Advertisement

ಹಿಂಸಾಚಾರದ ನಡುವೆಯೇ ಬಿಜೆಪಿ-ಸಿಪಿಎಂ ಶಾಂತಿ ಸಭೆ

07:40 AM Aug 01, 2017 | Team Udayavani |

ತಿರುವನಂತಪುರ: ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಎಡವಕೋಡ್‌ ಹತ್ಯೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತು ಕೊಂಡ ಸರಕಾರ ಸೋಮವಾರ ಬಿಜೆಪಿ ನಾಯಕರನ್ನು ಕರೆಸಿ ರಾಜಧಾನಿಯ ಹೊಟೇಲೊಂದರಲ್ಲಿ ಶಾಂತಿಯ ಮಾತುಕತೆ ನಡೆಸಿದೆ. ಸಿಪಿಎಂ ಪರವಾಗಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಪಕ್ಷದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಮತ್ತು ಬಿಜೆಪಿ ಪರವಾಗಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌, ಶಾಸಕ ಓ. ರಾಜಗೋಪಾಲ್‌ ಮತ್ತು ಆರ್‌ಎಸ್‌ಎಸ್‌ ಪರವಾಗಿ ಪಿ. ಗೋಪಾಲಕುಟ್ಟಿ ಭಾಗವಹಿಸಿದರು. 

Advertisement

ಇದೇ ವೇಳೆ ಮುಂಜಾನೆ ಕೋಟ್ಟೆಯಂನಲ್ಲಿ ಆರ್‌ಎಸ್‌ಎಸ್‌ ಕಚೇರಿಗೆ ಪೆಟ್ರೋಲು ಬಾಂಬ್‌ ಎಸೆಯ ಲಾಗಿದೆ ಮತ್ತು ಸಿಪಿಎಂನ ಕಾರ್ಮಿಕ ಸಂಘಟನೆ ಸಿಐಟಿಯು ಕಚೇರಿಗೆ ಕಲ್ಲುತೂರಾಟವಾಗಿದೆ. 

ಹಿಂಸಾಚಾರ ತ್ಯಜಿಸಿ ಶಾಂತಿ ಮತ್ತು ಸೌಹಾರ್ದ  ನೆಲೆಯಾಗಲು ಪ್ರಯತ್ನಿಸುವ ವಿಚಾರದಲ್ಲಿ ಉಭಯ ಪಕ್ಷಗಳು ಒಮ್ಮತಕ್ಕೆ ಬಂದಿವೆ. ಆ. 6ರಂದು ಸರ್ವ ಪಕ್ಷ ಸಭೆ ಕರೆದು ಈ ಕುರಿತು ವಿವರವಾದ ಸಮಾಲೋಚನೆ ನಡೆಸಲು ನಿರ್ಧರಿಸಲಾಯಿತು. ಕಣ್ಣೂರು, ಕೋಟ್ಟೆಯಂ ಮತ್ತು ತಿರುವನಂತಪುರದಲ್ಲಿ ಇದೇ ಮಾದರಿಯ ಶಾಂತಿ ಮಾತುಕತೆಗಳು ನಡೆಯಲಿವೆ ಎಂದು ಪಿಣರಾಯಿ ಸುದ್ದಿ ಮಾಧ್ಯಮದವರಿಗೆ ತಿಳಿಸಿದರು. 

