Advertisement

ಕಕ್ಕೂರು ಸಾಮೂಹಿಕ ಕೊಲೆ, ನಾಪತ್ತೆ ಘಟನೆ 5 ವರ್ಷ: ಪ್ರಕರಣಕ್ಕೆ ತೆರೆ?

08:42 AM Jul 15, 2017 | |

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರಿನಲ್ಲಿ ಐದು ವರ್ಷದ ಹಿಂದೆ ಒಂದೇ ಮನೆಯ ನಾಲ್ವರ ಕೊಲೆ, ಮನೆ ಯಜಮಾನ ನಾಪತ್ತೆ ಪ್ರಕರಣಕ್ಕೆ ಸಂಭವಿಸಿ ಐದು ವರ್ಷ ಸಂದಿದೆ. ಆದರೆ ಘಟನೆಯ ಸತ್ಯಾಸತ್ಯತೆ ಈ ತನಕ ಬಹಿರಂಗಗೊಳ್ಳದಿರುವುದು ಸಾರ್ವಜನಿಕ ವಲಯದ ಅನುಮಾನಕ್ಕೆ ಕಾರಣವೆನಿಸಿದೆ !

Advertisement

ಪುತ್ತೂರು-ಪಾಣಾಜೆ ರಸ್ತೆಯ ರೆಂಜದಿಂದ ಒಂದುವರೆ ಕಿ.ಮೀ. ದೂರದ ಕಕ್ಕೂರಿನ ಕಾಡಿನ ಮಧ್ಯೆ ಇರುವ ಕಕ್ಕೂರು ವೆಂಕಟರಮಣ ಭಟ್‌ ಅವರ ಮನೆಯಲ್ಲಿ 2012 ಜೂ.12 ರಂದು ನಾಲ್ವರ ಕೊಲೆ ನಡೆದಿತ್ತು.

ಜ್ಯೋತಿಷರಾಗಿ, ನಾಟಿ ವೈದ್ಯರಾಗಿ ಗುರುತಿಸಿಕೊಂಡಿದ್ದ  ಕಕ್ಕೂರು ವೆಂಕರಮಣ ಭಟ್‌ ಅವರ ಪತ್ನಿ, ಶಿಕ್ಷಕಿ ಸಂಧ್ಯಾ, ಪುತ್ರ ಹರಿಗೋವಿಂದ, ಪುತ್ರಿಯರಾದ ವೇದ್ಯಾ, ವಿನುತಾ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವೆಂಕಟರಮಣ ಭಟ್‌ ನಾಪತ್ತೆಯಾಗಿದ್ದರು. ಕೊಲೆ ಪ್ರಕರಣ ನಡೆದು ಮೂರು ದಿವಸದ ಅನಂತರ ವಿದ್ಯುತ್‌ ರೀಡರ್‌ ಮನೆಗೆ ತೆರಳಿದ ಸಂದರ್ಭ ಬೆಳಕಿಗೆ ಬಂದಿತ್ತು.

ಯಜಮಾನ ನಾಪತ್ತೆ
ಘಟನೆಯಲ್ಲಿ ಮನೆ ಯಜಮಾನ ನಾಪತ್ತೆಯಾಗಿದದ್ದು ವಿವಿಧ ಅನುಮಾನಕ್ಕೆ ಎಡೆ ಮಾಡಿತ್ತು. ಅವರು ನಾಪತ್ತೆಯಾಗಿದಾರೋ ಅಥವಾ ಕೊಲೆಯಾಗಿದಾರೂ, ಅಥವಾ ಕೊಲೆ ಮಾಡಿ ಪರಾರಿಯಾಗಿದಾರೂ ಎನ್ನುವ ಬಗ್ಗೆ ಚರ್ಚೆಗೆ ಗ್ರಾಸವಾಗಿತ್ತು.

ಅಸ್ಥಿಪಂಜರ ಪತ್ತೆ
ಈ ಘಟನೆ ಇನ್ನೇನೂ ಹಳ್ಳಕ್ಕೆ ಬಿತ್ತು ಅನ್ನುವಷ್ಟರಲ್ಲಿ ಐದು ತಿಂಗಳ ಅನಂತರ 2012 ನ. 13ರಂದು ಕಕ್ಕೂರು ವೆಂಕಟರಮಣ ಭಟ್‌ ಅವರ ಮನೆ ಸಮೀಪದ ಕಕ್ಕೂರಿನ ದಟ್ಟ ಕಾಡಿನ ತುತ್ತತುದಿಯಲ್ಲಿನ ಮರವೊಂದರಲ್ಲಿ ಮಾನವ ಅಸ್ಥಿಪಂಜರವೊಂದು ನೇತಾಡುತ್ತಿರುವುದು ಕಂಡು ಬಂದಿತ್ತು. ಅದು ನಾಪತ್ತೆಯಾದ ವೆಂಕಟರಮಣ ಅವರದ್ದಾಗಿರಬಹುದು ಎಂಬ ಅನುಮಾನ ಮೂಡಿ, ಪ್ರಕರಣಕ್ಕೆ ಇನ್ನೊಂದು ತಿರುವು ಸಿಕ್ಕಿತ್ತು.

