Advertisement

ಜಿಲ್ಲಾದ್ಯಂತ ‘ಜಲ ಶಕ್ತಿ ಅಭಿಯಾನ’

04:17 PM Apr 20, 2022 | Team Udayavani |

ಹಾವೇರಿ: ಜಿಲ್ಲೆಯ ಜಲಮೂಲಗಳ ರಕ್ಷಣೆ ಹಾಗೂ ಪುನಃಶ್ಚೇತನಗೊಳಿಸುವ ಮೂಲ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಬಡಜನರಿಗೆ ವಾಸಸ್ಥಳದಲ್ಲಿಯೇ ಉದ್ಯೋಗ ನೀಡುವ ಮೂಲಕ ಏಪ್ರಿಲ್‌ನಿಂದ ಜಿಲ್ಲಾದ್ಯಂತ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಕಾಮಗಾರಿ ಕೈಗೊಳ್ಳಲು “ಜಲ ಶಕ್ತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.

Advertisement

ಜಲಶಕ್ತಿ ಅಭಿಯಾನದಡಿ ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳನ್ನು ಪುನಃ ಶ್ಚೇತನಗೊಳಿಸುವುದು, ನೀರಿನ ಪುನರ್‌ ಬಳಕೆ ಮತ್ತು ರೀಚಾರ್ಜ್‌ ಸಂರಚನೆ, ಜಲಾನಯನ ಅಭಿವೃದ್ಧಿ-ದಿಬ್ಬದಿಂದ ಕಣಿವೆ ಇನ್‌ಟೆನ್ಸಿವ್‌ ಅರಣ್ಯೀಕರಣ ಈ ಐದು ತತ್ವಗಳ ಆಧಾರದ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಲಸಂರಕ್ಷಣೆ ಕಾಮಗಾರಿಗಳಾದ ಸಮಗ್ರ ಕೆರೆ ಅಭಿವೃದ್ಧಿ, ಮಳೆ ನೀರು ಕೊಯ್ಲು, ಅಂತರ್ಜಲ ಹೆಚ್ಚಳ ಮಾಡುವ, ಮಣ್ಣಿನ ತೇವಾಂಶ ಹೆಚ್ಚಿಸುವ, ಅರಣ್ಯೀಕರಣ ಒಳಗೊಂಡಂತೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೆರೆಗಳ ಹೊಳೆತ್ತುವ ಕಾಮಗಾರಿಗಳು ಮತ್ತು ಕೆರೆಗಳ ಒತ್ತುವರಿ ತೆರವುಗೊಳಿಸುವುದು, ಆಸ್ತಿ ದಾಖಲೆಗಳ ಖಾತರಿಪಡಿಸುವುದು, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಅಭಿಯಾನದಡಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನೀರಿನ ಸಂರಕ್ಷಣೆ-ಮಳೆ ನೀರು ಕೊಯ್ಲು: ಮಹಾತ್ಮಗಾಂಧಿ  ನರೇಗಾ ಯೋಜನೆಯಡಿ ಅಥವಾ ಇತರೆ ಸರ್ಕಾರಿ ಯೋಜನೆಯಡಿ ನಿರ್ಮಿಸಲಾಗಿರುವ ಕಟ್ಟಡಗಳ ಛಾವಣಿಯ ಮೇಲ್ಭಾಗದಲ್ಲಿ ಮಳೆ ನೀರು ಕೊಯ್ಲುಗಳು ಅಸ್ಥಿತ್ವದಲ್ಲಿರುವ ನೀರಿನ ಕೊಯ್ಲು ಸಂರಚನೆಗಳ ನಿರ್ವಹಣೆ ಕೈಗೊಳ್ಳುವುದು, ಸಾಂಪ್ರದಾಯಿಕ ನೀರು ಕೊಯ್ಲು ನವೀಕರಣ ಮಾಡುವುದು, ಕೆರೆ ಒತ್ತುವರಿ ಹಾಗೂ ಅವುಗಳ ಕ್ಯಾಚ್‌ ಮೆಂಟ್‌ ಚನಲ್‌ ಮಾಡುವುದು, ಜಲಾನಯನ ಅಭಿವೃದ್ಧಿ, ಸಣ್ಣ ನದಿಗಳು ಮತ್ತು ನದಿಗಳ ಪುನರುಜ್ಜೀವನ ಮಾಡುವುದು, ಜಲಾನಯನ ಅಭಿವೃದ್ಧಿ, ಜೌಗು ಪ್ರದೇಶಗಳ ಪುನರುಜ್ಜೀವನ ಮತ್ತು ಪ್ರವಾಹ ದಡಗಳ ಸಂರಕ್ಷಣೆ, ನೀರಿನ ಜಲಾನಯನ ಪ್ರದೇಶಗಳಲ್ಲಿ ಸ್ಟ್ರಿಂಗ್‌ ಶೆಡ್‌ ಅಭಿವೃದ್ಧಿಪಡಿಸಲಾಗುವುದು.

