Advertisement

ಹೆಣ್ಣಾಗಿ ಹುಟ್ಟಿದ್ದು ಹೆಮ್ಮೆಯ ಸಂಗತಿ

05:20 AM Jul 21, 2017 | |

ಕರ್ಮಫ‌ಲದಾತಾನಿ ಶನಿ ಎಂಬ ಧಾರಾವಾಹಿಯೊಂದರಲ್ಲಿ ಶನಿ, ಹೆಣ್ಣಿನ ಬಗ್ಗೆ ಮಾತಾಡುತ್ತ ಹೇಳುತ್ತಾನೆ, “ನಶ್ವರ್ಶರೀ ಹೋತಾ ಹೈ, ಚಂಚಲ್‌ ಪ್ರಾಣ್‌ ಹೋತಾ ಹೈ, ಲೆಕಿನ್‌ ಅವಿನಾಶಿ ಆತ್ಮಾ ಹೋತೀ ಹೈ…’ ಅಂದರೆ, ಲಿಂಗವಾಚಕಗಳು ಸ್ವಲ್ಪ ಅನಿಯಮಿತವೇ ಅನ್ನಿಸುವ ಹಿಂದಿ ಭಾಷೆಯಲ್ಲಿ ಶರೀರ, ಪ್ರಾಣ ಅನ್ನುವ ಶಬ್ದಗಳದ್ದು ಪುಲ್ಲಿಂಗವಾದರೆ, ಆತ್ಮ ಎನ್ನುವ ಶಬ್ದಕ್ಕೆ ಸ್ತ್ರೀಲಿಂಗವಂತೆ! ಈ ಲಹರಿಯನ್ನು ಬರೆಯುತ್ತ ಮುಂದುವರಿಸಬೇಕೆನ್ನಿಸಿ ಕೂತಾಗ ಎರಡು ವಿಷಯಗಳಿಂದಾಗಿ ಹೆಣ್ಣು ನಾನೆಂಬ ಧನ್ಯತೆ ಅನುಭವಿಸಿದ್ದು ನೆನಪಾಯಿತು.

Advertisement

ಹದಿಮೂರರ ಮಗಳು ಎಂದಿನಂತೆ ಶಾಲೆಯಿಂದ ಬರುತ್ತಲೇ ಆವತ್ತಿನ ಆಗುಹೋಗುಗಳನ್ನೆಲ್ಲ ಸವಿಸ್ತಾರ ಹೇಳತೊಡಗಿದ್ದಳು. ಅವರ ಶಾಲೆಯಲ್ಲಿ ಇಬ್ಬರು ಕೂರಬಹುದಾದ ಬೆಂಚಿನಲ್ಲಿ ಒಬ್ಬ ಹುಡುಗ ಒಬ್ಬಳು ಹುಡುಗಿ-ಹೀಗೆ ಕೂರಿಸುತ್ತಾರೆ. ಇವಳ ಪಕ್ಕ ಕೂತ ಹುಡುಗನೊಬ್ಬ “”ಮುಟ್ಟಬೇಡ, ದೂರ ಕೂತ್ಕೊಳ್ಳೇ. ನೀವು ಹುಡುಗಿಯರು ಅಸಹ್ಯ ಕಣೇ. ನಿಮ್ಮನ್ನ ಡಸ್ಟ್‌ಬಿನ್‌ಗೆ ಹಾಕಬೇಕು ನೋಡು, ತಂದು ನನ್ನ ಪಕ್ಕ ಕೂರಿಸಿದ್ದಾರೆ” ಅಂದಿದ್ದಾನೆ. ಇವಳು, “”ಹೌದಲ್ವಾ , ನಿಮ್ಮಮ್ಮ ಮತ್ತೆ ನಿನ್ನ ದೊಡ್ಡಮ್ಮನ ಮಗಳು ನನ್ನ ಫೇವರೆಟ್‌ ಅಕ್ಕ ಇದ್ದಾಳಲ್ಲಾ , ಅವರನ್ನೂ ಡಸ್ಟ್‌ಬಿನ್‌ಗೆ ಹಾಕಬೇಕಲ್ವಾ?” ಅಂದಿದ್ದಾಳೆ. ಅದಕ್ಕವ “”ಏ… ನಮ್ಮಮ್ಮ-ನಮ್ಮಕ್ಕನ ಸುದ್ದಿಗೆ ಬಂದರೆ ಚೆನ್ನಾಗಿರಲ್ಲ ನೋಡು” ಅಂದಿದ್ದಾನೆ. ಸುಮ್ಮನಾಗಿದ್ದಾನೆ. ಆಮೇಲೆ ದಿನವಿಡೀ ಸಪ್ಪಗಿದ್ದ. “”ಯಾವಾಗಲೂ ಪುಂಡಾಟ ಮಾಡಿಕೊಂಡು ಇರುವವನದ್ದು ಇವತ್ತೆಲ್ಲ ಮಾತೇ ಇರಲಿಲ್ಲ ನೋಡಮ್ಮ” ಅಂದ ಮಗಳ ಕಣ್ಣಲ್ಲಿ, ತಾನು ಅವನಿಗೆ ಏನೋ ಒಂದು ಸತ್ಯವನ್ನು ತೋರಿಸಿಕೊಟ್ಟೆ, ಅವನ ಬಾಯಿ ಮುಚ್ಚಿಸಿದೆ ಅನ್ನುವ ತೃಪ್ತಿಯ ಛಾಯೆಯಿರಲಿಲ್ಲ. ಬದಲಿಗೆ ಸಹಾನುಭೂತಿ ನಿಚ್ಚಳ ಕಾಣಿಸಿತು.

