Advertisement

Five state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸು

12:52 AM Dec 04, 2023 | Team Udayavani |

ರಾಯಪುರ: ಪ್ರಸ್ತುತ ಪಂಚರಾಜ್ಯ ಚುನಾವಣೆಗಳ ಪೈಕಿ ಅತ್ಯಂತ ಅಚ್ಚರಿಯ ಫ‌ಲಿತಾಂಶ ನೀಡಿದ್ದು ಯಾವ ರಾಜ್ಯ ಎಂದು ಪ್ರಶ್ನಿಸಿದರೆ, ಬಹುತೇಕರು ಛತ್ತೀಸ್‌ಗಢದತ್ತ ಬೆಟ್ಟು ಮಾಡುತ್ತಾರೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳು ನುಡಿದಿದ್ದವು. ಅದೇ ಆತ್ಮವಿಶ್ವಾಸದಲ್ಲಿ ಭೂಪೇಶ್‌ ಬಘೇಲ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಕೂಡ ಇತ್ತು. ರವಿವಾರ ಮತಯೆಣಿಕೆ ಆರಂಭವಾದಾಗ ಕಾಂಗ್ರೆಸ್‌ ಭರ್ಜರಿ ಮುನ್ನಡೆ ಸಾಧಿಸಿತ್ತು. ಗಂಟೆಗಳು ಸರಿದಂತೆಲ್ಲ ಪರಿಸ್ಥಿತಿ ಬದಲಾಯಿತು. ಮಧ್ಯಾಹ್ನದಷ್ಟೊತ್ತಿಗೆ ಬಿಜೆಪಿ ದೊಡ್ಡ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್‌ ಹಿನ್ನಡೆಯಿಂದ ಇನ್ನಷ್ಟು ಹಿನ್ನಡೆಗೆ ಸರಿಯಿತು. ಬಿಜೆಪಿ ಮತ್ತೂಮ್ಮೆ ಪಟ್ಟಕ್ಕೇರಿತು.

Advertisement

ಸ್ವತಃ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಭೂಪೇಶ್‌ ಬಘೇಲ್‌ ಗೆಲ್ಲಲು ಪರದಾಡಿದರು. ಹಲವು ಸುತ್ತಿನ ಮತಯೆಣಿಕೆ ಮುಗಿದ ಮೇಲೆ ನಿಧಾನಕ್ಕೆ ಅವರು ಗೆಲುವಿನ ಹಳಿಗೆ ಬಂದರು. ಇದು ಇಡೀ ಕಾಂಗ್ರೆಸ್‌ನ ಚಿತ್ರಣವೂ ಹೌದು. ಯಾವ ಕಾರಣಕ್ಕೆ ಕಾಂಗ್ರೆಸ್‌ ಇಂತಹದ್ದೊಂದು ಸ್ಥಿತಿ ಅನುಭವಿಸಿದೆ ಎನ್ನುವುದು ಖಚಿತವಾಗಿಲ್ಲ.
ಭರವಸೆಗಳೇ ಶಾಪವಾದವೇ?: ಇದೊಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ. 2018ರ ಚುನಾವಣೆ ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಸಂಪೂರ್ಣ ಮದ್ಯನಿಷೇಧ ಮಾಡುತ್ತೇವೆ, ಉಚಿತವಾಗಿ ಅಡುಗೆ ಸಿಲಿಂಡರ್‌ ನೀಡುತ್ತೇವೆ, ಗುತ್ತಿಗೆ ನೌಕರರ ಉದ್ಯೋಗವನ್ನು ಖಾಯಮಾತಿಗೊಳಿಸುತ್ತೇವೆ ಎಂದು ಭರವಸೆ ನೀಡಿತ್ತು. ಐದು ವರ್ಷ ಪೂರೈಸಿದರೂ ಕಾಂಗ್ರೆಸ್‌ ಆ ಸಾಹಸಕ್ಕೆ ಕೈಹಾಕಲಿಲ್ಲ! ಬದಲಿಗೆ ಮದ್ಯನಿಷೇಧದ ಬಗ್ಗೆ ಬಿಹಾರದಲ್ಲಿನ ಪರಿಸ್ಥಿತಿ ಪರಿಶೀಲಿಸಲು ಸಮಿತಿ ರಚಿಸಿತು. ಇದು ಮತದಾರರ ಭರವಸೆಯನ್ನು ಅಲ್ಲಾಡಿಸಿರುವ ಸಾಧ್ಯತೆ ದಟ್ಟವಾಗಿದೆ. 2018ರಲ್ಲಿ ಮಾತು ನೀಡಿದ್ದಂತೆ ಅಧಿಕಾರಕ್ಕೆ ಬಂದಕೂಡಲೇ ಬಘೇಲ್‌ ಸರಕಾರ ರೈತರ 9000 ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. 350 ಕೋಟಿ ರೂ. ನೀರಾವರಿ ತೆರಿಗೆಯನ್ನು ರದ್ದು ಮಾಡಿದ್ದರು. ಈ ಬಾರಿ ಮತ್ತೆ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಅದನ್ನು ಜನ ಪರಿಗಣಿಸಿಲ್ಲವೇ ಎಂಬ ಪ್ರಶ್ನೆಗಳಿವೆ.

