Advertisement

ಸಿದ್ದು ಬಜೆಟ್‌ ಕಾರ್ಯಕ್ರಮ ಘೋಷಣೆಗೆ ಸೀಮಿತವೇ?

11:56 AM Jul 06, 2018 | Team Udayavani |

ಮೈಸೂರು: 2018ರ ಫೆಬ್ರವರಿ 16ರಂದು ತಮ್ಮ ಸರ್ಕಾರದ ಕಡೆಯ ಆಯವ್ಯಯ ಮಂಡಿಸಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2018-19ನೇ ಸಾಲಿನ ಆಯವ್ಯಯದಲ್ಲಿ ಅರಮನೆಗಳ ನಗರಿ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆಗಳನ್ನು ಘೋಷಿಸಿದ್ದರು.

Advertisement

ಮೈಸೂರು ದಸರಾ ಸಂದರ್ಭದಲ್ಲಿ ಕೇವಲ ಮೂರು ತಿಂಗಳ ಕಾಲ ಸ್ಥಳೀಯರು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ದಸರಾ ವಸ್ತುಪ್ರದರ್ಶನವನ್ನು ನವದೆಹಲಿಯ ದೆಹಲಿ ಹಾಥ್‌ ಮಾದರಿಯಲ್ಲಿ ವರ್ಷಪೂರ್ತಿ ನಡೆಯುವಂತೆ ಮೈಸೂರು ಹಾಥ್‌ ನಿರ್ಮಾಣ.

ದಸರಾ-ಸಿಎಂ ಕಪ್‌: ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಪ್ರತಿವರ್ಷ ಆಯೋಜಿಸುವ ರಾಜ್ಯ ದಸರಾ ಕ್ರೀಡಾಕೂಟವನ್ನು ರಾಷ್ಟ್ರೀಯ ಕ್ರೀಡಾಕೂಟದಂತೆ ವಿವಿಧ ಹಂತಗಳಲ್ಲಿ ಆಯೋಜಿಸಲು ಮತ್ತು ರಾಜ್ಯಮಟ್ಟದ ಕ್ರೀಡಾಕೂಟವನ್ನು “ದಸರಾ-ಸಿಎಂ ಕಪ್‌’ ಹೆಸರಿನಲ್ಲಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಲು 7 ಕೋಟಿ ರೂ. ಅನುದಾನ ಒದಗಿಸಲಾಗುವುದು.

39 ಕೆರೆಗಳಿಗೆ ನೀರು: ಕೇಂದ್ರ ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಬೆಂಗಳೂರು-ಮೈಸೂರು ಕಾರಿಡಾರ್‌ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿಪಡಿಸುವುದಾಗಿ ಹೇಳಲಾಗಿತ್ತು. ಕಬಿನಿ ನದಿಯಿಂದ ನಂಜನಗೂಡು ತಾಲೂಕು ಇಬ್ಬಜಾಲ ಗ್ರಾಮದ ಬಳಿ ನೀರನ್ನು ಎತ್ತಿ, ಕುಡಿಯುವ ನೀರು ಒದಗಿಸುವ ಸಲುವಾಗಿ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 68 ಕೋಟಿ ರೂ. ಒದಗಿಸಲಾಗುವುದು.

ಟ್ರಕ್‌ ಟರ್ಮಿನಲ್‌ ನಿರ್ಮಾಣ: ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಆರಂಭಿಸಲು 15 ಕೋಟಿ ರೂ., ಮೈಸೂರಿನ ಶುಶ್ರೂಷಾ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಲು 30 ಕೋಟಿ ರೂ. ಒದಗಿಸುವುದಾಗಿ ಹೇಳಲಾಗಿತ್ತು. ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಮುಖಾಂತರ ಸಾರ್ವಜನಿಕ/ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನ ನಂಜನಗೂಡು ವರ್ತುಲ ರಸ್ತೆ ಬಳಿ 6.5 ಎಕರೆ ಪ್ರದೇಶದಲ್ಲಿ 2ನೇ ಹಂತದ ಟ್ರಕ್‌ ಟರ್ಮಿನಲ್‌ ನಿರ್ಮಾಣ ಮಾಡಲಾಗುವುದು.

Advertisement

ಕೈಗಾರಿಕಾ ವಸಾಹತು: 2 ಮತ್ತು 3ನೇ ಸ್ತರದ ನಗರಗಳಲ್ಲಿ ಸೂಕ್ಷ್ಮ/ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಹೊಸ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಲಾಗುವುದು.

ವಿದ್ಯುತ್‌ ಉಪ ಕೇಂದ್ರ: ವಿದ್ಯುತ್‌ ಪ್ರಸರಣಾ ಜಾಲವನ್ನು ಬಲವರ್ಧನೆಗೊಳಿಸಲು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಮತ್ತು ಕಿತ್ತೂರು, ತಿ.ನರಸೀಪುರ ತಾಲೂಕಿನ ಮಡವಾಡಿ (ಪರಿನಾಮಿಪುರ) ಹಾಗೂ ಮೆಲೆಯೂರು, ನಂಜನಗೂಡು ತಾಲೂಕಿನ ಹೆಮ್ಮರಗಾಲ ಹಾಗೂ ಚಂದ್ರನಾಡಿ (ನಲ್ಲಿನಾಥಪುರ)ಗಳಲ್ಲಿ ವಿದ್ಯುತ್‌ ಉಪ ಕೇಂದ್ರಗಳನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ಮೂಲಕ ಸ್ಥಾಪಿಸಲಾಗುವುದು.

ಉದಯ ರವಿ ಸ್ಮಾರಕ: ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಬಸವ ಅಧ್ಯಯನ ಕೇಂದ್ರ ಸ್ಥಾಪಿಸಲು 2ಕೋಟಿ ರೂ.ಅನುದಾನ ಒದಗಿಸಲಾಗುವುದು. ಮಹಾಕವಿ ಕುವೆಂಪು ದರ್ಶನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕುವೆಂಪು ಮೈಸೂರಿನ ನಿವಾಸ “ಉದಯ ರವಿ’ಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುವುದು.

ಜಿಲ್ಲೆಯ ಹುಣಸೂರು ಮತ್ತು ಎಚ್‌.ಡಿ.ಕೋಟೆ ತಾಲೂಕಿನಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣ. ಮೈಸೂರಿನಲ್ಲಿ ಮಾಜಿ ಸಚಿವ ದಿ.ಅಜೀಜ್‌ ಸ್ಮಾರಕ ಸಮುದಾಯ ಭವನ ನಿರ್ಮಿಸಲು 3 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಆಯವ್ಯಯದಲ್ಲಿ ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next