Advertisement

ಒಡಲಾಳ ತುಂಬುತ್ತಿದೆ “ಜೀವಜಲ’

01:00 AM May 14, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಕೋಟ್ಯಂತರ ಲೀಟರ್‌ ನೀರು ಕಣ್ಮುಂದೆಯೇ ವ್ಯರ್ಥವಾಗಿ ಹರಿದುಹೋಗುತ್ತದೆ. ಕೆಲವೊಮ್ಮೆ ಇದು ಅವಾಂತರವನ್ನೂ ಸೃಷ್ಟಿಸಿ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಅದೇ ಮಳೆ ನೀರು ಒಡಲಾಳಕ್ಕೆ ಜೀವ ತುಂಬುತ್ತಿದೆ.

Advertisement

1,200 ಎಕರೆ ವಿಸ್ತೀರ್ಣದ ಹೆಬ್ಟಾಳದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆವರಣದ ಯಾವುದೇ ಮೂಲೆಯಲ್ಲಿ ಮಳೆಯಾದರೂ ಬೊಗಸೆ ನೀರು ಕೂಡ ಹೊರಕ್ಕೆ ಹೋಗುವುದಿಲ್ಲ. ಬಂದು ಒಂದೇ ಕಡೆ ಸಂಗ್ರಹವಾಗುತ್ತದೆ. ಇದರಿಂದ ಕೃಷಿ ವಿಶ್ವವಿದ್ಯಾಲಯದ ಸುತ್ತಲಿನ 2-3 ಕಿ.ಮೀ. ವ್ಯಾಪ್ತಿಯ ನೂರಾರು ಕೊಳವೆಬಾವಿಗಳು ಮರುಜೀವ ಪಡೆದಿವೆ.

ನಗರದಲ್ಲಿ ಈ ಹಿಂದೆ ಇದ್ದಂತೆಯೇ ಒಂದಕ್ಕೊಂದು ಕೆರೆಗಳ ನಡುವೆ ಸಂಪರ್ಕ, ನೀರುಗಾಲುವೆಗಳು ಜಿಕೆವಿಕೆಯಲ್ಲಿಯೂ ಇದ್ದವು. ಆದರೆ, ಅವುಗಳು ಕಾಲಾನುಕ್ರಮದಲ್ಲಿ ಕಳೆದುಹೋಗಿದ್ದವು. ಅವುಗಳನ್ನು ಪತ್ತೆಹಚ್ಚಿ, ಪುನಃಶ್ಚೇತನ ಮಾಡುವುದರ ಜತೆಗೆ ಮತ್ತಷ್ಟು ಸೇರ್ಪಡೆಯನ್ನೂ ಮಾಡಲಾಗಿದೆ. ಪರಿಣಾಮ ಪ್ರತಿ ವರ್ಷ ಸರಾಸರಿ ನೂರು ಕೋಟಿ ಲೀ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಒಂದು ವಾರ್ಡ್‌ನ ವರ್ಷದ ದಾಹ ನೀಗಿಸಬಹುದು!

ಹೆಬ್ಟಾಳದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ವಾರ್ಷಿಕ 920 ಮಿ.ಮೀ. ಮಳೆ ಆಗುತ್ತದೆ. ಇದರಿಂದ ಸುಮಾರು 440 ಕೋಟಿ ಲೀ. ನೀರು ಬೀಳುತ್ತದೆ. ಈ ಪೈಕಿ ಶೇ. 25ರಿಂದ 30ರಷ್ಟು ನೀರು ಮರುಪೂರಣ, ತಲಾ ಶೇ.25-30ರಷ್ಟು ಬೆಳೆಗಳು ಹಾಗೂ ಆವಿಯಾಗಲು ಖರ್ಚಾಗುತ್ತದೆ. ಉಳಿದ ಶೇ.25ರಷ್ಟು ನೀರು ಹರಿದುಹೋಗುತ್ತಿತ್ತು. ಇದರ ಪ್ರಮಾಣ ಅಂದಾಜು ನೂರು ಕೋಟಿ ಲೀ. ಆಗುತ್ತದೆ. ಇದನ್ನು ಕಾಲುವೆಗಳು, ಹೊಂಡಗಳು, ಚೆಕ್‌ ಡ್ಯಾಂಗಳ ಮೂಲಕ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿಕೆವಿಕೆ ಒಣಬೇಸಾಯ ಪ್ರಾಯೋಜನೆಯ ಹಿರಿಯ ವಿಜ್ಞಾನಿ ಡಾ.ಎಂ.ಎನ್‌. ತಿಮ್ಮೇಗೌಡ “ಉದಯವಾಣಿ’ಗೆ ವಿವರಿಸಿದರು.

