Advertisement

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರೈತರ ಪ್ರತಿಭಟನೆ

09:42 PM Aug 26, 2019 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ನಲ್ಲಿರುವ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಇದೇ ತಿಂಗಳ ಮೊದಲ ವಾರದಿಂದ ಸುಮಾರು 2 ವಾರಗಳು ಸುರಿದ ಮಳೆಯಿಂದಾಗಿ ಮತ್ತು ಮಹಾರಾಷ್ಟ್ರದ ಕೊಯ್ನಾ ಜಲಾಶಯ ಒಳಗೊಂಡಂತೆ ರಾಜ್ಯದ ಹಲವಾರು ಜಲಾಶಯಗಳ ನಿರ್ವಹಣೆಯ ಹೊಣೆ ಹೊತ್ತ ಸಿಬ್ಬಂದಿಯವರ ಬೇಜವಾಬ್ದಾರಿ ನಿರ್ವಹಣೆಯಿಂದ ಏಕಾಏಕಿ ನೀರು ಹೊರಬಿಟ್ಟ ಅಪಾರ ಪ್ರಮಾಣದ ನೀರು ಸುಮಾರು 4500 ಹಳ್ಳಿಗಳು ಜಲಾಘಾತಕ್ಕೆ ಒಳಗಾದವು ಮತ್ತು 14,82000 ರಷ್ಟು ಎಕರೆ ಪ್ರದೇಶ ಕೃಷಿ ಬೆಳೆ ಹಾನಿಯಾಗಿದೆ.

ಈ ಪ್ರವಾಹದ ಹೊಣೆಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರ ಹೊರಬೇಕಾಗಿರುವುದರಿಂದ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಮಹಾರಾಷ್ಟ್ರ ಸರ್ಕಾರ ನಷ್ಟ ಭರಿಸಬೇಕು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಏಕಾಏಕಿ 6 ಲಕ್ಷ ಕ್ಯೂಸೆಕ್‌ ನೀರನ್ನು ಕೊಯ್ನಾ ಜಲಾಶಯದಿಂದ ಬಿಟ್ಟಿದ್ದರಿಂದ ಅಪಾರ ಬೆಳೆನಷ್ಟವಾಗಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಅಪಾರ ನಷ್ಟವನ್ನು ಭರಿಸುವ ಸಂಪೂರ್ಣ ಹೊಣೆಯನ್ನು ಮಹಾರಾಷ್ಟ್ರ ಸ‌ರ್ಕಾರ ತೆತ್ತಬೇಕು ಎಂದು ಒತ್ತಾಯಿಸಿದರು.

ಹಳ್ಳಿಗಳ ಪುನಃಶ್ಚೇತನಗೊಳಿಸಬೇಕು: ಕರ್ನಾಟಕದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಒಳಗೊಂಡಂತೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಂತ್ರಸ್ತರಿಗೆ ಕರ್ನಾಟಕ ಸರಕಾರ ಸಂತ್ರಸ್ತ ಗ್ರಾಮಗಳ ಸ್ಥಳಾಂತರ ಮತ್ತು ಎಲ್ಲಾ ನಷ್ಟಗೊಂಡ ಬೆಳಗಳ ಪರಿಹಾರವನ್ನು ಕೊಟ್ಟು ರೈತ ಕುಟುಂಬಗಳ ಹಳ್ಳಿಗಳ ಪುನಃಶ್ಚೇತನಗೊಳಿಸಬೇಕು. ಉತ್ತರ ಕನಾಟಕದ ರೈತ ಎಲ್ಲಾ ಕಬ್ಬಿನ ಬಾಕಿಯನ್ನು ಶೀಘ್ರದಲ್ಲಿ ಪಾವತಿಮಾಡಬೇಕು. ಸಂತ್ರಸ್ತ ರೈತರ ಎಲ್ಲಾ ಸಾಲಗಳನ್ನು ರದ್ದಾಗಿಸಬೇಕು. ಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದಉ ಆಗ್ರಹಿಸಿದರು.