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳನ್ನು ಖಂಡಿಸಿದ ಅವರು ಪಕ್ಷಗಳು ಹಿಂಸೆ ಎಸಗದಂತೆ ಕಾರ್ಯಕರ್ತರಿಗೆ ಸೂಚನೆ ನೀಡ ಬೇಕು ಎಂದರು. ಪಕ್ಷದ ಕಚೇರಿ, ನಾಯಕರ ಮತ್ತು ಕಾರ್ಯಕರ್ತ ಮನೆಗಳ ಮೇಲೆ ಹಲ್ಲೆ ಮಾಡಬಾರದು ಎಂದು ಹಿಂದೆ ನಡೆದ ಈ ಮಾದರಿಯ ಸಭೆಗಳಲ್ಲಿ ನಿರ್ಧರಿಸಲಾಗಿದ್ದರೂ ಬಿಜೆಪಿ ಕಚೇರಿ ಮತ್ತು ಕೊಡಿಯೇರಿ ಬಾಲಕೃಷ್ಣನ್‌ ಮಗನ ಮನೆ ಮೇಲೆ ದಾಳಿಯಾಗಿರುವುದು ವಿಷಾದದ ಸಂಗತಿ. ಹಲವು ನಗರ ಸೇವಕರ ಮನೆಗಳ ಮೇಲೂ ದಾಳಿಗಳಾಗಿವೆ. ಇಂತಹ ಘಟನೆಗಳು ಮರುಕಳಿಸದಂತೆ ನಾವು ಎಚ್ಚರಿಕೆಯಿಂದಿರಬೇಕು ಎಂದು ಪಿಣರಾಯಿ ಹೇಳಿದರು.

ಅನಂತರ ಮಾಧ್ಯಮದವರ ಜತೆಗೆ ಪ್ರತ್ಯೇಕವಾಗಿ ಮಾತನಾಡಿದ ಕುಮ್ಮನಂ ಶಾಂತಿ ಸ್ಥಾಪಿಸಲು ಸರಕಾರ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬೆಂಬಲಿಸಲಿದೆ ಎಂದರು. 

Advertisement

ರಾಜ್ಯದಲ್ಲಿ ಶಾಂತಿ ನೆಲೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಇದೇ ವೇಳೆ ರಾಜಕೀಯ ಪಕ್ಷಗಳಿಗೆ ಮತ್ತು ಧಾರ್ಮಿಕ ಸಂಘಟನೆಗಳಿಗೆ ತಮ್ಮ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸುವ ಸ್ವಾತಂತ್ರ್ಯವೂ ಇರಬೇಕು.
 
ಇದಕ್ಕೆ ಪೂರಕವಾಗಿರುವ ವಾತಾವರಣ ನಿರ್ಮಿಸು ವುದು ಸರಕಾರದ ಜವಾಬ್ದಾರಿ. ಪೊಲೀಸರು ನಿಷ್ಪಕ್ಷ ವಾಗಿ ಕರ್ತವ್ಯ ನಿಭಾಯಿಸಬೇಕು  ಎಂದರು. 

ಕೋಟ್ಟೆಯಂನಲ್ಲಿ ಹಿಂಸೆ
ಕೋಟ್ಟೆಯಂನಲ್ಲಿ ಮುಂಜಾನೆ ಹೊತ್ತು  ಮತ್ತೆ ಹಿಂಸಾಚಾರ ಸಂಭವಿಸಿದೆ. ಸಿಐಟಿಯು ಕಚೇರಿ ಮೇಲೆ ಅಜ್ಞಾತ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದಾದ ಬಳಿಕ ಆರ್‌ಎಸ್‌ಎಸ್‌ ಕಚೇರಿಗೆ ಪೆಟ್ರೋಲು ಬಾಂಬ್‌ ಎಸೆಯಲಾಯಿತು. 

ಪರಸ್ಪರ ದೂರಿಕೊಂಡ ಪಕ್ಷಗಳು
ಎರಡೂ ಪಕ್ಷಗಳು ಪರಸ್ಪರರನ್ನು ದೂರಿವೆ. ಪೊಲೀಸರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಚೇರಿ ಗಳಿಗೆ ಸೂಕ್ತ ರಕ್ಷಣೆ ನೀಡದೆ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. 

ಮುಂಜಾನೆ 2.30ರ ವೇಳೆಗೆ ಮೂರು ಬೈಕ್‌ಗಳಲ್ಲಿ ಬಂದ ಐದು ಮಂದಿಯ ತಂಡ ಸಿಐಟಿಯು ಕಚೇರಿ ಮೇಲೆ ಕಲ್ಲು ತೂರಿ ಪಲಾಯನ ಮಾಡಿವೆ. ಕಚೇರಿಯ ಕಿಟಿಕಿ ಗಾಜುಗಳು ಪುಡಿಯಾಗಿದೆ. ಬಿಜೆಪಿ-ಆರ್‌ಎಸ್‌ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆಂದು ಸಿಪಿಎಂ ಆರೋಪಿಸಿದೆ.
 
