Advertisement

ಇದು ಧ್ರುವ ಪ್ರಪಂಚ… ಭೂಮಂಡಲದಿಂದ ನಭೋಮಂಡಲದಲ್ಲಿ ಮಿನುಗಿದ ತಾರೆ!

01:08 PM Jul 31, 2018 | |

ಬ್ರಹ್ಮನ ನೈಷ್ಠಿಕ ಬ್ರಹ್ಮಾಚಾರಿ ಪುತ್ರರಾದ ಸನಕಾದಿಗಳು, ನಾರದರು ,ಋಭು ,ಹಂಸ, ಅರುಣಿ ಮತ್ತು ಯತಿ ಎಂಬವರು ಗೃಹಸ್ಥಾಶ್ರಮವನ್ನು ಕೈಗೊಳ್ಳಲಿಲ್ಲ ಆದ್ದರಿಂದ ಇವರ ವಂಶ ಬೆಳೆಯಲಿಲ್ಲ. ಬ್ರಹ್ಮನಿಂದ ಹುಟ್ಟಿದ ಅಧರ್ಮ ಎಂಬುವನ ಹೆಂಡತಿಯು ಮೃಷಾ. ಇವರಲ್ಲಿ ದಂಭ ಮತ್ತು ಮಾಯಾ ಎಂಬ ಇಬ್ಬರು ಮಕ್ಕಳು ಜನಿಸಿದರು. ಬ್ರಹ್ಮನ ಗುದದಿಂದ ಹುಟ್ಟಿದ ನಿರ್ಋತಿಗೆ ಸಂತಾನ ಭಾಗ್ಯವಿಲ್ಲದ್ದರಿಂದ ಅವನು ದಂಭ ಮತ್ತು ಮಾಯಾರನ್ನು ಕೊಂಡೊಯ್ದನು.

Advertisement

           ದಂಭ ಮತ್ತು ಮಾಯರಿಂದ ಲೋಭ ಹಾಗೂ ನಿಕೃತಿಯ ಜನನವಾಯಿತು , ಅವರಿಂದ ಕ್ರೋಧ ಮತ್ತು ಹಿಂಸೆಯ ಉತ್ಪತ್ತಿಯಾಯಿತು, ಇವರಿಂದ ಕಲಿ ಹಾಗೂ ದುರುಕ್ತಿಯ ಉತ್ಪನ್ನವಾಯಿತು, ಇವರಿಂದ ಭಯ ಮತ್ತು ಮೃತ್ಯುವು ಮತ್ತು ಅವರಿಂದ ಯಾತನೆ ಹಾಗೂ ನರಕದ ಸೃಷ್ಟಿಯಾಯಿತು, ಹೀಗೆ ಅಧರ್ಮದಿಂದ ಪ್ರಳಯಕ್ಕೆ ಕಾರಣವಾದ ವಂಶವು ಬೆಳೆಯಿತು.

         ಬ್ರಹ್ಮದೇವರ ಅಂಶದಿಂದ ಹುಟ್ಟಿದ ಸ್ವಯಂಭುವ ಮನು ಹಾಗೂ ಅವನ ಪತ್ನಿ ಶತರೂಪರಿಗೆ ಪ್ರಿಯವ್ರತ ಹಾಗೂ ಉತ್ತಾನಪಾದರೆಂಬ ಇಬ್ಬರು ಮಕ್ಕಳಿದ್ದರು. ಭಗವಾನ್ ವಾಸುದೇವನ ಅಂಶದಿಂದ ಉತ್ಪನ್ನರಾದ ಅವರಿಬ್ಬರೂ ಜಗತ್ತಿನ ರಕ್ಷಣೆಯಲ್ಲಿ ತತ್ಪರರಾಗಿದ್ದರು. ಉತ್ತಾನಪಾದ ಮಹಾರಾಜನಿಗೆ ಸುನೀತಿ ಹಾಗೂ ಸುರುಚಿ ಎಂಬ ಇಬ್ಬರು ಪತ್ನಿಯರಿದ್ದರು, ಸುರುಚಿಗೆ ಉತ್ತಮನೆಂಬ ಮಗನು, ಸುನೀತಿಗೆ ಧ್ರುವಕುಮಾರನೆಂಬ ಮಗನು ಇದ್ದರು. ಇಬ್ಬರು ಪತ್ನಿಯರಲ್ಲಿ ಸುರುಚಿಯೇ ಮಹಾರಾಜನಿಗೆ ಹೆಚ್ಚು ಪ್ರೀತಿಪಾತ್ರಳಾಗಿದ್ದಳು.

