Advertisement

ಕಮರ್ಷಿಯಲ್‌ ಆಯ್ತು ಭರಟ ನಾಟ್ಯ!

11:43 AM Nov 13, 2017 | |

ರಂಭೆ ಊರ್ವಶಿ ರಮಣಿಯರೆಲ್ಲರು
ಚೆಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತದಿಂಗಿಣ ತೋಂ ಎಂದು ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫ‌ಣಿಯಲಿ!

                    
ವೇದಿಕೆಯಲ್ಲಿ, ದಾಸರ ಪದವನ್ನು ತನ್ಮಯತೆಯಿಂದ ಕಲಾವಿದೆ ನರ್ತಿಸುತ್ತಿದ್ದಳು. “ಆ ಕಾಳಿಂಗ ಮರ್ದನ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮಾಡುವ ಈ ಭರತನಾಟ್ಯ ಅದೆಷ್ಟು  ಶ್ರೀಮಂತ ಕಲೆ, ಯಾರೋ ಸಭಿಕರ ಉದ್ಗಾರ.  ನಿಜಕ್ಕೂ ಇದು ಎಲ್ಲಾ ಅರ್ಥದಲ್ಲೂ ಶ್ರೀಮಂತ ಕಲೆ… ಇನ್ನೊಬ್ಬರ ನುಡಿ. ಕಲೆ ಶ್ರೀಮಂತವೇ, ಆದರೆ ಅದು ವ್ಯವಹಾರವಾಗಿ ಬದಲಾದದ್ದು ಯಾರಿಂದ ಏಕೆ ಮತ್ತು ಹೇಗೆ ? 

Advertisement

ಋಗ್ವೇದದಿಂದ ಪಠ್ಯ, ಯರ್ಜುವೇದದಿಂದ ಅಭಿನಯ, ಸಾಮವೇದದಿಂದ ಸಂಗೀತ, ಅಥರ್ವಣ ವೇದದಿಂದ ರಸವನ್ನು ಆಯ್ದು ಪಂಚಮ ವೇದವನ್ನಾಗಿ ಬ್ರಹ್ಮ ಸೃಷ್ಟಿಸಿದನೆಂದು ಹೇಳಲಾಗುವ ನಾಟ್ಯವೇದ ಅತ್ಯಂತ ವಿಶಿಷ್ಟವಾದುದು. ಭಾರತೀಯ ಶಾಸ್ತ್ರೀಯ ನೃತ್ಯಶೈಲಿಗಳಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾದುದು ಭರತನಾಟ್ಯ.

ಮೊದಲು ದೇವಸ್ಥಾನಗಳಲ್ಲಿ ದೇವರ ಪ್ರೀತ್ಯರ್ಥವಾಗಿ ದೇವದಾಸಿಯರಿಂದ, ನಂತರ ರಾಜ ಮಹಾರಾಜರ ಆಸ್ಥಾನದಲ್ಲಿ ಮನರಂಜನೆಗಾಗಿ ರಾಜನರ್ತಕಿಯರಿಂದ ಪ್ರದರ್ಶನಗೊಳ್ಳುತ್ತಿದ್ದ ಈ ನೃತ್ಯ ಸದಿರ…/ದಾಸಿ ಆಟ್ಟಂ ಎಂದು ಪ್ರಚಲಿತವಾಗಿತ್ತು.ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖ ಸ್ಥಾನದ ಜತೆ , ಜನರ ಮನ್ನಣೆ ಗಳಿಸಿದ ಶ್ರೀಮಂತ ಕಲೆ ಭರತನಾಟ್ಯ.