ನಿನ್ನೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಫೋನು ಮಾಡಿ ಹಿಂಸಾಚಾರವನ್ನು ತಡೆಯಬೇಕೆಂದು ಪಿಣರಾಯಿಗೆ ಸೂಚಿಸಿದ್ದರು. ಇದರ ಬೆನ್ನಿಗೆ ರಾಜ್ಯಪಾಲ ಪಿ. ಸದಾಶಿವಂ ಮುಖ್ಯಮಂತ್ರಿ ಮತ್ತು ಡಿಜಿಪಿ ಲೋಕನಾಥ್‌ ಬೆಹೆರ ಅವರನ್ನು ರಾಜಭವನಕ್ಕೆ ಕರೆಸಿ ಆರ್‌ಎಸ್‌ಎಸ್‌ ಕಾರ್ಯಕರ್ತನ ಹಂತಕರನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದ್ದರು. 

ಈ ಸಂದರ್ಭದಲ್ಲಿ ಪಿಣರಾಯಿ ಬಿಜೆಪಿ ಮತ್ತು ಆರ್‌ಎಸ್‌ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುವ ಭರವಸೆಯಿತ್ತರು. ಪಿಣರಾಯಿ ಮತ್ತು ಬೆಹೆರ ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದರು. 

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್‌ಎಸ್‌ಎಸ್‌-ಬಿಜೆಪಿ ಕಾರ್ಯಕರ್ತರ ಹತ್ಯೆಗೆ ರಾಷ್ಟ್ರವ್ಯಾಪಿಯಾಗಿ ಆಕ್ರೋಶ ವ್ಯಕ್ತವಾಗಿರುವುದರಿಂದ ಸಿಪಿಎಂ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಶಾಂತಿಯ ಮಾತುಕತೆ ನಡೆಸಲು ನಿರ್ಧರಿಸಿತು. 

ಶನಿವಾರ ರಾತ್ರಿ ಎಡವಕೋಡ್‌ನ‌ಲ್ಲಿ ರಾಜೇಶ್‌ರನ್ನು ತಂಡವೊಂದು ಬರ್ಬರವಾಗಿ ಸಾಯಿಸಿದೆ. ಅವರ ಎಡಗೈ ಮತ್ತು ಬಲಗಾಲನ್ನು ಕತ್ತರಿಸಿ ಎಸೆಯ ಲಾಗಿತ್ತು. ಇದಕ್ಕಿಂತ ಒಂದು ದಿನ ಹಿಂದೆಯಷ್ಟೇ ತಿರುವನಂತಪುರದಲ್ಲಿ ಬಿಜೆಪಿ ರಾಜ್ಯ ಕಚೇರಿ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ಮಾಡಿ ಹಾನಿ ಎಸಗಿದ್ದರು. 

ರಾಜಕೀಯ ಹತ್ಯೆ: ಒಪ್ಪಿಕೊಂಡ ಪೊಲೀಸರು 
ನಿನ್ನೆ ರಾಜೇಶ್‌ ಹತ್ಯೆಯನ್ನು ರೌಡಿಗಳ ತಂಡ ವೊಂದು ಮಾಡಿದೆ. ವೈಯಕ್ತಿಕ ದ್ವೇಷ ಇದಕ್ಕೆ ಕಾರಣ ಎಂದು  ಹೇಳಿದ್ದ ಪೊಲೀಸರು ಈಗ ರಾಗ ಬದಲಾಯಿಸಿ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. 
ಡಿವೈಎಫ್ಐ ಮತ್ತು ಆರ್‌ಎಸ್‌ಎಸ್‌ ಕಾರ್ಯಕ ರ್ತರ ನಡುವಿನ ಕಚ್ಚಾಟ ಹತ್ಯೆಗೆ ಕಾರಣ ಎಂದು ಎಫ್ಐಆರ್‌ನಲ್ಲಿ ನಮೂದಿಸಿದ್ದಾರೆ. 11 ಮಂದಿಯ ತಂಡ ಹತ್ಯೆ ಮಾಡಿದೆ. ಈ ಪೈಕಿ 7 ಮಂದಿಯನ್ನು ಬಂಧಿಸಿದ್ದೇವೆ. 