Advertisement

ಕಾಲುವೆಗಳ ಪುನಃಶ್ಚೇತನ: ಗೂಗಲ್‌ ಅರ್ಥ ಅಥವಾ ದಿಶಾಂಕ್‌ ಮೊಬೈಲ್‌ ಅಪ್ಲಿಕೇಶನ್‌ ಬಳಸಿಕೊಂಡು ಕೆರೆಗೆ ನೀರು ಹರಿದು ಬರುವ ಕಾಲುವೆ, ಹಳ್ಳಗಳನ್ನು ಗುರುತಿಸಿ ಅವುಗಳನ್ನು ದುರಸ್ತಿಗೊಳಿಸುವುದು ಮತ್ತು ಹೊಳು ತೆಗೆಯುವುದು. ಈ ಕಾಮಗಾರಿ ಕಡಿಮೆ ಶ್ರಮದ ಕಾಮಗಾರಿ ಆಗಿರುವುದರಿಂದ ಇದರಲ್ಲಿ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಕೆಲಸ ನೀಡಬಹುದು. ಈ ಕಾಲುವೆ, ಹಳ್ಳಗಳ ನೀರು ಕೆರೆಗೆ ಪ್ರವೇಶಿಸುವ ಸ್ಥಳದಲ್ಲಿ ಸಿಲ್ಟ್ ಟ್ರ್ಯಾಪ್ ನಿರ್ಮಿಸಲಾಗುವುದು.

ಹೊಳು ತೆಗೆಯುವುದು: ಕೆರೆಯಲ್ಲಿನ ಹೂಳನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿ ತೆಗೆಯವುದು. ಈ ಹೂಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಣ್ಣ ರೈತರ ಅಗತ್ಯವಿರುವ ಹೊಲ, ಗದ್ದೆಗಳಿಗೆ ಸಾಗಿಸಲು ನಿಯಮಾನುಸಾರ ನೆರವಾಗುವುದು. ಕೆರೆಯಲ್ಲಿ ಬೆಳೆದಿರುವ ಜಂಗಲ್‌ ತೆಗೆಯುವುದು, ಏರಿಗಳ ದುರಸ್ತಿ ಹಾಗೂ ಏರಿಯನ್ನು ಸ್ಥಿರೀಕರಣಗೊಳಿಸಲು ಇಳಿಜಾರುಗಳಲ್ಲಿ ಗಿಡಗಳನ್ನು ನೆಡುವುದು, ಕೆರೆಯ ನೀರು ಸಂಗ್ರಹವಾಗುವ ಭಾಗಕ್ಕೆ ರಿವೀಟ್‌ಮೆಂಟ್‌ ಮಾಡುವುದು, ಸಂಗ್ರಹಿಸಿದ ನೀರನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಕೆರೆ ಕೋಡಿ ಮತ್ತು ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶಗಳಲ್ಲಿನ ಸಸಿಗಳನ್ನು ಬೆಳೆಸುವುದು ಮತ್ತು ಅಗತ್ಯವಿದ್ದಲ್ಲಿ ನಿಯಮಾನುಸಾರ ಕೆರೆ ಸೌಂದರ್ಯೀಕರಣ ಹಾಗೂ ವಾಕಿಂಗ್‌ ಟ್ರ್ಯಾಕ್ ನಿರ್ಮಿಸಲಾಗುವುದು.