ಆವತ್ತು ನಿನ್ನ ಹುಟ್ಟುಹಬ್ಬದ ದಿನ, “ಬೇಡ’ ಅಂದವನಿಗೆ ಒತ್ತಾಯ ಮಾಡಿ ಕೇಕ್‌ ಬಾಯಿಗಿಡಲು ಹೋದಾಗ ಅಮ್ಮ, “”ನಿನ್ನ ಕೈ ಕಚ್ಚಿದವ ಇವನೇ ಅಲ್ವೇನೇ ಕಾಟು ಹುಡುಗ” ಅಂತಂದೆ. ತಲೆಯಾಡಿಸುತ್ತ ಅವಳು, “”ಇಲ್ಲಮ್ಮಾ ಹಿ ಈಸ್‌ ನಾಟ್‌ ಬ್ಯಾಡ್‌, ಪಾಪ ಹಿ ಥಿಂಕ್ಸ್‌ ಸೋ ಆ್ಯಂಡ್‌ ಸೋ. ಬೇಕಂತಲೇ ನೋಯಿಸಲ್ಲ ಅವನು. ಹೆಣ್ಣುಮಕ್ಕಳು ಅಂದರೆ ಏನೋ ತಪ್ಪು ತಿಳಕೊಂಡಿದ್ದಾನೆ. ಅದು ಹಾಗಲ್ಲಾಂತ ತಿಳಿಸಿದರೆ ಸರಿಹೋಗ್ತಾನೆ” ಅಂದಾಗ ಅವಳ ತಿಳಿವಳಿಕೆ ಮತ್ತು ಆಲೋಚನೆ ಅರ್ಥವಾಗಿ ಕಣ್ತುಂಬಿ ಬಂತು. ಹೆಣ್ಣು ಅಂದರೆ ಇದು-ನೋಯಿಸಿದ ಮನಸಿನೊಳಗೂ ಇಣುಕಿ ನೋಡಿ ಅಲ್ಲಿರಬಹುದಾದ ಕಾರಣವನ್ನು ಕಂಡುಕೊಂಡು, ಸ್ಪಂದಿಸಬಲ್ಲ ಕಳಕಳಿ!

