ದೇವನಹಳ್ಳಿ: ಕಡಲೇಕಾಯಿ ಕಡಲೇಕಾಯಿ ಎನ್ನುತ್ತಿರುವ ವ್ಯಾಪಾರದ ದೃಶ್ಯ ನಗರದ ನೆಹರು ಪಾರಿವಾಳ ಗುಟ್ಟದ ಇತಿಹಾಸ ಪ್ರಸಿದ್ಧ ಕಡೇ ಕಾರ್ತೀಕ ಸೋಮವಾರದ ಪ್ರಯುಕ್ತ ಪ್ರತಿ ವರ್ಷದಂತೆ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ 64ನೇ ವರ್ಷದ ಕಡಲೇಕಾಯಿ ಪರಿಷೆಯಲ್ಲಿ ಕಂಡುಬಂತು.
ಶ್ರೀ ಆಂಜನೇಯಸ್ವಾಮಿಗೆ ಕಡಲೇ ಕಾಯಿ ಮತ್ತು ಉದ್ದಿನ ವಡೆ ಹಾರವನ್ನು ಹಾಕಿ ಅಲಂಕಾರ ಮಾಡಲಾಯಿತು. ಸಹಸ್ರ ನಾಮಾರ್ಚನೆ ನಡೆಯಿತು. ಶ್ರೀ ಬೀರಲಿಂಗೇಶ್ವರಸ್ವಾಮಿ ಮತ್ತು ಭಕ್ತ ಕನಕದಾಸ ಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಕಡಲೇಕಾಯಿ ಪರಿಷೆ ಅಂಗವಾಗಿ ಕಾರ್ತೀಕಮಾಸ ದೀಪ ದರ್ಶನವನ್ನು ನಡೆಸಿದರು.
ಸಾವಿರಾರೂ ಭಕ್ತರಿಂದ ಸ್ವಾಮಿ ದರ್ಶನ: ಬಡವರ ಬಾದಮಿ ಬಿಸಿ-ಬಿಸಿ ಕಡಲೇ ಕಾಯಿಯನ್ನು ಪಟ್ಟಣದ ನಾಗರಿಕರು ಗುಂಪುಗುಂಪಾಗಿ ಸೇರಿ ಅದರ ರುಚಿ ಸವಿದು ಸಂತೋಷದಿಂದ ಕುಟುಂಬ ಸಮೇತರಾಗಿ ಸ್ವಾಮಿಯ ದರ್ಶನ ಪಡೆದರು. ಕಡಲೇಕಾಯಿ ವ್ಯಾಪಾರಸ್ಥರು ರಾಶಿ ರಾಶಿ ಕಡಲೇಯನ್ನು ಹಾಕಿ ಮಾರಿದರು. ಒಂದು ಕೆ.ಜಿ ಕಡಲೇಕಾಯಿಗೆ 80 ರಿಂದ 100 ರೂ.ಗಳಂತೆ ವಿವಿಧ ರೀತಿಯ ಕಡಲೇ ಕಾಯಿಗಳ ಮಾರಾಟ ನಡೆಯಿತು.
ಭಕ್ತರ ಆಕರ್ಷಿಸಿದ ಕಡಲೇಕಾಯಿ ಪರಿಷೆ: ಉರಿದ ಕಡಲೇ ಕಾಯಿ ಒಂದು ಸೇರಿಗೆ 25 ರೂ. ರಂತೆ ಮಾರಾಟ ಮಾಡುತ್ತಿದ್ದರು. ಕಡಲೇಕಾಯಿ ವ್ಯಾಪಾರಿಗಳು ಕಡಲೇಕಾಯಿ ಕಡಲೇಕಾಯಿ ಎಂದು ಕೂಗುತ್ತಿದ್ದದ್ದು ಭಕ್ತಾದಿಗಳನ್ನು ಆಕರ್ಷಿಸಿತ್ತು. ಪಟ್ಟಣದ ಸಾವಿರಾರು ಭಕ್ತರು ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದರು. ಪ್ರತಿ ವರ್ಷದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಮ್ಮಿಕೊಳ್ಳಲಾಗಿತ್ತು.
ವ್ಯಾಪಾರಸ್ಥರ ಮೊಗದಲ್ಲಿ ಸಂತಸ: ಈ ಬಾರಿ ಸಮರ್ಪಕ ಮಳೆಯಾದ ಕಾರಣ ಕಡಲೇಕಾಯಿ ಬೆಳೆ ಇಳುವರಿ ಹೆಚ್ಚಾಗಿ ಬಂದಿತ್ತು. ಗಟ್ಟಿ ಕಡಲೇ ಕಾಯಿ ಹುಡುಕುವ ಪರಿಸ್ಥಿತಿ ಉಂಟಾಗಿತ್ತು. ಪರಿಷೆಗೆ ಬಂದಿದ್ದ ಜನರನ್ನು ಕಡಲೇಕಾಯಿ ಆಕರ್ಷಿಸಿತ್ತು. ವ್ಯಾಪಾರಸ್ಥರ ಮುಗದಲ್ಲಿ ಮಂದಹಾಸ ಮೂಡಿತ್ತು.
ವಿದ್ಯಾರ್ಥಿಗಳಿಗೆ ಬಹುಮಾನ: 10ನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾವಳಿ ಹಾಗೂ 100 ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಯಿತು.
ಕಡಲೇಕಾಯಿ ಪರಿಷೆ ಅಂಗವಾಗಿ ಬರುವ ಭಕ¤ಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಜೈ ಮಾರುತಿ ಭಕ್ತ ಮಂಡಳಿ ಗೌರವಾಧ್ಯಕ್ಷ ಕೆ. ಮೋಟಪ್ಪ, ಅಧ್ಯಕ್ಷ ಶಿವನಾಪುರದ ಎಸ್.ಸಿ ರಮೇಶ್, ಉಪಾಧ್ಯಕ್ಷ ಬಿ.ಕೆ.ಶಿವಪ್ಪ, ಎಸ್.ಆರ್.ಮುನಿರಾಜು, ಕಾರ್ಯಾಧ್ಯಕ್ಷ ಸತ್ಯನಾರಾಯಣಚಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಎನ್ ಶಶಿಧರ್, ಹಾಗೂ ಭಕ್ತಮಂಡಳಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.