Advertisement

ಜಯದ ಭರವಸೆಯಲ್ಲಿ ರಾಜ್ಯ

01:15 AM Dec 30, 2018 | Team Udayavani |

ಆಲೂರು (ಬೆಂಗಳೂರು): ಆತಿಥೇಯ ಕರ್ನಾಟಕ ಪಾಲಿನ ಅತ್ಯಂತ ಮಹತ್ವದ ರಣಜಿ ಪಂದ್ಯ ಭಾನುವಾರದಿಂದ ಆರಂಭವಾಗಲಿದೆ. ಬೆಂಗಳೂರು ಹೊರವಲಯದಲ್ಲಿರುವ ಆಲೂರಿನಲ್ಲಿ ಕರ್ನಾಟಕ, ಪ್ರವಾಸಿ ಛತ್ತೀಸ್‌ಗಢವನ್ನು ಎದುರಿಸಲಿದೆ. ನಾಕೌಟ್‌ ಸುತ್ತಿಗೇರುವ ನಿಟ್ಟಿನಲ್ಲಿ ಎ ವಲಯದಲ್ಲಿರುವ ಕರ್ನಾಟಕಕ್ಕೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ.

Advertisement

ಸದ್ಯದ ಫಾರ್ಮ್ ನೋಡಿದರೆ ರಾಜ್ಯ ತಂಡ ಬಲಿಷ್ಠವಾಗಿದೆ. ಯುವಕರು ಹಾಗೂ ಅನುಭವಿಗಳ ಸಮ್ಮಿಶ್ರಣದೊಂದಿಗೆ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಖ್ಯಾತ ಅಂತಾರಾಷ್ಟ್ರೀಯ ಆಟಗಾರ ಮನೀಶ್‌ ಪಾಂಡೆ, ತಂಡದ ನೇತೃತ್ವ ವಹಿಸಿದ್ದಾರೆ. 

ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಉಪನಾಯಕರಾಗಿದ್ದಾರೆ. ಹಲವು ಕೂಟಗಳಲ್ಲಿ ರಾಜ್ಯವನ್ನು ಮುನ್ನಡೆಸಿ ಯಶಸ್ಸಿಗೆ ಕಾರಣವಾಗಿರುವ ವಿನಯ್‌ ಕುಮಾರ್‌ ತಂಡದ ಸದಸ್ಯರಾಗಿರಲಿದ್ದಾರೆ.

ಸದ್ಯ ಮನೀಶ್‌ ಪಾಂಡೆ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದ್ದರಿಂದ ರಾಜ್ಯ ತಂಡಕ್ಕೆ ಲಭ್ಯರಾಗಿದ್ದಾರೆ. ಬಹಳ ಹಿಂದೆಯೇ ಅವರನ್ನು ರಾಜ್ಯ ರಣಜಿ ತಂಡಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸತತವಾಗಿ ವಿದೇಶ ಪ್ರವಾಸದಲ್ಲಿದ್ದ ಕಾರಣಕ್ಕೆ ಅವರು ತಂಡದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ರೈಲ್ವೇಸ್‌ ಶಿವಮೊಗ್ಗದಲ್ಲಿ ನಡೆದ ಪಂದ್ಯದಲ್ಲೂ ಅವರು ತಂಡದ ಸಾರಥ್ಯ ವಹಿಸಿದ್ದರು. ಈ ಪಂದ್ಯದಲ್ಲೂ ರಾಜ್ಯಕ್ಕೆ ಕರುಣ್‌ ನಾಯರ್‌ ಸೇವೆ ಸಿಗುತ್ತಿಲ್ಲ.

ಸಂತುಲಿತ ಪಡೆ: ಮನೀಶ್‌ ಪಾಂಡೆ, ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌ ಇರುವುದರಿಂದ ತಂಡಕ್ಕೆ ಅನುಭವದ ಬಲವಿದೆ. ಈ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ತಂಡದ ನೆರವಿಗೆ ನಿಲ್ಲಬಲ್ಲರು. ತಮ್ಮ ವೈಯಕ್ತಿಕ ಸಾಮರ್ಥ್ಯದಿಂದಲೇ ರಾಜ್ಯವನ್ನು ಹಲವು ಬಾರಿ ವಿಜಯವೇದಿಕೆಯಲ್ಲಿ ಕೂರಿಸಿರುವ ಇವರ ಹಾಜರಾತಿ ತಂಡದ ಸಮತೋಲನಕ್ಕೆ ಕಾರಣವಾಗಿದೆ.

