Advertisement

Karnataka Assembly polls 2023: ಜೆಡಿಎಸ್‌ಗೆ ಟಕ್ಕರ್‌ ಕೊಡುತ್ತಾ ಬಿಜೆಪಿ

12:39 AM Apr 06, 2023 | Team Udayavani |

ಮೈಸೂರು: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅದು ಒಳ ಒಪ್ಪಂದ ಎಂಬುದು ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಈ ಬಾರಿ ಅಂತಹ ಒಳ ಒಪ್ಪಂದದ ಯಾವುದೇ ಸೂಚನೆಗಳು ಈವರೆಗೂ ಕಂಡು ಬರುತ್ತಿಲ್ಲ. ಹೀಗಾಗಿ ಆಡಳಿತಾರೂಢ ಬಿಜೆಪಿ ನಡೆ ಈಗ ಕುತೂಹಲಕಾರಿಯಾಗಿದೆ.

Advertisement

ಇದು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ವಿಚಾರದಲ್ಲಿ ಬಿಜೆಪಿಯ ನಡೆಯ ಕುರಿತಾದದ್ದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅನ್ನು ಎದುರಿಸಲು ಬಿಜೆಪಿಯು ಜೆಡಿಎಸ್‌ಗೆ ಸಾಥ್‌ ನೀಡಿತು. ಅಂದರೆ ಜೆಡಿಎಸ್‌ ಪ್ರಾಬಲ್ಯದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು. ಆಗ  ಕಾಂಗ್ರೆಸ್‌ ಮಣಿಸಬೇಕೆಂಬ ಕಾರಣದಿಂದ ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗವಾಗಿ ಕಾಂಗ್ರೆಸ್‌ ನೆಲಕಚ್ಚಿತು. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ ಕಾಂಗ್ರೆಸ್‌ಗೆ ವರವಾಗುವ ಕ್ಷೇತ್ರಗಳಲ್ಲಿ ಬಿಜೆಪಿಯ  ನೆರವಿನಲ್ಲಿ ಜೆಡಿಎಸ್‌ ಜಯ ಸಾಧಿಸಿತ್ತು.

ಆದರೆ ಈ ಬಾರಿ ಬಿಜೆಪಿಯಿಂದ ಅಂತಹ ನಡೆಯ ಸೂಚನೆಗಳು ಈವರೆಗೂ ಕಂಡು ಬಂದಿಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಪ್ರಯತ್ನಗಳು ನಡೆದಿದೆ. ಒಂದು ವೇಳೆ ಹೀಗಾದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಇದು ಹೊಡೆತ ಬೀಳಲಿದೆ. ಒಂದು ವರ್ಷದಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಟಾರ್ಗೆಟ್‌ 150 ಎಂದು ಸಾರಿದ ಬಿಜೆಪಿ ಮುಖಂಡರು ಇದನ್ನು ಸಾಧಿಸಲು ಹಳೇ ಮೈಸೂರು ಭಾಗದಲ್ಲಿ ಕಸರತ್ತು  ಆರಂಭಿಸಿದ್ದರು. ಪ್ರಾರಂಭದಲ್ಲಿ ಬಿಜೆಪಿಯ ತಂಡಗಳು ಹಳೇ ಮೈಸೂರು ಪ್ರದೇಶಗಳಿಗೆ ಭೇಟಿ ನೀಡಿ ಸಭೆ, ಸಮಾವೇಶಗಳನ್ನು ನಡೆಸಿತು. ಸ್ಥಳೀಯ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಅನಂತರದ ದಿನಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿಲ್ಲ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕತ್ವವನ್ನು ಬೆಳೆಸಲು ಪ್ರಯತ್ನಿಸಲಿಲ್ಲ.

ಬಿಜೆಪಿ ಮುಂದಿರುವ ಆಯ್ಕೆ ಈಗ ಎರಡು. ಒಂದು- ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಬೆನ್ನಿಗೆ ನಿಂತು ಕಾಂಗ್ರೆಸ್‌  ಅನ್ನು ಎದುರಿಸುವುದು. ತಾನು ಗೆಲ್ಲದಿದ್ದರೂ ಪರವಾಗಿಲ್ಲ, ಕಾಂಗ್ರೆಸ್‌ ಸೋಲಿಸಬೇಕೆಂಬ ಗುರಿ ಸಾಧಿಸಲು ಪ್ರಯತ್ನಿಸುವುದು. ಎರಡು-ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳನ್ನೇ ಕಣದಲ್ಲಿ ಹೂಡಿ ಜೆಡಿಎಸ್‌ಗೆ ವರ್ಗವಾಗುತ್ತಿದ್ದ ಮತಗಳನ್ನು ತನಗೇ ಹಾಕಿಸಿ ಕೊಳ್ಳುವುದು. ಈ ಆಯ್ಕೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಇದರಿಂದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸಿನ ಗೆಲುವಿನ ಹಾದಿ ಸುಗಮವಾಗಬಹುದು. ಬಿಜೆಪಿ ಗೆಲ್ಲದಿದ್ದರೂ ಸರಿಯೇ ಆದರೆ ಭವಿಷ್ಯದ ದೃಷ್ಟಿಯಿಂದ ವರ್ತಮಾನದಲ್ಲಿ  ಪಕ್ಷದ ಬೇರುಗಳನ್ನು ಗಟ್ಟಿ ಮಾಡಿಕೊಂಡು ಮುಂದೊಂದು ದಿನ ಗುರಿ ಸಾಧಿಸಬಹುದು ಎಂಬುದು ದೂರದೃಷ್ಟಿಯ ಚಿಂತನೆ.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮೈಸೂರಿನಲ್ಲಿ ಕಳೆದ ತಿಂಗಳು ನಡೆದ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು 1994ರಲ್ಲಿ ಅಂದಿನ ಜನತಾದಳವನ್ನು ಗೆಲ್ಲಿಸಿದಂತೆ ಈ ಬಾರಿ ಜೆಡಿಎಸ್‌ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಹಳೇ ಮೈಸೂರು ಪ್ರಾಂತದಲ್ಲಿ 57 ವಿಧಾನಸಭಾ ಕ್ಷೇತ್ರಗಳಿವೆ. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್‌ 27 ಸೀಟುಗಳನ್ನು ಗೆದ್ದುಕೊಂಡಿತ್ತು. ಆಗ ಜೆಡಿಎಸ್‌ಗೆ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಸಾಥ್‌ ನೀಡಿತ್ತು. ಕಾಂಗ್ರೆಸ್‌ 17, ಬಿಜೆಪಿ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

