Advertisement

ಕನ್ನಡಮ್ಮನ ತೇರು ಎಳೆಯಲು ನರಸಲಗಿ ಸಿದ್ಧ

05:19 PM Feb 17, 2018 | |

ಹೂವಿನಹಿಪ್ಪರಗಿ: ಪ್ರಥಮ ಬಾರಿಗೆ ಸಮೀಪದ ನರಸಲಗಿಯಲ್ಲಿ ಫೆ. 17ರಂದು ನಡೆಯಲಿರುವ ತಾಲೂಕು ಏಳನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಬೃಹತ್‌ ವೇದಿಕೆ, ಪುಸ್ತಕ ಮಳಿಗೆಗಳ ನಿರ್ಮಾಣ, ಊಟ ಸೇರಿದಂತೆ ಅನೇಕ ಕಾರ್ಯಗಳಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ಗ್ರಾಪಂ, ವಿವಿಧ ಸಂಘ ಸಂಸ್ಥೆಗಳು, ಶಿಕ್ಷಕರು, ವ್ಯಾಪಾರಿಗಳು ಸಾಹಿತ್ಯಾಸಕ್ತರು ಸೇರಿದಂತೆ ವಿವಿಧ ಇಲಾಖೆಗಳು ಕಾರೊನ್ಮುಖವಾಗಿವೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿನ ಸ್ತಬ್ಧ ಚಿತ್ರಗಳಿಗಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ವಿಶಾಲವಾದ ವೈರಾಗ್ಯನಿಧಿ ಅಕ್ಕಮಹಾದೇವಿ ಮಹಾಮಂಟಪ, ಶ್ರೀ ವಿಶ್ವಗುರು ಬಸವಣ್ಣನವರ ಪ್ರಧಾನ ವೇದಿಕೆ, ಮಾರುತೇಶ್ವರ ಮಹಾದ್ವಾರ, ಶ್ರೀ ಪವಾಡಬಸವೇಶ್ವರ ದಾಸೋಹ ಮನೆ ಸಿದ್ಧವಾಗಿವೆ. ಗ್ರಾಮದ ಹೊರವಲಯದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, 2 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. 150/80 ಅಡಿ ಬೃಹತ್‌ ಪ್ರಮಾಣದ ವೇದಿಕೆ ನಿರ್ಮಾಣ ಮುಗಿದಿದ್ದು, ಜಿಲ್ಲೆಯ ವಿವಿಧ ಕಡೆಗಳಿಂದ ಅಂದಾಜು 5 ಸಾವಿರಕ್ಕಿಂತಲೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಖಡಕ್‌ ಜೋಳದ ರೊಟ್ಟಿ, ಬದನೆಕಾಯಿ ಪಲೆÂ, ಮೊಸರು, ಸಿರಾ, ಅನ್ನ ಸಾರಿನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಆರ್‌ .ಜಿ. ಅಳ್ಳಗಿ ಹಾಗೂ ಗೌರವ ಕಾರ್ಯದರ್ಶಿ ಪ್ರೊ| ಯುವರಾಜ ಮಾದನಶೆಟ್ಟಿ ತಿಳಿಸಿದ್ದಾರೆ. ತಮ್ಮೂರಿನ ಜಾತ್ರೆ ನಡೆಯುವ ಹಾಗೇ ಕಳೆದ ವಾರದಿಂದ ಗ್ರಾಮವನ್ನು ಸಿಂಗರಿಸುವಲ್ಲಿ ಸಾರ್ವಜನಿಕರು ನಿರತರಾಗಿದ್ದಾರೆ.