ಆದರೆ ಹತ್ಯೆಯಲ್ಲಿ ನೇರವಾಗಿ ಸಹಭಾಗಿಗಳಾಗಿರುವ ಇಬ್ಬರು ಆರೋಪಿಗಳು ಭೂಗತರಾಗಿದ್ದಾರೆ.  ರಾಜೇಶ್‌ ಗೆಳೆಯ ಮಹೇಶ್‌ ಜತೆಗೆ ಈ ತಂಡ ಜಗಳವಾಡಿತ್ತು. ಇದೇ ದ್ವೇಷದಲ್ಲಿ ರಾಜೇಶ್‌ರನ್ನು ಬರ್ಬರವಾಗಿ ಸಾಯಿಸಲಾಗಿದೆ ಎಂದು ಎಫ್ಐಆರ್‌ನಲ್ಲಿ ದಾಖಲಿಸಲಾಗಿದೆ. 

11 ಮಂದಿಯ ತಂಡ ಎಡವಕೋಡ್‌ನ‌ಲ್ಲಿ ಮೊದಲು ಪಟಾಕಿ ಸಿಡಿಸಿ ಗೊಂದಲ ನಿರ್ಮಿಸಿತು. ಅನಂತರ ಆ ದಾರಿಯಾಗಿ ಬಂದ ರಾಜೇಶ್‌ ಮೇಲೆ ಮುಗಿಬಿದ್ದು ಕೊಚ್ಚಿ ಕೊಲೆ ಮಾಡಿದೆ. ರಾಜೇಶ್‌ ಆರ್‌ಎಸ್‌ಎಸ್‌ ಶಾಖೆಯಲ್ಲಿ ಭಾಗವಹಿಸಿ ಮನೆಗೆ ವಾಪಸಾಗುವಾಗ ತಂಡದ ಕೈಗೆ ಸಿಕ್ಕಿ ಬಿದ್ದಿದ್ದಾರೆ.  

ಮಾಧ್ಯಮದವರಿಗೆ ಗೆಟ್‌ಔಟ್‌ ಎಂದ ಸಿಎಂ 
ಶಾಂತಿ ಸಭೆ ನಡೆದ ಮಸ್ಕತ್‌ ಹೊಟೇಲ್‌ನಲ್ಲಿ ಮಾಧ್ಯಮದವರನ್ನು ನೋಡಿ ಪಿಣರಾಯಿಗೆ ಹಠಾತ್‌ ಸಿಟ್ಟು ನೆತ್ತಿಗೇರಿತು. ಮುಖ್ಯಮಂತ್ರಿ ಬರುವ ಮೊದಲೇ ಸಭೆ ನಡೆಯಲ್ಲಿದ್ದ ಕೊಠಡಿಯಲ್ಲಿ ಮಾಧ್ಯಮದವರು ಜಮಾಯಿಸಿದ್ದರು. ಅವರನ್ನು ನೋಡುತ್ತಲೇ ಪಿಣರಾಯಿ ವಿಚಲಿತರಾದರು. ಹೊಟೇಲ್‌ ಮೆನೇಜರ್‌ಗೆ ಇವರನ್ನು ಒಳಗೆ ಬಿಡಲು ಹೇಳಿದ್ದು ಯಾರು ಎಂದು ಕೇಳಿದರು. ಮೆನೇಜರ್‌ ಉತ್ತರಿಸಲು ತಡಬಡಾಯಿಸಿದಾಗ ಸಿಟ್ಟಿನಿಂದ ಮಾಧ್ಯಮದವರಿಗೆ ಗೆಟ್‌ಔಟ್‌ ಎಂದರು. ಮಾಧ್ಯಮದವರು ನಿರ್ಗಮಿಸಿದ ನಂತರವೇ ಪಿಣರಾಯಿ ಮತ್ತು ಕೊಡಿಯೇರಿ ಬಾಲಕೃಷ್ಣನ್‌ ಕಾನ್ಫರೆನ್ಸ್‌ ಕೊಠಡಿಗೆ ಪ್ರವೇಶಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next