ಈ ಬಾರಿ ಹಲವು ಜನಪ್ರಿಯ ಉಚಿತ ಭರವಸೆಗಳನ್ನು ಕಾಂಗ್ರೆಸ್‌ ನೀಡಿತ್ತು. 2018ರ ಸೋಲಿನಿಂದ ಪಾಠ ಕಲಿತ್ತಿದ್ದ ಬಿಜೆಪಿ ಕಾಂಗ್ರೆಸ್‌ನಂತೆಯೇ ತಾನೂ ಮೋದಿ ಕೀ ಗ್ಯಾರಂಟಿ ಹೆಸರಿನಲ್ಲಿ ಉಚಿತಗಳನ್ನು ಘೋಷಿಸಿತು. ಎರಡೂ ಪಕ್ಷಗಳು ಪೈಪೋಟಿಯಂತೆ ಉಚಿತಗಳ ಘೋಷಣೆ ಮಾಡಿದವು. ಪ್ರಧಾನಿ ಮೋದಿ ಛತ್ತೀಸ್‌ಗಢವನ್ನು ಬಿರುಗಾಳಿಯಂತೆ ಸುತ್ತಿದರು. ಅದೇ ಬಿಜೆಪಿಯ ಕೈಹಿಡಿದಿದೆ, ಕಾಂಗ್ರೆಸ್‌ ಅನ್ನು ಕಾಡಿದೆ ಎಂಬ ವಿಶ್ಲೇಷಣೆಗಳಿವೆ.

ಕೈಕೊಟ್ಟ ಮಹಾದೇವ್‌ ಆ್ಯಪ್‌: ಡ್ರೀಮ್‌11 ರೀತಿಯೇ ಮಹಾದೇವ್‌ ಅನ್ನುವುದು ಒಂದು ಮೊಬೈಲ್‌ ಬೆಟ್ಟಿಂಗ್‌ ಆ್ಯಪ್‌. ಇದರ ಮೂಲಕ ಆನ್‌ಲೈನ್‌ ಬೆಟ್ಟಿಂಗ್‌ ಮಾಡ ಬಹುದು. ಇದರ ಮಾಲಿಕರು ಈಗ ದುಬಾೖಯಲ್ಲಿ ನೆಲೆಸಿ ದ್ದಾರೆ. ಇವರು ಜನರಿಗೆ ಆಮಿಷವೊಡ್ಡಿ, ದೊಡ್ಡ ಮೊತ್ತವನ್ನು ವಂಚಿಸಿದ್ದಾರೆ. ಮಾತ್ರವಲ್ಲ ಭೂಪೇಶ್‌ ಬಘೇಲ್‌ಗೆ 508 ಕೋಟಿ ರೂ. ನೀಡಿದ್ದಾರೆಂಬ ಆರೋಪ ಕೇಳಿಬಂತು. ಸರಿ ಯಾಗಿ ಚುನಾವಣೆ ಸಮಯಕ್ಕೆ ಕೇಳಿಬಂದ ಈ ಗಂಭೀರ ಆರೋಪ ಕಾಂಗ್ರೆಸ್‌ ಸರಕಾರವನ್ನು ದೊಡ್ಡದಾಗಿ ಕಾಡಿದೆ. ಇದರ ಪರಿಣಾಮವಾಗಿಯೇ ಕಾಂಗ್ರೆಸ್‌ ಸೋಲಿಗೆ ಶರಣಾಗಿದೆ ಎಂಬುದು ಇನ್ನೊಂದು ಊಹೆ.

