ಹುಣಸೂರು: ಕೃಷಿ ಪ್ರಗತಿಗಾಗಿ ಸರ್ಕಾರಿ ಕಾರ್ಯಕ್ರಮಗಳನ್ನು ಸದ್ಬಳಸಿಕೊಂಡು ಸಮಗ್ರ ಕೃಷಿ ಕಡೆಗೆ ರೈತರು ಹೆಚ್ಚು ಒಲವು ತೋರಬೇಕೆಂದು ಧರ್ಮಾಪುರ ಜಿಪಂ ಸದಸ್ಯ ಸುರೇಂದ್ರ ಮನವಿ ಮಾಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯು ಕಸಬಾ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದ “ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ರೈತರ ಆಶಾದಾಯಕವಾಗಿದೆ. ಬಹುತೇಕ ರೈತರು ಸೌಲಭ್ಯಗಳನ್ನು ಬಳಸಿಕೊಳ್ಳದೆ ಕೃಷಿಯಲ್ಲಿ ನಷ್ಟ ಅನುಭವಿಸಿ, ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಸರಿಯಲ್ಲ ಎಂದು ವಿಷಾದಿಸಿದರು.
ಮಾದರಿ ಕೃಷಿ: ಕೃಷಿಯನ್ನು ಕಾಲಮಾನಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ಸರ್ಕಾಕ ಕೃಷಿ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಸಮಗ್ರ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಬಳಸಬೇಕು. ಅದಕ್ಕೆ ಕೊಯಮುತ್ತೂರು ಕಾಲೋನಿಯ ರೈತರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ವೈಯಕ್ತಿಕ ಆಸಕ್ತಿ ಮುಖ್ಯ: ತಾಪಂ ಇಒ ಕೃಷ್ಣಕುಮಾರ್ ಮಾತನಾಡಿ, ರೈತರಿಗೆ ಸಾಕಷ್ಟು ಸೌಲಭ್ಯಗಳಿದ್ದು, ರೈತರು ಇದನ್ನು ಬಳಸಿಕೊಂಡು ಉತ್ತಮ ಕೃಷಿ ಜೊತೆಗೆ ಸರಕಾರದ ಬೆಂಬಲ ಬೆಲೆ ಸಿಕ್ಕರೆ ಉತ್ತಮ ಲಾಭ ಪಡೆಯಬಹುದು. ರೈತರ ಅಭ್ಯುದಯಕ್ಕೆ ಹಲವಾರು ಕೊಡುಗೆಗಳನ್ನು ಸರಕಾರ ನೀಡುತ್ತಿದೆ. ಎಲ್ಲದಕ್ಕೂ ಸರಕಾರವನ್ನು ಅವಲಂಬಿಸದೆ ವೈಯಕ್ತಿಕ ಆಸಕ್ತಿ ರೈತರಲ್ಲಿ ಇರಬೇಕೆಂದರು.
ಮಣ್ಣು ಸಂರಕ್ಷಿಸಿ: ಕೃಷಿ ಇಲಾಖೆಯ ಉಪ ನಿರ್ದೇಶಕ ಧನಂಜಯ್ ಮಾತನಾಡಿ, ರೈತರು ಭೂಮಿಗೆ ಅತಿಯಾದ ರಸಗೊಬ್ಬರ ಕ್ರಿಮಿನಾಶಕ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ನೆಲ-ಜಲ ಸಂರಕ್ಷಿಸದಿದ್ದಲ್ಲಿ ಮುಂದೆ ಆಹಾರ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿ ಮಹದೇವಪ್ಪ, ನಿವೃತ್ತ ಕೃಷಿ ಅಧಿಕಾರಿ ಹೊಂಬಯ್ಯ ಮುಸುಕಿನ ಜೋಳದ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಮೋಹನ್, ತಾಪಂ ಸದಸ್ಯರಾದ ಪ್ರೇಮೇಗೌಡ, ರಾಜೇಂದ್ರಬಾಯಿ, ಉಮ್ಮತ್ತೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ, ತಾಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಗತಿಪರ ರೈತರಾದ ರಾಜು, ರಾಮೇಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ನಾಗರಾಜ್, ಕೃಷಿ ಅಧಿಕಾರಿ ಜಯಕುಮಾರ್, ಸಹಾಯಕ ಕೃಷಿ ಅಧಿಕಾರಿ ಅರೇಪಾಷಾ ಮಾತನಾಡಿದರು.