ಇತರೆ ಕಾಮಗಾರಿಗಳು: ಜಿಲ್ಲಾದ್ಯಂತ ಜಲಶಕ್ತಿ ಅಭಿಯಾನದಡಿ ಕಲ್ಯಾಣಿಗಳ ಪುನಃಶ್ಚೇತನ, ನಾಲಾ ಪುನಃಶ್ಚೇತನ, ಗೋಕಟ್ಟೆಗಳ ನಿರ್ಮಾಣ, ಹೊಸ ಕೆರೆಗಳ ನಿರ್ಮಾಣ, ಸೋಕ್‌ ಪಿಟ್‌, ಮಲ್ಟಿ ಆರ್ಚ್‌, ಗೇಬಿಯಾನ್‌ ಚೆಕ್‌ ಡ್ಯಾಂ, ಬೋರ್‌ ವೆಲ್‌ ರಿಚಾರ್ಜ್‌, ಚೆಕ್‌ಡ್ಯಾಂಗಳ ಹೂಳು ತೆಗೆಯುವುದು, ಅರಣ್ಯೀಕರಣ ಕಾಮಗಾರಿಗಳು, ರೈತರ ಜಮೀನುಗಳಲ್ಲಿ ಸಸಿ ನೆಡುವುದು, ಬದು ಕೃಷಿ ಹೊಂಡ ಮತ್ತು ತೆರೆದ ಬಾವಿಗಳ ನಿರ್ಮಾಣ, ಜಲ ಸಂರಕ್ಷಣೆ ಕಾಮಗಾರಿಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ನೀರು ಸಂರಕ್ಷಣಾ ಕಾಮಗಾರಿಗಳ ಸಮಗ್ರ ಅಭಿವೃದ್ಧಿ: ನೀರು ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಅಡಿ 1310 ಕಾಮಗಾರಿಗಳ ಗುರಿ ಹೊಂದಿದ್ದು, 1931 ಸಾಧನೆ ಮಾಡಲಾಗಿದೆ. ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳು, ತೊಟ್ಟಿಗಳ ನವೀಕರಣದ 324 ಕಾಮಗಾರಿಗಳ ಗುರಿ ಎದುರು 472 ಸಾಧನೆ ಮಾಡಲಾಗಿದೆ. ಮರುಪೂರಣ ಘಟಕಗಳ 5610 ಕಾಮಗಾರಿಗಳ ಗುರಿ ಎದುರು 5138 ಸಾಧನೆ ಮಾಡಲಾಗಿದೆ. ಜಲಾನಯನ ಅಭಿವೃದ್ಧಿಯ 2593 ಕಾಮಗಾರಿಗಳ ಗುರಿ ಎದುರು 2847 ಸಾಧನೆ ಮಾಡಲಾಗಿದೆ. ಅರಣ್ಯೀಕರಣದ 3855 ಕಾಮಗಾರಿಗಳ ಗುರಿ ಎದುರು 3602 ಸಾಧನೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ನೀರು ಸಂರಕ್ಷಣಾ ಕಾಮಗಾರಿಗಳನ್ನು ಸಮಗ್ರ ಅಭಿವೃದ್ಧಿಪಡಿಸುವತ್ತ ಹೆಜ್ಜೆ ಇಡಲಾಗಿದೆ.

ಜಿಲ್ಲಾದ್ಯಂತ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ “ಜಲ ಶಕ್ತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಅತೀ ಹೆಚ್ಚು ಮಳೆ ನೀರು ಸಂರಕ್ಷಣೆ ಮತ್ತು ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳನ್ನು ಅಭಿಯಾನದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಅಭಿಯಾನದ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಈಗಾಗಲೇ ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಲಾಗಿದೆ. –ಮಹಮ್ಮದ್‌ ರೋಷನ್‌, ಜಿಪಂ ಸಿಇಒ, ಹಾವೇರಿ

ಜಲಶಕ್ತಿ ಅಭಿಯಾನದಡಿ 2021-22ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 13692 ಕಾಮಗಾರಿಗಳನ್ನು ಕೈಗೊಂಡಿದ್ದು, 10154 ಕಾಮಗಾರಿಗಳು ಮುಕ್ತಾಯಗೊಂಡಿವೆ ಅಲ್ಲದೇ, 3538 ಕಾಮಗಾರಿಗಳು ಪ್ರಗತಿಯಲ್ಲಿವೆ. -ಎಸ್‌.ಬಿ.ಮುಳ್ಳಳ್ಳಿ, ಜಿಪಂ ಉಪಕಾರ್ಯದರ್ಶಿ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next