ಬೆಂಗಳೂರು: ಶಿವರಾತ್ರಿಯಂದು ದೇವಾಲಯವೊಂದರ ಮುಂದೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾಗ ಮೈ ತಗುಲಿದ್ದಕ್ಕೆ ಯುವಕನನ್ನು ಕೊಲೆ ಮಾಡಿದ ಹಂತಕರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರದ ನಿವಾಸಿ ಚೇತನ್, ರಂಗಾ, ಪವನ್ ಬಂಧಿತರು. ಶ್ರೀನಗರ ನಿವಾಸಿ ಯೋಗೇಶ್ (23) ಕೊಲೆಯಾದವ.
ಯೋಗೇಶ್ ಹಾಗೂ ಆರೋಪಿಗಳು ಪರಿಚಿತರಾಗಿ ಇರಲಿಲ್ಲ. ಇಬ್ಬರಿಗೂ ಹಳೆ ದ್ವೇಷವೂ ಇರಲಿಲ್ಲ. ನೃತ್ಯ ಮಾಡುವ ವೇಳೆ ಕಾಲು ತಾಗಿದ್ದಕ್ಕೆ ಆಕ್ರೋಶಗೊಂಡು ಆರೋಪಿಗಳು ಹತ್ಯೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಯೋಗೇಶ್ ಹನುಮಂತನಗರದ ಬೈಕ್ ಸರ್ವಿಸ್ ಸೆಂಟರ್ವೊಂದರಲ್ಲಿ ಕೆಲಸ ಮಾಡುತಿದ್ದ. ಹಬ್ಬದ ಹಿನ್ನೆಲೆಯಲ್ಲಿ ಗಿರಿನಗರದ ದೇವಸ್ಥಾನಕ್ಕೆ ತೆರಳಿ ಮನರಂಜನೆಯ ಕಾರ್ಯಕ್ರಮದಲ್ಲಿ ಯುವಕರ ಜೊತೆ ಹಾಡಿಗೆ ಹೆಜ್ಜೆ ಹಾಕಿದ್ದ. ಈ ನಡುವೆ ಅಲ್ಲೇ ಬಂದಿದ್ದ ಮತ್ತೂಂದು ಗುಂಪಿನ ಯುವಕರಿಗೆ ಯೋಗೀಶ್ ಕಾಲು ತಾಗಿತ್ತು. ಈ ವಿಚಾರಕ್ಕೆ ಆರೋಪಿಗಳು ಹಾಗೂ ಯೋಗೇಶ್ ನಡುವೆ ಜಗಳ ಶುರುವಾಗಿತ್ತು. ಆ ವೇಳೆ ಸ್ಥಳದಲ್ಲಿ ನೆರೆದಿದ್ದವರು ಇವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು. ಯೋಗೇಶ್ ಸಂಭ್ರಮ ಮುಗಿಸಿ ತಡರಾತ್ರಿ 2 ಗಂಟೆಗೆ ಬೈಕ್ನಲ್ಲಿ ಮನೆ ಕಡೆಗೆ ಹೊರಟಿದ್ದ. ಆತನನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಆತನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.