ಬಿಜೆಪಿ ಗೆಲುವಿಗೆ ಕಾರಣಗಳು
ಬಿಜೆಪಿ ರೈತರನ್ನು ಒಲಿಸಿಕೊಳ್ಳಲು ಯಶಸ್ವಿಯಾಯಿತು. ತನ್ನ ಚುನಾವಣ ಪ್ರಣಾಳಿಕೆಯಲ್ಲಿ 3,100 ರೂ. ಬೆಲೆಗೆ ಭತ್ತವನ್ನು ಕೊಳ್ಳುವುದಾಗಿ ತಿಳಿಸಿತು. ಇದು ಕಾಂಗ್ರೆಸ್‌ಗಿಂತ 500 ರೂ. ಜಾಸ್ತಿ. ಬುಡಕಟ್ಟು ಮತ್ತು ಆದಿವಾಸಿಗಳನ್ನು ಛತ್ತೀಸ್‌ಗಢದಲ್ಲಿ ವ್ಯಾಪಕವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತು. ಅದು ಕಾಂಗ್ರೆಸ್‌ಗೆ ಹಿನ್ನಡೆಯಾಯಿತು. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಕ್ಸಲರಿಗೆ ಹೆಚ್ಚು ಬಲ ಬರುತ್ತದೆ ಎಂದು ಪದೇ ಪದೆ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರು ಒತ್ತಿ ಹೇಳಿದರು. ನಕ್ಸಲ್‌ ಹಾವಳಿಗೆ ನಲುಗಿದ್ದ ಜನ ಸಹಜವಾಗಿಯೇ ಬಿಜೆಪಿ ಯತ್ತ ವಾಲಿದರು.ಪ್ರಧಾನಿ ನರೇಂದ್ರ ಮೋದಿಯವರಿಗಿದ್ದ ಜನಪ್ರಿಯತೆ ಬಿಜೆಪಿಗೆ ದೊಡ್ಡಪ್ರಮಾಣದಲ್ಲಿ ನೆರವಾಯಿತು. ಮೋದಿ ಇಡೀ ಛತ್ತೀಸ್‌ಗಢದಲ್ಲಿ ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿದರು.

Advertisement

ಕಾಂಗ್ರೆಸ್‌ ಸೋಲಿಗೆ ಕಾರಣಗಳು
ಕಾಂಗ್ರೆಸ್‌ನಲ್ಲಿ ತೀವ್ರ ಒಳಜಗಳವಿತ್ತು. ಮುಖ್ಯಮಂತ್ರಿ ಯಾಗಿದ್ದ ಬಘೇಲ್‌ ಸರಕಾರವನ್ನು ನೇರವಾಗಿಯೇ ಇನ್ನೊಬ್ಬ ನಾಯಕ ಟಿ.ಎಸ್‌.ಸಿಂಗ್‌ ದೇವ್‌ ಟೀಕಿಸಿದ್ದರು. 2018ರಲ್ಲಿ ಅಧಿಕಾರಕ್ಕೇರುವಾಗ ಕಾಂಗ್ರೆಸ್‌, ಮದ್ಯ ನಿಷೇಧ, ಉಚಿತ ಅಡುಗೆ ಅನಿಲ ಪೂರೈಕೆ, ಗುತ್ತಿಗೆ ನೌಕರರ ಖಾಯಮಾತಿ ಸೇರಿದಂತೆ ಹಲವು ಭರವಸೆ ಗಳನ್ನು ನೀಡಿತ್ತು. ಆ ಭರವಸೆಗಳನ್ನೂ ಈಡೇರಿಸಿಲ್ಲ. ಭೂಪೇಶ್‌ ಬಘೇಲ್‌ ಹಲವು ಹಗರಣಗಳನ್ನು ಮಾಡಿದ ಆರೋಪಕ್ಕೊಳಗಾದರು. ಮದ್ಯ, ಕಲ್ಲಿದ್ದಲು ಹಗರಣ ಗಳು ಅವರನ್ನು ಕಾಡಿದವು. ಕೊರಿಯರ್‌ ಮೂಲಕ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ನಿಂದ 508 ಕೋಟಿ ರೂ. ಲಂಚ ಪಡೆದಿದ್ದಾರೆಂದು ಚುನಾವಣೆ ಹತ್ತಿರವಿರುವಾಗ ದೊಡ್ಡಮಟ್ಟದಲ್ಲಿ ಆರೋಪಗಳು ಕೇಳಿ ಬಂದವು. ಕಾಂಗ್ರೆಸ್‌ನಲ್ಲಿ ಅತಿಯಾಗಿ ಗೆಲುವಿನ ಆತ್ಮವಿಶ್ವಾಸವಿತ್ತು. ಅದರ ವಿರುದ್ಧ ಆಡಳಿತ ವಿರೋಧಿ ಅಲೆ ಒಳಗೊಳಗೆ ಕೆಲಸ ಮಾಡಿದ್ದು ಗೊತ್ತೇ ಆಗಲಿಲ್ಲ.