Advertisement

ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿ: ರಾಜ್ಯದಲ್ಲಿ ಬೆಳೆ ವಿಮೆ ಶೀಘ್ರದಲ್ಲಿ ಪಾವತಿಯಾಗಬೇಕು. ರಾಜ್ಯಾದ್ಯಂತ ಶಾಶ್ವತ ನೆರೆ ಮತ್ತು ಬರವಿರೋಧಿ ಕ್ರಮಗಳನ್ನು ಕೈಗೊಳ್ಳಬೇಕು. ಜಲಾಶಯಗಳು ಮತ್ತು ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಬೇಕು. ನೆರೆ ಸಂತ್ರಸ್ತರ ಪರಿಹಾರ ಮೊತ್ತವನ್ನು ವಸ್ತುನಿಷ್ಠವಾಗಿ ಪರಿಗಣಿಸಿ ವಿತರಿಸಬೇಕು. ಜಲಾಶಯಗಳ ಬೇಜಬಾಬ್ದಾರಿ ನಿರ್ವಹಣೆಯನ್ನು ಮಾಡಿ ಅಪಾರ ದುಃಖ ದುಮ್ಮಾನಗಳಿಗೆ ಕಾರಣರಾದವರ ಮೇಲೆ ಕಠಿಣಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಂಘದ ವತಿಯಿಂದ ಮನವಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಹರೀಶ್‌ ಮಾತನಾಡಿ, ನದಿ ಮೂಲಗಳನ್ನು ಹೊಂದಿರುವ ಜಿಲ್ಲೆಯಲ್ಲಿ ನದಿ ಪಾತ್ರಗಳ ಜಾಗವನ್ನು ಒಂದು ಕಿಲೋ ಮೀಟರ್‌ನಿಂದ 500 ಮೀಟರ್‌ಗೆ ಕಡಿತ ಮಾಡಿ, ನದಿ ಪಾತ್ರಗಳಲ್ಲಿ ರೆಸಾರ್ಟ್‌, ಐಶಾರಾಮಿ ಕಟ್ಟಡ, ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಡಿತಗೊಳಿಸಿದೆ. ಗಣಿಗಾರಿಕೆಗೆ ಅನುಮತಿ ನೀಡಲು ಪರೋಕ್ಷವಾಗಿ ಕಾರಣವಾಗುತ್ತಿದೆ.

2011ರ ಭೂಸ್ವಾಧೀನ ಕಾಯಿದೆ ತಿದ್ದುಪಡಿ ಮಾಡಿರುವ ಸಮಿಶ್ರ ಸರ್ಕಾರ ಪಾಪದ ಕೂಸಾಗಿದೆ. ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಗೆ ಈ ಹಿಂದಿನ ಕಾಯಿದೆಯಂತೆ ನಾಲ್ಕು ಪಟ್ಟು ಪರಿಹಾರ ನೀಡಲು ಅವಕಾಶವಿದ್ದು, ತಿದ್ದುಪಡಿ ಕಾಯಿದೆಯಿಂದಾಗಿ ಕೇವಲ 1 ಪಟ್ಟು ಮಾತ್ರ ಪರಿಹಾರ ಸಿಗಲಿದೆ. ಇದು ರೈತರಿಗೆ ಮರಣಶಾಸನ ಆಗಲಿದೆ. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಬಾರದು. ಈಗಾಗಲೇ ಸಂಘದ ವತಿಯಿಂದ ಮನವಿ ಮಾಡಲಾಗಿದೆ ಎಂದು ಹೇಳಿದರು.

ತಾಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಹರೀಶ್‌, ಭೈರೇಗೌಡ, ಮುನಿಶಾಮಪ್ಪ, ಚಿಕ್ಕೇಗೌಡ, ನವೀನ್‌ ಹಾಗೂ ಜಿಲ್ಲೆಯ ನಾಲ್ಕು ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next