“ಅಷ್ಟಕ್ಕೂ ಈ ನೀರು ಹಿಡಿದಿಡುವ ಆಲೋಚನೆ ತ್ತೀಚೆಗೆ ಬಂದಿದ್ದಲ್ಲ; 80ರ ದಶಕದಲ್ಲೇ ಕ್ಯಾಂಪಸ್‌ ಆವರಣದಲ್ಲಿ ಕೆಲವು ನೀರುಗಾಲುವೆಗಳಿದ್ದವು. ಅವುಗಳು ಸಣ್ಣ ಪುಟ್ಟ ಕೃಷಿ ಹೊಂಡಗಳಿಗೆ ಸಂಪರ್ಕ ಹೊಂದಿದ್ದವು. ಕಳೆದುಹೋದ ಅವುಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಸುಮಾರು 16 ಕಿ.ಮೀ. ಉದ್ದದಷ್ಟು ಕಾಲುವೆಗಳನ್ನು ನಿರ್ಮಿಸಲಾಗಿದೆ.

Advertisement

20ಕ್ಕೂ ಅಧಿಕ ಹೊಂಡಗಳು, ಕುಂಟೆಗಳು, ಐದು ಚೆಕ್‌ಡ್ಯಾಂಗಳು, ಎರಡು ದೊಡ್ಡ ಕೆರೆಗಳು ಇವೆ. ಇಷ್ಟೇ ಅಲ್ಲ, ವಿದ್ಯಾರ್ಥಿಗಳ ವಸತಿ ನಿಲಗಳು ಕೂಡ ಇದ್ದು, ನಿತ್ಯ ತಲಾ 1.20 ಲಕ್ಷ ಲೀ. ಸಾಮರ್ಥ್ಯದ ಎರಡು ಘಟಕಗಳಿಂದ ನೀರನ್ನು ಸಂಸ್ಕರಿಸಿ, ಮರುಬಳಕೆ ಮಾಡಲಾಗುತ್ತಿದೆ. ಇದೇ ಮಾದರಿಯನ್ನು ಬೆಂಗಳೂರು ನಗರದಲ್ಲಿ ಕೂಡ ಮಾಡಲು ಸಾಧ್ಯವಿದೆ’ ಎಂದು ಡಾ.ತಿಮ್ಮೇಗೌಡ ಅಭಿಪ್ರಾಯಪಡುತ್ತಾರೆ.

