Advertisement

Mangaluru: ಮೂರೂವರೆ ತಿಂಗಳಲ್ಲಿ ಎರಡು ಸರಕು “ನೌಕೆ’ಗಳು ಮುಳುಗಡೆ

09:15 AM Mar 21, 2024 | Team Udayavani |

ಮಂಗಳೂರು: ಘಟನೆ 1: ಹಳೆ ಮಂಗಳೂರು ಬಂದರಿ ನಿಂದ ಕಳೆದ ವರ್ಷ ನ.30ರಂದು ಹೊರಟ ಲಕ್ಷದ್ವೀಪ ಮೂಲದ “ಎಂಎಸ್‌ವಿ ಅಲ್‌ ಕದಾರಿ’ “ಹಾಯಿ ಹಡಗು’ (ನೌಕೆ) ಲಕ್ಷದ್ವೀಪದ ಕಿಲ್ಟಾನ್‌ ಎಂಬಲ್ಲಿ ಡಿ. 3ರಂದು ಕಡಲು ಪಾಲಾಯಿತು. ಅದರಲ್ಲಿದ್ದ ಸರಕು ವಸ್ತುಗಳೂ ನೀರು ಪಾಲಾದವು.

Advertisement

ಘಟನೆ 2: ತಮಿಳುನಾಡು ಮೂಲದ ಎಂಎಸ್‌ವಿ ವರದರಾಜ ಹೆಸರಿನ ಹಾಯಿ ಹಡಗು ಮಂಗಳೂರು ಹಳೆಬಂದರಿನಿಂದ ಮಾ. 12ರಂದು ಸರಕು ಸಾಮಗ್ರಿ ಹೇರಿಕೊಂಡು ಲಕ್ಷದ್ವೀಪದ ಅಂದ್ರೋತ್‌ ಮೂಲಕ ಅಗತಿ ದ್ವೀಪಕ್ಕೆ ಹೋಗುವಾಗ ಮಾ. 13ರ ಮಧ್ಯರಾತ್ರಿ ಅರ್ಧದಾರಿಯಲ್ಲಿ ಮುಳುಗಿ ಕಡಲು ಪಾಲಾಗಿದೆ. ಅದರಲ್ಲಿದ್ದ 8 ಸಿಬಂದಿ ಪವಾಡ ಸದೃಶರಾಗಿ ಪಾರಾಗಿದ್ದಾರೆ.

ಕಳೆದ ಮೂರೂವರೆ ತಿಂಗಳ ಅಂತರದಲ್ಲಿ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ತೆರಳಿದ ಸರಕು ತುಂಬಿದ 2 “ಹಾಯಿ ಹಡಗು’ಗಳು ಕಡಲು ಪಾಲಾಗಿವೆ. ಅಲ್ಲಿನ ಹವಾಮಾನ ವೈಪರೀತ್ಯದ ಕಾರಣ ದಿಂದ ಮುಳುಗುವ ಘಟನೆ ನಡೆಯುತ್ತಿದ್ದು, ವ್ಯಾಪಾರ-ವಹಿವಾಟಿಗೆ ನಷ್ಟ ಎದುರಾದಂತಾಗಿದೆ.

ಬದಲಾಗದ ಮರದ “ಹಾಯಿ ಹಡಗು‘!

ಪ್ರಸಕ್ತ ಮಂಗಳೂರು ವ್ಯಾಪ್ತಿಯಿಂದ ಸರಕು ಸಾಗಿಸುತ್ತಿರುವ ನೌಕೆಗಳು ಮರದಿಂದಲೇ ನಿರ್ಮಿಸಿದವು. ಮೀನುಗಾರಿಕೆ ಬೋಟುಗಳು ಈಗ ಆಧುನಿಕ ಸೌಲಭ್ಯ ಹೊಂದಿದ್ದು ಸುರಕ್ಷತೆಯ ದೃಷ್ಟಿಯಿಂದ “ಸ್ಟೀಲ್‌’ ಸ್ವರೂಪದಲ್ಲಿದೆ. ಆದರೆ, ಸರಕು ಸಾಗಿಸುವ ನೌಕೆಯನ್ನು ಮರದ ಬದಲು ಸ್ಟೀಲ್‌ ರೂಪಕ್ಕೆ ಬದಲಿಸುವ ಪ್ರಯತ್ನ ನಡೆಯಲೇ ಇಲ್ಲ. ಇದು ಕೆಲವೊಮ್ಮೆ ಅವಘಡಗಳಿಗೆ ಮುಖ್ಯ ಕಾರಣ ಎಂಬ ಅಭಿಪ್ರಾಯವಿದೆ. ಸರಕು ಸಾಗಾಟ ಮಾಡುವ ಪ್ರಮುಖರೊಬ್ಬರು “ಉದಯವಾಣಿ’ ಜತೆಗೆ ಮಾತನಾಡಿ, “ಸ್ಟೀಲ್‌ನಿಂದ ಹಾಯಿ ಹಡಗು ನಿರ್ಮಾಣವಾದರೆ ನಿಯಮಾವಳಿಯಂತೆ ಕ್ಯಾಪ್ಟನ್‌, ಎಂಜಿನಿಯರ್‌ ಅಗತ್ಯ ಇರುತ್ತದೆ. ಇದು ನಿರ್ವಹಣೆಗೆ ದುಬಾರಿ. ಹೀಗಾಗಿ ಮರದ ಹಡಗು ಮೂಲಕವೇ ಸರಕು ಸಾಗಾಟ ಮಾಡಲಾಗುತ್ತದೆ. ಆದರೆ ಸ್ಟೀಲ್‌ ಅಥವಾ ಇತರ ಬದಲಾವಣೆಗೆ ಸರಕಾರ ಪ್ರೋತ್ಸಾಹ ನೀಡಿದರೆ ಅದನ್ನು ಅನುಷ್ಠಾನಿಸಬಹುದಾಗಿದೆ’ ಎಂದು ಹೇಳುತ್ತಾರೆ.