Advertisement

ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆಯನ್ನು ಜೆಡಿಎಸ್‌ ಎದುರು ನೋಡುತ್ತಿದೆ. ಜೆಡಿಎಸ್‌ ಪ್ರಾಬಲ್ಯದ ಈ ಜಿಲ್ಲೆಗಳಲ್ಲಿ ಕಾಂಗ್ರೆಸಿಗೆ ನೇರಾನೇರ ಹೋರಾಟ ಜೆಡಿಎಸ್‌ಗೆ ಬೇಕಿದೆ. ಇದಕ್ಕೆ ಬಿಜೆಪಿಯ ಸಾಥ್‌ ಜೆಡಿಎಸ್‌ಗೆ ಅಗತ್ಯವಿದೆ. ಕಳೆದ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಇಂತಹ ಸಾಥ್‌ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದಾಗಲೇ ಜೆಡಿಎಸ್‌ಗೆ ಸಿಕ್ಕಿತ್ತು.

ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಅರಕಲಗೂಡು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ ಹೀಗೆ ಕೆಲವು ಕ್ಷೇತ್ರಗಳಲ್ಲಿ ಒಂದು ಕಾಲದಲ್ಲಿ ಬಿಜೆಪಿ ಗೆದ್ದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ, ನಾಗಮಂಗಲ, ಮಂಡ್ಯ, ಮದ್ದೂರು, ಮೇಲುಕೋಟೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ತಿ.ನರಸೀಪುರ, ಹಾಸನ ಜಿಲ್ಲೆಯ ಕೆಲವು ಕ್ಷೇತ್ರಗಳು  ಹೀಗೆ ಅನೇಕ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿಗೆ ಬಲಿಷ್ಠ ಅಭ್ಯರ್ಥಿಗಳಿದ್ದಾರೆ. ಇನ್ನು ಕೆಲವು ಕ್ಷೇತ್ರಗಳಲ್ಲಿ  ಬಲಿಷ್ಠ ಅಭ್ಯರ್ಥಿ ಇಲ್ಲದಿದ್ದರೂ  ಸಾಂಪ್ರದಾಯಕ ಮತದಾರರಿದ್ದಾರೆ.

ಬಿಜೆಪಿಯ ಹಿರಿಯ ನಾಯಕರೊಬ್ಬರು ಈ ಕುರಿತು ಹೇಳುವುದು ಹೀಗೆ- ಹಳೇ ಮೈಸೂರು ಭಾಗದಲ್ಲಿ ಕೆಲವು ವರ್ಷಗಳಿಂದ ಜೆಡಿಎಸ್‌ ತನ್ನ ವೋಟುಗಳಲ್ಲದೇ, ಬಿಜೆಪಿಯ ವೋಟುಗಳನ್ನು ಪಡೆದು ಬದುಕಿದೆ. ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು  ಇಲ್ಲಿ ಕಣಕ್ಕೆ ಇಳಿಸಿದ್ದರೆ ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗವಾಗುವುದು ತಪ್ಪುತ್ತಿತ್ತು. ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಬೆಳೆಯಬೇಕಿದ್ದರೆ ಮೊದಲು ಜೆಡಿಎಸ್‌ ಮಣಿಸಬೇಕು. ಇಲ್ಲದಿದ್ದರೆ  ತಲೆ ಎತ್ತಲು ಸಾಧ್ಯವಿಲ್ಲ.

ಪ್ರಬಲ ಅಭ್ಯರ್ಥಿಗಳ ಇಳಿಸಲು ಕಸರತ್ತು
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಈ ಬಾರಿ ಪ್ರಬಲ ಅಭ್ಯರ್ಥಿಗಳನ್ನು ಹೂಡುವ ಗಂಭೀರ ಚಿಂತನೆ ನಡೆಸಿದೆ. ಚುನಾವಣೆಯಲ್ಲಿ ಹಿನ್ನಡೆಯಾದರೂ ಸರಿಯೇ ಒಕ್ಕಲಿಗ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ನೆಲೆಯೂರಲು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಹೂಡಿ ಅಖಾಡದಲ್ಲಿ ಖಡಾಖಡಿ ಹೋರಾಟ ನಡೆಸಬೇಕು  ಎಂಬುದು ಬಿಜೆಪಿ ತಂತ್ರವಾಗಿದೆ. ಇದು ಮುಂಬರುವ ವರ್ಷಗಳಲ್ಲಿ  ಪಕ್ಷ ಗ್ರಾಮೀಣ ಭಾಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳದಂತೆ ನೋಡಿಕೊಳ್ಳಬಹುದು ಎಂಬ ಚಿಂತನೆ ಬಿಜೆಪಿಯಲ್ಲಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಾಗಲೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next