ಹತ್ತಿರದ ಕೊಳವೆಬಾವಿಗಳಿಗೂ ನೀರು!: “ಹೀಗೆ ಸಾಕಷ್ಟು ಪ್ರಮಾಣದಲ್ಲಿ ವರ್ಷಪೂರ್ತಿ ನೀರನ್ನು ಹಿಡಿದಿಡುವುದರಿಂದ ಕ್ಯಾಂಪಸ್‌ನಲ್ಲಿಯ ಕೊಳವೆಬಾವಿಗಳು ಬೇಸಿಗೆಯಲ್ಲೂ ಉತ್ತಮ ನೀರಿನ ಇಳುವರಿ ಹೊಂದಿವೆ. ಅಷ್ಟೇ ಅಲ್ಲ, ವಿದ್ಯಾರಣ್ಯಪುರ, ಯಲಹಂಕ, ತಿಂಡ್ಲು, ಸಹಕಾರನಗರದ ಸಾವಿರಾರು ಕೊಳವೆಬಾವಿಗಳು ಕೂಡ ಮರುಪೂರಣವಾಗಿದ್ದು, ಇಳುವರಿ ಹೆಚ್ಚಿದೆ. ಈ ಪ್ರಯೋಗವನ್ನು ಒಂದು ಮಾದರಿಯಾಗಿ ತೆಗೆದುಕೊಂಡು ನಗರದಲ್ಲಿ ಅಳವಡಿಸಲು ಸಾಧ್ಯವಿದೆ. ಇಲ್ಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು.

ಯಾಕೆಂದರೆ, ನಗರದಲ್ಲಿ ಮಳೆ ನೀರು ಇಂಗುವಿಕೆ, ಭಾಷ್ಪೀಕರಣ, ಬೆಳೆಗೆ ನೀರು ಹಾಯಿಸುವುದು ಯಾವುದೂ ಇರುವುದಿಲ್ಲ. ಶೇ. 80ರಷ್ಟು ನೀರು ಹಿಡಿದಿಡಬಹುದು’ ಎಂದೂ ಅವರು ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿನ ಮಳೆಯನ್ನು ಅವಲೋಕಿಸಿದರೆ, ಅದರ ಪ್ರಮಾಣ ನಿಧಾನವಾಗಿ ಹೆಚ್ಚಾಗುತ್ತಿರುವುದನ್ನು ಕಾಣಬಹುದು. ಆದರೆ, ಮಳೆಯ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ. ಅಂದರೆ ಪೂರ್ವಮುಂಗಾರಿನಲ್ಲಿ ಮಳೆಯ ಪ್ರಮಾಣ ಏರಿಕೆ ಆಗಿದೆ.

ಒಟ್ಟಾರೆ ಮಳೆಯ ದಿನಗಳು 60. ಅದರಲ್ಲಿ ನಗರ ವ್ಯಾಪ್ತಿಯಲ್ಲಿ ವರ್ಷಕ್ಕೆ 15 ಕೊಚ್ಚಿನ ಮಳೆ ಅಂದರೆ 20 ಮಿ.ಮೀ.ಗಿಂತ ಹೆಚ್ಚು ಸುರಿಯುವ ಮತ್ತು ನೀರು ಹರಿದುಹೋಗುವಷ್ಟು ಮಳೆಯೇ ಆಗುತ್ತದೆ. ಹೀಗೆ ಹರಿದುಹೋಗುವ ಕೊಚ್ಚಿನ ಮಳೆ ನೀರಿನಿಂದಲೇ ಜಿಕೆವಿಕೆಯಲ್ಲಿ 60 ಎಕರೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಡಾ.ಎಚ್‌.ಎಸ್‌. ಶಿವರಾಮು ತಿಳಿಸುತ್ತಾರೆ.

ನಗರದಲ್ಲಿ ಪ್ರಮುಖವಾಗಿ ಮೂರು ವ್ಯಾಲಿಗಳು ಹಾದುಹೋಗುತ್ತವೆ. ಅವುಗಳ ಸರಹದ್ದುಗಳನ್ನು ಗುರುತಿಸಿ, ಹೂಳು ತೆಗೆದು ಸಮರ್ಪಕವಾಗಿ ಹರಿಯುವ ಕೆಲಸ ಆಗಬೇಕು. ಅದೇ ರೀತಿ, ಕೆರೆಗಳ ಹೂಳು ತೆಗೆದು ಹಿಡಿದಿಡುವಂತಾಗಬೇಕು. ತದನಂತರ ಅದರ ಶುದ್ಧೀಕರಣಕ್ಕೆ ಮುಂದಾಗಬೇಕು ಎಂದು ಡಾ.ಶಿವರಾಮು ಸಲಹೆ ಮಾಡಿದರು.

