Advertisement

ಶಾಲೆಯಿಂದ ಹೊರಗುಳಿದ ಮಕ್ಕಳ ಜಾಡು ಪತ್ತೆ

11:12 AM Dec 17, 2018 | |

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷೆಯಲ್ಲಿ ಪತ್ತೆಯಾದ ವಿದ್ಯಾರ್ಥಿಗಳ ಮೂಲವನ್ನು ತಿಳಿಯಲು ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ (ಸ್ಟುಡೆಂಟ್‌ ಅಚೀವ್‌ ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ-ಎಸ್‌ಎಟಿಎಸ್‌) ತಂತ್ರಾಂಶದಲ್ಲಿ ಶೇಖರಿಸುವ ಕಾರ್ಯ ನಡೆಯುತ್ತಿದೆ.

Advertisement

ಈ ಮೂಲಕ ವಿದ್ಯಾರ್ಥಿಗಳ ನಿಖರ ಮಾಹಿತಿಯನ್ನು ಸಂಗ್ರಹಿಸುವ ಕರಸತ್ತನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ. ಮಕ್ಕಳು ಶಿಕ್ಷಣ ವಂಚಿತರಾಗಬಾರದು ಮತ್ತು ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ಹತ್ತಾರು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್‌, ಶೂ, ಸಾಕ್ಸ್‌ ವಿತರಿಸುತ್ತಿದೆ. ಆದರೂ, ನಗರ ಪ್ರದೇಶಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಮಾತ್ರ ನಿಂತಿಲ್ಲ. 

ಅದರಲ್ಲೂ ಹಿಂದುಳಿದ ಕಲಬುರಗಿಯಂತಹ ಜಿಲ್ಲೆಗಳಲ್ಲಿ ಬಡತನ, ಗುಳೆ ಹೋಗುವಿಕೆ, ಹೋಟೆಲ್‌ ಮತ್ತು ಕಾರ್ಖಾನೆಗಳಲ್ಲಿ ದುಡಿಯುವುದು… ಹೀಗೆ ಒಂದಿಲ್ಲ ಒಂದು ಕಾರಣಕ್ಕೆ ಪ್ರತಿ ವರ್ಷ 6ರಿಂದ 16 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಶಿಕ್ಷಣ ಇಲಾಖೆ ಶಿಕ್ಷಣ ವಂಚಿತರು ಹಾಗೂ
ಹೊರಗುಳಿದವರನ್ನು ಪತ್ತೆ ಹೆಚ್ಚಿ ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಳ್ಳುತ್ತಿದೆ.

ಸಮೀಕ್ಷೆಯಲ್ಲಿ ಪತ್ತೆ ಹಚ್ಚಿದ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನ.14 ರಿಂದ 28ರವರೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ನೆರವಿನೊಂದಿಗೆ ಶಿಕ್ಷಕರು ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಗಳ ನಡೆಸುವ ಮೂಲಕ ಸಮೀಕ್ಷೆ ನಡೆಸಿದ್ದಾರೆ. 

ಏನಿದು ಸ್ಯಾಟ್ಸ್‌ ತಂತ್ರಾಂಶ?: ಒಂದನೇ ತರಗತಿಯಿಂದ 10ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯ ಮಾಹಿತಿಯನ್ನು ಶೇಖರಿಸಲು ಸ್ಯಾಟ್ಸ್‌ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ವಿದ್ಯಾರ್ಥಿಯ ಶಾಲೆಯ ದಾಖಲಾತಿ ಸಂಖ್ಯೆ, ಆಧಾರ್‌ ಕಾರ್ಡ್‌ ಸಂಖ್ಯೆ, ಹಾಜರಾತಿ ಸೇರಿದಂತೆ ಪ್ರತಿ ಹಂತದ ಪ್ರಗತಿ ಮಾಹಿತಿಯನ್ನು ಶಿಕ್ಷಕರು ಅಪ್‌ಡೇಟ್‌ ಮಾಡಬೇಕಾಗುತ್ತದೆ. ಆಧಾರ್‌ ಸಂಖ್ಯೆಯನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಪ್‌
ಡೇಟ್‌ ಮಾಡುವುದರಿಂದ ವಿದ್ಯಾರ್ಥಿಯ ಜಾಡು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಮುಖ್ಯವಾಗಿ ಒಬ್ಬನೇ ವಿದ್ಯಾರ್ಥಿಯ ಹೆಸರು ಎರಡೆರಡು ಶಾಲೆಗಳಲ್ಲಿ ನೋಂದಣಿಯಾಗಿದ್ದು, ಎಷ್ಟು ದಿನದಿಂದ ಶಾಲೆಯಿಂದ ಹೊರಗುಳಿದಿದ್ದ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಲಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

