Advertisement

ಗಣೇಶೋತ್ಸವ ಸ್ಪೆಷಲ್ ; ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳಲ್ಲಿ ಬೆಳಗುವ ಬೆಳಕ

10:13 PM Aug 21, 2020 | mahesh |

ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿಯ ದಿನ ದೇಶ ವಿದೇಶಗಳಲ್ಲಿ ಗಣಪತಿಯ ಪೂಜೆ ಮಾತ್ರವಲ್ಲದೇ ಸಾರ್ವಜನಿಕ ಗಣೇಶೋತ್ಸವಗಳು ಸಕಲ ಸಂಭ್ರಮ ಸಡಗರಗಳಿಂದ ನಡೆಯುತ್ತವೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತ ಹೋಗುತ್ತಿದೆ. ಆರಾಧಕರು ಮಣ್ಣಿನ ಗಣಪತಿ ಪ್ರತಿಮೆಯನ್ನು ಅತ್ಯುತ್ಸಾಹದಿಂದ ಆಹ್ವಾನ ಮಾಡಿ ತಮ್ಮ ತಮ್ಮ ಶಕ್ತಿ ಸಾಮರ್ಥ್ಯಗಳಿಗನುಸಾರವಾಗಿ ಪೂಜೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬೇರೆ ಬೇರೆ ದಿನಗಳಲ್ಲಿ ಆ ಮೂರ್ತಿಯ ವಿಸರ್ಜನೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಗಣಪತಿ ಬಪ್ಪಾ ಮೋರ್ಯಾ, ಪುಡ್ಚಾ ವರ್ಷಾ ಲವಕರ್‌ ಯಾ (ಗಣಪತಿ ಅಪ್ಪ ಮರಳಿ ಬಾ, ಮುಂದಿನ ವರ್ಷ ಬೇಗ ಬಾ) ಎಂಬುದಾಗಿ ಹರ್ಷೋದ್ಗಾರ ಮಾಡುತ್ತಾರೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಜನರನ್ನು ಒಂದುಗೂಡಿಸಲು ಬಾಲಗಂಗಾಧರ ತಿಲಕ್‌ ರವರು ಸಾರ್ವಜನಿಕವಾಗಿ ಗಣೇಶನನ್ನು ಪೂಜಿಸುವ ಪದ್ದತಿಯನ್ನು ಪರಿಚಯಿಸಿದರು. ಹೀಗೆ ಗಣೇಶನ ಪೂಜೆಗೆ ಬಹಳ ಹಿಂದಿನಿಂದಲೂ ತುಂಬಾ ಮಹತ್ವವಿದೆ.

Advertisement

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮೂರ್ತಿಯ ರೂಪದಲ್ಲಿ ಆರಾಧಿಸಲ್ಪಡುವ ಗಣಪತಿ ಬೇರೆಲ್ಲ ದೇವತೆಗಳಿಗಿಂತ ಚಿಕ್ಕವನು. ಆದರೆ ಇವನ‌ ಪ್ರಭಾವ ಮಾತ್ರ ಎಲ್ಲರಿಗಿಂತ ದೊಡ್ಡದು. ಲೋಕ ಪ್ರಿಯತೆಯೂ ಅಧಿಕ. ಇವನ ಗುಡಿ ಇಲ್ಲದ ಊರು, ಮಂದಿರಗಳಿಲ್ಲದ ನಗರ ಇಲ್ಲವೆಂದೇ ಹೇಳಬಹುದು. ಗಣಪತಿಯನ್ನು ವಿಘ್ನೇಶ್ವರ ಎಂದು ಕರೆಯುತ್ತಾರೆ. ಏಕೆಂದರೆ ಯಾವುದಾದರೂ ಒಂದು ಶುಭ ಕಾರ್ಯವನ್ನು ಪ್ರಾರಂಭ ಮಾಡುವಾಗ ಅವನ ಪ್ರಾರ್ಥನೆ ಮಾಡದಿದ್ದರೆ ಮುಂದೆ ವಿಘ್ನಗಳು ಬರುತ್ತವೆ ಎಂಬುದು ಜನರ ನಂಬಿಕೆ. ಆದುದರಿಂದ ಪ್ರತಿಯೊಂದು ಕಾರ್ಯದ ಪ್ರಾರಂಭದಲ್ಲಿ ವಿಘ್ನನಾಶಕನ ಪೂಜೆ ಮಾಡುವ ಪದ್ದತಿ ಇದೆ. ಇದರಿಂದ ಎಲ್ಲ ದೇವತೆಗಳ ಪೂಜೆಯೂ ಸಂಪನ್ನವಾಗುತ್ತದೆ.