ಕೆರೆಗಳಿಗೂ ನೀರು: ಪ್ರತಿ ವರ್ಷ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಹೆಚ್ಚಾದ ನೀರು ದೊಡ್ಡಬೊಮ್ಮಸಂದ್ರ ಮತ್ತು ಹೆಬ್ಟಾಳ ಕೆರೆಗೂ ಸೇರುತ್ತದೆ. ಹಾಗಾಗಿ, ಆ ಕೆರೆಗಳಿಗೂ ಇದರಿಂದ ಅನುಕೂಲ ಆಗಿದೆ. ಇನ್ನು ಪ್ರಸ್ತುತ ತಿಂಡ್ಲುವಿನಿಂದಲೂ ಕೊಳಚೆನೀರನ್ನು ಜಿಕೆವಿಕೆಗೆ ತಿರುಗಿಸಿ, ಶುದ್ಧೀಕರಿಸಿ ಮರುಬಳಕೆ ಮಾಡಲು ಚಿಂತನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೆರೆಗಳ ಮೇಲೆ ವಿದ್ಯುತ್‌ ಉತ್ಪಾದನೆ!: ಜಿಕೆವಿಕೆ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ನೀರು ಸಂಗ್ರಹವಾಗುವ ಸಣ್ಣ ಕೆರೆಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಿ, ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಿದೆ. ಈ ಸಂಬಂಧ ಎರಡು ಕೆರೆಗಳನ್ನು ಗುರುತಿಸಿದ್ದು, ಒಂದು ಚಿಕ್ಕ ಕೆರೆಯಲ್ಲಿ 3 ಕಿ.ವಾ. ಮತ್ತೂಂದು ಕೆರೆಯಲ್ಲಿ ಅದಕ್ಕಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಗೆ ಉದ್ದೇಶಿಸಲಾಗಿದೆ.

ಇತರೆಡೆಯೂ ನೀರು ಸಂಗ್ರಹ ಆಗಲಿ: ನಗರದ ಇತರೆ ವಿಶ್ವವಿದ್ಯಾಲಯಗಳು, ಬಿಇಎಲ್‌, ಬಿಇಎಂಎಲ್‌, ಎಚ್‌ಎಎಲ್‌ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಹತ್ತಾರು ಎಕರೆ ಜಮೀನು ಇದೆ. ಜಿಕೆವಿಕೆ ಮಾದರಿಯಲ್ಲಿ ಅಲ್ಲಿಯೂ ಮಳೆ ನೀರು ಸಂಗ್ರಹ ಕೆಲಸ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು ಎಂದು ತಜ್ಞರು ಸಲಹೆ ಮಾಡುತ್ತಾರೆ.

ನೀರನ್ನು ಹಿಡಿದಿಟ್ಟರೆ ವರ್ಷಪೂರ್ತಿ ಖುಷ್ಕಿ ಜಮೀನಿನಲ್ಲೂ ಕೃಷಿ ಮಾಡಬಹುದು ಎಂಬುದರ ಬಗ್ಗೆ ಒಂದು ಮಾದರಿ ಇದಾಗಿದೆ. ಮುಂದಿನ ದಿನಗಳಲ್ಲಿ ಬೆಳೆಗಳಿಗೆ ಸೆನ್ಸರ್‌ ಆಧಾರಿತ ನೀರು ಪೂರೈಸುವ ಪ್ರಾತ್ಯಕ್ಷಿಕೆಯನ್ನೂ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಇನ್ನು ನಗರಗಳಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಳೆ ನೀರು ಹಿಡಿದಿಡುವ ಕೆಲಸ ಆಗುತ್ತಿದೆ. ಆದರೆ, ಇದು ಸಾಲದು. ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ.
-ಡಾ.ಎಸ್‌.ರಾಜೇಂದ್ರ ಪ್ರಸಾದ್‌, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next