Advertisement

ಪ್ರೌಢಶಾಲಾ ಸಹಶಿಕ್ಷಕರಿಗೆ ಮುಂಬಡ್ತಿ ಮರೀಚಿಕೆ!

11:00 PM Jan 29, 2020 | Lakshmi GovindaRaj |

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ ಹಿಂದೆ ವರ್ಗಾವಣೆ ಪಡೆದ ಶಿಕ್ಷಕರಲ್ಲಿ ಕೆಲವರಿಗೆ ಜೇಷ್ಠತೆ ಆಧಾರದಲ್ಲಿ ಮುಂಬಡ್ತಿ ನೀಡುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, 2006ರ ನಂತರ ವರ್ಗಾವಣೆ ಪಡೆದ ಶಿಕ್ಷಕರಿಗೆ ಮುಂಬಡ್ತಿ ನೀಡದಿರುವ ಕಾರಣ ಹಲವು ಗೊಂದಲ ಸೃಷ್ಟಿಯಾಗಿದೆ.

Advertisement

ಶಿಕ್ಷಣ ಇಲಾಖಾ ವ್ಯಾಪ್ತಿಯ ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ 1994ರಲ್ಲಿ ನೇಮಕವಾದ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಮುಂಬಡ್ತಿ ನೀಡಲು ನಿಯಮಗಳ ನೆಪವೊಡ್ಡಿ ಇಲಾಖೆಯ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಆದರೆ, ಕಲಬುರಗಿ ವಿಭಾಗದಲ್ಲಿ 1998ರಲ್ಲಿ ಮತ್ತು ಬೆಳಗಾವಿ ವಿಭಾಗದಲ್ಲಿ 2002ರಲ್ಲಿ ನೇಮಕವಾದ ಸಹ ಶಿಕ್ಷಕರಿಗೆ ಮುಂಬಡ್ತಿ ನೀಡಿ, ಮುಖ್ಯಶಿಕ್ಷಕರನ್ನಾಗಿ ಮಾಡಲಾಗಿದೆ. ಇಲಾಖೆಯ ಈ ದ್ವಂದ್ವ ನಿಲುವು ಜೇಷ್ಠತೆಯ ಹಿರಿತನ ಹೊಂದಿರುವ ಕೆಲವು ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ನೊಂದ ಶಿಕ್ಷಕರು ಆಕ್ರೋಶ ಹೊರಹಾಕಿದ್ದಾರೆ.

ಗೊಂದಲಕ್ಕೆ ಕಾರಣವೇನು?: ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವೃತ್ತಿ ಶಿಕ್ಷಕರಿಗೆ ನೇಮಕಾತಿ ನಿಯಮ, ವರ್ಗಾವಣಾ ನಿಯಮ ಮತ್ತು ಜೇಷ್ಠತಾ ನಿಯಮಗಳು ಒಂದೇ ಆಗಿದೆ. ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವೃತ್ತಿ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ರಾಜ್ಯ ಮಟ್ಟದಲ್ಲಿ ತಯಾರಿಸಲಾಗುತ್ತದೆ. ಆದರೆ, ಸಹಶಿಕ್ಷಕರ ಜೇಷ್ಠತಾ ಪಟ್ಟಿ ವಿಭಾಗವಾರು ಸಿದ್ಧಪಡಿಸ ಲಾಗುತ್ತದೆ. ಒಂದೇ ಇಲಾಖೆಯಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಪಡೆದವರನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರಿಸುತ್ತಿಲ್ಲ. ಮುಂಬಡ್ತಿಗೆ ವರ್ಗಾವಣೆ ಪಡೆದವರು ಆರಂಭದಿಂದಲೇ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದೇ ಗೊಂದಲಕ್ಕೆ ಕಾರಣ ಎಂದು ಅರ್ಹ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಕಲಬುರಗಿ ಆಯುಕ್ತಾಲಯ ವ್ಯಾಪ್ತಿಯಲ್ಲಿ 2008ರ ಜನವರಿ ಪೂರ್ವದಲ್ಲಿ ಕಲಬುರಗಿ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿರುವ ಶಿಕ್ಷಕರ ಜೇಷ್ಠತೆಯನ್ನು ಪರಿಗಣಿಸಲಾಗಿದೆ. ಆದರೆ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಪಾಲನೆಯಾಗಿಲ್ಲ. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ನಿಯಮಗಳು 2011ರಲ್ಲಿ ಅಂತರ್‌ ಘಟಕ ವರ್ಗಾವಣೆಯನ್ನು ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ 16-ಎ ರ ನಿಯಮ ಮತ್ತು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957ರ 6ನೇ ನಿಯಮದಲ್ಲಿ ನಿರ್ದಿಷ್ಟ ಪಡಿಸಿದಂತೆ ಪರಿಗಣಿಸಬೇಕು ಎಂದು ಸ್ಪಷ್ಟವಾಗಿದೆ.

