Advertisement

ವೃದ್ಧರಿಗಾಗಿ ಪಗಲ್‌ ವೀಡ್‌ (ಹಗಲು ಮನೆ) ಉದ್ಘಾಟನೆ

01:00 AM Feb 11, 2019 | Harsha Rao |

ಬದಿಯಡ್ಕ: ವೃದ್ಧರು ಮನೆಯ ಮಾರ್ಗದರ್ಶಕರು. ಅನುಭವದ ಮಾತುಗಳು, ಆಚಾರ ವಿಚಾರಗಳನ್ನು ಉಳಿಸಿಕೊಂಡು ಮುನ್ನಡೆಸುವವರು. ಆದರೆ ವೇಗದ ಯುಗದ ಒತ್ತಡದ ಬದುಕಿನಲ್ಲಿ ಒಂಟಿತನವನ್ನು ಅನುಭವಿಸುವ ಹಿರಿಯ ಜೀವಗಳ ಮನಸ್ಸಿನ ಮಾತಿಗೆ ಕಿವಿಯಾಗುವವರು ಯಾರು? ಮಕ್ಕಳು, ಮೊಮ್ಮಕ್ಕಳು ಹೊರಪ್ರಪಂಚದಲ್ಲಿ ಬ್ಯುಸಿಯಾದಾಗ ವೃದ್ಧರಿಗೆ ತಮ್ಮ ನೋವು ನಲಿವನ್ನು ಹಂಚಿಕೊಂಡು ನಿರಾಳವಾಗಲು ನೆರಳಾಗುವ ಮಹತ್ತರವಾದ ಯೋಜನೆಯೇ ಹಗಲು ಮನೆ. ಹಿರಿಯ ಜೀವಗಳ ಬದುಕಲ್ಲಿನ ಸಂಜೆಯಲ್ಲಿ ಆವರಿಸುವ ಕತ್ತಲೆಯನ್ನು ದೂರಮಾಡಿ ಸಂತƒಪ್ತಿಯ ಹಗಲನ್ನು ನೀಡುವ ತಾಣ. ಪರಸ್ಪರ ಮಾತುಕತೆಯಾಡಲು, ಒಟ್ಟಾಗಿ ಕುಳಿತು ಪತ್ರಿಕೆಗಳನ್ನು ಓದಲು, ವಿಷಯಗಳನ್ನು ಚರ್ಚಿಸಲು ಈ ಹಗಲು ಮನೆ ಸಹಾಯಕ. ಮುಂದೆ ವೃದ್ಧ ಸಂಘಟನೆಗಳು ಸ್ಥಾಪಿನೆಯಾಗಲು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತೆ ಕಳೆದುಹೋದ ದಿನಗಳನ್ನು ಮರಳಿ ಪಡೆಯಲು ಇದು ವರದಾನವಾಗಿ ಪರಿಣಮಿಸಲಿದೆ.  ಆ ನಿಟ್ಟಿನಲ್ಲಿ ಬದಿಯಡ್ಕ ಪಂಚಾಯತ್‌ ಹಮ್ಮಿಕೊಂಡ ಈ ಯೋಜನೆ ಮಾದರಿ ಕಾರ್ಯವಾಗಿದೆ. 

Advertisement

 ಬದಿಯಡ್ಕ ಪಂಚಾಯತ್‌ನ ಮಹತ್ತರ ಯೋಜನೆಯಾದ ವಯೋಜನರ ವಿಹಾರಕ್ಕೆ  ಪೂರಕವಾದ ವಾತಾವರಣ ಒದಗಿಸುವ ಪಗಲ್‌ ವೀಡ್‌ (ಹಗಲು ಮನೆ) ಉದ್ಘಾಟನೆಗೊಂಡಿದೆ. ಬದಿಯಡ್ಕ  ಗ್ರಾ.ಪಂ.ನಲ್ಲಿ  2018 – 19ರ ವಾರ್ಷಿಕ ಯೋಜನೆಯ ಅಂಗವಾಗಿ ವಯೋವೃದ್ಧರ ಮಾನಸಿಕ ಅಭಿವೃದ್ಧಿ  ಮತ್ತು  ವಿಶ್ರಮಕ್ಕೆ  ಸಂಬಂಧಿಸಿ ಇಲ್ಲಿನ ಬೋಳುಕಟ್ಟೆ  ಕಿರು ಸ್ಟೇಡಿಯಂ ಬಳಿ ನೂತನವಾಗಿ  ನಿರ್ಮಿಸಲಾದ ಪಗಲ್‌ ವೀಡ್‌ (ಹಗಲು ಮನೆ)ನ್ನು  ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಉದ್ಘಾಟಿಸಿದರು. 