Advertisement

ವಾಣಿಜ್ಯ ವ್ಯವಹಾರಕ್ಕೆ ಹಲವು ವರ್ಷದ ಇತಿಹಾಸ

ಮಂಗಳೂರು ಮತ್ತು ಲಕ್ಷದ್ವೀಪ ನಡುವೆ ವಾಣಿಜ್ಯ ವ್ಯವಹಾರಕ್ಕೆ ಒಂದು ಐತಿಹಾಸಿಕ ಹಿನ್ನೆಲೆಯಿದೆ. ಮಂಗಳೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸರಕು- ಸಾಮಗ್ರಿಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಲಾಗುತ್ತಿದೆ.

ಅಲ್ಲಿಂದ ಕೆಲವು ಉತ್ಪನ್ನಗಳನ್ನು ಇಲ್ಲಿಗೆ ತರಲಾಗುತ್ತಿದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಮಂಗಳೂರಿನಿಂದ ಸುಮಾರು 365 ಕಿ.ಮೀ. ದೂರದಲ್ಲಿ ಪ್ರಾರಂಭ ವಾಗುತ್ತವೆ ಲಕ್ಷದ್ವೀಪ ಸಮೂಹ. ಅಲ್ಲಿನವರು ತಮ್ಮ ಪ್ರಮುಖ ಆವಶ್ಯಕತೆಗಳಿಗೆ ಮುಖ್ಯವಾಗಿ ಆಶ್ರಯಿಸುವುದು ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರನ್ನು. ಮಂಜಿ/ಹಾಯಿ ಹಡಗು (ನೌಕೆ)ಮೂಲಕ ಅಲ್ಲಿನ ವ್ಯಾಪಾರಿಗಳು ಇಲ್ಲಿಗೆ ಬಂದು ಮಂಗಳೂರಿನಿಂದ ಕಟ್ಟಡ ಸಾಮಗ್ರಿ, ಆಹಾರ ಧಾನ್ಯಗಳು, ಸಂಬಾರ ಪದಾರ್ಥಗಳನ್ನು ಜೀವನಾವಶ್ಯಕ ವಸ್ತುಗಳನ್ನು ತುಂಬಿಸಿಕೊಂಡು ಲಕ್ಷದ್ವೀಪಕ್ಕೆ ಹೋಗುತ್ತಿದ್ದಾರೆ.

ಸರಕು ಸಾಗಾಟದಲ್ಲಿ ಇಳಿಕೆ!

ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಪ್ರತೀ ವರ್ಷ ಸೆ.15ರಿಂದ ಮೇ 15ರವರೆಗೆ ಮಾತ್ರ (ಮೇ 16ರಿಂದ ಸೆ. 14ರವರೆಗೆ ನಿಷೇಧ)ಸರಕು ಸಾಗಾಟಕ್ಕೆ ನಿಯಮಾವಳಿ ಪ್ರಕಾರ ಅವಕಾಶ. ಅಕ್ಕಿ, ಆಹಾರ ವಸ್ತುಗಳು, ತರಕಾರಿ, ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್‌, ಇಟ್ಟಿಗೆ, ಬ್ಲಾಕ್‌, ಸ್ಟೀಲ್‌ ಅನ್ನು ಮಂಗಳೂರಿನಿಂದ ಸಾಗಿಸಲಾಗುತ್ತದೆ. 2021-22ರಲ್ಲಿ 54,958 ಮೆ.ಟನ್‌, ಕಳೆದ ವರ್ಷ 48,368 ಮೆ.ಟನ್‌ ಹಾಗೂ ಈ ಬಾರಿ ಫೆಬ್ರವರಿ ವರೆಗೆ 41,449 ಮೆ.ಟನ್‌ ಆಹಾರ ವಸ್ತುಗಳ ಸಾಗಾಟ ನಡೆದಿದೆ. 2019-20ರಲ್ಲಿ 73,840 ಮೆ. ಟನ್‌ ಸಾಗಾಟ ಆಗಿತ್ತು. ಬಳಿಕ ಇಷ್ಟು ಪ್ರಮಾಣದ ಸರಕು ಸಾಗಾಟ ಇಲ್ಲಿಯವರೆಗೆ ನಡೆದಿಲ್ಲ. ಇಳಿಕೆ ಕಾಣುತ್ತಿದೆ!

ಕಳೆದ 5 ವರ್ಷಗಳಲ್ಲಿ ಮಂಗಳೂರು ಬಂದರಿನಿಂದ ನಿರ್ಗಮಿಸಿದ ಸರಕು ನೌಕೆಯ ಸಂಖ್ಯೆ

2019 20ರಲ್ಲಿ 562 2020 21ರಲ್ಲಿ 172 2021 22ರಲ್ಲಿ 379 2022 23ರಲ್ಲಿ 294 2023 24 (ಫೆ.29ರವರೆಗೆ) 262

Advertisement

Udayavani is now on Telegram. Click here to join our channel and stay updated with the latest news.

Next