ಆದರೆ, ಘಟಕದ ಒಳಗೆ ವರ್ಗಾವಣೆ ಪಡೆದ ಶಿಕ್ಷಕರನ್ನು 2008ರ ನಿಯಮದಂತೆ ಜೇಷ್ಠತೆಯಿಂದ ಹೊರಗಿಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, 2006ರಿಂದ ಹಿಂದೆ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ. ನಾವು ಬೇರೆ ಇಲಾಖೆಗೆ ವರ್ಗಾವಣೆ ಹೊಂದಿಲ್ಲ. ಇಲಾಖೆಯ ಒಳಗೆ ವರ್ಗಾ ವಣೆ ಪಡೆದರೂ ಮುಂಬಡ್ತಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ಶಿಕ್ಷಕರು ಅಳಲು ತೋರಿಕೊಂಡರು.

Advertisement

ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957ರ 6ನೇ ನಿಯಮದ ಪ್ರಕಾರ ವೇತನ ಅಥವಾ ವೇತನ ಶ್ರೇಣಿ ಹೊಂದಿರುವ ಒಂದು ವರ್ಗ ಅಥವಾ ಶ್ರೇಣಿಯಿಂದ ಇನ್ನೊಂದು ವರ್ಗ ಅಥವಾ ಇಲಾಖೆಗೆ ನೌಕರ ವಿನಂತಿಯ ಮೇರೆಗೆ ವರ್ಗಾವಣೆಯಾದಾಗ ವರ್ಗ ಅಥವಾ ಶ್ರೇಣಿಯ ಜೇಷ್ಠತಾ ಪಟ್ಟಿಯಲ್ಲಿ ಕೆಳಗೆ ಬರುತ್ತಾರೆ. ಒಂದು ಜೇಷ್ಠತಾ ಘಟಕದಿಂದ ಇನ್ನೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆಯಾದರೆ ನೌಕರನನ್ನು ಜೇಷ್ಠತಾ ಪಟ್ಟಿಯಲ್ಲಿ ಕೆಳಗೆ ಇಡುವ ಬಗ್ಗೆ ನಿಯಮದಲ್ಲಿ ಉಲ್ಲೇಖವಿಲ್ಲ. ಆದರೂ, ಹಳೇ ನಿಯಮದಂತೆ ಶಿಕ್ಷಕರಿಗೆ ಕೆಲವು ವಿಭಾಗದಲ್ಲಿ ಸಮಸ್ಯೆ ಮಾಡುತ್ತಿದ್ದಾರೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದರು.

ವೃಂದ ಮತ್ತು ನೇಮಕಾತಿ ನಿಯಮದಲ್ಲೇ ಈ ರೀತಿ ಮಾಡಲಾಗಿದೆ. ಘಟಕದ ಹೊರಗೆ ವರ್ಗಾವಣೆ ಪಡೆಯುವ ಶಿಕ್ಷಕರಿಗೆ ಮುಂಬಡ್ತಿಗೆ ಸಮಸ್ಯೆಯಾಗುತ್ತಿದೆ. ಬೇರೆ ಯಾವುದೇ ಸೌಲಭ್ಯದಿಂದ ವಂಚಿತರಾಗುವುದಿಲ್ಲ.
-ಸಿದ್ದಣ್ಣ ಪೂಜಾರಿ, ಪ್ರಧಾನ ಕಾರ್ಯದರ್ಶಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ

ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ(ವಿಭಾಗಕ್ಕೆ) ವರ್ಗಾವಣೆಯಾಗಿ ಬಂದಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕೆಳಗೆ ಬರುತ್ತಾರೆ. ವರ್ಗಾವಣೆ ನಿಯಮದಲ್ಲಿ ಇದು ಇರುವುದರಿಂದ ಪಾಲನೆ ಮಾಡುತ್ತಿದ್ದೇವೆ.
-ನಳಿನ್‌ ಅತುಲ್‌, ಅಪರ ಆಯುಕ್ತ ಕಲಬುರಗಿ ವಿಭಾಗ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next