ಬದಿಯಡ್ಕ  ಗ್ರಾ.ಪಂ. ಅಧ್ಯಕ್ಷ  ಕೆ.ಎನ್‌. ಕೃಷ್ಣ ಭಟ್‌ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ  ಸೈಬುನ್ನೀಸಾ, ಎ.ಎಸ್‌. ಅಹಮ್ಮದ್‌, ಶ್ಯಾಮ ಪ್ರಸಾದ್‌, ಮಾಹಿನ್‌ ಕೇಳ್ಳೋಟ್‌, ಬಿ. ಶಾಂತಾ, ಬಾಲಕೃಷ್ಣ  ಶೆಟ್ಟಿ , ಮುನೀರ್‌, ಜಯಂತಿ, ಪ್ರಸನ್ನ , ವಿಶ್ವನಾಥ ಪ್ರಭು, ಪಿ. ಜಯಶ್ರೀ, ಪುಷ್ಪಾ  ಕುಮಾರಿ, ಪಿ. ರಾಜೇಶ್ವರಿ, ಬಿ.ಎ. ಮಹಮ್ಮದ್‌, ಪ್ರೇಮಾ ಕುಮಾರಿ, ಕೆ. ಸುಕುಮಾರನ್‌ ಮಾಸ್ಟರ್‌, ಪಿಲಿಂಗಲ್ಲು  ಕೃಷ್ಣ ಭಟ್‌, ಸುಧಾ ಜಯರಾಂ ಮೊದಲಾದವರು ಉಪಸ್ಥಿತರಿದ್ದರು. 

ಬದಿಯಡ್ಕ  ಗ್ರಾ.ಪಂ. ಅಭಿವೃದ್ಧಿ  ಸ್ಥಾಯೀ ಸಮಿತಿ ಅಧ್ಯಕ್ಷ  ಅನ್ವರ್‌ ಓಝೋನ್‌ ಸ್ವಾಗತಿಸಿದರು. ಕಾರ್ಯದರ್ಶಿ ಎನ್‌ ಶೈಲೇಂದ್ರ ವಂದಿಸಿದರು.

5 ಲ.ರೂ. ಮೀಸಲು
ಬದಿಯಡ್ಕ ಪಂಚಾಯತ್‌ಪ್ರದೇಶದಲ್ಲಿ ಅರ್ಧಕ್ಕೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ನಗರ ಸಭಾ ಭವನ ಹಾಗೂ ಇಂಡೋರ್‌ ಸ್ಟೇಡಿಯಂ ಹಾಗೂ ಇತರ ಕೆಲಸ ಕಾರ್ಯಗಳನ್ನು ಈ ಆರ್ಥಿಕ ವರ್ಷದಲ್ಲಿ ಸಂಪೂರ್ಣಗೊಳಿಸಲಾಗುವುದು. ಬಡ್ಸ್‌ ಸ್ಕೂಲ್‌ನ ಕೆಲಸವೂ ಕೆಲವೇ ದಿನಗಳಲ್ಲಿ ಪೂರ್ತಿಯಾಗಲಿದೆ. ವೃದ್ಧರ ಅಸೋಸಿಯೇಶನ್‌ನ ವೃದ್ಧರ ಹಗಲು ಮನೆಯ ಪ್ರದೇಶದಲ್ಲಿ 5ಲಕ್ಷ ರೂಪಾಯಿ ಮೀಸಲಿಟ್ಟು ಕುಡಿನೀರಿನ ಸಮಸ್ಯೆಯನ್ನೂ ಪರಿಹರಿಸುವತ್ತ ಗಮನಹರಿಸಲಾಗಿದೆ. 
-ಕೆ.ಎನ್‌. ಕೃಷ್ಣ ಭಟ್‌ ಪಂಚಾಯತ್‌ ಅಧ್ಯಕ್ಷರು, ಬದಿಯಡ್ಕ 

Advertisement

ಸರ್ವ ಸಹಕಾರ
 ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಭಾಷಾ ಹಾಗೂ ವರ್ಗೀಯ ಸಮಸ್ಯೆ ಕಾಡುತ್ತಿದೆ ಯಾದರೂ ಪರಸ್ಪರ ಸೌಹಾರ್ದ ಹಾಗೂ ಉತ್ತಮ ಚಿಂತೆಗಳ ಮೂಲಕ ಮಾತ್ರ ಆ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂಬುದನ್ನು ಬದಿಯಡ್ಕ ಪಂಚಾಯತ್‌ ಸಾಬೀತುಪಡಿಸಿದೆ. ವಯೋವೃದ್ಧರಿಗಾಗಿ ವಿಶಿಷ್ಟವಾದ ಪದ್ಧತಿಯನ್ನು ರೂಪಿಸು ವುದರ ಮೂಲಕ ಮಾದರಿಯಾಗಿದೆ. ಹಗಲು ಮನೆಯಲ್ಲಿ ಪುಸ್ತಕಾಲಯದ ವ್ಯವಸ್ಥೆಯನ್ನು ಮಾಡುವಲ್ಲಿ ಎಲ್ಲ ವಿಧ ಸಹಕಾರ ನೀಡಲಾಗುವುದು.
– ಡಾ| ಸಜಿತ್‌ಬಾಬು , ಕಾಸರಗೋಡು ಜಿಲ್ಲಾಧಿಕಾರಿ

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next