ಗೆದ್ದ ಪ್ರಮುಖರು
ಭೂಪೇಶ್‌ ಬಘೇಲ್‌, ಕಾಂಗ್ರೆಸ್‌
ಡಾ|ಚರಣ್‌ ಮಹಾಂತ, ಕಾಂಗ್ರೆಸ್‌
ರಮಣ್‌ ಸಿಂಗ್‌, ಬಿಜೆಪಿ
ಅರುಣ್‌ ಸಾಹೋ, ಬಿಜೆಪಿ
ರೇಣುಕಾ ಸಿಂಗ್‌, ಬಿಜೆಪಿ
ಒ.ಪಿ.ಚೌಧರಿ, ಬಿಜೆಪಿ

ಸೋತ ಪ್ರಮುಖರು
ವಿಜಯ್‌ ಬಘೇಲ್‌, ಬಿಜೆಪಿ
ಟಿ.ಶರಣ್‌ ಸಿಂಗ್‌ ದೇವ್‌, ಕಾಂಗ್ರೆಸ್‌
ಮೋಹನ್‌ ಮಾರ್ಕಮ್‌, ಕಾಂಗ್ರೆಸ್‌
ತಾಮ್ರಧ್ವಜ ಸಾಹು, ಕಾಂಗ್ರೆಸ್‌
ದೀಪಕ್‌ ಬೈಜ್‌, ಕಾಂಗ್ರೆಸ್‌
ಅಮಿತ್‌ ಜೋಗಿ, ಜೆಸಿಸಿಜೆ