ಬಹುರೂಪಿಯಾದ ಗಣೇಶ ವಿಶ್ವವ್ಯಾಪಿ. ಟಿಬೆಟ್‌ನಲ್ಲಿ ಗಣೇಶನ ಆರಾಧನೆ ಗಜಾನನಿ ರೂಪದಲ್ಲಿ ನಡೆಯುತ್ತದೆ. ಜಪಾನ್‌ನಲ್ಲಿ ಗಣೇಶನನ್ನು ಗನ್ವಾ , ಬಿನಾಯಕ , ಗಣಬಾಚಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಥಾ„ಲ್ಯಾಂಡ್‌ನ‌ಲ್ಲಿ ಗಣೇಶನನ್ನು ಫ್ರಾ ಫಿಕನೆಟ್‌ ಎನ್ನುತ್ತಾರೆ. ಮ್ಯಾನ್ಮಾರ್‌ನಲ್ಲಿ ಗಣೇಶನನ್ನು ಮಹಾ ಪಿನೈನ್‌ ಎಂದು ಪೂಜಿಸುತ್ತಾರೆ. ಬಾಲಿ ದೇಶದಲ್ಲಿ ಗಣೇಶನ ಸ್ತ್ರೀ ರೂಪ ಗಣೇಂದ್ರಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಿದೆ. ನೇಪಾಳದಲ್ಲಿ ಹೇರಂಬ ಗಜಾನನ ಸಿಂಹದ ಮೇಲೆ ಏರಿದ್ದಾನೆ. ಶ್ರೀಲಂಕಾದ ಕಟರಗ್ರಾಮದಲ್ಲಿ ಚತುಭುìಜ ಗಣಪತಿ ಮೂರ್ತಿಯ ಮಂದಿರವಿದೆ. ಚೀನಾದಲ್ಲಿ ದ್ವಿಹಸ್ತ ಮಂಡಿಯೂರಿದ ಗಣಪತಿಗಳು ಕಂಡುಬರುತ್ತದೆ. ಕಾಂಬೋಡಿಯಾದಲ್ಲಿ ಬಲಕಾಲನ್ನು ಎಡಕಾಲಿನ ಮೇಲೆ ಇಟ್ಟು ಮಂಡಿ ಹಾಕಿಕೊಂಡ ದ್ವಿಭುಜ ಗಣಪತಿಗಳಿವೆ. ನ್ಯೂಯಾರ್ಕ್‌ನಲ್ಲಿ ಕೃಷ್ಣಪಾಷಾಣದ ಗಣಪತಿ ಮೂರ್ತಿಗಳಿವೆ. ಅಫಘಾನಿಸ್ತಾನದಲ್ಲಿ ಅಮೃತಶಿಲೆ, ಮಾರಿಷಸ್‌ನಲ್ಲಿ ಗ್ರೆನಾ„ಟ್‌ ಹಾಗೂ ರೋಮ್‌ನಲ್ಲಿ ಕಾಷ್ಟಶಿಲ್ಪದಲ್ಲಿ ಗಣಪ ಮೂಡಿ ಬಂದಿದ್ದಾನೆ. ಮದ್ಯಏಶಿಯಾ, ಜಾವಾ, ಇಂಡೋಚೆ„ನಾ, ಬೋರ್ನಿಯೋ, ಮೆಕ್ಸಿಕೊ, ಟೊರಾಂಟೊ, ಜರ್ಮನಿ ಮೊದಲಾದ ದೇಶಗಳಲ್ಲಿ ಗಣೇಶನ ದೇವಾಲಯಗಳು ಸ್ಥಾಪಿತವಾಗಿವೆ. ಇಂಡೋನೇಷ್ಯ ನೋಟಿನಲ್ಲಿ ಗಣಪತಿ ಮೂಡಿಬಂದಿದ್ದಾನೆ. ಲಾವೋಸಿನಲ್ಲಿ ಹೊರಡಿಸಲ್ಪಟ್ಟ ಗಣೇಶನ ಸ್ಟಾಂಪ್‌ ಅವನ ಅಂತರಾಷ್ಟ್ರೀಯತೆಗೆ ಒಂದು ವಿಶೇಷ ಸಾಕ್ಷಿ.