ಏಕೆ ದುಬಾರಿ?: ಅರವತ್ನಾಲ್ಕು ವಿದ್ಯೆಗಳಲ್ಲಿ ಒಂದಾದ ನೃತ್ಯಕಲೆ ಪ್ರದರ್ಶಕ ಕಲೆ. ಇದರಲ್ಲಿ ಕಲಾವಿದೆ ತನ್ನ ನೃತ್ಯ ಪ್ರದರ್ಶನ ನೀಡುವಾಗ  ಪೂರಕವಾಗಿ ಹಾಡುಗಾರಿಕೆ, ನಟುವಾಂಗ, ಮೃದಂಗ-ಕೊಳಲು ಮುಂತಾದ ಪಕ್ಕವಾದ್ಯಗಳನ್ನು ಇಟ್ಟುಕೊಳ್ಳುವುದು ಅನಿವಾರ್ಯ. ಇದು ನರ್ತಿಸುವ ಕಲಾವಿದರ ಪೂರ್ಣ ಅಭಿವ್ಯಕ್ತಿಯ ಜತೆ ಪ್ರೇಕ್ಷಕರ ರಸಪ್ರಾಪ್ತಿಗೆ ಅಗತ್ಯ. ಇದರೊಂದಿಗೇ  ನೃತ್ಯಕ್ಕೆ ತಕ್ಕದಾದ ಉಡುಪು,ಆಭರಣ,ಗೆಜ್ಜೆ ,ಪ್ರಸಾದನವನ್ನೂ ಬಳಸಬೇಕು. ಇ

ದಲ್ಲದೇ ನರ್ತಿಸಲು ಸರಿಯಾದ ವೇದಿಕೆ, ಹಾವಭಾವ ಸುಟವಾಗಿ ತೋರುವ ಬೆಳಕು, ಹಾಡು ಸರಿಯಾಗಿ ಕೇಳುವ ಧ್ವನಿವರ್ಧಕಗಳ ವ್ಯವಸ್ಥೆಯಾಗಬೇಕು. ಹೀಗೆ ಎಲ್ಲಿ ಬೇಕೆಂದರಲ್ಲಿ ಮಾಡಲಾಗದ, ಹಲವು ಕಲಾವಿದರ ಸಹಕಾರ ಬಯಸುವ ನೃತ್ಯಕಲೆ ಪರಸ್ಪರ ಸಹಯೋಗ- ಸಹಕಾರ ಬಯಸುವ ಮತ್ತು ಕಲಿಸುವ ಕಲೆ. ಈ ರೇಷ್ಮೆ ಸೀರೆ, ಟೆಂಪಲ್ ಜ್ಯುವೆಲ್ಲರಿಯ ವೆಚ್ಚ ಮತ್ತು ಸಹಕಲಾವಿದರ ಸಂಭಾವನೆ ಎಲ್ಲವೂ ಸೇರಿ ಪ್ರದರ್ಶನ ನೀಡುವಾಗ ಶ್ರೀಮಂತ ಕಲೆ ಅನ್ನಿಸುವುದು ಕೆಲಮಟ್ಟಿಗೆ ನಿಜ.

Advertisement

ಆದರೆ ಕಲಿಕೆಯ ಮಟ್ಟಿಗೆ ಬಂದಾಗ ಪರಿಸ್ಥಿತಿ ಹೀಗಿಲ್ಲ.ನಿತ್ಯದ ಕಲಿಕೆಗೆ ಸಾದಾ ಕಾಟನ್‌ ಸೀರೆ ಸಾಕು, ಗುರುಗಳು ತೆಗೆದುಕೊಳ್ಳುವ ಶುಲ್ಕವೂ ಹೆಚ್ಚಿನದ್ದೇನಲ್ಲ. ಸಮಾಧಾನದ ಸಂಗತಿಯೆಂದರೆ ಕೌಟುಂಬಿಕ ಸಂಬಂಧಗಳೂ ವಾಣಿಜ್ಯೀಕರಣಗೊಳ್ಳುತ್ತಿರುವ ದುರಿತ ಕಾಲದಲ್ಲೂ ಗುರು- ಶಿಷ್ಯ ಪರಂಪರೆ ಯಾವ ಕ್ಷೇತ್ರದಲ್ಲಾದರೂ ಉಳಿದಿದ್ದರೆ ಅದು ಕಲಾ ಕ್ಷೇತ್ರದಲ್ಲಿ ಮಾತ್ರ.