Advertisement

ಪ್ರಯೋಗಾಲಯಕ್ಕೆ ರವಾನೆ
ಕಾಡಿನಲ್ಲಿ ದೊರೆತ ಅಸ್ಥಿಪಂಜರ ವೆಂಕಟರಮಣ ಭಟ್‌ ಅವರದ್ದೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಎಲುಬುಗಳನ್ನು, ಸಹೋದರರ ರಕ್ತದ ಸ್ಯಾಂಪಲ್‌ ಅನ್ನು ಸಂಗ್ರಹಿಸಿ ಪುಣೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅಲ್ಲಿಂದ ವರದಿ ಬಂದ ಅನಂತರ ತನಿಖೆ ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದರು.

ಎರಡುವರೆ ವರ್ಷ ಅನಂತರ ಸಿಐಡಿಗೆ
ಕೊಲೆ ಘಟನೆ ಸಂಭವಿಸಿ ಎರಡು ವರ್ಷ ಎರಡು ತಿಂಗಳ ಅನಂತರ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ತಾ.ಪಂ. ಸಾಮಾನ್ಯ ಸಭೆ, ಕೆಡಿಪಿ ಸಭೆಗಳಲ್ಲಿ ಕಕ್ಕೂರು ಕೊಲೆ ಪ್ರಕರಣದ ಬಗ್ಗೆ ಚರ್ಚೆ ಆದಾಗಲೆಲ್ಲ ಪೊಲೀಸರು ಸಿಐಡಿ ವರದಿ ಬರಬೇಕಷ್ಟೆ ಎಂಬ ಉತ್ತರ ನೀಡಿದ್ದರು. ಸಿಐಡಿ ವರದಿ ಬಂದಿದೆಯೋ, ಬಂದಿದ್ದರೆ ಆ ವರದಿಯಲ್ಲಿ ಏನಿದೆ ಎನ್ನುವುದು ಶಾಸಕರಾದಿಯಾಗಿ ಯಾರ ಗಮನಕ್ಕೂ ಬಂದಿಲ್ಲ. ವಾರದ ಹಿಂದೆ ನಡೆದ ತ್ತೈಮಾಸಿಕ ಸಭೆಯಲ್ಲಿ ಶಾಸಕಿ ಪೊಲೀಸ್‌ ಇಲಾಖೆಯನ್ನು ಪ್ರಶ್ನಿಸಿದ್ದರು!

ದರೋಡೆಗೂ, ಸಾವಿಗೂ ನಂಟು!
ಸಾಮೂಹಿಕ ಕೊಲೆ ಪ್ರಕರಣ ಮೊದಲು 2012 ಜೂ.4 ಕ್ಕೆ ಇದೇ ಮನೆಯಲ್ಲಿ ದರೋಡೆ ಆಗಿತ್ತು. ಪತ್ನಿಯ ಏಳು ಪವನ್‌ ಚಿನ್ನ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೆಗೆದಿರಿಸಿದ್ದ 50 ಸಾವಿರ ರೂ. ನಗದು ದೋಚಿರುವ ಬಗ್ಗೆ ವೆಂಕಟರಮಣ ಭಟ್‌ ಅವರು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಅನಂತರ ಭಟ್‌ ಅವರನ್ನು ವಿಚಾರಣೆಗೆಂದೂ ಪೊಲೀಸರು ಅನೇಕ ಬಾರಿ ಕರೆಸಿಕೊಂಡಿದ್ದರು. ದರೋಡೆ ಪ್ರಕರಣದ ಆಗಿ ಒಂದು ವಾರದೊಳಗೆ ಸಾಮೂಹಿಕ ಕೊಲೆ, ವೆಂಕಟರಮಣ ಭಟ್‌ ನಾಪತ್ತೆ ಪ್ರಕರಣ ಸಂಭವಿಸಿತ್ತು.