Advertisement

ತಂಡದ ನಿಜವಾದ ಶಕ್ತಿಯಿರುವುದು ಪ್ರತಿಭಾವಂತ ಯುವ ಆಟಗಾರರಲ್ಲಿ. ಡಿ.ನಿಶ್ಚಲ್‌, ಬಿ.ಆರ್‌.ಶರತ್‌, ಕೆ.ವಿ.ಸಿದ್ಧಾರ್ಥ್, ದೇವದತ್‌ ಪಡಿಕ್ಕಲ್‌, ಜಗದೀಶ್‌ ಸುಚಿತ್‌ ತಂಡದ ಭವಿಷ್ಯವನ್ನು ರೂಪಿಸಬಲ್ಲ ಆಟಗಾರರು. ಹಿಂದಿನ ಪಂದ್ಯಗಳಲ್ಲಿ ಡಿ.ನಿಶ್ಚಲ್‌, ಬಿ.ಆರ್‌.ಶರತ್‌, ಸಿದ್ಧಾರ್ಥ್, ಪಡಿಕ್ಕಲ್‌ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಅಗತ್ಯವಿದ್ದ ಸನ್ನಿವೇಶಗಳಲ್ಲಿ ಪ್ರಥಮದರ್ಜೆ ಪಂದ್ಯಕ್ಕೆ ಅಗತ್ಯವಿರುವ ತಾಳ್ಮೆಯನ್ನು ತೋರುವ ಮೂಲಕ ತಂಡವನ್ನು ಕಾಪಾಡಿದ್ದಾರೆ.

ಈ ಪ್ರತಿಭೆಗಳ ಆಟದಿಂದಲೇ ರಾಜ್ಯ ಒಂದೆರಡು ಬಾರಿ ಸೋಲು ತಪ್ಪಿಸಿಕೊಂಡಿದೆ. ಬೌಲಿಂಗ್‌ನಲ್ಲಿ ರಾಜ್ಯದ ಪಾಲಿನ ಆಸ್ತಿಯೆಂದರೆ ಜಗದೀಶ್‌ ಸುಚಿತ್‌. ಅವರು ತಮ್ಮ ಸ್ಪಿನ್‌ ದಾಳಿ ಮೂಲಕ ಇದುವರೆಗೆ ಮೋಡಿ ಮಾಡಿದ್ದಾರೆ. ಪಂದ್ಯ ಗೆಲ್ಲಲು, ಮೊದಲ ಇನಿಂಗ್ಸ್‌ ಮುನ್ನಡೆ ಹೊಂದಲು ಕಾರಣವಾಗಿದ್ದಾರೆ.

ಛತ್ತೀಸ್‌ಗಢ ಹೇಗಿದೆ?: ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಛತ್ತೀಸ್‌ಗಢ 2 ಬಾರಿ ಸೋತು, 4 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಮ್ಮೆಯೂ ಗೆಲ್ಲಲು ಸಾಧ್ಯವಾಗದೇ ಈಗಾಗಲೇ ಅದು ನಾಕೌಟ್‌ ಸುತ್ತಿನಿಂದ ಹೊರಬಿದ್ದಿದೆ. ಛತ್ತೀಸ್‌ಗಢ ಮಟ್ಟಿಗೆ ಸದ್ಯದ ಪಂದ್ಯವೂ ಸೇರಿ ಬಾಕಿ 2 ಪಂದ್ಯ ಕೇವಲ ಔಪಚಾರಿಕ ಮಹತ್ವ ಹೊಂದಿದೆ. ಕರ್ನಾಟಕ ಸ್ವಲ್ಪ ಪರಿಶ್ರಮ ಹಾಕಿದರೂ ಗೆಲುವು ಅಸಾಧ್ಯವೇನಲ್ಲ.

ಗೆದ್ದರೆ ಲೆಕ್ಕಾಚಾರಗಳಿಲ್ಲದೇ ರಾಜ್ಯ ನಾಕೌಟ್‌ಗೆ
ಇದುವರೆಗೆ 6 ಪಂದ್ಯವಾಡಿರುವ ರಾಜ್ಯ 2 ಜಯ, 1 ಸೋಲು, 3 ಡ್ರಾಗಳೊಂದಿಗೆ ಎ ವಲಯದಲ್ಲಿ 3ನೇ ಸ್ಥಾನದಲ್ಲಿದೆ. ಯಾವುದೇ ಲೆಕ್ಕಾಚಾರಗಳಿಗೆ ಆಸ್ಪದ ಕೊಡದೇ ಕ್ವಾರ್ಟರ್‌ಫೈನಲ್‌ಗೇರಬೇಕಾದರೆ, ಕರ್ನಾಟಕ ತಂಡ ಛತ್ತೀಸ್‌ಗಢ ವಿರುದ್ಧದ ಪಂದ್ಯವೂ ಬಾಕಿ 2 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ಈ ಎರಡೂ ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ರಾಜ್ಯ ಇಕ್ಕಟ್ಟಿಗೆ ಸಿಲುಕಿದೆ. ಒಂದು ವೇಳೆ ಡ್ರಾ ಮಾಡಿಕೊಂಡು, ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿದರೆ ಆಗಲೂ ಕರ್ನಾಟಕಕ್ಕೆ ಹೆಚ್ಚಿನ ಅವಕಾಶವಿದೆ. ಆದರೆ ಹಿನ್ನಡೆಯೊಂದಿಗೆ ಡ್ರಾ ಮಾಡಿಕೊಂಡರೆ ಕಷ್ಟ. ಗೆದ್ದರೆ ಈ ಯಾವುದೇ ತಾಪತ್ರಯಗಳಿಲ್ಲ.