ಅದೇ ದಿನ ಸಂಜೆ ಐವತ್ತೈದರ ಆಸುಪಾಸಿನ ಆಕೆ ಭೇಟಿಯಾದರು. ಈಗಷ್ಟೇ ಮಗಳ ಮದುವೆಯಾಗಿದೆ. ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿದ್ದ  ಆಕೆ ಇಪ್ಪತ್ತರ ವಯಸ್ಸಿನಲ್ಲಿ ಮದುವೆಯಾದದ್ದು ಪೊಲೀಸ್‌ ಆಫೀಸರ್‌ ಒಬ್ಬರನ್ನು. ಆತನ ತಾಯಿ ಸಣ್ಣ ವಯಸ್ಸಿಗೇ ಗಂಡನನ್ನು ಕಳಕೊಂಡು ಮಗನನ್ನೇ ಪ್ರಪಂಚ ಮಾಡಿಕೊಂಡು ಬದುಕಿದಾಕೆ. ಸೊಸೆ ಕೆಲಸಕ್ಕೆ ಹೋಗುವುದು ಇಷ್ಟ ಇರಲಿಲ್ಲವಾದರೂ ಮೊಮ್ಮಗು ಹುಟ್ಟುವವರೆಗೆ ಸುಮ್ಮನಿದ್ದರು. ಬಾಣಂತನಕ್ಕೆ ಹೋದ ಈಕೆ ಮೂರು ತಿಂಗಳಿಗೇ ವಾಪಾಸು ಬರಬೇಕು ಮತ್ತು ಕೆಲಸ ಬಿಟ್ಟು ಬಿಡಬೇಕು ಇದು ಅತ್ತೆಯ ಮಾತಾಗಿತ್ತು. ಈಕೆಯೂ ಪ್ರತಿಷ್ಠಿತ ಮನೆತನವೊಂದರ ಒಬ್ಬಳೇ ಮುದ್ದಿನ ಮಗಳು. 

ಇಲ್ಲಿ ಬಯಲು ಸೀಮೆಯಲ್ಲಿ ಮತ್ತು ಮಲೆನಾಡುಗಳಲ್ಲೂ ನಾನು ಕಂಡಂತೆ ಬಾಣಂತನ ನಮ್ಮ ಕರಾವಳಿಯ ಹಾಗೆ ಮೂರು ತಿಂಗಳದ್ದಾಗಿರುವುದಿಲ್ಲ. ಆರು ತಿಂಗಳು ಒಮ್ಮೊಮ್ಮೆ ವರ್ಷದವರೆಗೂ ಮುಂದುವರಿಯುವುದುಂಟು. ಹಾಗೆ ತಾಯಿ ಮನೆಯವರು ಮೂರು ತಿಂಗಳಲ್ಲಿ ಕಳಿಸಲಿಲ್ಲ ; ಅಷ್ಟಕ್ಕೇ ಮುನಿಸಿಕೊಂಡ ಅತ್ತೆ, ತನ್ನ ಮಗನಿಗೆ ಇನ್ನು ನಿನ್ನ ಹೆಂಡತಿ ಇಲ್ಲಿಗೆ ಬರುವಂತಿಲ್ಲ ಅಂತ ಅಪ್ಪಣೆ ಕೊಡಿಸಿಯೇ ಬಿಟ್ಟರು, ಮಗ ಅದನ್ನು ಶಿರಸಾವಹಿಸಿ ಪಾಲಿಸಿಯೂ ಬಿಟ್ಟರು.

