅಭಿಲಾಷೆ ನಮ್ಮದು. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಸಮಿತಿಯೂ ಸಹಕಾರ, ಮಾರ್ಗದರ್ಶನ ನೀಡಲಿದೆ. ಕೊಳಚೆ ನೀರನ್ನು ಶುದ್ಧೀಕರಿಸಿದರೆ ಅದನ್ನು ಹೆದ್ದಾರಿಯ ಡಿವೈಡರ್‌ವೆುàಲಿರುವ ಗಿಡಗಳಿಗೆ, ಅಥವಾ ಕೈಗಾರಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಸೂಕ್ತ ರೀತಿಯ ನಿರ್ಧಾರವನ್ನು ತೆಗೆದುಕೊಂಡು, ಸೂಕ್ತವೆನಿಸುವ ಜಾಗವನ್ನು ಗುರುತಿಸಬೇಕಿದೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಸಮಿತಿಯೂ ಸಹಕಾರ ನೀಡಲಿದೆ.
-ದೇವಿಪ್ರಸಾದ್‌ ಶೆಟ್ಟಿ ಬೆಳಪು, ಅಧ್ಯಕ್ಷರು, ಕಾಪು ಅಭಿವೃದ್ಧಿ ಸಮಿತಿ

ಚ‌ರ್ಚಿಸಿ ನಿರ್ಧಾರ
ಸೂಕ್ತ ಜಾಗ ಹುಡುಕಿ ಎಸ್‌.ಟಿ.ಪಿ. ಪ್ಲಾಂಟ್‌ ಮಾಡಲಾಗುವುದು. ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅನುದಾನದ ಲಭ್ಯತೆ ನೋಡಿಕೊಂಡು, ಜನಾಭಿಪ್ರಾಯ ಸಂಗ್ರಹಿಸಿ ಕೊಂಡು ಎಸ್‌.ಟಿ.ಪಿ. ಮತ್ತು ಯುಜಿಡಿ ಕಾಮಗಾರಿ ನಡೆಸಬೇಕಿದೆ. ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
-ಹರಿಣಾಕ್ಷಿ ದೇವಾಡಿಗ, ಅಧ್ಯಕ್ಷರು, ಕಾಪು ಪುರಸಭೆೆ

ಭೂಮಿ ಕೊರತೆ-ವಿಳಂಬ
ಕಾಪು ಪೇಟೆಯನ್ನು ಅವಲಂಬಿಸಿ ಒಳಚರಂಡಿ ಮಾಡಿದರೆ ಅತ್ಯುತ್ತಮವಾಗಲಿದೆ. ಆದರೆ ಸರಕಾರಿ ಭೂಮಿಯ ಕೊರತೆಯಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಒಳಚರಂಡಿ ಯೋಜನೆಗೆ ಅನುದಾನದ ಕೊರತೆಯಿಲ್ಲ. ಖಾಸಗಿಯವರು ಜಾಗ ನೀಡಲು ಮುಂದಾದಲ್ಲಿ, ಸರಕಾರಿ ದರದಲ್ಲಿ ಖರೀದಿಸಿ ಯೋಜನೆ ಅನುಷ್ಠಾನಕ್ಕೆ ಪುರಸಭೆ ಮುಂದಾಗಲಿದೆ.
-ನಾಗರಾಜ್‌ ಸಿ., ಮುಖ್ಯಾಧಿಕಾರಿ, ಕಾಪು ಪುರಸಭೆ

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next