          ಒಂದು ದಿನದ ಮಹಾರಾಜನು ಸುರುಚಿಯ ಪುತ್ರನಾದ ಉತ್ತಮನನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡು ಮುದ್ದಿಸುತ್ತಿರಲು ಧ್ರುವಕುಮಾರನು ಬಂದು ತಂದೆಯ ತೊಡೆಯನ್ನೇರಲು ಬಯಸಿದನು. ಆದರೆ ರಾಜನು ಅವನನ್ನು ಸ್ವೀಕರಿಸಲಿಲ್ಲ.  ಇದನ್ನು ಗಮನಿಸಿದ ಸುರುಚಿಯು ಹೊಟ್ಟೆಕಿಚ್ಚಿನಿಂದ ಧ್ರುವನನ್ನು ಕರೆದು ” ಮಗು , ನೀನು  ಮಹಾರಾಜನ ಮಗನಾದರೂ ನನ್ನ ಹೊಟ್ಟೆಯಲ್ಲಿ ಹುಟ್ಟದಿರುವುದರಿಂದ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳಲು ಯೋಗ್ಯನಲ್ಲ ಎಂದು ಅವಮಾನಿಸಿದಳು. ಇದೆಲ್ಲವನ್ನು ಗಮನಿಸಿದರೂ ಮಹಾರಾಜನು ಏನೂ ಹೇಳದೆ ಸುಮ್ಮನಿದ್ದನು.

          ಇದರಿಂದ ಧ್ರುವನಿಗೆ ಬಹಳ ದುಃಖವಾಗಿ ಅಳುತ್ತಾ ತನ್ನ ತಾಯಿ ಸುನೀತಿಯಲ್ಲಿಗೆ ಹೋಗಿ ನಡೆದ ಘಟನೆಯನ್ನು ಹೇಳಿದನು. ತನ್ನ ಮಗನನ್ನು ಸಮಾಧಾನ ಪಡಿಸಲು ಸುನೀತಿಯು ” ಮಗು, ನೀನು ಇನ್ನೊಬ್ಬರಿಗೆ ಯಾವ ಕೇಡನ್ನು ಬಯಸದಿರುವ ಇತರರಿಗೆ ದುಃಖ ಕೊಡುವವನು ಸ್ವತಃ ದುಃಖಕ್ಕೆ ಒಳಗಾಗುವನು, ಉತ್ತಮ್ಮನಂತೆ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳುವ ಇಚ್ಛೆ ನಿನಗಿದ್ದರೆ ದ್ವೇಷಭಾವವನ್ನು ಬಿಟ್ಟು ಸರ್ವಸಮರ್ಥನಾದ ಶ್ರೀಹರಿಯ ವಾಸುದೇವರೂಪವನ್ನು ಆರಾಧಿಸಲು ತೊಡಗು. ಇದರಿಂದ ನಿನ್ನ ಆಸೆಯೂ ಪೂರ್ಣಗೊಳ್ಳುವುದು” ಎಂದು ಹೇಳಿದಳು.