ರಂಗಪ್ರವೇಶ ಎಂಬ ಸಮಾರಂಭ!: ಇನ್ನು ಅದ್ಧೂರಿ ಅರೆಂಗೇಟ್ರಂ ಇತ್ತೀಚಿನ ಟ್ರೆಂಡ್‌! ದೊಡ್ಡ ಆಹ್ವಾನ ಪತ್ರಿಕೆ,ಪ್ರಭಾವಿ ರಾಜಕಾರಣಿಗಳ ಅಧ್ಯಕ್ಷತೆ, ಸಾಲಂಕೃತ ವೇದಿಕೆ, ಭರ್ಜರಿ ಊಟ, ಕಟೌಟ…ಗಳು-ಯಾವ ಮದುವೆಗೂ ಕಡಿಮೆ ಇಲ್ಲದ ಸಮಾರಂಭಗಳಾಗಿವೆ. ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡು ಶ್ರೀಮಂತಿಕೆ ಮೆರೆಸುವ ಸಮಾರಂಭಗಳಾಗಿವೆ. ಅರೆಂಗೇಟ್ರಂ ಮೂಲತಃ ಎರಡು ತಮಿಳು ಪದಗಳಿಂದ ಮಾಡಲ್ಪಟ್ಟಿದೆ ಅರೆಂಗು (ರಂಗಸ್ಥಳ) ಮತ್ತು ಏಟ್ರಂ(ಏರು).

ಕನ್ನಡದಲ್ಲಿ ರಂಗಪ್ರವೇಶ/ರಂಗಾಭಿವಂದನೆ  ಎಂಬ ಪದ ಬಳಕೆಯಲ್ಲಿದೆ.ಭರತ ನಾಟ್ಯ ಕಲಾವಿದೆಯ ಜೀವನದಲ್ಲಿ ಮಹತ್ವದ ಘಟ್ಟವಿದು. ಏಕೆಂದರೆ ವಿದ್ಯಾರ್ಥಿ ಗುರುವಿನ ಅನುಮತಿಯೊಂದಿಗೆ ಪ್ರೇಕ್ಷ$ಕರೆದುರು ಮೊದಲ ಬಾರಿ ವೇದಿಕೆಯಲ್ಲಿ ತಾನು ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸುವ ಸುವರ್ಣ ಘಳಿಗೆ ಇದು.ಮಾತ್ರವಲ್ಲ ಕಲಿತ ಶಿಷ್ಯೆಯ ಜತೆ ಕಲಿಸಿದ ಗುರುವಿನ ಸಾಮರ್ಥ್ಯವೂ ಒರೆ ಹಚ್ಚಲ್ಪಡುವ ನಿರ್ಣಾಯಕ ಹಂತವಿದು. 

ಬದಲಾದ ಸ್ವರೂಪ: ನೃತ್ಯಕ್ಕೆ ರಾಜಾಶ್ರಯ ಇದ್ದ ಕಾಲದಲ್ಲಿ, ನೃತ್ಯಶಿಕ್ಷಣವನ್ನು ಎಳೆಯ ವಯಸ್ಸಿನಲ್ಲಿ ಅಂದರೆ  ಬಾಲಕಿಯಾಗಿದ್ದಾಗಲೇ ಆರಂಭಿಸಲಾಗುತ್ತಿತ್ತು. ಐದು-ಆರು ವರ್ಷಕ್ಕೆ ವಿಧಿವತ್ತಾದ ಕಲಿಕೆ ಶುರುವಾದರೆ ಹತ್ತು-ಹನ್ನೆರಡು ವರ್ಷಗಳ ಕಾಲ ಗುರುವಿನಲ್ಲಿ ಕಠಿಣ ಅಭ್ಯಾಸ ನಡೆಯುತ್ತಿತ್ತು. ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಸತತ ತಾಲೀಮು ಕಡ್ಡಾಯವಾಗಿತ್ತು.

ಅಂಗಸಾಧನೆ, ಅಭಿನಯದ ಸೂಕ್ಷ್ಮತೆಗಳ ಜತೆ ಸಂಗೀತ-ಸಾಹಿತ್ಯ-ಶಾಸ್ತ್ರ ಇವೆಲ್ಲದರ ಅಧ್ಯಯನವೂ ನಡೆಯುತ್ತಿತ್ತು. ಷೋಡಶ ಅಂದರೆ ಸುಮಾರು ಹದಿನಾರು ವರ್ಷವಾದಾಗ ಕಲಿಕೆ ಒಂದು ಹಂತ ತಲುಪಿರುತ್ತಿತ್ತು.ಅದರೊಂದಿಗೇ ದೇಹ ಮತ್ತು ಮನಸ್ಸು ಎರಡೂ ವಿಕಾಸ ಹೊಂದಿ ದೇಹದ ಚಲನೆ ಭಂಗಿ ನಿಖರವಾಗಿದ್ದರೆ, ಅಭಿನಯವನ್ನೂ ಅರಿತು ಮಾಡುವ ಸಾಮರ್ಥ್ಯವಿರುತ್ತಿತ್ತು.