ಹಿಂಸಾಚಾರದಲ್ಲಿ ಮಗನನ್ನು ಕಳೆದುಕೊಂಡಿದ್ದ ಈಶ್ವರ್‌ ಸಾಹುಗೆ ಜಯ
ಛತ್ತೀಸ್‌ಗಢ ಚುನಾವಣೆಯಲ್ಲಿ 42 ವರ್ಷದ ಈಶ್ವರ್‌ ಸಾಹು ಸಾಜ ಕ್ಷೇತ್ರ ದಿಂದ ಗೆದ್ದಿ ದ್ದಾರೆ. ಅವರು ಓದಿದ್ದು ಕೇವಲ 5ನೇ ತರಗತಿ ಎಂದು ಸುದ್ದಿ ಮೂಲಗಳು ಹೇಳು ತ್ತವೆ. ಚುನಾ ವಣ ರಾಜ ಕೀಯಕ್ಕೆ ಬಂದರೆ ಒಬ್ಬ ಬಡವ್ಯಕ್ತಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬ ಹುದು. ಅವರು ಈ ಬಾರಿ 1 ಲಕ್ಷಕ್ಕೂ ಅಧಿಕ ಪಡೆದಿದ್ದಾರೆ. ಎದು ರಾಳಿ, 7 ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ರವೀಂದ್ರ ಚೌಬೆ ಸೋತುಹೋಗಿದ್ದಾರೆ. ಈಶ್ವರ್‌ ಸಾಹು ಪುತ್ರ ಹಿಂಸಾಚಾರ ವೊಂದರಲ್ಲಿ ಮೃತಪಟ್ಟಿ ದ್ದರು. ಪ್ರಸ್ತುತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರು ತಮ್ಮ ಪುತ್ರನ ಸಾವಿಗೆ ಈ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯ ದರ್ಶಿ ಬಿ.ಎಲ್‌.ಸಂತೋಷ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಉಚಿತಗಳನ್ನು ತಿರಸ್ಕರಿಸಿದ ಮತದಾರ
ಕರ್ನಾಟಕದ ಮಾದರಿಯಲ್ಲೇ ಛತ್ತೀಸ್‌ಗಢದಲ್ಲೂ ಕಾಂಗ್ರೆಸ್‌ ಉಚಿತಗಳ ಮಹಾಪೂರವನ್ನೇ ಘೋಷಿಸಿತ್ತು. ವಿಚಿತ್ರವೆಂದರೆ ಮತದಾರ ಅದಕ್ಕೆ ಮರುಳಾಗಿಲ್ಲ. ಆಡಳಿತಾರೂಢ ಪಕ್ಷ ಕಾಂಗ್ರೆಸ್‌, ಭತ್ತವನ್ನು ಗರಿಷ್ಠ ಬೆಲೆಗೆ ಕೊಳ್ಳಲಾಗುತ್ತದೆ, ಕೃಷಿ ಸಾಲ ಮನ್ನಾ ಮಾಡಲಾಗುತ್ತದೆ, ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ, ಅಡುಗೆ ಸಿಲಿಂಡರ್‌ಗೆ 500 ರೂ. ಸಬ್ಸಿಡಿ ಕೊಡಲಾಗುತ್ತದೆ, 200 ಯುನಿಟ್‌ಗಳವರೆಗೆ ಗೃಹಬಳಕೆ ವಿದ್ಯುತ್‌ ಉಚಿತ ಎಂದು ಭರವಸೆ ನೀಡಿತ್ತು. ಮತ್ತೂಂದು ಕಡೆ ಬಿಜೆಪಿ ಮೋದಿ ಕೀ ಗ್ಯಾರಂಟಿ ಹೆಸರಿನಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳನ್ನು 500 ರೂ.ಗೆ ನೀಡಲಾಗುವುದು, ಎರಡು ವರ್ಷದಲ್ಲಿ 1 ಲಕ್ಷ ಯುವಕರಿಗೆ ಸರಕಾರಿ ಕೆಲಸ ನೀಡಿಕೆ, ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ. ಹಣ, ಕ್ವಿಂಟಾಲ್‌ ಭತ್ತವನ್ನು 3,100 ರೂ.ಗೆ ಕೊಳ್ಳುವುದಾಗಿ ಹೇಳಿತ್ತು. ಛತ್ತೀಸ್‌ಗಢದ ಜನ ಕಾಂಗ್ರೆಸ್‌ ಭರವಸೆಗಳನ್ನು ಗಣನೆಗೆ ತೆಗೆದುಕೊಳ್ಳದೇ
ಬಿಜೆಪಿಯ ಜತೆ ನಿಂತಿದ್ದಾರೆ. ಅರ್ಥಾತ್‌ ಬಿಜೆಪಿಯ ಭರವಸೆಗಳಿಗೆ ಮನಸೋತಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿಗಳು
ಬುಡಕಟ್ಟು ನಾಯಕನಿಗೆ ಪಟ್ಟ?
ಕುನ್‌ಕುರಿ ಕ್ಷೇತ್ರದಿಂದ ಭಾರೀ ಅಂತರದಿಂದ ವಿಷ್ಣು ದೇವ್‌ ಸಾಯಿ ಗೆಲುವು ಸಾಧಿಸಿದ್ದಾರೆ. ಮೂರು ಬಾರಿ ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿದ್ದರು (2006ರಿಂದ 2010, 2014ರಲ್ಲಿ ಕೆಲವು ತಿಂಗಳು, 2020ರಿಂದ 2022). 2014ರಿಂದ 2019ರವರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ಕೇಂದ್ರದ ಉಕ್ಕು ಸಚಿವರಾಗಿದ್ದರು. ಛತ್ತೀಸ್‌ಗಢ ಇನ್ನೂ ಮಧ್ಯಪ್ರದೇಶದ ಭಾಗವಾಗಿದ್ದಾಗ ಜನಿಸಿದರು (ಇನ್ನೂ 59 ವರ್ಷ). ಮಧ್ಯಪ್ರದೇಶದ ತಪಾRರ ಕ್ಷೇತ್ರದ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದರು. ಪ್ರಸ್ತುತ ಛತ್ತೀಸ್‌ಗಢದ ಬುಡಕಟ್ಟು ಸಮುದಾಯದ ಪ್ರಬಲ ನಾಯಕರಲ್ಲೊಬ್ಬರು. ಒಂದು ವೇಳೆ ಬಿಜೆಪಿ ನಾಯಕತ್ವ ಬುಡಕಟ್ಟು ಸಮುದಾಯವನ್ನು ಆದ್ಯತೆಯಾಗಿಸಿಕೊಂಡರೆ ವಿಷ್ಣು ದೇವ್‌ ಸಾಯಿಗೆ ಪಟ್ಟ ಒಲಿಯಲಿದೆ. ಬುಡಕಟ್ಟು ಸಮುದಾಯದ ಮತವೇ ನಿರ್ಣಾಯಕವಾಗಿರುವುದರಿಂದ ಇವರ ಆಯ್ಕೆ ಅಸಹಜವೇನಲ್ಲ.