Advertisement

           ಧ್ರುವನು ತಾಯಿಯ ಮಾತನ್ನು ಕೇಳಿ ಮನಸಿಗೆ ಸಮಾಧಾನವನ್ನು ತಂದುಕೊಂಡು ನಗರವನ್ನು ಬಿಟ್ಟು ಹೊರಟನು ಆಗ ನಾರದಮಹರ್ಷಿಗಳ ಆಗಮನವಾಯಿತು ಅವರು ಧ್ರುವನನ್ನು ಸಂತೈಸಿದರೂ ಅವನಲ್ಲಿ ವಾಸುದೇವನನ್ನು ಕಾಣುವ ಹಂಬಲ ಅಚಲವಾಗಿರುವುದನ್ನು ಕಂಡು” ಮಗೂ, ನಿನಗೆ ಮಂಗಳವಾಗಲಿ. ನೀನು ಯಮುನಾನದಿಯ ದಡದಲ್ಲಿರುವ ಮಧುವನಕ್ಕೆ ಹೋಗು. ಅಲ್ಲಿ ಶ್ರೀಹರಿಯ ನಿತ್ಯ ಸಾನಿಧ್ಯವಿದೆ.ಯಮುನಾ ನದಿಯ ದಡದಲ್ಲಿ ತ್ರಿಕಾಲಗಳಲ್ಲಿ ಮಿಂದು ವಾಸುದೇವನನ್ನು ತದೇಕಚಿತ್ತದಿಂದ ಧ್ಯಾನಿಸು” ಎಂದರು. ಇದರ ಜೊತೆಗೆ ಜಪಮಾಡುವಂತಹ ಪರಮ ಗುಹ್ಯವಾದಂತಹ ವಾಸುದೇವ ಮಂತ್ರವನ್ನು ಉಪದೇಶಿಸಿದನು.

             ದೇವರ್ಷಿ ನಾರದರ ಮಾತನ್ನು ಕೇಳಿದ ಧ್ರುವನು ಮಧುವನವನ್ನು ತಲುಪಿ ಯಮುನಾ ನದಿತೀರದಲ್ಲಿ ನಾರದರ ಉಪದೇಶದಂತೆ ವಾಸುದೇವನ ಉಪಾಸನೆಯನ್ನು ಆರಂಭಿಸಿದನು. ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಉತ್ಕಟವಾದ ಇಚ್ಛೆಯುಳ್ಳ ಧ್ರುವನು ಕಠಿಣವಾದ ತಪಸ್ಸನ್ನಾಚರಿಸುವ ತೀರ್ಮಾನದಿಂದ ಮೂರು ದಿನಗಳಿಗೆ ಒಂದು ಬಾರಿಯಂತೆ ಬೇಲದಹಣ್ಣು ಮತ್ತು ಬೋರೆಹಣ್ಣನ್ನು ಸೇವಿಸುತ್ತಾ ಒಂದು ತಿಂಗಳನ್ನು ಕಳೆದನು.. ಎರಡನೇ ತಿಂಗಳಲ್ಲಿ ಆರು ದಿನಗಳಿಗೆ ಒಂದುಸಲ ಎಲೆ ಹಾಗೂ ಹುಲ್ಲನ್ನು ತಿಂದು ಭಗವಂತನನ್ನು ಭಜಿಸಿದನು. ಮೂರನೇ ತಿಂಗಳು ಒಂಭತ್ತು ದಿನಗಳಿಗೊಮ್ಮೆ ಕೇವಲ ನೀರನ್ನು ಕುಡಿದು ಸಮಾಧಿ ಯೋಗದ ಮೂಲಕ ಪ್ರಭುವಿನ ಭಜನೆಯನ್ನು ಮಾಡಿದನು. ನಾಲ್ಕನೇ ತಿಂಗಳು ಶ್ವಾಸವನ್ನು ಜಯಿಸಿ ಹನ್ನೆರಡು ದಿನಗಳಿಗೊಮ್ಮೆ ವಾಯುವನ್ನು ಮಾತ್ರ ಸ್ವೀಕರಿಸಿ ಧ್ಯಾನಯೋಗದ ಮೂಲಕ ಭಗವಂತನನ್ನು ಆರಾಧಿಸಿದನು. ಐದನೇ ತಿಂಗಳಲ್ಲಿ ಶ್ವಾಸವನ್ನು ಸಂಪೂರ್ಣವಾಗಿ ಜಯಿಸಿ ಪರಬ್ರಹ್ಮನನ್ನೇ ಚಿಂತಿಸುತ್ತ ಒಂಟಿ ಕಾಲಿನಮೇಲೆ ನಿಶ್ಚಲವಾಗಿ ನಿಂತು ವಾಸುದೇವನನ್ನು ಕುರಿತು ತಪಸ್ಸು ಮಾಡಿದನು.