ಹೀಗೆ ದೈಹಿಕ ,ಮಾನಸಿಕವಾಗಿ ಸಜ್ಜಾಗಿ ನೃತ್ಯದ ಎಲ್ಲಾ ಅಂಶಗಳನ್ನು ಕಲಿತ ವಿದ್ಯಾರ್ಥಿಗೆ ಗುರು ತನ್ನ ಆಶೀರ್ವಾದ ನೀಡಿ ಮೊಟ್ಟ ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನೀಡುವ ಸಮಾರಂಭ ಅದಾಗಿತ್ತು. ಈಗ ಮೂಲ ಸ್ವರೂಪ ಬದಲಾಗಿ, ಹವ್ಯಾಸವಾಗಿ ಆರಂಭವಾದ ನೃತ್ಯಕಲಿಕೆ ನಿಧಾನವಾಗಿ ಶ್ರೀಮಂತರ ಪಾಲಿಗೆ ಫ್ಯಾಶನ್ ಆಗಿ ಪರಿವರ್ತನೆಯಾಯಿತು.ಸಂಪತ್ತು ಪ್ರತಿಷ್ಠೆಯ ವಿಷಯವಾಯಿತು.

ರಂಗಾರೋಹಣ: ಉಳ್ಳವರ ಕತೆ ಇದಾದರೆ ಮಧ್ಯಮವರ್ಗದ ಪೋಷಕರ ಕನಸು ಮಕ್ಕಳ ರಂಗಪ್ರವೇಶ ಮಾಡಿಸುವುದು.ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ಹೊರೆ ಅನಿಸಿದರೂ ಇಷ್ಟು ವರ್ಷ ಕಲಿಸಿದ್ದಕ್ಕೆ ಅಷ್ಟಾದರೂ ಮಾಡಬೇಡವೇ?ಕಲಾಜೀವನ- ಅವಕಾಶಗಳ ದೃಷ್ಟಿಯಿಂದ ಮಹತ್ವದ್ದು ರಂಗಪ್ರವೇಶ. ವಿಪರ್ಯಾಸವೆಂದರೆ,  

ಹಾಗೇ ದುಬಾರಿ ರಂಗಪ್ರವೇಶ ಮಾಡಿಸಿದ ಕೆಲದಿನಗಳಲ್ಲೇ ವಿದ್ಯಾಭ್ಯಾಸ, ಮದುವೆ ಮುಂತಾದ ಕಾರಣಗಳಿಂದ ನೃತ್ಯಕಲಿಕೆಗೆ ಮುಕ್ತಾಯ ಹೇಳಿಬಿಡುತ್ತಿರುವುದು! ಹಾಗೆ ನೋಡಿದರೆ ರಂಗಪ್ರವೇಶದ ನಂತರ ರಂಗಕ್ಕೆ ಕೊನೆ ಹೇಳುವ ಸಂದರ್ಭಗಳೇ ಹೆಚ್ಚು. ಕಲಾಕಲಿಕೆಯ ದೃಷ್ಟಿಯಿಂದ ರಂಗಪ್ರವೇಶ ಮತ್ತಷ್ಟು ಎತ್ತರಕ್ಕೆ ಏರುವ  ರಂಗಾರೋಹಣ ವಾಗಬೇಕು! ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಖಂಡಿತ ಹಾಗಾಗುತ್ತಿಲ್ಲ. 

ಪ್ರದರ್ಶನ ಬೇಕೇ?: ಪ್ರದರ್ಶನ ಕಲೆಯಾದ ಭರತನಾಟ್ಯಕ್ಕೆ ಸಹೃದಯರ ಪ್ರಶಂಸನ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹ ಬೇಕೇ ಬೇಕು.ಅದರೊಂದಿಗೇ ಅತ್ಯಂತ ಸ್ಪರ್ಧಾತ್ಮಕವಾಗಿರುವ ಕಲಾ ಜಗತ್ತಿನಲ್ಲಿ ಪ್ರಚಾರ ಇಲ್ಲದೇ ಇದ್ದಲ್ಲಿ ಅವಕಾಶಗಳು ಸಿಗುವುದಾದರೂ ಹೇಗೆ?ಈ ನಿಟ್ಟಿನಲ್ಲಿ ಮಾಧ್ಯಮ,ಸ್ಟೇಜ್ ಷೋ,ರಂಗಪ್ರವೇಶ ಇವೆಲ್ಲಾ ಅಗತ್ಯವಿದೆ.