4ನೇ ಬಾರಿ ಸಿಎಂ ಆಗುವರೇ ಸಿಂಗ್‌?
ರಾಜನಂದಗಾಂವ್‌ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಡಾ| ರಮಣ್‌ ಸಿಂಗ್‌, 1,02,499 ಲಕ್ಷ ಮತ ಪಡೆದು ಕಾಂಗ್ರೆಸ್‌ನ ಗಿರೀಶ್‌ ದೇವಾಂಗನ್‌ ವಿರುದ್ಧ 45,084 ಮತಗಳಿಂದ ಗೆದ್ದಿದ್ದಾರೆ. ಅಲ್ಲಿಗೆ ಮುಖ್ಯಮಂತ್ರಿ ಹುದ್ದೆಯ ಪೈಪೋಟಿ ಯಲ್ಲಿದ್ದೇನೆ ಎಂದು ಸಾರಿದ್ದಾರೆ. 2003, 2008, 2013ರಲ್ಲಿ ಸತತ ಮೂರು ಬಾರಿ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದಾರೆ. ಸತತ 15 ವರ್ಷ ಅಧಿಕಾರದಲ್ಲಿದ್ದರು. ಬಡವರಿಗೆ 2ರಿಂದ 3 ರೂ. ಬೆಲೆಯಲ್ಲಿ ಅಕ್ಕಿ ನೀಡುವ ಮೂಲಕ ಭಾರೀ ಹೆಸರು ಮಾಡಿದ್ದಾರೆ. 2003ಕ್ಕೂ ಮುನ್ನ ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರ ಸಚಿವರೂ ಆಗಿದ್ದರು. ಇವರ ಹೆಸರೂ ಮುಖ್ಯಮಂತ್ರಿ ಸ್ಥಾನದ ಪೈಪೋಟಿಯಲ್ಲಿದೆ. ಸದ್ಯ ಇವರಿಗೆ ಹಿಂದಿನ ವರ್ಚಸ್ಸಿಲ್ಲ. ಜತೆಗೆ ವಯಸ್ಸು 71 ಆಗಿರುವುದರಿಂದ ಇವರನ್ನು ಆ ಸ್ಥಾನಕ್ಕೆ ಪರಿಗಣಿಸುವುದು ಅನುಮಾನ.

ಬಿಜೆಪಿಯಲ್ಲಿ ಅರುಣೋದಯ
ಪ್ರಸ್ತುತ ಛತ್ತೀಸ್‌ಗಢ ಬಿಜೆಪಿ ಘಟಕದ ಅಧ್ಯಕ್ಷ. ಬಿಲಾಸಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ವಯಸ್ಸು ಇನ್ನೂ ಕೇವಲ 55. ಲೋಕಸಭಾ ಸದಸ್ಯರಾ ಗಿರುವಾಗಲೇ ಪ್ರಸ್ತುತ ಲಾರ್ಮಿ ವಿಧಾನ ಸಭಾ ಕ್ಷೇತ್ರದಲ್ಲೂ ಭಾರೀ ಜಯ ಗಳಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಇವರ ನಾಯಕತ್ವದಲ್ಲೇ ಬಿಜೆಪಿ ಈ ಬಾರಿ ಮತ್ತೆ ಅಧಿಕಾರ ಹಿಡಿದಿದೆ. ಪ್ರಬಲ ಕಾಂಗ್ರೆಸ್‌ ಕೈಯಿಂದ ಗೆಲುವನ್ನು ಕಸಿದ ಹೆಗ್ಗಳಿಕೆ ಇವರದ್ದು. ಒಂದು ವೇಳೆ ಬಿಜೆಪಿ ಇತರೆ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಲು ಬಯಸಿದರೆ, ನಿಶ್ಚಿತವಾಗಿ ಅರುಣ್‌ ಸಾಹೋ ಪಟ್ಟಕ್ಕೇರಲಿದ್ದಾರೆ. ಇವರು ಇತರೆ ಹಿಂದುಳಿದ ವರ್ಗಗಳ ಪ್ರಮುಖ ನಾಯಕರಲ್ಲೊಬ್ಬರು. ಆ ವರ್ಗದ ಮತ ಸೆಳೆಯುವ ಶಕ್ತಿ ಹೊಂದಿದ್ದಾರೆ. ಇನ್ನೇನು ಲೋಕಸಭಾ ಚುನಾವಣೆಯೂ ಹತ್ತಿರದಲ್ಲಿರುವುದರಿಂದ ಬಿಜೆಪಿ ಆ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next