             ಐದು ವರ್ಷದ ಹಸುಳೆಯ ತಪಸ್ಸನ್ನು ಕಂಡು ಮೂರು ಲೋಕಗಳು ನಡುಗಿಹೋದವು. ನಂತರ ಧ್ರುವನು ತನ್ನ ಇಂದ್ರಿಯ ದ್ವಾರಗಳನ್ನೂ, ಪ್ರಾಣವನ್ನು ಸ್ತಂಭಿಸಿ ಅನನ್ಯ ಭಕ್ತಿಯಿಂದ ವಾಸುದೇವನನ್ನು ಧ್ಯಾನಿಸತೊಡಗಿದನು. ಆಗ ಸರ್ವಲೋಕಗಳಿಗೂ ಉಸಿರು ಕಟ್ಟಿ ಹೋಯಿತು , ಆಗ ದೇವತೆಗಳೆಲ್ಲರೂ ಗಾಬರಿಗೊಂಡು ಭಗವಂತನನ್ನು ಶರಣು ಹೊಂದಿ  ” ಶರಣಾಗತ ರಕ್ಷಕ ನಿನ್ನಲ್ಲಿ ಶರಣು ಬಂದಿರುವ ಧ್ರುವಕುಮಾರನನ್ನು ಅನುಗ್ರಹಿಸು” ಎಂದು ಬೇಡಿಕೊಂಡರು.

          ದೇವತೆಗಳಿಗೆ ಅಭಯವನ್ನಿತ್ತ ವಿರಾಟ್ ಸ್ವರೂಪಿ ಭಗವಂತನು ಗರುಡನನ್ನೇರಿ ತನ್ನ ಭಕ್ತನನ್ನು ನೋಡಲು ಮಧುವನಕ್ಕೆ ದಯಮಾಡಿಸಿದನು. ಭಗವಂತನು ವಾಸುದೇವನಾಗಿ ಧ್ರುವನೆದುರು ಬಂದು ನಿಂತಾಗ ಧ್ರುವನು ತನ್ನ ಅಂತರಂಗದಲ್ಲಿ ಧ್ಯಾನಿಸುತಿದ್ದ ಮೂರ್ತಿಯು ಕಣ್ಮರೆಯಾಯಿತು. ಆಶ್ಚರ್ಯದಿಂದ ಅವನು ಕಣ್ಣು ತೆರೆದಾಗ ಅದೇ ವಾಸುದೇವಮೂರ್ತಿಯು ತನ್ನ ಮುಂದೆ ನಿಂತಿರುವುದು ಅವನಿಗೆ ಗೋಚರಿಸಿತು.

         ತನ್ನ ಆರಾಧ್ಯದೈವವನ್ನು ಕಂಡು ಧ್ರುವನಿಗೆ ಮಾತೇ ಹೊರಡಲಿಲ್ಲ.ಆಗ ಅವನ ಮನಸಿನಲ್ಲಿ ಶ್ರೀಹರಿಯನ್ನು ಸ್ತುತಿಸಬೇಕೆಂಬ ಆಸೆ ಉಂಟಾದರೂ ಹೇಗೆ ಸ್ತುತಿಸಬೇಕೆಂದು ತಿಳಿಯದೆ ಮೂಕನಾದನು. ವಾಸುದೇವನು ತನ್ನ ವೇದಮಯವಾದ ಪಾಂಚಜನ್ಯವನ್ನು ಧ್ರುವನ ಕೆನ್ನೆಗೆ ಸ್ಪರ್ಶಿಸಲು ಧ್ರುವನಿಗೆ ದೇವದತ್ತವಾದ ದಿವ್ಯವಾಣಿಯು ಪ್ರಾಪ್ತವಾಯಿತು.ಆಗ ಧ್ರುವನು ಶ್ರೀಮನ್ನಾರಾಯಣನನ್ನು ಅನನ್ಯವಾಗಿ ಸ್ತುತಿಸಿದನು.