ಆದರೆ ಕಲಿಕೆಯ ಭದ್ರ ಬುನಾದಿ-ಸಾಧನೆ ಇಲ್ಲದೇ ಆಡಂಬರ -ಪ್ರಚಾರದ ಬೆಂಬತ್ತುವುದನ್ನು ಗುರು ಮತ್ತು ಶಿಷ್ಯರಿಬ್ಬರೂ ಮಾಡಬಾರದು.ಕಲೆ,ಕಮರ್ಶಿಯಲ್ ಆಗಲು ಕಾರಣಗಳು ಇವೆ. ಪ್ರಚಾರ-ಮನ್ನಣೆಗೆ ಹಾತೊರೆಯುವಿಕೆ, ಸಮಯದ ಅಭಾವ, ಇತರರೊಡನೆ ಪೈಪೋಟಿ, ಪೋಷಕರ ಒತ್ತಡ, ಗುರುಗಳ ಜೀವನ ನಿರ್ವಹಣೆ, ಬದಲಾದ ಅಭಿರುಚಿ. ಇವುಗಳೇ ಮುಖ್ಯ ಕಾರಣ. 

ಪರಿಹಾರ ಏನು?: ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ಈ ಅಮೂಲ್ಯ ಕಲೆಗೆ ಈಗ ರಾಜಾಶ್ರಯ ಇಲ್ಲ .ಆದರೆ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.ಇದು ನಗರ ಪ್ರದೇಶದ ಕಲಾವಿದರಿಗೆ ಮಾತ್ರ ಸೀಮಿತವಾಗದೇ ಜಿಲ್ಲಾ- ತಾಲೂಕು ಮಟ್ಟದಲ್ಲೂ ಕಲಾವಿದರಿಗೆ ಅವಕಾಶಗಳು ಸಿಗಬೇಕು. ಇರುವ ಸೌಲಭ್ಯಗಳ ಬಗ್ಗೆ ತಿಳಿಸುವ ಮತ್ತು ಅರ್ಹರಿಗೆ ಲಭ್ಯವಾಗುವ ಹಾಗೆ ಮಾಡಬೇಕು. ಅದರೊಂದಿಗೇ ಸಂಘಸಂಸ್ಥೆಗಳು ಕಲೆಯ ಪೋಷಣೆಗೆ ಮುಂದಾಗಬೇಕು.

ಗುರುಗಳು-ಪೋಷಕರು ಅದ್ದೂರಿ ರಂಗಪ್ರವೇಶದ ಬದಲು ಸರಳ ರಂಗಾರೋಹಣದತ್ತ ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಇಬ್ಬರು ಮೂರು ವಿದ್ಯಾರ್ಥಿಗಳು ಒಟ್ಟಾಗಿ ರಂಗಪ್ರವೇಶ ನಡೆಸಬಹುದು.ಹಿಮ್ಮೇಳ ಮುಖ್ಯವಾದರೂ ಸಮಯ ಮತ್ತು ಅನುಕೂಲತೆಗೆ ಕ್ಯಾಸೆಟ… ಮತ್ತು ಸೀಡಿಗಳನ್ನು ಬಳಸಬಹುದು.ಕೇವಲ ಕಾರ್ಯಕ್ರಮವೊಂದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಉಡುಪು-ಒಡವೆ ಖರೀದಿಸುವ ಬದಲು ಬಾಡಿಗೆಗೆ ಸಿಗುವ ಉಡುಪು ಆಭರಣ ಬಳಸಬಹುದು.ಪ್ರದರ್ಶನವನ್ನು ಸರಳವಾಗಿಸಿ ಸಾಧನೆಗೆ ಹೆಚ್ಚು ಒತ್ತು ನೀಡಬೇಕು.

