Advertisement

ಕರ್ನಾಟಕ ಸರಕಾರ ಗಡಿಭಾಗದ ಕನ್ನಡಿಗರತ್ತ ಒಲವು ಹರಿಸಲಿ

01:58 PM Nov 03, 2018 | |

ಸೊಲ್ಲಾಪುರ: ಕನ್ನಡ ಭಾಷೆ ಹೃದಯ ಭಾಷೆಯಾಗಿದ್ದು, ಅದು ನಮ್ಮೆಲ್ಲರ ಉಸಿರಾಗಿದೆ. ಭೌತಿಕವಾಗಿ ಸೊಲ್ಲಾಪುರ ಮಹಾರಾಷ್ಟ್ರದ್ದಾಗಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರ ರಾಜ್ಯದ ಪ್ರತಿರೋಧದ ಮಧ್ಯೆಯೂ ಇಲ್ಲಿನ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ನಿರತರಾಗಿದ್ದಾರೆ. ಆದರೆ ಇದಕ್ಕೆ ಕರ್ನಾಟಕದಿಂದ ಸೂಕ್ತ ಪ್ರತಿಫಲ ಸಿಗುತ್ತಿಲ್ಲವೆಂದು ನರೋಣಾ ಮಠದ ಪೂಜ್ಯ ಶ್ರೀ ಚನ್ನಮಲ್ಲ ಮಹಾಸ್ವಾಮೀಜಿ ಅವರು  ಕಳವಳ ವ್ಯಕ್ತಪಡಿಸಿದರು.

Advertisement

ನ. 1ರಂದು ಅಕ್ಕಲ್‌ಕೋಟದ ವಿರಕ್ತ ಮಠದಲ್ಲಿ ಆದರ್ಶ ಕನ್ನಡ ಬಳಗವು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಮಹಾರಾಷ್ಟ್ರದ ನೆಲದಲ್ಲಿ ಕರ್ನಾಟಕ ಸರಕಾರದ ಕನ್ನಡ ಭವನ ಇದ್ದರೆ ಎಲ್ಲರಿಗೂ ಅನುಕೂಲವಾಗುತ್ತೆ. ಈ ಭಾಗದ ಕನ್ನಡಿಗರು ಕನ್ನಡ ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಲ್ಲಿಯ ಕನ್ನಡಿಗರು ಅನೇಕ ರೀತಿಯ ಸಮಸ್ಯೆಗಳ ಮಧ್ಯೆಯೂ ಕನ್ನಡತನವನ್ನು ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಕರ್ನಾಟಕ ಸರಕಾರ ಗಡಿಭಾಗದ ಕನ್ನಡಿಗರತ್ತ ಒಲವು ಹರಿಸಲಿ ಎಂದು ಹೇಳಿದರು.

ಅಕ್ಕಲ್‌ಕೋಟೆ ವಿರಕ್ತ ಮಠದ ಪೂಜ್ಯ ಬಸವಲಿಂಗ ಮಹಾ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷಾ ಬಾಂಧವ್ಯ ಬೆಸೆಯುವ ಭಾಷೆಯಾಗಿದ್ದು, ಕನ್ನಡ ನುಡಿ ನಮ್ಮೆಲ್ಲರ ಹೃದಯದ ಭಾಷೆ. ಆದ್ದರಿಂದ ಎಂದಿಗೂ ನಾವು ನಮ್ಮ ಭಾಷೆಯನ್ನು ಮರೆಯಬಾರದು. ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಆದರ್ಶ ಕನ್ನಡ ಬಳಗದ ಕಾರ್ಯ ಗಡಿಭಾಗದಲ್ಲಿ ನಿಜಕ್ಕೂ ಉನ್ನತ ಮಟ್ಟಕ್ಕೆ ಬೆಳೆದಿದ್ದು ಕನ್ನಡ ಪರ ಯಾವುದೇ ಕಾರ್ಯಕ್ರಮಗಳಿಗೆ ತಾವು ಸಹಕರಿಸುವುದಾಗಿ ಹೇಳಿದರು.

ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್‌ ಶೇಖ್‌ ಮಾತನಾಡಿ, ಎಲ್ಲರೂ ನಮ್ಮವರೆ ಎಂಬ ಭಾಷಾ ಸಾಮರಸ್ಯವನ್ನು ಮಹಾರಾಷ್ಟ್ರದ ಕನ್ನಡಿಗರಿಂದ ಕಲಿಯಬೇಕು. ಕನ್ನಡಮ್ಮನ ಮಡಿಲಿನಿಂದ ದೂರವಿದ್ದರೂ ಸದಾ ಕನ್ನಡಮ್ಮನನ್ನು ಆರಾಧಿಸುತ್ತಾ ಬಂದವರು. ಇಲ್ಲಿನ ಕನ್ನಡಿಗರು ಎಂದಿಗೂ ಮರಾಠಿ ಭಾಷೆಯನ್ನು ಹಿಯಾಳಿಸುವುದಿಲ್ಲ. ಹೊರನಾಡಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲು ಕರ್ನಾಟಕ ಸರ್ಕಾರ ಪ್ರತಿವರ್ಷ ಅನುದಾನ ನೀಡಬೇಕು. ಇಲ್ಲಿಯ ಕನ್ನಡಿಗರನ್ನು ಒಳನಾಡಿನ ಕನ್ನಡಿಗರಂತೆ ಪರಿಗಣಿಸಬೇಕು. ಅಲ್ಲದೆ ಕಲೆ, ಸಾಹಿತ್ಯ ಪ್ರೋತ್ಸಾಹದ ಜೊತೆಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಶುಭಹಾರೈಸಿದರು.

ಹಿರಿಯ ಸಾಹಿತಿ ಅ. ಬಾ. ಚಿಕ್ಕಮಣೂರ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಬಸವಲಿಂಗ ಮಹಾಸ್ವಾಮೀಜಿ, ಉದಗಿರದ ಪೂಜ್ಯರಾದ ಶಂಭಲಿಂಗ ಶಿವಾಚಾರ್ಯ ಹಾಗೂ ನರೋಣಾ ಮಠದ ಶ್ರೀಗಳು ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಕಾರ್ಯಕ್ರಮ ಯಶಸ್ವಿಗಾಗಿ ಮಲಿಕಜಾನ್‌ ಶೇಖ್‌, ಬಸವರಾಜ ಧನಶೆಟ್ಟಿ, ವಿದ್ಯಾಧರ ಗುರವ, ಗಿರೀಶ ಜಕಾಪುರೆ, ಸೋಮಶೇಖರ ಜಮಶೆಟ್ಟಿ, ಶರಣಪ್ಪ ಫುಲಾರಿ, ಸಂತೋಷ ಪರೀಟ, ಕಾಸು ಮಣೂರೆ, ಶಿವಾನಂದ ಮಾಳಿ, ಶರಣಯ್ನಾ ಕುಕನೂರ, ವಿರೇಶ ಕೊಳ್ಳೆ ಸೇರಿದಂತೆ ಕನ್ನಡಾಭಿಮಾನಿಗಳು ಶ್ರಮಿಸಿದರು.

ಆದರ್ಶ ಅನುವಾದ ಸಂಸ್ಥೆಯಿಂದ ಕನ್ನಡ ಮತ್ತು ಮರಾಠಿ ಭಾಷೆಯ ಹಲವಾರು ಕಥೆಗಳನ್ನು ಅನುವಾದಿಸುವ ಮೂಲಕ ಈ ಭಾಗದ ಕನ್ನಡಿಗರು ಭಾಷಾ ಬಾಂಧವ್ಯ ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಅನುವಾದ ಕಮ್ಮಟ ಆಯೋಜಿಸಿ ಕನ್ನಡ ಸಾಹಿತ್ಯ ಮರಾಠಿಗೆ ಮತ್ತು ಮರಾಠಿಯಿಂದ ಕನ್ನಡಕ್ಕೆ ತರುವ ಪ್ರಯತ್ನ ಮಾಡಲಿದೆ ಎಂದು ಸಾಹಿತಿ ಗಿರೀಶ ಜಕಾಪುರೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next