ದರೋಡೆ ಕಟ್ಟುಕಥೆ ಆಗಿರಬಹುದು ಎಂಬ ಸುದ್ದಿ ಹಬ್ಬಿತ್ತು. ಮನೆ ಮಂದಿಯ ಕೊಲೆ ಅನಂತರ ಪೊಲೀಸರು ಈ ದರೋಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಇದೆ. ಆದರೆ ಸಂಶಯಕ್ಕೆ ಇಲಾಖೆಯಿಂದಲೇ ಉತ್ತರ ಸಿಕ್ಕಿತ್ತು. ಅದೆನೆಂದರೆ ಸಾಮೂಹಿಕ ಕೊಲೆ ಪ್ರಕರಣ ಅನಂತರ ಜಿಲ್ಲೆಯಲ್ಲಿ ಅಂತಾರಾಜ್ಯ ದರೋಡೆ ಪ್ರಕರಣದ ತಂಡದ ಬಂಧನ ಆಗಿತ್ತು. ಆ ವೇಳೆ ಕಕ್ಕೂರು ಮನೆಯಲ್ಲಿ ದರೋಡೆ ನಡೆಸಿದ್ದ ತಾವೇ ಅನ್ನುವುದನ್ನು ಒಪ್ಪಿಕೊಂಡಿದ್ದರು ಎನ್ನುವುದು ಪೊಲೀಸ್‌ ಇಲಾಖೆ ಮಾಹಿತಿ ನೀಡಿತ್ತು. ಹಾಗಾಗಿ ಈ ತಂಡವೇ ಕೊಲೆ ನಡೆಸಿದ್ದಿರಬಹುದೆ ಎಂಬ ದಿಕ್ಕಿನಲ್ಲೂ ತನಿಖೆ ನಡೆದು ಆ ತಂಡ ಕೊಲೆ ನಡೆಸಿಲ್ಲ ಎಂದು ಪೊಲೀಸ್‌ ಇಲಾಖೆಯೇ ಹೇಳಿತ್ತು.

ಉತ್ತರ ಸಿಗದ ಪ್ರಶ್ನೆಗಳು
ಘಟನೆ ನಡೆದು ಐದು ವರ್ಷ ಆದರೂ, ಕೊಲೆ ಮಾಡಿದವರು ಯಾರು? ಕಾಡಿನಲ್ಲಿ ದೊರೆತ ಅಸ್ಥಿ ಪಂಜರ ಯಾರದ್ದು ಎಂಬ ಮಾಹಿತಿ ಈ ತನಕ ಬಹಿರಂಗ ವಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಯಲ್ಲಿ ಏನಿದೆ? ಸಿಐಡಿ ವರದಿಯಲ್ಲಿ ಏನಿದೆ? ಈ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಸ್ಥಳೀಯರಲ್ಲೂ ಕುತೂಹಲವಿದೆ. ಕೊಲೆ ನಡೆದ ಅನಂತರ ಸಾವಿಗೆ ನಾಗಮಣಿ ದೋಷ ಕಾರಣ, ಕೇರಳದಲ್ಲಿ ಅಂಜನ ಜ್ಯೋತಿಷ್ಯ ಮೂಲಕ ಪ್ರಶ್ನೆ ಇಡುವುದಕ್ಕೂ ನಿರ್ಧರಿಸಲಾ ಗಿತ್ತು. ಹೀಗೆ ನಾನಾ ತೆರೆನಾಗಿ ಚರ್ಚೆಗೆ ಗ್ರಾಸ್ತವಾಗಿದ್ದ ಈ ಪ್ರಕರಣದ ಒಳ ಸತ್ಯ ಇನ್ನೂ ಬಯಲಾಗಿಲ್ಲ.

ಪ್ರಕರಣ  ಮುಕ್ರಾಯ
ಬಲ್ಲ ಮೂಲಗಳ ಪ್ರಕಾರದ ಕೆಲವು ತಿಂಗಳುಗಳ ಹಿಂದೆ ಈ ಪ್ರಕರಣ ಮುಕ್ತಾಯಗೊಳಿಸಲಾಗಿದೆ. ಇಲ್ಲಿ ವೆಂಕಟ ರಮಣ ಭಟ್‌ ಅವರೇ ಮನೆ ಮಂದಿಯನ್ನು ಕೊಂದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲಿಸಿ, ಪ್ರಕರಣಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂತಹ ಹಲವು ಅನುಮಾನಗಳಿದ್ದು, ಈ ಬಗ್ಗೆ ಪೊಲೀಸ್‌ ಇಲಾಖೆಯೇ ಉತ್ತರ ನೀಡಿದರೆ, ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೂಡಿ ರುವ ಗೊಂದಲ ಬಗೆಹರಿದೀತು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next