ಗ್ರಾಮಸ್ಥರು ಗ್ರಾಮವನ್ನು ಸ್ವತ್ಛಗೊಳಿಸಿದ್ದಾರೆ. ಮುಖ್ಯ ರಸ್ತೆಗಳ ಕಂಬಗಳಿಗೆ ಕನ್ನಡದ ಧ್ವಜ ಹಾಗೂ ಬಾವುಟಗಳು ರಾರಾಜಿಸುತ್ತಿದ್ದು, ಗ್ರಾಮದ ಪ್ರಮುಖ ಓಣಿಗಳಲ್ಲಿ ಗೋಡೆ ಬರಹಗಳು ಸಾಹಿತ್ಯಾಸಕ್ತರನ್ನು ಕೈಬೀಸಿ ಕರೆಯುತ್ತಿವೆ. ಸಮ್ಮೇಳನದ ಕುರಿತಾಗಿ ಜಾಗೃತಿ ಮೂಡಿಸಲು ಗ್ರಾಮದ 100ಕ್ಕೂ ಅಧಿಕ ಕಾರ್ಯಕರ್ತರು ಫೆ. 16ರ ಬೆಳಗ್ಗೆಯಿಂದಲೇ ಕೊಡಗಾನೂರು, ಇವಣಗಿ, ಹಾಲಿಹಾಳ, ಅಂಬಳನೂರು ಬಸವನಬಾಗೇವಾಡಿ ಸೇರಿದಂತೆ ಸುತ್ತಮುತ್ತಲಿನ ಊರುಗಳಿಗೆ ಬೈಕ್‌ ಮೂಲಕ ತೆರಳಿ ಕನ್ನಡಮ್ಮನ ಜಾತ್ರೆಗೆ ಜನರಿಗೆ ಆಹ್ವಾನಿಸುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ಸಮ್ಮೇಳನ ನಮ್ಮೂರು ಜಾತ್ರೆ ಎಂದು ತಿಳಿದ ಗ್ರಾಮಸ್ಥರು ಪ್ರತಿ ಮನೆಯಿಂದ 20 ರೊಟ್ಟಿಗಳಂತೆ 5 ಸಾವಿರ ರೊಟ್ಟಿಗಳನ್ನು ಸಂಗ್ರಹಿಸಿ ಸಾಹಿತ್ಯಾಸಕ್ತರಿಗೆ ಬಡಿಸಲು ಸಿದ್ಧರಾಗಿದ್ದಾರೆ.

ಸಕಲ ಸಿದ್ಧತೆ
ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ. 17ರಂದು ಹಮ್ಮಿಕೊಂಡಿರುವ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಆರ್‌.ಜಿ. ಅಳ್ಳಗಿ, ಗೌರವ ಕಾರ್ಯದರ್ಶಿ ಯುವರಾಜ ಮಾದನಶೆಟ್ಟಿ ತಿಳಿಸಿದರು. 

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸಿದ್ಧತೆಗಾಗಿ ಕಸಾಪ ಪದಾಧಿಕಾರಿಗಳು, ಗ್ರಾಮದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಿರಿಯರು ಕಳೆದ ಒಂದು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಸಮಿತಿ ರಚಿಸುವ ಮೂಲಕ ಸಂಘಟಿತ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ವಿ.ಬಿ. ಮರ್ತೂರ, ವಿವೇಕಾನಂದ ಕಲ್ಯಾಣಶೆಟ್ಟಿ, ವೈ.ಕೆ. ಪತ್ತಾರ, ಎಸ್‌.ಎ. ದೇಗಿನಾಳ, ಎಸ್‌.ಬಿ. ಮುತ್ತಗಿ, ಇಸ್‌.ಐ. ಮನಗೂಳಿ, ಬಾಬು ವಾಡೇದ ಇದ್ದರು.

Advertisement

ಫೆ. 17ರಂದು ಬೆಳಗ್ಗೆ 7:30ಕ್ಕೆ ಗ್ರಾಪಂ ಅಧ್ಯಕ್ಷೆ ಭಾರತಿ ಪಾಟೀಲ ರಾಷ್ಟ್ರಧ್ವಜ, ಕಸಾಪ ಅಧ್ಯಕ್ಷ ಆರ್‌.ಜಿ. ಅಳ್ಳಗಿ ಪರಿಷತ್‌ ಧ್ವಜ, ಪಿಎಸ್‌ಐ ಶರಣಗೌಡ ಗೌಡರ ನಾಡಧ್ವಜಾರೋಹಣ ನೆರವೇರಿಸುವರು. ಖ್ಯಾತ ಸಂಶೋಧಕ ಡಾ| ವಾಸುದೇವ ಬಡಿಗೇರ ಸರ್ವಾಧ್ಯಕ್ಷತೆ ವಹಿಸುವರು. ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಮೆರವಣಿಗೆ ಉದ್ಘಾಟಿಸುವರು.

ಸಕಲ ವಾಧ್ಯ ವೈಭವಗಳೊಂದಿಗೆ ವಿವಿಧ ಕಲಾ ತಂಡಗಳೊಂದಿಗೆ ಸರ್ವಾಧ್ಯಕ್ಷರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಗುವುದು. ಬೆಳಗ್ಗೆ 10:30ಕ್ಕೆ ಸಮ್ಮೇಳನವನ್ನು ಜಾನಪದ ವಿದ್ವಾಂಸ ಶಂಭು ಬಳಿಗಾರ ಉದ್ಘಾಟಿಸುವರು. ಮಧ್ಯಾಹ್ನ ಗೋಷ್ಠಿ, ಉಪನ್ಯಾಸ ನಡೆಯಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಗುರುರಾಜ ಬ. ಕನ್ನೂರ

Advertisement

Udayavani is now on Telegram. Click here to join our channel and stay updated with the latest news.

Next