Advertisement

ಮಧ್ಯವರ್ತಿಗಳ ಹಾವಳಿ ತಡೆಗೆ ಗಮನಹರಿಸಿ

09:57 PM Aug 28, 2019 | Lakshmi GovindaRaj |

ಹೊಸಕೋಟೆ: ತಾಲೂಕಿನಲ್ಲಿ ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಲು ಅಧಿಕಾರಿಗಳು ಗಮನಹರಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ಎನ್‌.ಬಚ್ಚೇಗೌಡ ಖಡಕ್‌ ಸೂಚನೆ ನೀಡಿದರು.

Advertisement

ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಾರ್ವಜನಿಕ ಉಪಯುಕ್ತ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು. ಮಾಹಿತಿ ಕೊರತೆಯಿಂದ ಬಹಳಷ್ಟು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದವರಿಗಾಗಿ ವಿಶಿಷ್ಟವಾದ ಯೋಜನೆಗಳ ಬಗ್ಗೆ ಸಮುದಾಯಕ್ಕೆ ಸೂಕ್ತ ಮಾಹಿತಿ ನೀಡಬೇಕು. ಸೌಲಭ್ಯ ಪಡೆದುಕೊಳ್ಳಲು ಅಗತ್ಯವಾದ ಮಾರ್ಗದರ್ಶನ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ರೈತರ ಹಿತದೃಷ್ಟಿ ಕಾಪಾಡಲು ಆದ್ಯತೆ: ರೈತರ ಹಿತದೃಷ್ಟಿಯನ್ನು ಕಾಪಾಡಲು ಹಾಗೂ ಕೃಷಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಕಿಸಾನ್‌ ಸಮ್ಮಾನ್‌ನಂತಹ ಯೋಜನೆಗಳ ನೋಂದಣಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲೂ ಇಂತಹ ಸಭೆಗಳನ್ನು ನಡೆಸಬೇಕು. ಅಧಿಕಾರಿಗಳು ಅಗತ್ಯವಾದ ಪೂರ್ವಸಿದ್ಧತೆಯೊಂದಿಗೆ ಕಡ್ಡಾಯವಾಗಿ ಭಾಗವಹಿಸಬೇಕು. ಇಂದಿನ ಸಭೆಗೆ ಗೈರಾಗಿರುವ ಕಾರ್ಮಿಕ ಇಲಾಖೆಯಂತಹ ಇನ್ನಿತರೆ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಸೂಚಿಸಿದರು.

ಕಳಪೆ ರಸ್ತೆ ಕಾಮಗಾರಿಯಿಂದ ತೊಂದರೆ: ನಗರದಿಂದ ಮಾಲೂರಿಗೆ ಸಂಪರ್ಕಿಸುವ ರಸ್ತೆಯ ಕಾಮಗಾರಿ ಕಳಪೆಯಾಗಿರುವುದರಿಂದ ವಾಹನ ಸವಾರರಷ್ಟೇ ಅಲ್ಲದೆ, ಬಹಳಷ್ಟು ಗ್ರಾಮಸ್ಥರು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ನಿವಾರಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಲೂಕಿನ ದೊxಡ್ಡದೇನಹಳ್ಳಿ ಒಳಗೊಂಡಂತೆ ವಿವಿಧೆಡೆ ಮಳೆಯಿಂದಾಗಿ ಹಾನಿಗೊಂಡಿರುವ ಶಾಲಾ ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. ಸೂಲಿಬೆಲೆಯಲ್ಲಿ 10 ವರ್ಷಗಳ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿದ್ದು, ಇದುವರೆವಿಗೂ ಕಾರ್ಯ ರೂಪಕ್ಕೆ ಬದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದಾಸ್ತಾನು ಮಳಿಗೆ ನಿರ್ಮಿಸಿಕೊಳ್ಳಿ: ಪೂಜೆನ ಅಗ್ರಹಾರದಲ್ಲಿ ಅಂಗನವಾಡಿ ಕಟ್ಟಡದ ಬಗ್ಗೆ ಉಂಟಾಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ತಾಲೂಕಿನ ಸೂಕ್ತ ಪ್ರದೇಶದಲ್ಲಿ ಸಂಪನ್ಮೂಲ ವೃದ್ಧಿಸಿಕೊಳ್ಳಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ದಾಸ್ತಾನು ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಅನುವಾಗುವಂತೆ ಸರ್ಕಾರದ ವತಿಯಿಂದ 40 ಎಕರೆ ಜಮೀನು ಮಂಜೂರಾತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

Advertisement

ನಗರಸಭೆ ಆಯುಕ್ತರ ವಿರುದ್ಧ ಕಿಡಿ: ಕಚೇರಿಗೆ ಸಂಬಂಧಪಡದ ವ್ಯಕ್ತಿಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಎದುರಾಗುವ ಸಮಸ್ಯೆಗಳಿಗೆ ನಗರಸಭೆಯ ಪೌರಾಯುಕ್ತರು ನೇರ ಹೊಣೆಗಾರರಾಗಲಿದ್ದಾರೆ ಎಂದು ಎಚ್ಚರಿಸಿದರು.

ಬರಪೀಡಿತ ಪ್ರದೇಶಕ್ಕೆ ಒತ್ತಾಯ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಯ ತೀವ್ರ ಅಭಾವ ಹೊಂದಿರುವ ಹೊಸಕೋಟೆ ಒಳಗೊಂಡಂತೆ ಇತರೆ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ವಿವಿಧ ಇಲಾಖೆಗಳ ಕಾರ್ಯ ಚಟುವಟಿಕೆ, ಪ್ರಗತಿ ಸಾಧನೆ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಂದ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ವಿ. ಪ್ರಸಾದ್‌, ಕೆ.ಕೃಷ್ಣಮೂರ್ತಿ, ಜಯಕುಮಾರಿ ಸೊಣ್ಣಪ್ಪ, ತಾಲೂಕು ಪಂಚಾಯ್ತಿ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಸದಸ್ಯ ಡಿ.ಟಿ.ವೆಂಕಟೇಶ್‌, ತಹಶೀಲ್ದಾರ್‌ ಕೆ.ರಮೇಶ್‌, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್‌ ಉಪಸ್ಥಿತರಿದ್ದರು.

ಆಯುಷ್ಮಾನ್‌ ನೋಂದಣಿಯನ್ನು ತಾಲೂಕಿನಲ್ಲಿ ಚುರುಕುಗೊಳಿಸಿ, ಬಡ ಜನರು ಇದರ ಪ್ರಯೋಜನ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಅರಣ್ಯ ಇಲಾಖೆಯು ರೈತರ ಜಮೀನುಗಳಲ್ಲಿ ನೀಲಗಿರಿಗೆ ಪರ್ಯಾಯವಾಗಿ ಇತರೆ ಸಸಿಗಳನ್ನು ಉಚಿತವಾಗಿ ನೀಡಿ, ಪರಿಸರ ಸಮತೋಲನ ಕಾಪಾಡಬೇಕು.
-ಬಿ.ಎನ್‌.ಬಚ್ಚೇಗೌಡ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next