ಈ ಸ್ಥಿತಿ ಎದುರಾಗುವುದಕ್ಕೆ ಕಾರಣ ಈ ಬಾರಿ ಲೀಗ್‌ನಲ್ಲಿ ಆಡುವ ತಂಡಗಳ ಸಂಖ್ಯೆ 37ಕ್ಕೇರಿರುವುದು. ಹಾಗಾಗಿ ಎ, ಬಿ, ಸಿ ಎಂಬ ಮೂರು ಗುಂಪುಗಳನ್ನು ಮಾಡಲಾಗಿದ್ದು, ಇದಕ್ಕೆ ಎಲೈಟ್‌ ಎಂದು ಕರೆಯಲಾಗಿದೆ. ಪ್ಲೇಟ್‌ ಎಂಬ ಇನ್ನೊಂದು ಗುಂಪೂ ಇದೆ. ಇದರಲ್ಲಿ 9 ತಂಡಗಳು ಆಡಲಿವೆ. ಎ ಮತ್ತು ಬಿಯಿಂದ ಒಟ್ಟಾಗಿ ಅಗ್ರ 5 ತಂಡಗಳನ್ನು ಕ್ವಾರ್ಟರ್‌ಫೈನಲ್‌ಗೆ ಆಯ್ಕೆ ಮಾಡಲಾಗುತ್ತದೆ. ಸಿಯಿಂದ ಎರಡು, ಪ್ಲೇಟ್‌ನಿಂದ ಒಂದು ತಂಡವನ್ನು ನಾಕೌಟ್‌ಗೆàರಿಸಲಾಗುತ್ತದೆ. ಎ ಗುಂಪಿನಲ್ಲಿರುವ ರಾಜ್ಯ, ಕ್ವಾರ್ಟರ್‌ ಫೈನಲ್‌ ಸ್ಥಾನಕ್ಕೋಸ್ಕರ ಏಕಕಾಲದಲ್ಲಿ 18 ತಂಡಗಳೊಂದಿಗೆ ಸ್ಪರ್ಧಿಸಬೇಕು. ಹಿಂದಿನ ವರ್ಷ 9 ತಂಡಗಳೊಂದಿಗೆ ಸ್ಪರ್ಧಿಸಿದ್ದರೆ ಸಾಕಿತ್ತು!

ಕರ್ನಾಟಕ ತಂಡ
ಮನೀಶ್‌ ಪಾಂಡೆ (ನಾಯಕ),ಶ್ರೇಯಸ್‌ ಗೋಪಾಲ್‌ (ಉಪನಾಯಕ),ವಿನಯ್‌ ಕುಮಾರ್‌,ಡಿ.ನಿಶ್ಚಲ್‌,ಕೆ.ವಿ.ಸಿದ್ಧಾರ್ಥ್,ಲಿಯಾನ್‌ ಖಾನ್‌,ದೇವದತ್‌ ಪಡಿಕ್ಕಲ್‌,ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್‌),ಜೆ.ಸುಚಿತ್‌,ಅಭಿಮನ್ಯು ಮಿಥುನ್‌,ರೋನಿತ್‌ ಮೋರೆ,ಪವನ್‌ ದೇಶಪಾಂಡೆ ,ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌),ಕೆ.ಗೌತಮ್‌,ಪ್ರಸಿದ್ಧ್ ಕೃಷ್ಣ.

ಛತ್ತೀಸ್‌ಗಢ ತಂಡ
ಅನುಜ್‌ ತಿವಾರಿ,ಅವ್ನಿಶ್‌ ಧಲಿವಲ್‌ ಅಭಿಮನ್ಯು ಚೌಹಾಣ್‌,ಹರ್ಪ್ರೀತ್‌ ಸಿಂಗ್‌,ಅಜಯ್‌ ಮಂಡಲ್‌,ಅಮನ್‌ದೀಪ್‌ ಖಾರೆ (ನಾಯಕ),
ಅಶುತೋಷ್‌ ಸಿಂಗ್‌,ಮನೋಜ್‌ ಸಿಂಗ್‌,ವಿಶಾಲ್‌ ಕುಶ್ವಾಹ್‌,ಪಂಕಜ್‌ ರಾವ್‌,ಒಂಕಾರ್‌ ವರ್ಮ.

Advertisement

Udayavani is now on Telegram. Click here to join our channel and stay updated with the latest news.

Next