Advertisement

ಹಾಗೆ ಆ ಮಗುವಿಗೆ ಬರೋಬ್ಬರಿ ಹದಿನೆಂಟು ವರ್ಷಗಳಾಗುವ ವರೆಗೂ ಮೂವರೂ ಒಬ್ಬರನ್ನೊಬ್ಬರು ಭೇಟಿಯಾಗಲೇ ಇಲ್ಲ. ಆಮೇಲೊಂದು ದಿನ ತಾಯಿ ತೀರಿಕೊಂಡಿದ್ದಾರೆ, ಅದರ ಮಾರನೆಯ ದಿನವೇ ಹೆಂಡತಿಯನ್ನ ನೋಡಲು ಬಂದು ಆತ, “ಬಾ’ ಅಂತ ಕರೆದಿದ್ದಾನೆ. ಆತ ಕೆಲಸ ಮಾಡುತ್ತಿದ್ದ ಊರಿಗೆ ತನ್ನ ವರ್ಗಾವಣೆ  ಸಾಧ್ಯವಿಲ್ಲವೆಂದು ನಿಂತ ನಿಲುವಿನಲ್ಲೇ ಕೇಂದ್ರ ಸರಕಾರದ ತಮ್ಮ ನೌಕರಿಗೆ ರಾಜೀನಾಮೆ ಇತ್ತು ಈಕೆ ಅವರಿದ್ದಲ್ಲಿಗೆ ಹೋಗಿದ್ದಾಳೆ. ಮಗಳು, ತಂದೆ-ತಾಯಿ, ಒಡಹುಟ್ಟಿದವರು, ಬಂಧು ವರ್ಗ ಎಲ್ಲರ ವಿರೋಧದ ನಡುವೆಯೂ ಹದಿನೆಂಟು ವರ್ಷಗಳ ಮೌನದ ಕೊನೆಯಲ್ಲಿ ಬಂದ ಅವರ‌ ಒಂದೇ ಒಂದು ಕರೆಗೆ ಓಗೊಟ್ಟಿದ್ದಾಳೆ. “ಅಲ್ಲಿಗೆ ಬರಲಾರೆ’ ಎಂದ ಮಗಳನ್ನು ಅಜ್ಜಿ-ತಾತನ ಜೊತೆಗೇ ಬಿಟ್ಟು ಹೋದವಳು ಗಂಡನ ಜೊತೆಯಲ್ಲಿದ್ದದ್ದು ಮೂರೇ ವರ್ಷ. ಈಕೆಗಿಂತ ಹನ್ನೆರಡು ವರ್ಷ ದೊಡ್ಡವರಾದ ಆತ ಒಂದು ದಿನ ರಾತ್ರಿ ಮಲಗಿದಲ್ಲಿಯೇ ಹೃದಯಾಘಾತವಾಗಿ ತೀರಿಕೊಂಡಿದ್ದನು.ಇಷ್ಟು ಕತೆ ಕೇಳುವಷ್ಟರಲ್ಲಿ ಆಕೆಯ ಕಡೆ ಅನುಕಂಪದ ಬದಲಿಗೆ ಅನಿರೀಕ್ಷಿತ ಮತ್ತು ಅನಪೇಕ್ಷಿತವೂ ಆದ ಆ ಕರೆಗೆ ಆ ಪಾಟಿ ಓಗೊಡುವುದು ಹೇಗಪ್ಪಾ ಸಾಧ್ಯವಾಯಿತು ಅಂತನ್ನುವ ಒಂದು ಸಖೇದಾಶ್ಚರ್ಯವೇ ನನ್ನ ಮನಸ್ಸಿನ ತುಂಬ ಇದ್ದದ್ದು. 

ಕೊನೆಯಲ್ಲಿ ಆಕೆ ಅಂದಮಾತಿಗೆ ಮಾತ್ರ ಅವರ ಕೈಗಳನ್ನು ಕಣ್ಣಿಗೊತ್ತಿಕೊಳ್ಳಬೇಕೆನಿಸಿತ್ತು. ಒಟ್ಟಿಗಿದ್ದ ಮೂರು ವರ್ಷ ಅವನು ತುಂಬಾ ಪ್ರೀತಿ ಕೊಟ್ಟರು. ತನ್ನ ತಾಯಿಯ ಬಗ್ಗೆಯೂ ಅವರಿಗೆ ಅಷ್ಟೇ ಪ್ರೀತಿ. ಆದರೆ ಯಾವ ರೀತಿ ತಿಳಿಸಿ ಹೇಳಿದರೂ ತನ್ನ ಹಠಬಿಡದ ಸ್ವಭಾವದವರಾದ ಅತ್ತೆಯನ್ನು ನನಗಾಗಿ ಬಿಟ್ಟುಬರುವುದು ಅವರಿಗೆ ಸಾಧ್ಯವಿರಲಿಲ್ಲ. ಅಲ್ಲದೆ ನನ್ನನ್ನು ನೋಡಿಕೊಳ್ಳಲು ಬೆಟ್ಟದಷ್ಟು ಪ್ರೀತಿಸುವ ನನ್ನ ತವರಿತ್ತು. ಹೌದು, ನಾನು ಆ ಹದಿನೆಂಟು ವರ್ಷ ತುಂಬಾ ನೊಂದೆ. ಆದರೆ ತಾಯಿಯನ್ನು ಕಳಕೊಂಡು ಬಂದಾಗ ಅವರಿಗೆ ಇನ್ಯಾರೂ ಇರಲಿಲ್ಲ ಮತ್ತು ಆ ಮೂರು ವರ್ಷ ನಮ್ಮ ನಡುವಿದ್ದ ಪ್ರೀತಿ ಹದಿನೆಂಟು ವರ್ಷಗಳಲ್ಲಿ ಒಮ್ಮೆಯೂ ಸುಳ್ಳೆನಿಸಿರಲಿಲ್ಲ. ಮುಕ್ಕಾಗಿರಲಿಲ್ಲ. ಹಾಗಾಗಿ ಸುಮ್ಮನೆ ಹಾಗೆ ಹೊರಡದೆ ಇರಲಿಕ್ಕೆ ನನ್ನ ಬಳಿ ಕಾರಣಗಳಿರಲಿಲ್ಲ.

