Advertisement

ಚುನಾವಣಾ ನೀತಿ ಸಂಹಿತೆಯ ನೆಪ: ಫ‌ಲಾನುಭವಿಗಳ ಪರದಾಟ

06:39 AM May 18, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚಾಲ್ತಿಯಲ್ಲಿರುವ ಅನೇಕ ಯೋಜನೆಗಳ ಫ‌ಲಾನುಭವಿಗಳು ನೀತಿ ಸಂಹಿತೆ ಸಡಿಲಿಕೆಗೆ ಸರ್ಕಾರದ ಕಡೆಗೆ ಮುಖ ಮಾಡಿ ಕೂರುವಂತಾಗಿದೆ. ಸಂಬಂಧಿಸಿದ ವಿಭಾಗಗಳ ನಿರ್ಲಕ್ಷ್ಯದಿಂದ ನೀತಿ ಸಂಹಿತೆಯ ಹೆಸರಿನಲ್ಲಿ ಫ‌ಲಾನುಭವಿಗಳು ಪರದಾಡುವಂತಾಗಿದೆ.

Advertisement

ಪಡಿತರ ಚೀಟಿ, ವೃದ್ಧಾಪ್ಯ ವೇತನ, ಉದ್ಯೋಗ ಖಾತ್ರಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ವಿಷಯ ಸೇರಿದಂತೆ ಆಶ್ರಯ ಮನೆಗಳ ಫ‌ಲಾನುಭವಿಗಳು ಸರ್ಕಾರದ ಆದೇಶ ಪಡೆದು ಮನೆಗೆ ಬುನಾದಿ ಹಾಕಿ ಅನುದಾನ ಬಿಡುಗಡೆಗಾಗಿ ಸರ್ಕಾರದ ಕಡೆ ನೋಡುವಂತಾಗಿದೆ. ಪ್ರತಿ ಚುನಾವಣೆಯಲ್ಲೂ ನೀತಿ ಸಂಹಿತೆಯ ಭೂತ ಫ‌ಲಾನುಭವಿಗಳನ್ನು ಕಾಡುತ್ತಿದೆ. ಕಳೆದ ನಾಲ್ಕು ವರ್ಷದಿಂದ ಗ್ರಾಮೀಣ ಪ್ರದೇಶದ ಜನರು ಪ್ರತಿ ವರ್ಷವೂ ಒಂದಿಲ್ಲೊಂದು ಚುನಾವಣೆ ಎದುರಿಸುವಂತಾಗಿದ್ದು, ಪ್ರತಿ ಚುನಾವಣೆಯ ನೀತಿ ಸಂಹಿತೆ ಜಾರಿಯಿಂದ ಫ‌ಲಾನುಭವಿಗಳು ನಿಗದಿತ ಸಮಯದಲ್ಲಿ ಸರ್ಕಾರದ ಅನುದಾನ ದೊರೆಯದೇ ಪರದಾಡುತ್ತಿದ್ದಾರೆ.

2015-16ರಿಂದ ಗ್ರಾಮೀಣ ಪ್ರದೇಶದಲ್ಲಿ ಎಪಿಎಂಸಿ ಚುನಾವಣೆ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ , ವಿಧಾನ ಪರಿಷತ್‌ ಚುನಾವಣೆ ಹಾಗೂ ಈಗ ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರತಿ ವರ್ಷ ನೀತಿ ಸಂಹಿತೆ ಜಾರಿಯಿಂದಲೇ ಕನಿಷ್ಠ 3-4 ತಿಂಗಳು ಸಮಯ ವ್ಯರ್ಥವಾಗುತ್ತಿದ್ದು, ಪಂಚಾಯತಿಗಳಿಂದ ಫ‌ಲಾನುಭವಿಗಳ ಆಯ್ಕೆ ಹಾಗೂ ನಂತರ ಸರ್ಕಾರದ ಆದೇಶ ಹೊರ ಬೀಳಲು ಕನಿಷ್ಠ ಎರಡರಿಂದ ಮೂರು ತಿಂಗಳು ಸಮಯ ವ್ಯರ್ಥವಾಗುವುದರಿಂದ ವರ್ಷಕ್ಕೆ ಆರು ತಿಂಗಳು ಮಾತ್ರ ಮನೆ ನಿರ್ಮಾಣಕ್ಕೆ ಸಮಯ ಸಿಗುವಂತಾಗಿದೆ.

ಅಲ್ಲದೇ ಮಲೆನಾಡು ಪ್ರದೇಶದಲ್ಲಿ ಜೂನ್‌ನಿಂದ ಅಕ್ಟೋಬರ್‌ ಅಂತ್ಯದವರೆಗೂ ಕನಿಷ್ಠ ನಾಲ್ಕು ತಿಂಗಳು ಮಳೆ ಇರುವುದರಿಂದ ಆ ಸಂದರ್ಭದಲ್ಲಿ ಆ ಭಾಗದ ಜನರು ಮನೆ ನಿರ್ಮಿಸಿಕೊಳ್ಳಲೂ ಆಗದ ಸ್ಥಿತಿ ಇರುತ್ತದೆ. ಆ ವರ್ಷದಲ್ಲಿ ರಾಜ್ಯ ಸರ್ಕಾರ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಬಿಡುಗಡೆ ಮಾಡಿರುವ ಮನೆಗಳಿಗೆ ಇದುವರೆಗೂ ಮೊದಲ ಕಂತಿನ ಹಣ ಬಿಡುಗಡೆಯಾಗಿಲ್ಲ.

2 ತಿಂಗಳಿನಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯದಲ್ಲೂ ಯಾವುದೇ ಫ‌ಲಾನುಭವಿಗಳ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿಲ್ಲ. ಹೀಗಾಗಿ ಫ‌ಲಾನುಭವಿಗಳು ರಾಜೀವ್‌ಗಾಂಧಿ ನಿಗಮದ ಕಡೆ ಮುಖ ಮಾಡಿ ಕುಳಿತಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಮೇ 24ರ ವರೆಗೂ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

Advertisement

ಈ ನಡುವೆ, ರಾಜ್ಯದಲ್ಲಿ ಚುನಾವಣೆಗೆ ಮತದಾನ ಮುಕ್ತಾಯವಾಗಿದ್ದರಿಂದ ಈಗಾಗಲೇ ಘೋಷಣೆಯಾಗಿ ಜಾರಿಯಲ್ಲಿರುವ ವಸತಿ ಯೋಜನೆಯ ಫ‌ಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಅವಕಾಶ ನೀಡುವಂತೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಶ್ರಯ ಮನೆಗಳಿಗೆ ಅನುದಾನ ಬಿಡುಗಡೆಗೆ ನೀತಿ ಸಂಹಿತೆ ಸಡಿಲಗೊಳಿಸುವಂತೆ ಮನವಿ ಮಾಡಿಕೊಂಡಿದೆ.

ಆದರೆ, ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ನಿಗಮ ಹಾಗೂ ಸರ್ಕಾರ ಅಸಹಾಯಕವಾಗಿದೆ. ಈಗ 22 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಆಗಿರುವುದರಿಂದ ಅಲ್ಲಿ ಚುನಾವಣೆ ಮುಗಿಯುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ದಿನ ಬ್ರೇಕ್‌ ಬಿದ್ದಂತಾಗಿದೆ.

2019-20ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಮನೆಗಳನ್ನು ಬಿಡುಗಡೆ ಮಾಡುವ ಹೊತ್ತಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ಮತ್ತೂಂದು ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಆ ಮನೆಗಳ ಬಿಡುಗಡೆ ಹೊತ್ತಿಗೆ ಚುನಾವಣೆ ಮುಗಿದು ಬೇರೆ ಸದಸ್ಯರು ಆಯ್ಕೆಯಾಗಿರುತ್ತಾರೆ. ನೀತಿ ಸಂಹಿತೆ ಕಾರಣದಿಂದಲೇ ನಮ್ಮ ಅವಧಿಯ ಯೋಜನೆಗಳಿಗೆ ತಡೆ ಬಿದ್ದಂತಾಗುತ್ತಿದೆ.
-ಹೆಸರು ಹೇಳಲಿಚ್ಛಿಸದ ಗ್ರಾ.ಪಂ.ಸದಸ್ಯ

ಚುನಾವಣೆಗಳಲ್ಲಿ ಅಕ್ರಮವಾಗದಂತೆ ತಡೆಯಲು ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಆದರೆ, ಕುಡಿಯುವ ನೀರಿಗೆ ಜನ ಸಾಯುತ್ತಿದ್ದರೂ ನೀತಿ ಸಂಹಿತೆ ನೆಪ ಹೇಳಲಾಗುತ್ತದೆ. ನೀತಿ ಸಂಹಿತೆಯಲ್ಲಿ ಆ ರೀತಿಯ ಯಾವುದೇ ನಿರ್ಬಂಧ ಇಲ್ಲ. ಕಾನೂನನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಅಗತ್ಯ ಕಾರ್ಯಗಳಿಗೆ ಅಡ್ಡಿಯಾಗುವ ನೀತಿ ಸಂಹಿತೆಗೆ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
-ರಮೇಶ್‌ ಕುಮಾರ್‌, ವಿಧಾನಸಭಾಧ್ಯಕ್ಷ.

ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು ಹಾಗೂ ಫ‌ಲಾನುಭವಿಗಳು ಆಯ್ಕೆಯಾಗಿರುವ ಯೋಜನೆಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಹೊಸ ಯೋಜನೆ ಘೋಷಣೆ ಹಾಗೂ ಟೆಂಡರ್‌ ಕರೆಯುವುದಕ್ಕೆ ನೀತಿ ಸಂಹಿತೆ ಅನ್ವಯ ಆಗುತ್ತದೆ. ಬರ ಹಾಗೂ ಕುಡಿಯುವ ನೀರಿನ ಯೋಜನೆಗೆ ನೀತಿ ಸಂಹಿತೆ ಅನ್ವಯ ಆಗುವುದಿಲ್ಲ.
-ಪಿ.ಎನ್‌.ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತರು

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next