ದೇಶದ ಎಲ್ಲ ಪ್ರದೇಶಗಳಿಗಿಂತ ಮಹಾರಾಷ್ಟ್ರದಲ್ಲಿ ಗಣಪತಿಯ ಲೋಕಪ್ರಿಯತೆ ಅಧಿಕವಾಗಿದೆ. ಮುಂಬೆ„ ಮಹಾನಗರವು ಸಾರ್ವಜನಿಕ ಗಣೇಶೋತ್ಸವಗಳಿಗೆ ಜಗತ್‌ಪ್ರಸಿದ್ದವಾಗಿದೆ. ಪ್ರಭಾದೇವಿಯಲ್ಲಿ ಸಿದ್ಧಿ ವಿನಾಯಕ ಗಣಪತಿ, ಟಿಟ್ವಾಲದಲ್ಲಿ ಮಹಾ ಗಣಪತಿ, ಚಿಂಚಾಡದಲ್ಲಿ ಮಂಗಳಮೂರ್ತಿ ಗಣಪತಿಯ ಮಂದಿರಗಳಿವೆ. ಮಹಾರಾಷ್ಟ್ರದಲ್ಲಿ ಸಣ್ಣಪುಟ್ಟ ಗಣಪತಿ ಮಂದಿರಗಳಿಲ್ಲದ ಗ್ರಾಮಗಳು ಸಿಗುವುದೇ ಕಷ್ಟ.

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಹಾಗೂ ಗೋಕರ್ಣ, ಕುಂದಾಪುರ ತಾಲೂಕಿನ ಹಟ್ಟಿಯಂಗಡಿ, ಆನೆಗುಡ್ಡೆ, ಗುಡ್ಡೆಟ್ಟು ಮುಂತಾದವು ಪ್ರಸಿದ್ಧ ವಿನಾಯಕ ಕ್ಷೇತ್ರಗಳಾಗಿವೆ. ಗಣೇಶ ಚತುರ್ಥಿ ಮತ್ತೆ ಬಂದಿದೆ. ದೇಶ ವಿದೇಶಗಳಲ್ಲಿ ಗಣಪನನ್ನು ಸ್ವಾಗತಿಸಲು ಮನೆ ಮನಗಳು ಸಜ್ಜಾಗುತ್ತಿವೆ.
* ಪಿ.ಜಯವಂತ ಪೈ, ಕುಂದಾಪುರ

Advertisement

ವಿಘ್ನ ನಿವಾರಕ ವಿಘ್ನೇಶ್ವರನ ಗಣೇಶೋತ್ಸವ
ಗಣಪತಿಗೆ ಮೊದಲ ಪೂಜೆ ಏಕೆ ಎಂಬ ಜಿಜ್ಞಾಸೆ ಹಲವರಲ್ಲಿ ಮೂಡಿರುತ್ತದೆ. ವಿನಾಯಕ ಪೃಥ್ವೀಸ್ವರೂಪಿ. ಹಾಗಾಗಿ ಗಣನಾಯಕ ಭೂಮಿ ಅಂಶದವನು.ಆದ್ದರಿಂದ ಭೂಮಿಯ ಮೇಲೆ ವಾಸಿಸುವ ಚರಾಚರ ಪ್ರಾಣಿಗಳು ಸುಖವಾಗಿರಬೇಕಾದರೆ ಗಣಪತಿಗೆ ಮೊದಲು ಪೂಜಿಸಿ ಅನುಗ್ರಹ ಪಡೆಯುವಂತಾಗಬೇಕು. ಗಣೇಶ ಹಾಗೂ ಸುಬ್ರಹ್ಮಣ್ಯರು ಪಂಥ ಕಟ್ಟಿ ಯಾರು ಮೊದಲು ಪ್ರಪಂಚ ಸುತ್ತಿ ಬರುತ್ತಾರೋ ಅವರಿಗೆ ಮೊದಲ ಪೂಜೆ ಅಂತ. ಆಗ ಗಣಪತಿ ಪ್ರಪಂಚಕ್ಕೆ ತಂದೆ ತಾಯಿಯಾದ ಶಿವ ಪಾರ್ವತಿಯರಿಗೆ ಪ್ರದಕ್ಷಿಣೆ ಮಾಡಿ ತಂದೆ ತಾಯಿಯೇ ಈ ಜಗತ್ತು ಎಂಬುದನ್ನು ತೋರಿಸಿ ಕೊಟ್ಟ ಕಾರಣ ಶಿವ ಇನ್ನು ಮುಂದೆ ಗಣೇಶನಿಗೆ ಮೊದಲ ಪೂಜೆ ಆಗಲಿ ಎಂದು ಅನುಗ್ರಹಿಸಿದ ಎಂಬುದಾಗಿ.