ಹೆಣ್ಣು ಅಂದರೆ- ಒಮ್ಮೆ ಪ್ರೀತಿ ಸಿಕ್ಕಿತೆಂದರೆ ಮುಗಿಯಿತು. ಆ ಬಂಧವನ್ನೇ ಜಗತ್ತು ಮಾಡಿಕೊಳ್ಳುವವಳು. ಮುಂದೆಲ್ಲೋ ಅದರಿಂದ ಎಷ್ಟೇ ನೋವು ಸಿಕ್ಕಿರಲಿ, ಆ ಬಂಧ ಮುಗಿದೇ ಹೋದಂತಿರಲಿ, ಆದರೆ ಭೌತಿಕವಾಗಿಯೋ ಮಾನಸಿಕವಾಗಿಯೋ ಅಲ್ಲಿ ತನ್ನ ಅಗತ್ಯವಿದೆ ಅಂತ ಗೊತ್ತಾದಾಗ ಹಿಂದೆಮುಂದೆ ಯೋಚಿಸದೆ ಥೇಟ್‌ ಅಮ್ಮನಂತೆ ಒದಗಬಲ್ಲ ಧಾರಣಶಕ್ತಿ.

ಹೆಣ್ಣಿಗೆ ಜನ್ಮದತ್ತ ಬರುವ ಮತ್ತು ಯಾವಾಗಲೂ ಮಸುಕಾಗದು ಳಿಯುವ (ಅಪವಾದಗಳು ಖಂಡಿತ ಇರಬಹುದು) ಈ ಧಾರಣಶಕ್ತಿ ಮತ್ತು ಕಳಕಳಿಯ ಕಾರಣದಿಂದಾಗಿಯೇ ಪ್ರಕೃತಿ ಅವಳಿಗೆ ಜನ್ಮ ನೀಡುವ ಗುರುತರ ಜವಾಬ್ದಾರಿಯನ್ನ ಕೊಟ್ಟಿದೆಯೋ ಏನೋ!

ದಿನ ಬೆಳಗಾದರೆ ಹೆಣ್ಣು ಅನ್ನುವ ಶಬ್ದದ ಜೊತೆ ಥಳುಕು ಹಾಕಿಕೊಂಡು ಕಿವಿಗೆ ಬೀಳುವ ಅತ್ಯಾಚಾರ, ಶೋಷಣೆ, ನಿರ್ಲಕ್ಷ್ಯ, ಅಸಹಾಯಕತೆ, ಭ್ರೂಣಹತ್ಯೆ, ಸ್ತ್ರೀವಾದ, ಸ್ತ್ರೀಪರ ಹೋರಾಟ ಮುಂತಾದ ಈ ಶಬ್ದಗಳ ನಡುವೆ ಇನ್ನೊಮ್ಮೆ ಹುಟ್ಟುವುದಾದರೆ ಹೆಣ್ಣಾಗಿಯೇ ಹುಟ್ಟಬೇಕು ಅನ್ನಿಸಲು ಕಾರಣವಾಗುವ ಇಂಥ ವಿಷಯಗಳೂ ಸಿಕ್ಕುತ್ತವೆ. ನಿಜ ಹೇಳಬೇಕೆಂದರೆ ಇವೇ ಮನಸಲ್ಲಿ ಹೆಚ್ಚು ಹೊತ್ತು ಉಳಕೊಳ್ಳುತ್ತವೆ ಮತ್ತು ಆಗೆಲ್ಲ ಕಣ್ಮುಚ್ಚಿ ಮೈಮರೆತು ಗುನುಗಿಕೊಳ್ಳುತ್ತೇನೆ; ನಾನೊಂದು ಜೀವ ನದಿ; ಹೆಣ್ಣು ನನ್ನ ಹೆಸರು!

– ಅನುರಾಧಾ ಪಿ. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next