Advertisement

ಗೌರಿ ಹತ್ಯೆ: ಕರವೇ ನಾರಾಯಣಗೌಡ, ಜ್ಯೋತಿಷಿ ದ್ವಾರಕನಾಥ್‌ ವಿಚಾರಣೆ

08:21 AM Sep 21, 2017 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಜ್ಯೋತಿಷಿ ದ್ವಾರಕನಾಥ್‌ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದೆ.

Advertisement

ಲಂಕೇಶ್‌ ಪತ್ರಿಕೆಯಲ್ಲಿ ತಮ್ಮ ವಿರುದ್ಧ ಲೇಖನಗಳು ಪ್ರಕಟಿಸಿದ ಗೌರಿ ಲಂಕೇಶ್‌ ಮೇಲೆ ನ್ಯಾಯಾಲಯಗಳಲ್ಲಿ ಮಾನನಷ್ಟ ಮೊಕದ್ದಮೆಗಳನ್ನು ಹೂಡಿದ್ದವರ ಪಟ್ಟಿಯನ್ನು ಎಸ್‌ಐಟಿ ಸಿದ್ಧಪಡಿಸಿದೆ. ಅಂತಹ ಪ್ರಮುಖರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೌರಿ ಲಂಕೇಶ್‌ರೊಂದಿಗೆ ಅಸಮಾಧಾನ ಹೊಂದಿದ್ದ 70ಕ್ಕೂ ಅಧಿಕ ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದ ರಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ವಿರುದ್ಧವೂ ಲಂಕೇಶ್‌ ಪತ್ರಿಕೆಯಲ್ಲಿ ಲೇಖನಗಳು ಪ್ರಕಟಗೊಂಡಿದ್ದವು. ಆದ್ದರಿಂದ ನಾರಾಯಣಗೌಡ 2010ರಲ್ಲಿ ಗೌರಿ ಲಂಕೇಶ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅದರಂತೆ ಜ್ಯೋತಿಷಿ ದ್ವಾರಕನಾಥ್‌ರನ್ನು ಅವರ ನಿವಾಸದಲ್ಲಿ ಎಸ್‌ಐಟಿ ತಂಡ ವಿಚಾರಣೆ ನಡೆಸಿದೆ. ಗೌರಿ ಜತೆಗೆ ವೈರತ್ವ ಹಾಗೂ ಈಚೆಗೆ ಸಂಪರ್ಕ ಹೊಂದಿರುವ ಬಗ್ಗೆ ಹೇಳಿಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇದಲ್ಲದೇ, ನಕ್ಸಲೀಯರ ಕೈವಾಡ, ಬಲಪಂಥೀಯರ ಕೈವಾಡ, ವೈಯಕ್ತಿಕ ದ್ವೇಷ, ಫೇಸ್‌ಬುಕ್‌, ಟ್ವಿಟರ್‌ ಬರಹಗಳು ಸೇರಿದಂತೆ ಹಲವು ಆಯಾಮಗಳನ್ನು ಇಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಹೀಗಾಗಿಯೇ ಅಗತ್ಯವಿದ್ದವರಿಗೆ ನೋಟಿಸ್‌ ಕೊಟ್ಟು ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಗೆ ಸಂಬಂಧಪಟ್ಟಂತೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ನನ್ನ ಕಚೇರಿಗೆ ಬಂದು ಹೇಳಿಕೆ ಪಡೆದಿದ್ದಾರೆ. ಸಂಘಟನೆ ಹಾಗೂ ನನ್ನ ವಿರುದ್ಧ ಲೇಖನಗಳನ್ನು ಬರೆದಿದ್ದರಿಂದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೆ. ಆದರೆ, ನಂತರ ಮುಂದುವರಿಸಿಸಿಲ್ಲ. ಅವರ
ಪಾಡಿಗೆ ಅವರಿದ್ದರು, ನಮ್ಮ ಪಾಡಿಗೆ ನಾವಿದ್ದೆವು. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದೇನೆ.
●ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next