ಆನೆ ಮುಖದ ಗಜಾನನನಿಗೆ ಪುಟ್ಟ ಇಲಿ ವಾಹನ. ಇಲಿಯೇ ವಾಹನ ಏಕೆ ಅಂದರೆ ಮಾನವರು ಭೂಮಿಯಲ್ಲಿ ಬೆಳೆದ ಧಾನ್ಯ-ತರಕಾರಿ-ಬತ್ತ-ಹಣ್ಣುಗಳನ್ನು ತಿಂದು ಹಾಳುಮಾಡುವುದು ಈ ಮೂಷಿಕನ ಕೆಲಸ. ಹಾಗಾಗಿ ಈ ಮೂಷಿಕನನ್ನು ತನ್ನ ಬಳಿಯೇ ಇರಿಸಿ ಕೊಂಡು ನಿಯಂತ್ರಿಸುತ್ತಾನೆ ಈ ಗಜಮುಖನಾದ ವಿನಾಯಕ. ಈ ಕಾರಣದಿಂದಲೇ ತನ್ನ ವಾಹನ ಇಲಿಯನ್ನೇ ಮಾಡಿಕೊಂಡಿರುತ್ತಾನೆ. ಗಣಪತಿಯನ್ನು ವೇದಗಳು-ಪುರಾಣಗಳು ವಿಧ ವಿಧವಾಗಿ ಕೊಂಡಾಡಿ ಸ್ತುತಿಸಿವೆ. ಗಣೇಶನನ್ನು “ತತ್ವನಿ ’ ಗ್ರಂಥದಲ್ಲಿ ವಿಶೇಷವಾದ ಮೂವತ್ತೆರಡು ಗಣಪತಿಯ ದಿವ್ಯನಾಮಗಳನ್ನು ವರ್ಣಿಸಿದ್ದಾರೆ. ಮಹಾಮಹೀಮನಾದ ಗಣಪ ಭಕ್ತರ ಪಾಲಿಗೆ ಕ್ಷಿಪ್ರವಾಗಿ ಒಲಿದು “”ಕ್ಷಿಪ್ರಪ್ರಸಾದ ಗಣಪತಿ” ಎಂದೆನಿಸಿರುತ್ತಾನೆ.

ಗಣಪತಿ ಮೋದಕಪ್ರಿಯ. ನೈವೇದ್ಯದಲ್ಲಿ ಮೋದಕಕ್ಕೆ ಅಗ್ರಸ್ಥಾನ. ಮೋದಕವೆಂದರೆ ಆನಂದ ಮತ್ತು ಮಹಾಬುದ್ಧಿಯ ಸಂಕೇತವೆನ್ನುತ್ತಾರೆ. ಗಣಪತಿ ಆನಂದವನ್ನು ಬುದ್ಧಿಯನ್ನು ತನ್ನ ಭಕ್ತರಿಗೆ ನೀಡುತ್ತಾನೆ. ಗಣಪತಿಯ ಕೈಯಲ್ಲಿರುವ ಅಂಕುಶವು ಜ್ಞಾನದ ಸಂಕೇತ ಇದು ಮಾನವನ ಅಜ್ಞಾನ ದೂರಮಾಡುವುದು. ಗಣೇಶನ ಕೈಯಲ್ಲಿರುವ
ಪಾಶ ಇದು ಸಂಸಾರಬಂಧನ ಸಂಕೇತವಾಗಿದೆ.

ಗಣೇಶ ವಿಶ್ವರೂಪಿಯಾಗಿ ವಿಶ್ವವಿನಾಯಕನಾಗಿದ್ದಾನೆ. ಭಕ್ತರ ಸಂಕಷ್ಟ ಪರಿಹರಿಸುವ “”ಸಂಕಷ್ಟಹರ ಗಣಪತಿ”ಯಾಗಿ ಕೃಪೆ ತೋರುತ್ತಿದ್ದಾನೆ.ವ್ರತಗಳಲ್ಲೇ ಶ್ರೇಷ್ಠ ವ್ರತ ಎಂದೆನಿಸಿದ “”ಸಂಕಷ್ಟಹರ ಚತುರ್ಥಿàವ್ರತ” ಆಚರಿಸಿದವರ ಸಂಕಷ್ಟ ಪರಿಹಾರವಾಗಿ ಸುಖಸಂಪತ್ತು-ನೆಮ್ಮದಿ-ಆಯುರಾರೋಗ್ಯ ನೀಡಿ ಕಾಪಾಡುತ್ತಾನೆ ಗಣಪತಿ ಎಂಬ ಪ್ರತೀತಿ ಇದೆ. ಇಂತಹ ಗಣೇಶ ಭಕ್ತರ ನಿಷ್ಕಲ್ಮಶವಾದ ಶ್ರದ್ಧಾಪೂರ್ವಕ ಪೂಜೆಗೆ ಒಲಿಯುತ್ತಾನೆ.
ವೇ| ಮೂ| ವೈ. ಎನ್‌. ವೆಂಕಟೇಶಮೂರ್ತಿ ಭಟ್ಟ ,  ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next