ಬರೀ ಎಕ್ಸಸೈಜ್: ಐದು ವರ್ಷಗಳಿಂದ ಮಗಳಿಗೆ ಭರತನಾಟ್ಯ ಕಲಿಸುತ್ತಾ ಇದ್ದೇವೆ.ಆದರೆ ಮುಂದೆ ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾಳ್ಳೋ ಗೊತ್ತಿಲ್ಲ.ಈಗ ಒಂಬತ್ತನೇ ಕ್ಲಾಸು,ಹತ್ತಕ್ಕೆ ಬಂದಾಗ ಸ್ಟಡಿ ಕಡೆ ಗಮನ ಕೊಡಲೇಬೇಕಾಗುತ್ತೆ.ಈಗಲೂ ಗಂಟೆಗಟ್ಟಲೇ ಕ್ಲಾಸಿಗೆ ಕಳಿಸಕ್ಕೆ ಆಗಲ್ಲ,ಏನಿದ್ದರೂ ವಾರಕ್ಕೆ ಒಂದು ದಿನ ನಲವತ್ತು ಮಕ್ಕಳ ಜತೆ ಒಂದು ಗಂಟೆ ಕ್ಲಾಸಿರುತ್ತೆ.

ಅಷ್ಟಾದ್ರೆ ಸಾಕು, ದೇಹಕ್ಕೆ ಒಂದಿಷ್ಟು ಎಕ್ಸಸೈಜ್ ಆಗುತ್ತೆ.ಎಷ್ಟಾದ್ರೂ ಇದು ಸೈಡ್ ಹಾಬಿ ಅಷ್ಟೇ. ಹತ್ತಾರು ಕಡೆ ಸ್ಟೇಜ್ ನಲ್ಲಿ ಪ್ರೋಗ್ರಾಂ ಕೊಟ್ಟಿದ್ದಾಳೆ. ಟಿ.ವಿ ಯಲ್ಲಿ ಒಂದ್ಸಲ ಬರಬೇಕು ಅಂತಾ ಇದೆ. ಅವಳು ಚೆನ್ನಾಗಿ ಮಾಡ್ತಾಳೆ.ಟೀಚರ್ ಚೆನ್ನಾಗಿ ಕಲಿಸ್ತಾರೆ, ಫೀಸೂ ತುಂಬಾ ಹೆಚ್ಚಲ್ಲ. ಪ್ರೋಗ್ರಾಂ ಅಂದ್ರೆ ಖರ್ಚು ಬರುತ್ತೆ ನಿಜ. ಆದರೆ ಸ್ಕೂಲ್ ಆನ್ಯುವಲ್ ಡೇ ನಲ್ಲಿ ಒಂದು ಡಾನ್ಸ್ ಮಾಡಿದ್ರೂ ಸಾವಿರಾರು ರೂಪಾಯಿ ಕೊಡೋಲ್ವಾ? ಹಾಗೇ ಇದು.ಕಷ್ಟ ಬಂದಿರೋದು ದುಡ್ಡು,ಇಂಟ್ರೆಸ್ಟ್, ಟೀಚರ್ ಯಾವುದೂ ಅಲ್ಲ. ಏನನ್ನಾದರೂ ಸರಿಯಾಗಿ ಕಲಿಯೋಕೆ ಮಕ್ಕಳಿಗೆ ಟೈಮ್ ಎಲ್ಲಿದೆ? ಏನಿದ್ದರೂ ಸ್ಕೂಲು- ಸೀಟು ಅದಕ್ಕೇ ಇಂಪಾರ್ಟೆನ್ಸು!
-ಶ್ರೀಮತಿ ರಂಜನಾ.ಎಮ್, ಕೆಂಗೇರಿ ಬೆಂಗಳೂರು, ಪೋಷಕರು

ಗುರು-ಶಿಷ್ಯ ಸಂಬಂಧ ಅಳಿಯದಿರಲಿ!: ಸಮರ್ಥ ಗುರು, ತನ್ನೆಲ್ಲಾ ವಿದ್ಯೆ ಧಾರೆಯೆರೆಯಲು ಯೋಗ್ಯ ಶಿಷ್ಯನ ಹುಡುಕಾಟದಲ್ಲಿರುತ್ತಾನೆ.ಅಂಥ ಗುರುಗಳೂ-ತಕ್ಕ ಶಿಷ್ಯರೂ ಕಡಿಮೆಯಾಗುತ್ತಿದ್ದಾರೆ. ಭರತನಾಟ್ಯದಂಥ ದೈವಿಕ ಕಲೆ ಕಮರ್ಶಿಯಲ್ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.ಇದರಲ್ಲಿ ಪೋಷಕರು ಮತ್ತು ನೃತ್ಯಗುರು ಇಬ್ಬರ ಪಾತ್ರವೂ ಇದೆ. ಇಂದು ಶಾಸ್ತ್ರೀಯ ನೃತ್ಯಕಲಿಕೆ ಹೆಚ್ಚಿನವರಿಗೆ ಬೇಕಿಲ್ಲ, ಏಕೆಂದರೆ ಅದಕ್ಕೆ ಪರಿಶ್ರಮ ಮತ್ತು ಸುದೀರ್ಘ‌ ಕಲಿಕೆ ಬೇಕು.

