Advertisement

ಕರಕೌಶಲದಲ್ಲಿ ಕಣ್ಮನ ಸೆಳೆದ ಕಾವಿಕಲೆ

06:00 AM Sep 28, 2018 | |

ಕಲಾವಲಯದಲ್ಲಿ ನಾವೀಗ ಅಮೂರ್ತತೆಯಿಂದ ಬೇಸತ್ತು ಕೊಂಡು ಸಿಂಹಾವಲೋಕನ ಮಾಡುತ್ತಾ ಹಳೆಯ ಸಂಪ್ರದಾಯ ಮತ್ತು ಶೈಲಿಯೆಡೆಗೆ ವಾಲುತ್ತಿದ್ದೇವೆ. ಹಳೆಯದನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಹೊಸತನದ ರೂಪದಲ್ಲಿ ಕಾಣಲು ನಮ್ಮ ಮನಸ್ಸು ಹಪಹಪಿಸುತ್ತಿದೆ. ಹಾಗಾಗಿ ಈಗ ಬುಡಕಟ್ಟು ಜನಾಂಗದ ಕಾವಿಕಲೆ ಹೆಚ್ಚು ಪ್ರಚಾರ ಪಡೆಯುತ್ತಿದೆ. ಹೊಸ ಮನೆ, ಸಭಾಭವನ, ದೇವಸ್ಥಾನಗಳ ಗೋಡೆ ಇಂದು ಕಾವಿಕಲೆಯಿಂದ ಕಂಗೊಳಿಸುತ್ತಿವೆ. ಸಾಂಪ್ರದಾಯಿಕ ಶೈಲಿಗಳ ಮಿಳಿತದಿಂದ ನಾವು ಗತವೈಭವದೆಡೆಗೆ ಸಾಗುತ್ತಿದ್ದೇವೆ. ಈ ಬಗ್ಗೆ ಸಂಶೋಧನೆಗಳೂ ನಡೆಯುತ್ತಿವೆ. ಅನೇಕ ಕಲಾವಿದರೂ ಹುಟ್ಟಿಕೊಂಡಿದ್ದಾರೆ. ಕೆಲವರು ವಿಶೇಷ ಸಾಧನೆ ಮಾಡಿ ಕಲಾಭಿಮಾನಿಗಳ ಮನಗೆದ್ದಿದ್ದಾರೆ. ಅಂತಹವರಲ್ಲಿ ಒಬ್ಬರು ಮಂಗಳೂರಿನ ಕಲಾವಿದೆ ವೀಣಾ ಶ್ರೀನಿವಾಸ್‌. ಅವರ ಕಾವಿಕಲೆ ಕಲಾಕೃತಿಗಳ ಪ್ರದರ್ಶನ ಮಣಿಪಾಲದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಮಿಲಾಪ್‌ ಸಂಸ್ಥೆಯವರು ನಡೆಸಿದ ಕಲಾಪ್ರದರ್ಶನದಲ್ಲಿ ನಡೆಯಿತು.  

Advertisement

ಹಿಂದೆ ಕಾವಿಕಲೆಯನ್ನು ಗೋಡೆಯ ಸುಣ್ಣದ ಗಾರೆಯ ಮೇಲೆ ಕೆಂಪು ಕಾವಿ ಗಾರೆಯ ತೆಳುಲೇಪನವನ್ನು ಹಚ್ಚಿ ಅದು ತೇವವಿರುವಾಗಲೇ ಅದರ ಮೇಲೆ ಚಿತ್ರದ ನಕ್ಷೆ ಬರೆದು ಬೇಕಾದೆಡೆ ಸೂಕ್ಷ್ಮ ಚೂರಿಗಳಿಂದ ಕೆರೆಸಿ ತೆಗೆದು ಹಿಂಬದಿ ಬಿಳಿಭಾಗವೇ ಗೆರೆಯಾಗಿ ಕಾಣುವಂತೆ ರಚಿಸುತ್ತಿದ್ದರು. ಇದು ಸೂಕ್ಷ್ಮ ಕೆಲಸವಾದ್ದರಿಂದ ಗಾರೆ ಜಾರಿಬಿದ್ದು ಚಿತ್ರ ಕೆಡುವ ಸಂಭವವೂ ಇತ್ತು. ಆದರೆ ಇದೀಗ ತಾಂತ್ರಿಕತೆ ಹೆಚ್ಚಿದಂತೆ ಕ್ಯಾನ್ವಾಸ್‌ ಮೇಲೆ ಕಾವಿಚಿತ್ರ ಬರೆಯುವ ವಿಧಾನ ಚಾಲ್ತಿಗೆ ಬಂದಿದೆ. ಇದರಿಂದ ಚಿತ್ರವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಅನುಕೂಲವಾಗುತ್ತದೆ. ಕ್ಯಾನ್ವಾಸ್‌ ಮೇಲೆ ಕಾವಿಚಿತ್ರವನ್ನು ಆಕ್ರಿಲಿಕ್‌ ಬಣ್ಣದಿಂದ ಸೂಕ್ಷ್ಮ ಬ್ರಶ್‌ಗಳನ್ನು ಬಳಸಿ ಬರೆಯುತ್ತಾರೆ. ಇಲ್ಲಿ ಗೋಡೆಯಂತೆ ಗಾರೆಯ ಲೇಪನ ನೀಡಿ ಕೆರೆಸಿ ತೆಗೆಯುವ ತಂತ್ರ ಅನುಸರಿಸುವುದಿಲ್ಲ. ಅದು ಈಗಿನ ತಾಂತ್ರಿಕತೆಗೆ ಸಿಂಧುವಲ್ಲ. ಕಲಾವಿದೆ ವೀಣಾ ಶ್ರೀನಿವಾಸ್‌ ಇದೇ ಕ್ರಮದಲ್ಲಿ ಕಾವಿಚಿತ್ರಗಳನ್ನು ದೊಡ್ಡ ದೊಡ್ಡ ಕ್ಯಾನ್ವಾಸ್‌ ಮೇಲೆ ಸೂಕ್ಷ್ಮಾತಿಸೂಕ್ಷ್ಮ ರೇಖೆಗಳಿಂದ ಚಿತ್ರಿಸಿದ್ದು ನೋಡಲು ಮನೋಜ್ಞವಾಗಿದೆ. 