Advertisement

ಕಳೆದ ವರ್ಷ 984 ವಿದ್ಯಾರ್ಥಿಗಳು ಪತ್ತೆ: ಜಿಲ್ಲೆಯಲ್ಲಿ ಕಳೆದ ವರ್ಷ ಕೈಗೊಂಡ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯಲ್ಲಿ ಒಟ್ಟು 984 ಮಕ್ಕಳನ್ನು ಪತ್ತೆ ಹಚ್ಚಲಾಗಿತ್ತು. ಇದರಲ್ಲಿ 506 ಬಾಲಕರು ಮತ್ತು 478 ಬಾಲಕಿಯರನ್ನು ಗುರುತಿಸಿ, 292 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ. 496 ವಿದ್ಯಾರ್ಥಿಗಳನ್ನು ವಿಶೇಷ ತರಬೇತಿಗೆ ಒಳಪಡಿಸಿ ಮುಖ್ಯ ವಾಹಿನಿಗೆ ತರಲಾಗಿದೆ. ಉಳಿದ 196 ಮಕ್ಕಳು 16 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತಿತರ ಕಾರಣಗಳಿಂದ ಹೊರಗುಳಿದಿದ್ದರು. 

12 ಎನ್‌ಜಿಒ ಮೂಲಕ ತರಬೇತಿ: ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯದಡಿ ವಿದ್ಯಾರ್ಥಿಗಳಿಗೆ ವಸತಿಯುತ ಮತ್ತು ವಸತಿ ರಹಿತ ವಿಶೇಷ ತರಬೇತಿಗೆ ಎನ್‌ಜಿಒಗಳನ್ನು ಶಿಕ್ಷಣ ಇಲಾಖೆ ಬಳಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಸದ್ಯ ಕಳೆದ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಒಟ್ಟು ವಿದ್ಯಾರ್ಥಿಗಳ ಪೈಕಿ 247 ವಿದಾರ್ಥಿಗಳಿಗೆ 12 ಎನ್‌
ಜಿಒ ಮೂಲಕ ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ತರಬೇತಿ ನೀಡಲಾಗುತ್ತಿದೆ. ಅಫಲಜಪುರ ತಾಲೂಕಿನ 15, ಆಳಂದ ತಾಲೂಕಿನ 33, ಚಿಂಚೋಳಿ ತಾಲೂಕಿನ 49, ಚಿತ್ತಾಪುರ ತಾಲೂಕಿನ-35, ಕಲಬುರಗಿ ಉತ್ತರ ವಲಯದ 31, ಕಲಬುರಗಿ ದಕ್ಷಿಣ ವಲಯದ 34, ಜೇವರ್ಗಿ ತಾಲೂಕಿನ 20 ಹಾಗೂ ಸೇಡಂ ತಾಲೂಕಿನ 15 ವಿದ್ಯಾರ್ಥಿಗಳು ವಿಶೇಷ ತರಬೇತಿಗೆ ಒಳಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಸಕ್ತ ಶೈಕ್ಷಣಿಕ ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮುಗಿದಿದೆ. ಮರಳಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಸ್ಯಾಟ್ಸ್‌ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಶೀಘ್ರವೇ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ನಿಖರ ಮಾಹಿತಿ ಲಭ್ಯವಾಗಲಿದೆ.
 ಶಾಂತಗೌಡ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next