         ಇದರಿಂದ ಸಂತುಷ್ಟನಾದ ಶ್ರೀಹರಿಯು , “ಎಲೈ ಮಂಗಳಮತಿಯೇ….! ಯಾವ ಅವಿನಾಶವಾದ  ಸ್ಥಾನವನ್ನು ಇಲ್ಲಿಯವರೆಗೆ ಯಾರೂ ಪಡೆದಿಲ್ಲವೋ , ಯಾವುದು ಗ್ರಹ-ನಕ್ಷತ್ರ-ತಾರಾಗಣಗಳಿಗೆ ನಿಲುಕದೇ ಮೇರುವಾಗಿದೆಯೋ , ಪ್ರಳಯದಲ್ಲಿ ಎಲ್ಲ ಲೋಕಗಳು ನಾಶ ಹೊಂದಿದರೂ ಯಾವುದು ಸ್ಥಿರವಾಗಿರುತ್ತದೋ, ಅಂತಹ ಧ್ರುವಲೋಕವನ್ನು ನಾನು ನಿನಗೆ ಅನುಗ್ರಹಿಸುತ್ತೇನೆ”.

        ನಿನ್ನ ತಂದೆಯು ನಿನಗೆ ರಾಜ್ಯ, ಸಿಂಹಾಸನವನ್ನು ಕೊಟ್ಟು ವನಕ್ಕೆ ಹೋದ ಬಳಿಕ ನೀನು ಮೂವತ್ತಾರು ಸಾವಿರ ವರ್ಷಗಳವರೆಗೆ ಧರ್ಮದಿಂದ ಭೂಮಂಡಲವನ್ನು ಆಳುವೆ. ಆಗಲೂ ನಿನ್ನ ಇಂದ್ರಿಯಗಳ ಶಕ್ತಿಯು ಹಿಂದಿನಂತೆಯೇ ಇರುವುದು. ಯಜ್ಞವು ನನ್ನ ಮೂರ್ತಿಯಾಗಿದೆ. ನೀನು ಬಹುದಕ್ಷಿಣೆಗಳಿಂದ ಕೂಡಿದ ಅನೇಕ ಯಜ್ಞಗಳಿಂದ ನನ್ನನ್ನು ಪೂಜಿಸಿ,

          ಈ ಲೋಕದಲ್ಲಿ ಉತ್ತಮ ಭೋಗಗಳನ್ನು ಅನುಭವಿಸಿ ಕೊನೆಯಲ್ಲಿ ಸಮಸ್ತ ಲೋಕಗಳಿಗೂ ವಂದನೀಯವಾದ, ಸಪ್ತರ್ಷಿಮಂಡಲಕ್ಕಿಂತಲೂ ಮೇಲಿರುವ ನನ್ನ ನಿಜಧಾಮಕ್ಕೆ ಹೋಗುವೆ. ಅಲ್ಲಿಗೆ ತಲುಪಿದ ಬಳಿಕ ಮತ್ತೆ ಪ್ರಪಂಚಕ್ಕೆ ಮರಳಿ ಬರಬೇಕಾಗುವುದಿಲ್ಲ ಎಂದು ಹೇಳಿ ಧ್ರುವನಿಂದ ಪೂಜಿತನಾದ ಗರುಡಧ್ವಜನು ಧ್ರುವನಿಗೆ ತನ್ನ ಪದವನ್ನು ಅನುಗ್ರಹಿಸಿ ಆತನು ನೋಡುತ್ತಿರುವಂತೆಯೇ ತನ್ನ ಲೋಕಕ್ಕೆ ಹೊರಟುಹೋದನು.

Advertisement

Udayavani is now on Telegram. Click here to join our channel and stay updated with the latest news.

Next