ಕಲಾವಿದೆ ವೀಣಾ ಶ್ರೀನಿವಾಸ್‌ ಅವರು ತಮ್ಮ ಕಲಾಕೃತಿಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತ, ದೇವಿ ಮಹಾತೆ¾ ಪುರಾಣಗಳಿಂದ ಆಯ್ದ ಸಂದರ್ಭಗಳನ್ನು ತಮ್ಮದೇ ಆದ ಚಿತ್ರಸಂಯೋಜನೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಬಿಳಿ ಹಿನ್ನೆಲೆಯಲ್ಲಿ ಕಾವಿಬಣ್ಣದಿಂದ ಬರೆದಿರುವ ನವುರಾದ ರೇಖಾವಿನ್ಯಾಸಗಳು, ಮುಗ್ಧಮನೋಹರ ರೂಪಗಳು, ತ್ರಿಭಂಗಿ ಮಧುರಾಕೃತಿಯ ದೇಹ, ಸ್ಪುಟವಾದ ಕೈಕಾಲು ಬೆರಳುಗಳು, ಸೂಕ್ಷ್ಮವಾಗಿ ಮೂಡಿಬಂದಿದ್ದು ಇವರ ತಾಳ್ಮೆ ಮತ್ತು ಕೌಶಲವನ್ನು ವ್ಯಕ್ತಪಡಿಸುತ್ತವೆ. ಇವರು ವಿಷಯದ ಒಳಹೊಕ್ಕು ಅದರ ಮರ್ಮವನ್ನು ಚಿತ್ರದಲ್ಲಿ ರೂಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಂದು ಚಿತ್ರದ ಕೆಳಗಡೆ ಅದಕ್ಕೆ ಸಂಬಂಧಿಸಿದ ಶ್ಲೋಕಗಳನ್ನು ಬರೆದು ಚಿತ್ರಕ್ಕೆ ಪುಷ್ಟಿಕೊಟ್ಟಿದ್ದಾರೆ. ಇವರ ಚಿತ್ರ ಸಂಯೋಜನಾ ತಂತ್ರ ಅದ್ಭುತವಾಗಿದೆ‌. ಉದಾಹರಣೆಗೆ ದಶಾವತಾರ ಚಿತ್ರದಲ್ಲಿ ಮತ್ಸ ಕೂರ್ಮ (ನೀರಿನೊಳಗಿನ) ಅವತಾರಗಳನ್ನು ವಿಷ್ಣುವಿನ ಕಾಲಬುಡದಲ್ಲಿಯೂ ಉಳಿದ ಅವತಾರ ಸ್ವರೂಪಗಳನ್ನು ಮುಖದ ಭಾಗದಲ್ಲಿ ಒಟ್ಟಿಗೆ ನಿರೂಪಿಸಿರುವುದು, ಅದೇ ರೀತಿ ಮಹಾಲಕ್ಷ್ಮೀ ಧ್ಯಾನ ಚಿತ್ರ, ಭರತನ ಭಕ್ತಿ, ನರಸಿಂಹಾವತಾರ, ಅರ್ಜುನ ಸಾರಥಿ, ಸೀತಾ ಅಗ್ನಿಪ್ರವೇಶ, ಜಟಾಯು ವಧೆ, ರಾಧಾಕೃಷ್ಣ, ದಶಾವತಾರದ ಇನ್ನೊಂದು ಚಿತ್ರ, ಚಂದ್ರಮಂಡಲ, ಸೂರ್ಯಮಂಡಲ, ತ್ರಿಮುಖ ಗಣಪತಿ, ಶಕ್ತಿಸ್ವರೂಪಿಣಿ ಇತ್ಯಾದಿ ಮನೋಹರವಾಗಿವೆ. ಕರಾವಳಿ ಕಲಾವಿದರಲ್ಲಿ ಕಾವಿಕಲೆಯಲ್ಲಿ ವೀಣಾ ಶ್ರೀನಿವಾಸ್‌ ಅವರಷ್ಟು ಆಳವಾಗಿ ಅಧ್ಯಯನ ಮಾಡಿ ಕಾವಿಕಲೆ ರಚಿಸಿದ ಕಲಾವಿದರು ಅತಿವಿರಳ. 

  ಉಪಾಧ್ಯಾಯ ಮೂಡುಬೆಳ್ಳೆ
 

Advertisement

Udayavani is now on Telegram. Click here to join our channel and stay updated with the latest news.

Next