ಏನಿದ್ದರೂ ರಿಯಾಲಿಟಿ ಷೋಗಳು,ದೊಡ್ಡ ಗುಂಪಿನಲ್ಲಿ ಒಂದಿಷ್ಟು ಅಂಗಾಂಗ ಚಲನೆ,ಜಿಗಿತ,ದುಬಾರಿ ಜಗಮಗಿಸುವ ವೇಷಭೂಷಣಕ್ಕೆ ಮಹತ್ವ.ಆಯೋಜಕರಿಗೂ ಬೇಕಾದದ್ದು ಸ್ಟೇಜ್ ತುಂಬುವ,ಕಣ್ಣಿಗೆ ಕುಕ್ಕುವ ಪ್ರದರ್ಶನ.ಹೀಗಾಗಿ ಆದಷ್ಟು ಬೇಗ ಐಟಮ್ ಕಲಿತು ಪ್ರಚಾರ ಸಿಗಬೇಕು ಎಂಬುದು ಪೋಷಕರ ಉದ್ದೇಶವೇ ಹೊರತು ಹೇಗೆ -ಏನು ಕಲಿಯುತ್ತಾರೆ ಎಂಬುದು ಮುಖ್ಯವಲ್ಲ. ಜನರ ಅಭಿರುಚಿ ಮತ್ತು ಅಪೇಕ್ಷೆಗೆ ಅನುಗುಣವಾಗಿ ಗುರುಗಳೂ ಬದಲಾಗಿದ್ದಾರೆ.

ಅರೆ-ಬರೆ ಕಲಿತವರೂ ನೃತ್ಯ ಶಿಕ್ಷಕರಾಗುತ್ತಿದ್ದಾರೆ, ಬೇಕಾದ್ದನ್ನು ಕಲಿಸುತ್ತಿದ್ದಾರೆ.ಇವೆಲ್ಲದರ ಪರಿಣಾಮವಾಗಿ ತಾಯಿ ಮಕ್ಕಳ ಸಂಬಂಧದಂತಿದ್ದ ಗುರು ಶಿಷ್ಯರ ಸಂಬಂಧ ಮಾಯವಾಗಿ ಬಿಸಿನೆಸ್ ಎಂಬಲ್ಲಿಗೆ ಮುಟ್ಟಿದೆ.ಕಾಲ ಬದಲಾಗಿದೆ,ಮಕ್ಕಳಿಗೂ ಸಮಯವಿಲ್ಲ ನಿಜ.ಹಾಗೆಯೇ  ಹೊಸ ಪ್ರಯೋಗಗಳೂ ನಡೆಯಬೇಕು.ಆದರೆ ಇದೆಲ್ಲದರ ನಡುವೆಯೂ ಸಾಂಪ್ರದಾಯಿಕ ಕಲಿಕೆ,ಗುರುಶಿಷ್ಯ ಸಂಬಂಧ ಉಳಿಸಿಕೊಳ್ಳುವತ್ತ ಗಂಭೀರ ಪ್ರಯತ್ನವನ್ನು ಎಲ್ಲರೂ ಒಟ್ಟಾಗಿ ಮಾಡುವುದು ಅಗತ್ಯವಾಗಿದೆ.
-ಡಾ.ವಸುಂಧರಾ ದೊರೆಸ್ವಾಮಿ ಹಿರಿಯ ನೃತ್ಯ ಕಲಾವಿದೆ, ಶಾಂತಲಾ ಪ್ರಶಸ್ತಿ ಪುರಸ್ಕೃತರು

* ಡಾ.ಕೆ.ಎಸ್‌.ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next